ಮೂಲ ವಚನ ಅನುವಾದ
ಉದಕದೊಳಗೆ ಬಚ್ಚಿಟ್ಟ ಬಯ್ಕೆಯ ಕಿಚ್ಚಿನಂತಿದ್ದಿತ್ತು, ಸಸಿಯೊಳಗಣ ರಸದ ರುಚಿಯಂತಿದ್ದಿತ್ತು, ನನೆಯೊಳಗಣ ಪರಿಮಳದಂತಿದ್ದಿತ್ತು, ನಿಮ್ಮ ನಿಲುವು ಕೂಡಲಸಂಗಮದೇವಾ, ಕನ್ಯೆಯ ಸ್ನೇಹದಂತಿದ್ದಿತ್ತು.
ಕಾಳಿಯ ಕಣ್ ಕಾಣದಿಂದ ಮುನ್ನ, ತ್ರಿಪುರ ಸಂಹಾರದಿಂದ ಮುನ್ನ, ಹರಿವಿರಂಚಿಗಳಿಂದ ಮುನ್ನ, ಉಮೆಯ ಕಳ್ಯಾಣದಿಂದ ಮುನ್ನ, ಮುನ್ನ, ಮುನ್ನ, ಮುನ್ನ, - ಅಂದಿಂಗೆಳೆಯ ನೀನು, ಹಳೆಯ ನಾನು ಮಹಾದಾನಿ ಕೂಡಲಸಂಗಮದೇವಾ.
ಅಯ್ಯಾ, ನೀನು ನಿರಾಕಾರವಾಗಿರ್ದಲ್ಲಿ ನಾನು ಜ್ನಾನವೆಂಬ ವಾಹನವಾಗಿರ್ದೆ, ಕಾಣಾ ಅಯ್ಯಾ, ನೀನು ನಾಟ್ಯಕ್ಕೆ ನಿಂದಲ್ಲಿ ನಾನು ಚೈತನ್ಯವೆಂಬ ವಾಹನವಾಗಿರ್ದೆ, ಕಾಣಾ ಅಯ್ಯಾ, ನೀನು ಆಕಾರವಾಗಿರ್ದಲ್ಲಿ ನಾನು ವೃಶ್ಹಭನೆಂಬ ವಾಹನವಾಗಿರ್ದೆ ಕಾಣಾ ಅಯ್ಯಾ; ನೀನೆನ್ನ ಭವದ ಕೊಂದಿಹೆನೆಂದು ಜಂಗಮ ಲಾಂಚ್ಹನನಾಗಿ ಬಂದಲ್ಲಿ ನಾನು ಭಕ್ತನೆಂಬ ವಾಹನವಾಗಿರ್ದೆ ಕಾಣಾ ಕೂಡಲಸಂಗಮದೇವಾ
ಅಯ್ಯಾ, ಏಳೇಳು ಜನ್ಮದಲ್ಲಿ ಶಿವಭಕ್ತನಾಗಿ ಬಾರದಿರ್ದೊಡೆ ನಿಮ್ಮಾಣೆ, ನಿಮ್ಮ ಪ್ರಮಥರಾಣೆ! ನಿಮ್ಮ ಪ್ರಸಾದಕ್ಕಲ್ಲದೆ ಬಾಯ್ದೆರೆಯೆನಯ್ಯಾ, ಪ್ರಥಮ ಭವಾಂತರದಲ್ಲಿ ಶಿಲಾದನೆಂಬ ಗಣೇಶ್ವರನ ಮಾಡಿ ಹೆಸರಿಟ್ಟು ಕರೆದು ನಿಮ್ಮ ಭೃತ್ಯನ ಮಾಡಿಯೆನ್ನ ನಿರಿಸಿಕೊಂಡಿರ್ದಿರಯ್ಯಾ, ಎರಡನೆಯ ಭವಾಂತರದಲ್ಲಿ ಸ್ಕಂದನೆಂಬ ಗಣೇಶ್ವರನ ಮಾಡಿ ಹೆಸರಿಟ್ಟು ಕರೆದು ನಿಮ್ಮ ಕಾರುಣ್ಯವ ಮಾಡಿಸಿಕೊಂಡಿರ್ದಿರಯ್ಯಾ, ಮೂರನೆಯ ಭವಾಂತರದಲ್ಲಿ ನೀಲಲೋಹಿತನೆಂಬ ಗಣೇಶ್ವರನ ಮಾಡಿ ಹೆಸರಿಟ್ಟು ಕರೆದು ನಿಮ್ಮ ಲೀಲಾ ವಿನೋದದಿಂದಿರಿಸಿಕೊಂಡಿರ್ದಿರಯ್ಯಾ, ನಾಲ್ಕನೆಯ ಭವಾಂತರದಲ್ಲಿ ಮನೋಹರನೆಂಬ ಗಣೇಶ್ವರನ ಮಾಡಿ ಹೆಸರಿಟ್ಟು ಕರೆದು ನಿಮ್ಮ ಮನಃ ಪ್ರೇರಕನಾಗಲೆಂದಿರಿಸಿಕೊಂಡಿರ್ದಿರಯ್ಯಾ. ಐದನೆಯ ಭವಾಂತರದಲ್ಲಿ ಕಾಲಲೋಚನನೆಂಬ ಗಣೇಶ್ವರನ ಮಾಡಿ ಹೆಸರಿಟ್ಟು ಕರೆದು ಸರ್ವಕಾಲ ಸಂಹಾರವ ಮಾಡಿಸುತ್ತಿರ್ದಿರಯ್ಯಾ. ಆರನೆಯ ಭವಾಂತರದಲ್ಲಿ ವೃಶ್ಹಭನೆಂಬ ಗಣೇಶ್ವರನ ಮಾಡಿ ಹೆಸರಿಟ್ಟು ಕರೆದು ನಿಮಗೇರಲು ವಾಹನವಾಗಲೆಂದಿರಿಸಿಕೊಂಡಿರ್ದಿರಯ್ಯಾ. ಏಳನೆಯ ಭವಾಂತರದಲ್ಲಿ ಬಸವನೆಂಬ ಗಣೇಶ್ವರನ ಮಾಡಿ ಹೆಸರಿಟ್ಟು ಕರೆದು ನಿಮ್ಮೊಕ್ಕುದಮಿಕ್ಕುದಕ್ಕೆ ಯೋಗ್ಯನಾಗಲೆಂದಿರಿಸಿಕೊಂಡಿರ್ದಿರಯ್ಯಾ. ಇದು ಕಾರಣ ಕೂಡಲಸಂಗಮದೇವಾ, ನೀವು ಬರಿಸಿದ ಭವಾಂತರದಲ್ಲಿ ನಾನು ಬರುತಿರ್ದೆನಯ್ಯಾ.
ಅಯ್ಯಾ, ನಿಮ್ಮ ಶರಣನ ಮರ್ತ್ಯಕ್ಕೆ ತಂದೆಯಾಗಿ ನೆನೆನೆನೆದು ಸುಖಿಯಾಗಿಯಾನು ಬದುಕಿದೆನಯ್ಯಾ. ಅದೇನು ಕಾರಣ ತಂದೆಯಿಂದರಿದೆನಯ್ಯಾ. ಅರಿದರಿದು ನಿಮ್ಮ ಶರಣನು ಆಚರಿಸುವಾಚರಣೆಯ ಕಂಡು ಕಣ್ದೆರೆದೆನಯ್ಯಾ ಕೂಡಲಸಂಗಮದೇವಾ.
’ಕರಿಘನ ಅಂಕುಶ ಕಿರಿದೆ’ನ್ನಬಹುದೆ? ಬಾರದಯ್ಯಾ. ’ಗಿರಿಘನ ವಜ್ರ ಕಿರಿದೆ’ನ್ನಬಹುದೆ? ಬಾರದಯ್ಯಾ. ತಮ್ಮಂಥ ಘನ ಜ್ಯೋತಿ ಕಿರಿದೆನ್ನಬಹುದೆ? ಬಾರದಯ್ಯ. ’ಮರಹು ಘನ ನಿಮ್ಮ ನೆನೆವ ಮನ ಕಿರಿದೆ’ನ್ನಬಹುದೆ? ಬಾರದಯ್ಯಾ ಕೂಡಲಸಂಗಮದೇವಾ.
