ವರದಿಗಾರರು :
ಸಂಗನಗೌಡ ಗಬಸಾವಳಗಿ ||
ಸ್ಥಳ :
ತಾಳಿಕೋಟಿ
ವರದಿ ದಿನಾಂಕ :
02-12-2025
ತಾಳಿಕೋಟಿ: ವಿಶ್ವ ಏಡ್ಸ್ ದಿನ ಜಾಥಾ – ಸಾರ್ವಜನಿಕರಲ್ಲಿ ಜಾಗೃತಿ
ವಿಜಯಪುರ ಜಿಲ್ಲೆಯ ತಾಳಿಕೋಟಿ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸೋಮವಾರ ವಿಶ್ವ ಏಡ್ಸ್ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಎಸ್ವಿಎಂ ಪ್ಯಾರಾ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು ಮತ್ತು ಶಾಲಾ-ಕಾಲೇಜು ವಿದ್ಯಾರ್ಥಿಗಳಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ “ಏಡ್ಸ್ ನಿವಾರಣೆ – ಜಾಗೃತಿ ನಮ್ಮ ಶಸ್ತ್ರ” ಎಂಬ ಘೋಷಣೆಗಳೊಂದಿಗೆ ಜಾಗೃತಿ ಜಾಥಾ ನಡೆಸಿ, ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು. ನಂತರ ಸಮುದಾಯ ಆರೋಗ್ಯ ಕೇಂದ್ರ ಸಭಾಂಗಣದಲ್ಲಿ ಆಯೋಜಿತ ವೇದಿಕೆ ಕಾರ್ಯಕ್ರಮದಲ್ಲಿ ಆರೋಗ್ಯ ಅಧಿಕಾರಿ ಡಾ. ಶ್ರೀಶೈಲ ಹುಕ್ಕೇರಿ ಅವರು ಮಾತನಾಡಿ, “ಏಡ್ಸ್ ಕುರಿತು ಮುಂಜಾಗ್ರತೆ ಮತ್ತು ಜಾಗೃತಿ ಅತ್ಯಗತ್ಯ. ಜನರಲ್ಲಿ ಅರಿವು ಮೂಡಿಸುವುದೇ ರೋಗ ನಿಯಂತ್ರಣಕ್ಕೆ ಮುಖ್ಯ ಮಾರ್ಗ” ಎಂದು ತಿಳಿಸಿದರು.
ಕಾರ್ಯಕ್ರಮದ ಪ್ರಸ್ತಾವಿಕ ಭಾಷಣದಲ್ಲಿ ಐಸಿಟಿಸಿ ಸಮಾಲೋಚಕಿ ಶ್ರೀಮತಿ ಕಲ್ಪನಾ ಹೂಗಾರ ಅವರು ಎಚ್ಐವಿ ಹರಡುವ ವಿಧಾನಗಳು, ಮುಂಜಾಗ್ರತಾ ಕ್ರಮಗಳು ಮತ್ತು ಯುವಕರು ಅನುಸರಿಸಬೇಕಾದ ಸುರಕ್ಷತಾ ಕ್ರಮಗಳ ಕುರಿತು ವಿವರಿಸಿದರು. ಈ ಕಾರ್ಯಕ್ರಮದಲ್ಲಿ ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿ, ಎನ್ಜಿಒ ಕಾರ್ಯಕರ್ತರು, ಆಶಾ ಕಾರ್ಯಕರ್ತೆಯರು, ವಿದ್ಯಾರ್ಥಿಗಳು ಸೇರಿದಂತೆ ಅನೇಕರು ಭಾಗವಹಿಸಿದ್ದರು.