ಭವಬಂಧನ ಭವಪಾಶವಾದ ಕಾರಣವೇನಯ್ಯಾ? ಹಿಂದಣ ಜನ್ಮದಲಿ ಲಿಂಗವ ಮರೆದೆನಾಗಿ, ಹಿಂದಣ ಸಿರಿಯಲ್ಲಿ ಜಂಗಮನ ಮರೆದೆನಾಗಿ ಅರಿದೋಡೀ ಸಂಸಾರವ ಹೊದ್ದಲೀವನೆ ಕೂಡಲಸಂಗಮದೇವಾ.
ಸಂಸಾರ ಸಾಗರನ ತೆರೆಕೊಬ್ಬಿ ಮುಖದ ಮೇಲೆ ಅಲೆಯುತ್ತಿದ್ದುದೇ ನೋಡಾ! ಸಂಸಾರಸಾಗರ ಉರದುದ್ದವೇ? ಹೇಳಾ! ಸಂಸಾರ ಸಾಗರ ಕೂರಲುದ್ದವೇ? ಹೇಳಾ? ಸಂಸಾರ ಸಾಗರ ಸಿರದುದ್ದವಾದ ಬಳಿಕ ಏನ ಹೇಳುವೆನಯ್ಯಾ? ಅಯ್ಯಾ, ಅಯ್ಯಾ, ಎನ್ನ ಹುಯ್ಯಲ ಕೇಳಯ್ಯ? ಕೂಡಲಸಂಗಮದೇವಾ ನಾನೇನೆನುವೆನಯ್ಯಾ?
ಚಂದ್ರಮನಂತೆ ಕಳೆ ಸಮನಿಸಿತ್ತೆನಗೆ ಸಂಸಾರವೆಂಬ ರಾಹು ಸರ್ವಗ್ರಾಸಿಯಾಗಿ ನುಂಗಿತ್ತಯ್ಯಾ! ಇಂದೆನ್ನ ದೇಹಕ್ಕೆ ಗ್ರಹಣವಾಯಿತು, ಇನ್ನೆಂದಿಗೆ ಮೋಕ್ಶವಹುದೋ ಕೂಡಲಸಂಗಮದೇವಾ
ಇಲಿ ಗಡಹನೊಡ್ಡಿದಲ್ಲಿರ್ಪಂತೆ ಎನ್ನ ಸಂಸಾರ ತನು ಕೆಡುವನ್ನಕ್ಕ ಮಾಣದು; ಹೆರರ ಬಾಧಿಸುವುದು ತನು ಕೆಡುವನ್ನಕ್ಕಮಾಣದು. ಹೆರರ ಚ್ಹಿದ್ರಿಸುವುದು ತನು ಕೆಡುವನ್ನಕ್ಕ ಮಾಣದು ಅಕಟಕಟಾ! ಸಂಸಾರಕ್ಕಾಸತ್ತೆ ಕೂಡಲಸಂಗಮದೇವಾ. ೧೦
ಕಪ್ಪೆ ಸರ್ಪನ ನೆಳಲಲ್ಲಿಪ್ಪಂತೆನಗಾಯಿತ್ತಯ್ಯಾ! ಅಕಟಕಟಾ ಸಂಸಾರ ವೃಥಾ ಹೋಯಿತಲ್ಲಾ! ಕರ್ತುವೇ ಕೂಡಲಸಂಗಮದೇವಾ ಇವ ತಪ್ಪಿಸಿ ಎನ್ನನು ರಕ್ಶಿಸಯ್ಯಾ. ೧೧
ಶೂಲದ ಮೇಲಣ ವಿಭೋಗವೇನಾದೊಡೇನೋ? ನಾನಾವರ್ಣದ ಸಂಸಾರ ಹಾವ-ಹಾವಡಿಗನ ಸ್ನೇಹದಂತೆ! ತನ್ನಾತ್ಮ ತನಗೆ ಹಗೆಯಾದ ಬಳಿಕ ಬಿನ್ನಾಣವುಂಟೆ! ಮಹಾದಾನಿ ಕೂಡಲಸಂಗಮದೇವಾ. ೧೨
ಸಂಸಾರವೆಂಬ ಬಲೆಯಲ್ಲಿ ಸಿಲುಕಿದೆನಯ್ಯಾ, ಎನ್ನನು ಕಾಯಯ್ಯಾ ಸಂಗಮದೇವಾ ಹುರುಳಿಲ್ಲ ಹುರುಳಿಲ್ಲ! ಶಿವಧೋ! ಶಿವಧೋ! ೧೩
ನಾನೊಂದು ನೆನೆದೊಡೆ ತಾನೊಂದು ನೆನೆವುದು, ನಾವಿತ್ತಲೆಳೆ ದೊಡೆ ತಾನತ್ತಲೆಳೆವುದು; ತಾ ಬೇರೆಯೆನ್ನನಳಲಿಸಿ ಕಾಡಿತ್ತು. ತಾ ಬೇರೆಯೆನ್ನ ಬಳಲಿಸಿ ಕಾಡಿತ್ತು. ಕೂಡಲಸಂಗನ ಕೂಡಿಹೆನೆಂದೊಡೆ ತಾನೆನ್ನ ಮುಂದುಗೆಡಿಸಿತ್ತು ಮಾಯೆ! ೧೪
ಜನಿತಕ್ಕೆ ತಾಯಾಗಿ ಹೆತ್ತಳು ಮಾಯೆ! ಮೋಹಕ್ಕೆ ಮಗಳಾಗಿ ಹುಟ್ಟಿದಳು ಮಾಯೆ! ಕೂಟಕ್ಕೆ ಸ್ತ್ರೀಯಾಗಿ ಕೂಡಿದಳು ಮಾಯೆ! ಇದಾವ ಪರಿಯಲ್ಲಿ ಕಾಡಿತ್ತು ಮಾಯೆ ಈ ಮಾಯೆಯ ಕಳೆವೊಡೆ ಯೆನ್ನಳವಲ್ಲ, ನೀವೇ ಬಲ್ಲಿರಿ ಕೂಡಲಸಂಗಮದೇವಾ. ೧೫
ಕೊಡೆವಿಡಿದು ಕುದುರೆಯ ದೃಢವುಳ್ಳ ರಾವುತನೇರಿ ಕೊಡೆ ಕೋಟಿ, ಶೂರರು, ಹನ್ನಿಬ್ಬರಯ್ಯಾ! ಚ.ದ್ರಕಾಂತ ಗಿರಿಯ ಗಜ ಬಂದು ಮೂದಲಿಸಿ ಅರಿದು ಕೊಲುವೊಡೆ ರಿಪುಗಳ ಕಲಿತನವನೋಡಾ! ಅವಿಗೆಯೊಳಡಗಿದ ಪುತ್ಥಳಿಯ ರೂಹಿನಂತಾಯಿತ್ತು, ಕೂಡಲಸಂಗಮದೇವಾ ನಿಮ್ಮ ಹೆಸರಿಲ್ಲದ ಹೆಸರು. ೧೬
ಇಂದಿಗೆಂತು ನಾಳಿಗೆಂತು ಎಂದು ಬೆಂದೊಡಲ ಹೊರೆಯ ಹೋಯಿತ್ತೆನ್ನ ಸಂಸಾರ! ಹಿಂದೆ ನಾನಾ ಯೋನಿಯಲ್ಲಿ ಬಂದೆನೆಂಬ ಹೇಯವಿಲ್ಲಾ; ಮುಂದೆ ಮುಕ್ತಿಯಾಗಬೇಕೆಂಬ ಯುಕ್ತಿಯಿಲ್ಲಾ! ಎಂದೆಂದೂ ಸದಾಶಿವನ ಕುಂದದೆ ನೆನೆಯಲೀಯದೆ ಕೊಂದುದಯ್ಯಾ ಈ ಮಾಯೆ ಕೂಡಲಸಂಗಮದೇವಾ. ೧೭
ದಿಟ ಪುಟ ಭಕುತಿ ಸಂಪುಟ ನೆಲೆಗೊಳ್ಳದಾಗಿ ಟಿಂಬಕನನಾಡಿಸುತ್ತಿದ್ದಿತಯ್ಯಾ ನಿನ್ನ ಮಾಯೆ; ಟೀಕವ ಟಿಂಬಕನಾಡಿಸುತ್ತಿದ್ದಿತಯ್ಯಾ ನಿನ್ನ ಮಾಯೆ; ಕೂಡಲಸಂಗಮದೇವಯ್ಯಾ, ಹೊನ್ನ ಹೆಣ್ಣ ಮಣ್ಣ ತೋರಿ. ೧೮
  ಆಸತ್ತೆ ಅಲಸಿದೆನೆಂದಡೆ ಮಾಣದು,
  ಬೇಸತ್ತೆ ಬೆಂಬಿದ್ದೆನೆಂದಡೆ ಮಾಣದು,
  ಏವೆನೇವೆನೆಂದಡೆ ಮಾಣದು,
  ಕಾಯದ, ಕರ್ಮದ ಫಲಭೋಗವು !
  ಕೂಡಲಸಂಗನ ಶರಣರು ಬಂದು
  ಹೋ ಹೋ, ಅಂಜದಿರೆಂದಡಾನು ಬದುಕುವೆನು.
19
  20
ಅರಿಯದೆ ಜನನಿಯ ಜಠರದಲ್ಲಿ
ಬಾರದ ಭವಂಗಳ ಬರಿಸಿದೆ ತಂದೆ,
ಹುಟ್ಟಿತ್ತೆ ತಪ್ಪಾಯಿತ್ತೆ, ಎಲೆ ಲಿಂಗವೆ ?
ಮುನ್ನ ಹುಟ್ಟಿದುದಕ್ಕೆ ಕೃಪೆಯ ಮಾಡು ಲಿಂಗವೆ !
ಇನ್ನು ಹುಟ್ಟಿದಡೆ ಕೂಡಲಸಂಗಮದೇವಾ, ನಿಮ್ಮಾಣೆ.
21
ಎಂದೊ, ಸಂಸಾರದ ದಂದುಗ ಹಿಂಗುವುದು ?
ಎಂದೊ, ಮನದಲ್ಲಿ ಪರಿಣಾಮವಹುದೆನಗೆಂದೋ, ಎಂದೋ ?
ಕೂಡಲಸಂಗಮದೇವಾ,
ಇನ್ನೆಂದೋ ಪರಮಸಂತೋಷದಲ್ಲಿಹುದೆನಗೆಂದೋ.
22
ಲೇಸ ಕಂಡು ಮನ ಬಯಸಿ ಬಯಸಿ
ಆಸೆ ಮಾಡಿದಡಿಲ್ಲ ಕಂಡಯ್ಯಾ.
ತಾಳಮರಕ್ಕೆ ಕೈಯ ನೀಡಿ
ಮೇಲೆ ನೋಡಿ ಗೋಣು ನೊಂದುದಯ್ಯಾ.
ಕೂಡಲಸಂಗಮದೇವಾ ಕೇಳಯ್ಯಾ,
ನೀನೀವ ಕಾಲಕ್ಕಲ್ಲದಿಲ್ಲ ಕಂಡಯ್ಯಾ !
23
ಮುನ್ನ ಮಾಡಿದ ಪಾಪ ಬೆನ್ನ ಬಿಡದನ್ನಕ್ಕ
ಇನ್ನು ಬಯಸಿದಡುಂಟೆ ?
ಭಕ್ತಿಯುಳ್ಳವರ ನೋಡಿ ನೋಡಿ ಬಯಸಿದಡುಂಟೆ,
ಕೂಡಲಸಂಗಮದೇವರಲ್ಲಿ ಮುನ್ನ ವರವ ಹಡೆಯದನ್ನಕ್ಕ?
24
ಚಂದ್ರೋದಯಕ್ಕೆ ಅಂಬುದ್ಥಿ ಹೆಚ್ಚುವುದಯ್ಯಾ,
ಚಂದ್ರ ಕುಂದೆ, ಕುಂದುವುದಯ್ಯಾ.
ಚಂದ್ರಂಗೆ ರಾಹು ಅಡ್ಡ ಬಂದಲ್ಲಿ
ಅಂಬುದ್ಥಿ ಬೊಬ್ಬಿಟ್ಟಿತ್ತೆ ಅಯ್ಯಾ
ಅಂಬುದ್ಥಿಯ ಮುನಿ ಆಪೋಶನವ ಕೊಂಬಲ್ಲಿ
ಚಂದ್ರಮನಡ್ಡ ಬಂದನೆ, ಅಯ್ಯಾ ?
ಆರಿಗಾರೂ ಇಲ್ಲ, ಕೆಟ್ಟವಂಗೆ ಕೆಳೆಯಿಲ್ಲ,
ಜಗದ ನಂಟ ನೀನೆ, ಅಯ್ಯಾ,
ಕೂಡಲಸಂಗಮದೇವಯ್ಯಾ!
25
ಒಲೆ ಹತ್ತಿ ಉರಿದಡೆ ನಿಲಬಹುದಲ್ಲದೆ
ಧರೆ ಹತ್ತಿ ಉರಿದಡೆ ನಿಲಲುಬಾರದು.
ಏರಿ ನೀರುಂಬಡೆ, ಬೇಲಿ ಕೆಯ್ಯ ಮೇವಡೆ,
ನಾರಿ ತನ್ನ ಮನೆಯಲ್ಲಿ ಕಳುವಡೆ,
ತಾಯ ಮೊಲೆವಾಲು ನಂಜಾಗಿ ಕೊಲುವಡೆ,
ಇನ್ನಾರಿಗೆ ದೂರುವೆ ಕೂಡಲಸಂಗಮದೇವಾ !
26
ಎನ್ನ ಗುಣ ಅವಗುಣವ ಸಂಪಾದಿಸುವೆ ಅಯ್ಯಾ !
ಸರಿಯೆ, ಅಪ್ರತಿಮಹಿಮಾ, ನಿಮಗಾನು ಪ್ರತಿಯೆ
ಕೂಡಲಸಂಗಮದೇವಾ ನೀವು ಮಾಡಲಾನಾದೆನು.
27
ಬೆದಕದಿರು ಬೆದಕದಿರು, ಬೆದಕಿದಡೆ ಹುರುಳಿಲ್ಲ,
ಚಿತ್ತರಟ್ಟೆಯ ಕಾಯಲ್ಲಿ ಮತ್ತೇನನರಸುವಿರಯ್ಯಾ
ನಿಮ್ಮ ಉತ್ತಮಿಕೆಯ ಪೂರೈಸುವುದು
ಕೂಡಲಸಂಗಮದೇವಾ.
28
ಎನ್ನ ಚಿತ್ತವು ಅತ್ತಿಯ ಹಣ್ಣು, ನೋಡಯ್ಯಾ,
ವಿಚಾರಿಸಿದಡೆ ಏನೂ ಹುರುಳಿಲ್ಲಯ್ಯಾ.
ಪ್ರಪಂಚಿನ ಡಂಬಿನಲ್ಲಿ ಎನ್ನನೊಂದು ರೂಪುಮಾಡಿ ನೀವಿರಿಸಿದಿರಿ,
ಕೂಡಲಸಂಗಮದೇವಾ.
29
ಎನ್ನ ನಡೆಯೊಂದು ಪರಿ, ಎನ್ನ ನುಡಿಯೊಂದು ಪರಿ,
ಎನ್ನೊಳಗೇನೂ ಶುದ್ಧವಿಲ್ಲ ನೋಡಯ್ಯಾ.
ನುಡಿಗೆ ತಕ್ಕ ನಡೆಯ ಕಂಡಡೆ
ಕೂಡಲಸಂಗಮದೇವನೊಳಗಿಪ್ಪನಯ್ಯಾ.
30
ಮುಂಗೈಯ ಕಂಕಣಕ್ಕೆ ಕನ್ನಡಿಯ ತೋರುವಂತೆ
ಎನ್ನ ಮನವು ನಿಧಾನವನೊಲ್ಲದೆ ಜಲಗ ಮಚ್ಚಿತ್ತು ನೋಡಾ.
ನಾಯಿಗೆ ನಾರಿವಾಣವಕ್ಕುವುದೆ
ಕೂಡಲಸಂಗಮದೇವಾ.
31
ಕೊಂಬೆಯ ಮೇಲಣ ಮರ್ಕಟನಂತೆ ಲಂಘಿಸುವುದೆನ್ನ ಮನವು,
ನಿಂದಲ್ಲಿ ನಿಲಲೀಯದೆನ್ನ ಮನವು,
ಹೊಂದಿದಲ್ಲಿ ಹೊಂದಲೀಯದೆನ್ನ ಮನವು
ಕೂಡಲಸಂಗಮದೇವಾ
ನಿಮ್ಮ ಚರಣಕಮಲದಲ್ಲಿ ಭ್ರಮರನಾಗಿರಿಸು, ನಿಮ್ಮ ಧರ್ಮ.
32
ಮರನನೇರಿದ ಮರ್ಕಟನಂತೆ
ಹಲವು ಕೊಂಬೆಗೆ ಹಾಯುತ್ತಲಿದ್ದೇನೆ,
ಬೆಂದ ಮನವ ನಾನೆಂತು ನಂಬುವೆನಯ್ಯಾ
ಎಂತು ನಚ್ಚುವೆನಯ್ಯಾ
ಎನ್ನ ತಂದೆ ಕೂಡಲಸಂಗಮದೇವನಲ್ಲಿಗೆ
ಹೋಗಲೀಯದಯ್ಯಾ.
33
ಅಂದಣವನೇರಿದ ಸೊಣಗನಂತೆ
ಕಂಡಡೆ ಬಿಡದು ತನ್ನ ಮುನ್ನಿನ ಸ್ವಭಾವವನು.
ಸುಡು, ಸುಡು, ಮನವಿದು ವಿಷಯಕ್ಕೆ ಹರಿವುದು,
ಮೃಡ ನಿಮ್ಮನನುದಿನ ನೆನೆಯಲೀಯದು.
ಎನ್ನೊಡೆಯ ಕೂಡಲಸಂಗಮದೇವಾ
ನಿಮ್ಮ ಚರಣವ ನೆನೆವಂತೆ ಕರುಣಿಸು-
ಸೆರಗೊಡ್ಡಿ ಬೇಡುವೆ, ನಿಮ್ಮ ಧರ್ಮ.
34
ತುಪ್ಪದ ಸವಿಗೆ ಅಲಗ ನೆಕ್ಕುವ ಸೊಣಗನಂತೆ ಎನ್ನ ಬಾಳುವೆ.
ಸಂಸಾರಸಂಗವ ಬಿಡದು ನೋಡೆನ್ನ ಮನವು.
ಈ ನಾಯಿತನವ ಮಾಣಿಸು-
ಕೂಡಲಸಂಗಮದೇವಯ್ಯಾ, ನಿಮ್ಮ ಧರ್ಮ.
35
ಒಂದು ಮೊಲಕ್ಕೆ ನಾಯನೊಂಬತ್ತು ಬಿಟ್ಟಂತೆ,
ಎನ್ನ ಬಿಡು, ತನ್ನ ಬಿಡು ಎಂಬುದು ಕಾಯವಿಕಾರ,
ಎನ್ನ ಬಿಡು, ತನ್ನ ಬಿಡು, ಎಂಬುದು ಮನೋವಿಕಾರ.
ಕರಣೇಂದ್ರಿಯಂಗಳೆಂಬ ಸೊಣಗ ಮುಟ್ಟದ ಮುನ್ನ
ಮನ ನಿಮ್ಮನೈದುಗೆ, ಕೂಡಲಸಂಗಮದೇವಾ.
36
ದಂದುಗ ಬಿಡದು ಮನದ ಸಂದೇಹ ಹಿಂಗದಾಗಿ :
ಮುಂದೆ ಲಿಂಗವ ಕಂಡೆಹೆನೆಂಬುದು ಹುಸಿ ನೋಡಾ.
ಬೆಂದ ಕರಣಾದಿಗಳು ಒಂದೆ ಪಥವನರಿಯವು,
ಎಂತು ಶಿವಪಥವೆನಗೆ ಸಾಧ್ಯವಪ್ಪುದಯ್ಯಾ
ಎನ್ನ ತಂದೆ ಕೂಡಲಸಂಗಮದೇವಾ,
ನಿಮ್ಮ ಶರಣರ ಬಳಿವಿಡಿದಡೆ ಎನ್ನ ದಂದುಗ ಹಿಂಗುವುದು.
37
ತನ್ನ ವಿಚಾರಿಸಲೊಲ್ಲದು, ಇದಿರ ವಿಚಾರಿಸಹೋಹುದೀ ಮನವು.
ಏನ ಮಾಡುವೆನೀ ಮನವನು, ಎಂತು ಮಾಡುವೆನೀ ಮನವನು.
ಕೂಡಲಸಂಗಮದೇವನ ಶರಣರ
ನಚ್ಚದ ಮಚ್ಚದ ಬೆಂದ ಮನವನು.
38
ತನ್ನಿಚ್ಛೆಯ ನುಡಿದಡೆ ಮೆಚ್ಚುವುದೀ ಮನವು,
ಇದಿರಿಚ್ಚೆಯ ನುಡಿದಡೆ ಮೆಚ್ಚದೀ ಮನವು.
ಕೂಡಲಸಂಗನ ಶರಣರ
ನಚ್ಚದ ಮಚ್ಚದ ಮನವ ಕಿಚ್ಚಿನೊಳಗಿಕ್ಕು.
39
ಸುಡಲೀ ಮನವೆನ್ನನುಡುಹನ ಮಾಡಿತ್ತು,
ನಡೆವಲ್ಲಿ ನುಡಿವಲ್ಲಿ ಅಧಿಕನೆಂದೆನಿಸಿತ್ತು.
ಬೆಡಗಿನ ಕೀಲು ಕಳೆದು ಕೆಡೆದ ಬಳಿಕ
ಕಡುಗೂರ್ಪ ಮಡದಿ ತಾ ಮುಟ್ಟಲಮ್ಮಳು,
ಒಡಲನುರಿಕೊಂಬುದು, ಒಡವೆಯನರಸ ಕೊಂಬ,
ಕಡುಗೂರ್ಪ ಮಡದಿಯ ಮತ್ತೊಬ್ಬ ಚೆನ್ನಿಗ ಕೊಂಬ
ಮುನ್ನ ಮಾಡಿದುದು ತನ್ನ ಬೆನ್ನ ಬಿಡದನ್ನಕ್ಕ,
ಇನ್ನು ಮಾಡಿದರಳವೆ ಕೂಡಲಸಂಗಮದೇವಾ.
40
ವಚನದ ಹುಸಿ ನುಸುಳೆಂತು ಮಾಬುದೆನ್ನ
ಮನದ ಮರ್ಕಟತನವೆಂತು ಮಾಬುದೆನ್ನ
ಹೃದಯದ ಕಲ್ಮಷವೆಂತು ಮಾಬುದೆನ್ನ
ಕಾಯವಿಕಾರಕ್ಕೆ ತರಿಸಲುವೋದೆನು,
ಎನಗಿದು ವಿಧಿಯೇ, ಕೂಡಲಸಂಗಮದೇವಾ.
41
ಅಂಗದ ನಮಾಫಟವು ಸಿಂಗದ ಗಾತ್ರವು,
ಹಿಂಗದು ಮನದಲ್ಲಿ ನಾನಾ ವಿಕಾರವು.
ಬಂದೆಹೆನೆಂದರಿಯಲಿಲ್ಲಾಗಿ, ಸಂದೇಹ ಬಿಡದಾಗಿ,
ಮುಂದುಗಾಣದು ಲೋಕ,
ಬೆಂದ ಮಾಯಕ್ಕಂಜಿ ನಿಮ್ಮ ಮರೆವೊಕ್ಕೆ,
ಕೂಡಲಸಂಗಮದೇವಾ.
42
ವಿಕಳನಾದೆನು ಪಂಚೇಂದ್ರಿಯ ಸಪ್ತಧಾತುವಿನಿಂದ,
ಮತಿಗೆಟ್ಟೆನು ಮನದ ವಿಕಾರದಿಂದ,
ಧೃತಿಗೆಟ್ಟೆನು ಕಾಯವಿಕಾರದಿಂದ,
ಧೃತಿಗೆಟ್ಟೆನು ಕಾಯವಿಕಾರದಿಂದ,
ಶರಣುವೊಕ್ಕೆನು ಕೂಡಲಸಂಗಮದೇವಯ್ಯಾ.
43
ಮುನಿದೆಯಾದಡೆ ಒಮ್ಮೆ ಜರೆದಡೆ ಸಾಲದೆ
ಅಕಟಕಟಾ, ಮದನಂಗೆ ಮಾರುಗೊಡುವರೆ
ಹಗೆಗೆ ಮಾರುಗೊಟ್ಟು ನಿನ್ನವರನೊಪ್ಪಿಸುವರೆ
ಕೂಡಲಸಂಗಮದೇವಾ.
44
ಆನು ಒಬ್ಬನು, ಸುಡುವರೈವರು,
ಮೇಲೆ ಕಿಚ್ಚು ಘನ, ನಿಲಲುಬಾರದು.
ಕಾಡ ಬಸವನ ಹುಲಿ ಕೊಂಡೊಯ್ದಡೆ
ಆರೈಯಲಾಗದೆ ಕೂಡಲಸಂಗಮದೇವಾ.
45
ಆಸೆ, ಆಮಿಷ, ತಾಮಸ, ಹುಸಿ, ವಿಷಯ,
ಕುಟಿಲ, ಕುಹಕ, ಕ್ರೋಧ, ಕ್ಷುದ್ರ, ಮಿಥ್ಯೆ-
ಇವನೆನ್ನ ನಾಲಗೆಯ ಮೇಲಿಂದತ್ತ ತೆಗೆದು ಕಳೆಯಯ್ಯಾ.
ಅದೇಕೆಂದಡೆ, ನಿನ್ನತ್ತಲೆನ್ನ ಬರಲೀಯವು.
ಇದು ಕಾರಣ, ಇವೆಲ್ಲವ ಕಳೆದು
ಎನ್ನ ಪಂಚೈವರ, ಭಕ್ತರ ಮಾಡು ಕೂಡಲಸಂಗಮದೇವಾ.
46
ಎಂತು ಶಿವಭಕ್ತಿಯ ನಾನುಪಮಿಸುವೆನಯ್ಯಾ
ಎಂತು ಶಿವಾಚಾರವೆನಗೆ ವೇದ್ಯವಪ್ಪುದೋ ಅಯ್ಯಾ
ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರದಿಂದ ಕಟ್ಟುವಡೆದೆನು.
ಹಸಿವು, ತೃಷೆ, ವ್ಯಸನದಿಂದ ಕುದಿಯುತ್ತಿದ್ದೇನೆ.
ಪಂಚೇಂದ್ರಿಯ, ಸಪ್ತಧಾತು
ಹರಿಹಂಚುಮಾಡಿ ಕಾಡಿಹವಯ್ಯಾ,
ಅಯ್ಯಾ, ಅಯ್ಯಾ ಎನ್ನ ಹುಯ್ಯಲ ಕೇಳಯ್ಯಾ
ಕೂಡಲಸಂಗಮದೇವಾ, ನಾನೇವೆನೇವೆನಯ್ಯಾ.
47
ಕಾಯವಿಕಾರ ಕಾಡಿಹುದಯ್ಯಾ,
ಮನೋವಿಕಾರ ಕೂಡಿಹುದಯ್ಯಾ.
ಇಂದ್ರಿಯ ವಿಕಾರ ಸುಳಿವುದಯ್ಯಾ !
ಸುಳುವಿನೊಳಗೆ ಸುಳಿವುತ್ತಲಿದ್ದೇನೆ, ಸಿಲುಕಿಸದಿರಯ್ಯಾ !
ಅನ್ಯ ಚಿತ್ತದಲ್ಲಿರಿಸದಿರಯ್ಯಾ, ನಿಮ್ಮ ಚಿತ್ತದಲ್ಲಿರಿಸಯ್ಯಾ.
ಅನುಪಮಸುಖಸಾರಾಯ ಶರಣರಲ್ಲಿ-
ಕೂಡಲಸಂಗಮದೇವಯ್ಯಾ, ಇದನೆ ಬೇಡುವೆನಯ್ಯಾ.
48
ಬಂದ ಯೋನಿಯನರಿದು ಸಲಹೆನ್ನ ತಂದೆ.
ಬೆಂದ ಮನವೆನ್ನ ಗತಿಗೆಡಿಸಿ ಕಾಡಿತ್ತು,
ಬೆಂದ ಮನವೆನ್ನ ಮತಿಗೆಡಿಸಿ ಕಾಡಿತ್ತು,
ಎನ್ನ ತಂದೆ ಕೂಡಲಸಂಗಮದೇವಾ, ಮಾಣಿಸು ನಿಮ್ಮ ಧರ್ಮ.
49
ಬೆಳೆಯ ಭೂಮಿಯಲೊಂದು ಪ್ರಳಯದ ಕಸ ಹುಟ್ಟಿ
ತಿಳಿಯಲೀಯದು, ಎಚ್ಚರಲೀಯದು.
ಎನ್ನವಗುಣವೆಂಬ ಕಸವ ಕಿತ್ತು ಸಲಹಯ್ಯಾ, ಲಿಂಗತಂದೆ
ಸುಳಿದೆಗೆದು ಬೆಳೆವೆನು ಕೂಡಲಸಂಗಮದೇವಾ.
50
ವಿಷಯವೆಂಬ ಹಸುರನೆನ್ನ ಮುಂದೆ ತಂದು ಪಸರಿಸಿದೆಯಯ್ಯಾ.
ಪಶುವೇನ ಬಲ್ಲುದು ಹಸುರೆಂದೆಠಸುವುದು.
ವಿಷಯರಹಿತನ ಮಾಡಿ, ಭಕ್ತಿರಸವ ದಣಿಯೆ ಮೇಯಿಸಿ,
ಸುಬುದ್ಧಿಯೆಂಬ ಉದಕವನೆರೆದು,
ನೋಡಿ ಸಲಹಯ್ಯಾ, ಕೂಡಲಸಂಗಮದೇವಾ.
51
ಕೆಸರಲ್ಲಿ ಬಿದ್ದ ಪಶುವಿನಂತೆ
ಆನು ದೆಸೆದೆಸೆಗೆ ಬಾಯ ಬಿಡುತ್ತಿದ್ದೇನೆ, ಅಯ್ಯಾ.
ಆರೈವವರಿಲ್ಲ, ಅಕಟಕಟ !
ಪಶುವೆಂದೆನ್ನ ಕೂಡಲಸಂಗಮದೇವ ಕೊಂಬ ಹಿಡಿದೆತ್ತುವನ್ನಕ್ಕ.
52
ಬಡಪಶು ಪಂಕದಲ್ಲಿ ಬಿದ್ದಡೆ
ಕಾಲ ಬಡಿವುದಲ್ಲದೆ, ಬೇರೆ ಗತಿಯುಂಟೆ
ಶಿವ ಶಿವ ಹೋದೆಹೆ, ಹೋದೆಹೆನಯ್ಯಾ.
ನಿಮ್ಮ ಮನದತ್ತಲೆನ್ನ ತೆಗೆಯಯ್ಯಾ.
ಪಶುವಾನು, ಪಶುಪತಿ ನೀನು,
ತುಡುಗುಣಿಯೆಂದು ಎನ್ನ ಹಿಡಿದು ಬಡಿಯದ ಮುನ್ನ
ಒಡೆಯಾ ನಿಮ್ಮ ಬಯ್ಯದಂತೆ ಮಾಡು,
ಕೂಡಲಸಂಗಮದೇವಾ.
53
ಅಡವಿಯೊಳಗೆ ಹೊಲಬುಗೆಟ್ಟ ಪಶುವಿನಂತೆ
`ಅಂಬೆ ಅಂಬೆ' ಎಂದು ಕರೆವುತ್ತಲಿದ್ದೇನೆ,
`ಅಂಬೆ ಅಂಬೆ' ಎಂದು ಒರಲುತ್ತಲಿದ್ದೇನೆ,
ಕೂಡಲಸಂಗಮದೇವ `ಬಾಳು ಬಾಳೆಂಬನ್ನಕ್ಕ.
54
  55
ಅಯ್ಯಾ, ಅಯ್ಯಾ, ಎಂದು ಕರೆವುತ್ತಲಿದ್ದೇನೆ.
ಅಯ್ಯಾ, ಅಯ್ಯಾ, ಎಂದು ಒರಲುತ್ತಲಿದ್ದೇನೆ.
ಓ ಎನ್ನಲಾಗದೆ ಅಯ್ಯಾ
ಆಗಳೂ ನಿಮ್ಮ ಕರೆವುತ್ತಲಿದ್ದೇನೆ
ಮೋನವೇ ಕೂಡಲಸಂಗಮದೇವಾ.
56
ನೀ ಹುಟ್ಟಿಸಿದಲ್ಲಿ ಹುಟ್ಟಿ,
ನೀ ಕೊಂದಲ್ಲಿ ಸಾಯದೆ, ಎನ್ನ ವಶವೆ ಅಯ್ಯಾ
ನೀವಿರಿಸಿದಲ್ಲಿ ಇರದೆ, ಎನ್ನ ವಶವೆ ಅಯ್ಯಾ
ಅಕಟಕಟಾ, ಎನ್ನವನೆನ್ನವನೆನ್ನಯ್ಯಾ
ಕೂಡಲಸಂಗಮದೇವಯ್ಯಾ.
57
ನರವಿಂಧ್ಯದೊಳಗೆನ್ನ ಹುಲುಗಿಳಿಯ ಮಾಡಿ ಸಲಹುತ್ತ,
ಶಿವ ಶಿವಾ ಎಂದೋದಿಸಯ್ಯಾ.
ಭಕ್ತಿಯೆಂಬ ಪಂಜರದೊಳಗಿಕ್ಕಿ ಸಲಹು,
ಕೂಡಲಸಂಗಮದೇವಾ.
58
ಅತ್ತಲಿತ್ತ ಹೋಗದಂತೆ, ಹೆಳವನ ಮಾಡಯ್ಯಾ ತಂದೆ,
ಸುತ್ತಿ ಸುಳಿದು ನೋಡದಂತೆ, ಅಂಧಕನ ಮಾಡಯ್ಯಾ ತಂದೆ,
ಮತ್ತೊಂದ ಕೇಳದಂತೆ, ಕಿವುಡನ ಮಾಡಯ್ಯಾ ತಂದೆ,
ನಿಮ್ಮ ಶರಣರ ಪಾದವಲ್ಲದೆ
ಅನ್ಯ ವಿಷಯಕ್ಕೆಳಸದಂತೆ ಇರಿಸು, ಕೂಡಲಸಂಗಮದೇವಾ.
59
ಎನ್ನ ವಾಮ-ಕ್ಷೇಮ ನಿಮ್ಮದಯ್ಯಾ,
ಎನ್ನ ಹಾನಿ-ವೃದ್ಧಿ ನಿಮ್ಮದಯ್ಯಾ,
ಎನ್ನ ಮಾನಾಪಮಾನವೂ ನಿಮ್ಮದಯ್ಯಾ,
ಬಳ್ಳಿಗೆ ಕಾಯಿ ದಿಮ್ಮಿತ್ತೆ, ಕೂಡಲಸಂಗಮದೇವಾ.
60
ಸಟೆಯಿಲ್ಲದಂತೆ, ಪ್ರಪಂಚವಿಲ್ಲದಂತೆ, ವೈಶಿಕವಿಲ್ಲದಂತೆ,
ನಡೆಸಯ್ಯಾ ಲಿಂಗತಂದೆ.
ಒಂದು ನಿಮಿಷವಾದಡೆಯೂ ನಿಮ್ಮ ಶರಣರ ಸಂಗದಲ್ಲಿರಿಸಯ್ಯಾ.
ಬೇರೆ ಮತ್ತೆ ಅನ್ಯವ ತೋರದಿರಯ್ಯಾ.
ಹೊಲಬುಗೆಟ್ಟೆನಯ್ಯಾ, ಕೂಡಲಸಂಗಮದೇವಾ.
61
ಇವನಾರವ, ಇವನಾರವ, ಇವನಾರವನೆಂದೆನಿಸದಿರಯ್ಯಾ.
ಇವ ನಮ್ಮವ, ಇವ ನಮ್ಮವ, ಇವ ನಮ್ಮವನೆಂದೆನಿಸಯ್ಯಾ.
ಕೂಡಲಸಂಗಮದೇವಾ
ನಿಮ್ಮ ಮನೆಯ ಮಗನೆಂದೆನಿಸಯ್ಯಾ.
62
ಹುಟ್ಟೆಂದು ಲೋಕದಲ್ಲಿ ಹುಟ್ಟಿಸಿ ಇಳಿಯಬಿಟ್ಟಡೆ
ನಿಮ್ಮ ನಗುವರಯ್ಯಾ.
ಶಿವಬಟ್ಟೆಯಲೆನ್ನನು ಇರಿಸಯ್ಯಾ ಹರನೆ,
ಹೊಲಬುಗೆಟ್ಟೆನು ಬಟ್ಟೆಯ ತೋರಯ್ಯಾ.
ಹುಯ್ಯಲಿಟ್ಟೆನು, ಗಣಂಗಳು ಕೇಳಿರಯ್ಯಾ.
ಕೂಡಲಸಂಗಮದೇವಯ್ಯ ಎನ್ನ ಕಾಡಿಹನಯ್ಯಾ.
63
ಅಕಟಕಟಾ, ಶಿವ ನಿನಗಿನಿತು ಕರುಣವಿಲ್ಲ,
ಅಕಟಕಟಾ ಶಿವ ನಿನಗಿನಿತು ಕೃಪೆಯಿಲ್ಲ,
ಏಕೆ ಹುಟ್ಟಿಸಿದೆ, ಇಹಲೋಕ ದುಃಖಿಯ
ಪರಲೋಕದೂರನ ಏಕೆ ಹುಟ್ಟಿಸಿದೆ
ಕೂಡಲಸಂಗಮದೇವಾ ಕೇಳಯ್ಯಾ,
ಎನಗಾಗಿ ಮತ್ತೊಂದು ತರುಮರನಿಲ್ಲವೆ.
64
ನರ ಕೂರಂಬಿನಲೆಚ್ಚ, ಅವಂಗೊಲಿದೆಯಯ್ಯಾ,
ಅರಳಂಬಿನಲೆಚ್ಚ ಕಾಮನನುರುಹಿದೆ.
ಇರುಳು ಹಗಲೆನ್ನದೆ ಪ್ರಾಣಘಾತಕವ ಮಾಡಿದ
ಬೇಡನ ಕೈಲಾಸಕೊಯ್ದೆಯಯ್ಯಾ,
ಎನ್ನನೇತಕೊಲ್ಲೆ ಕೂಡಲಸಂಗಮದೇವಾ.
65
ನೀನೊಲಿದಡೆ ಕೊರಡು ಕೊನರುವುದಯ್ಯಾ,
ನೀನೊಲಿದಡೆ ಬರಡು ಹಯನಹುದಯ್ಯಾ,
ನೀನೊಲಿದಡೆ ವಿಷವೆಲ್ಲ ಅಮೈತವಹುದಯ್ಯಾ,
ನೀನೊಲಿದಡೆ ಸಕಲ ಪಡಿಪದಾರ್ಥ
ಇದಿರಲ್ಲಿರ್ಪುವು ಕೂಡಲಸಂಗಮದೇವಾ.
66
ಮೇರುಗುಣವನರಸುವುದೆ ಕಾಗೆಯಲ್ಲಿ
ಪರುಷಗುಣವನರಸುವುದೆ ಕಬ್ಬುನದಲ್ಲಿ
ಸಾಧುಗುಣವನರಸುವುದೆ ಅವಗುಣಿಯಲ್ಲಿ
ಚಂದನಗುಣವನರಸುವುದೆ ತರುಗಳಲ್ಲಿ
ಸರ್ವಗುಣಸಂಪನ್ನ ಲಿಂಗವೆ, ನೀನೆನ್ನಲ್ಲಿ
ಅವಗುಣವನರಸುವರೆ ಕೂಡಲಸಂಗಮದೇವಾ.
67
ಭವಭವದಲ್ಲಿ ಎನ್ನ ಮನವು ಸಿಲುಕದೆ
ಭವಭವದಲ್ಲಿ ಎನ್ನ ಮನವು ಕಟ್ಟದೆ
ಭವಸಾಗರದಲ್ಲಿ ಮುಳುಗದೆ
ಭವರಾಟಳದೊಳು ತುಂಬದೆ ಕೆಡಹದೆ
ಭವವಿರಹಿತ ನೀನು, ಅವಧಾರು
ಕರುಣಿಸು ಕೂಡಲಸಂಗಮದೇವಾ.
68
ಆಸೆಯೆಂಬ ಪಾಶದಲ್ಲಿ ಭವಬಂಧನನಾಗಿರ್ದೆನಯ್ಯಾ,
ಸಕೃತು ನಿಮ್ಮ ನೆನೆಯಲು ಎನಗೆ ತೆರಹಿಲ್ಲಯ್ಯಾ !
ಕರುಣಾಕರ, ಅಭಯಕರ, ವರದ,
ನೀ ಕರುಣಿಸಯ್ಯಾ.
ಸಂಸಾರಬಂಧನವನು ಮಾಣಿಸಿ, ಎನಗೆ ಕೃಪೆಯ ಮಾಡಿ,
ನಿಮ್ಮ ಶ್ರೀಪಾದಪದ್ಮದಲ್ಲಿ ಭ್ರಮರನಾಗಿರಿಸು,
ಭಕ್ತಜನಮನೋವಲ್ಲ ಕೂಡಲಸಂಗಮದೇವಾ.
69
ಮಡಕೆಯ ಮಾಡುವಡೆ ಮಣ್ಣೆ ಮೊದಲು,
ತೊಡಿಗೆಯ ಮಾಡುವಡೆ ಹೊನ್ನೆ ಮೊದಲು,
ಶಿವಪಥವನರಿವಡೆ ಗುರುಪಥವೆ ಮೊದಲು,
ಕೂಡಲಸಂಗಮದೇವರನರಿವಡೆ
ಶರಣರ ಸಂಗವೆ ಮೊದಲು.
70
ನೋಡಿ ನೋಡಿ ಮಾಡುವ ನೇಮ ಸಲ್ಲವು, ಸಲ್ಲವು.
ತನುವುದ್ದೇಶ, ಮನವುದ್ದೇಶವಾಗಿ
ಮಾಡುವ ನೇಮ ಸಲ್ಲವು, ಸಲ್ಲವು.
ಗುರುಪಥವ ಮೀರಿ ಮಾಡುವ ನೇಮ ಸಲ್ಲವು, ಸಲ್ಲವು.
ಕೂಡಲಸಂಗಮದೇವಯ್ಯಾ
ಇವು ನಿಮ್ಮ ನಿಜದೊಳಗೆ ನಿಲ್ಲವು, ನಿಲ್ಲವು.
71
ಗುರುವಚನವಲ್ಲದೆ ಲಿಂಗವೆಂದೆನಿಸದು,
ಗುರುವಚನವಲ್ಲದೆ ಜಂಗಮವೆಂದೆನಿಸದು,
ಗುರುವಚನವಲ್ಲದೆ ನಿತ್ಯವೆಂದೆನಿಸದು,
ಗುರುವಚನವಲ್ಲದೆ ನೇಮವೆಂದೆನಿಸದು.
ತಲೆಯಿಲ್ಲದ ಅಟ್ಟೆಗೆ ಪಟ್ಟವ ಕಟ್ಟುವ
ಭಯ ಭ್ರಷ್ಟರ ಮೆಚ್ಚುವನೆ,
ನಮ್ಮ ಕೂಡಲಸಂಗಮದೇವ.
72
ಮುನ್ನ ಮಾಡಿದ ಪಾಪವೆಂತು ಹೋಹುದೆಂದು ಚಿಂತಿಸಬೇಡ.
ಕಹಿ ಸೋರೆಯ ಕಾಯ ತಂದು ವಿಭೂತಿಯ ತುಂಬಿದಡೆ
ಸಿಹಿಯಾಗದೆ ಮೂರು ದಿವಸಕ್ಕಯ್ಯಾ
ಹಲವು ಕಾಲ ಕೊಂದ ಸೂನೆಗಾರನ ಕತ್ತಿಯಾದಡೇನು
ಪರುಷ ಮುಟ್ಟಲಿಕೆ ಹೊನ್ನಾಗದೆ ಅಯ್ಯಾ
ಲಲಾಟದಲ್ಲಿ ವಿಭೂತಿ ಬರೆಯಲಿಕೆ ಪಾಪ ಪಲ್ಲಟವಾಗದೆ
ಕೂಡಲಸಂಗಮದೇವಾ.
73
ನೀರಿಂಗೆ ನೈದಿಲೆಯೆ ಶೃಂಗಾರ,
ಸಮುದ್ರಕ್ಕೆ ತೆರೆಯೆ ಶೃಂಗಾರ,
ನಾರಿಗೆ ಗುಣವೆ ಶೃಂಗಾರ,
ಗಗನಕ್ಕೆ ಚಂದ್ರಮನೆ ಶೃಂಗಾರ,
ನಮ್ಮ ಕೂಡಲಸಂಗನ ಶರಣರಿಗೆ
ನೊಸಲ ವಿಭೂತಿಯೆ ಶೃಂಗಾರ.
74
ಕರಿಯಂಜುವುದು ಅಂಕುಶಕ್ಕಯ್ಯಾ,
ಗಿರಿಯಂಜÅವುದು ಕುಲಿಶಕ್ಕಯ್ಯಾ,
ತಮಂಧವಂಜುವುದು ಜ್ಯೋತಿಗಯ್ಯಾ,
ಕಾನನವಂಜುವುದು ಬೇಗೆಗಯ್ಯಾ,
ಪಂಚಮಹಾಪಾತಕವಂಜುವುದು
ಕೂಡಲಸಂಗನ ನಾಮಕ್ಕಯ್ಯಾ.
75
ಜಪತಪ ನಿತ್ಯನೇಮವೆನಗುಪದೇಶ,
ನಿಮ್ಮ ನಾಮವೆನಗೆ ಮಂತ್ರ,
ಶಿವನಾಮವೆನಗೆ ತಂತ್ರ,
ಕೂಡಲಸಂಗಮದೇವಯ್ಯಾ
ನಿಮ್ಮ ನಾಮವೆನಗೆ ಕಾಮಧೇನು.
76
ಅಕಟಕಟಾ ಬೆಡಗು ಬಿನ್ನಾಣವೆಂಬುದೇನೊ !
ಓಂ ನಮಃ ಶಿವಾಯ ಎಂಬುದೇ ಮಂತ್ರ,
ಓಂ ನಮಃ ಶಿವಾಯ ಎಂಬುದೇ ತಂತ್ರ,
ನಮ್ಮ ಕೂಡಲಸಂಗಮದೇವರ ನೆನೆವುದೆ ಮಂತ್ರ.
77
ವಶ್ಯವ ಬಲ್ಲೆವೆಂದೆಂಬಿರಯ್ಯಾ,
ಬುದ್ಧಿಯನರಿಯದ ಮನುಜರು ಕೇಳಿರಯ್ಯಾ.
ವಶ್ಯವಾವುದೆಂದರಿಯದೆ ಮರುಳುಗೊಂಬಿರಿ,
ಎಲೆ ಗಾವಿಲ ಮನುಜರಿರಾ.
ಓಂ ನಮಃ ಶಿವಾಯ ಎಂಬ ಮಂತ್ರ ಸರ್ವಜನವಶ್ಯ
ಕೂಡಲಸಂಗಮದೇವಾ.
78
ಭವಬಂಧನ ದುರಿತಂಗಳ ಗೆಲುವಡೆ
ಓಂ ನಮಃ ಶಿವಶರಣೆಂದಡೆ ಸಾಲದೆ
ಹರ ಹರ ಶಂಕರ, ಶಿವ ಶಿವ ಶಂಕರ,
ಜಯ ಜಯ ಶಂಕರ ಶರಣೆನುತ್ತಿದ್ದೇನೆ.
ಎನ್ನ ಪಾತಕ ಪರಿಹರ,
ಕೂಡಲಸಂಗಮದೇವಾ ಶರಣೆನುತ್ತಿದ್ದೇನೆ.
79
ಎನ್ನ ಮನದಲ್ಲಿ ಮತ್ತೊಂದನರಿಯೆನಯ್ಯಾ,
ಓಂ ನಮಃ ಶಿವಾಯ, ಓಂ ನಮಃ ಶಿವಾಯ
ಎನಗಿದೆ ಮಂತ್ರ, ಇದೇ ಜಪ.
ಕೂಡಲಸಂಗಮದೇವಾ ನೀನೆ ಬಲ್ಲೆ, ಎಲೆ ಲಿಂಗವೆ.
80
ಓಂ ನಮಃ ಶಿವಾಯ
ಎಂಬ ಮಂತ್ರವ ಮೀರಲಮ್ಮದೆ ನಿಂದವು ವೇದ,
ಓಂ ನಮಃ ಶಿವಾಯ
ಎಂಬ ಮಂತ್ರವ ಮೀರಲಮ್ಮದೆ ನಿಂದವು ಶಾಸ್ತ್ರ,
ಓಂ ನಮಃ ಶಿವಾಯ
ಎಂಬ ಮಂತ್ರವ ಮೀರಲಮ್ಮದೆ ನಿಂದವು ತರ್ಕ.
ಭಯಂಕರ ಭ್ರಮೆಗೊಂಡಿತ್ತು ಮಂತ್ರ-ತಂತ್ರ,
ಶಿವನಂತುವನರಿಯದೆ ಚಿಂತಿಸುತ್ತಿದ್ದಿತ್ತು ಲೋಕ,
ಕೂಡಲಸಂಗಮದೇವ ಶ್ವಪಚನ ಮೆರೆದಡೆ
ಜಾತಿಭೇದವ ಮಾಡಲಮ್ಮವು.
81
ಬಿಳಿಯ ಕರಿಕೆ, ಕಣಿಗಿಲೆಲೆಯ,
ತೊರೆಯ ತಡಿಯ ಮಳಲ ತಂದು,
ಗೌರಿಯ ನೋನುವ ಬನ್ನಿರೆ.
ಚಿಕ್ಕ ಚಿಕ್ಕ ಮಕ್ಕಳೆಲ್ಲರು ನೆರೆದು
ಅನುಪಮದಾನಿ ಕೂಡಲಸಂಗಮದೇವ ಗಂಡನಾಗಬೇಕೆಂದು.
82
ಎಮ್ಮವರು ಬೆಸಗೊಂಡಡೆ ಶುಭಲಗ್ನವೆನ್ನಿರಯ್ಯಾ,
ರಾಶಿಕೂಟ ಋಣಸಂಬಂಧವುಂಟೆಂದು ಹೇಳಿರಯ್ಯಾ,
ಚಂದ್ರಬಲ ತಾರಾಬಲವುಂಟೆಂದು ಹೇಳಿರಯ್ಯಾ,
ನಾಳಿನ ದಿನಕಿಂದನ ದಿನ ಲೇಸೆಂದು ಹೇಳಿರಯ್ಯಾ,
ಕೂಡಲಸಂಗಮದೇವನ ಪೂಜಿಸಿದ ಫಲ ನಿಮ್ಮದಯ್ಯಾ.
83
ಪಾತಕ ಶತಕೋಟಿಯನೊರಸಲು
ಸಾಲದೆ ಒಂದು ಶಿವನ ನಾಮ
ಸಾಲದೆ ಒಂದು ಹರನ ನಾಮ
ಕೂಡಲಸಂಗಮದೇವಾ
ನಿಮ್ಮ ಉಂಡಿಗೆಯ ಪಶುವ ಮಾಡಿದೆಯಾಗಿ.
84
ಲಿಂಗದ ಉಂಡಿಗೆಯ ಪಶುವಾನಯ್ಯಾ,
ವೇಷಧಾರಿಯಾನು, ಉದರಪೋಷಕ ನಾನಯ್ಯಾ,
ಕೂಡಲಸಂಗನ ಶರಣರ ಧರ್ಮದ ಕವಿಲೆಯಾನು.
85
ನಮಃ ಶಿವಾಯ ನಮಃ ಶಿವಾಯ ನಮಃ ಶಿವಾಯ
ಶರಣೆಂದಿತ್ತು ಲಲಾಟಲಿಖಿತ,
ಬರೆದ ಬಳಿಕ ಪಲ್ಲಟವ ಮಾಡಬಾರದು.
ಎನ್ನ ಉರದ ಉಂಡಿಗೆ, ಶಿರದ ಅಕ್ಷರ
ಕೂಡಲಸಂಗಯ್ಯಾ ಶರಣೆಂದಿತ್ತು.
86
ಅಡ್ಡ ವಿಭೂತಿುಲ್ಲದವರ ಮುಖಹೊಲ್ಲ, ನೋಡಲಾಗದು.
ಲಿಂಗದೇವನಿಲ್ಲದಠಾವು ನರವಿಂಧ್ಯ, ಹೊಗಲಾಗದು.
ದೇವಭಕ್ತರಿಲ್ಲದೂರು ಸಿನೆ ಹಾಳು,
ಕೂಡಲಸಂಗಮದೇವಾ.
87
ಅಡ್ಡ ತ್ರಿಪುಂಡ್ರದ, ಮಣಿಮಕುಟವೇಷದ
ಶರಣರ ಕಂಡಡೆ ನಂಬುವುದೆನ್ನ ಮನವು,
ನಚ್ಚುವುದೆನ್ನ ಮನವು, ಸಂದೇಹವಿಲ್ಲದೆ.
ಇವಿಲ್ಲದವರ ಕಂಡಡೆ ನಂಬೆ ಕೂಡಲಸಂಗಮದೇವಾ.
88
ಆರಾಧ್ಯ ಪ್ರಾಣಲಿಂಗವೆಂದರಿದು,
ಪೂರ್ವಗುಣವಳಿದು ಪುನರ್ಜಾತನಾದ ಬಳಿಕ,
ಸಂಸಾರಬಂಧುಗಳೆನ್ನವರೆಂದಡೆ
ನಂಟುಭಕ್ತಿ ನಾಯಕನರಕ-
ಇಂತೆಂದುದು ಕೂಡಲಸಂಗನ ವಚನ.
89
ತಾಳಮರದ ಕೆಳಗೆ ಒಂದು ಹಾಲ ಹರಮಿದ್ದಡೆ
ಅದ ಹಾಲಹರವಿಯೆನ್ನರು, ಸುರೆಯ ಹರವಿಯೆಂಬರು.
ಈ ಭಾವನಿಂದೆಯ ಮಾಣಿಸಾ
ಕೂಡಲಸಂಗಮದೇವಾ.
90
ಸುಪಥಮಂತ್ರದುಪದೇಶವ ಕಲಿತು, ಯುಕ್ತಿಗೆಟ್ಟು ನಡೆವಿರಯ್ಯಾ,
ತತ್ತ್ವಮಸಿ ಎಂಬುದನರಿದು ಕತ್ತಲೆಗೆ ಓಡುವಿರಯ್ಯಾ.
ವೇದವಿಪ್ರರ ವಿಚಾರಿಸಿ ನೋಡಲು,
ಉಪದೇಶಪರೀಕ್ಷೆ ನರಕವೆಂದುದು
ಕೂಡಲಸಂಗನ ವಚನಸೂಚನೆ.
91
ಕುಂಬಳದ ಕಾುಗೆ ಕಬ್ಬುನದ ಕಟ್ಟ ಕೊಟ್ಟಡೆ
ಕೊಳೆವುದಲ್ಲದೆ ಬಲುಹಾಗಬಲ್ಲುದೆ
ಅಳಿಮನದವಂಗೆ ದೀಕ್ಷೆಯ ಕೊಟ್ಟಡೆ
ಭಕ್ತಿಯೆಂತಹುದು ಮುನ್ನಿನಂತೆ.
ಕೂಡಲಸಂಗಯ್ಯಾ
ಮನಹೀನನ ಮೀಸಲ ಕಾ್ದುರಿಸಿದಂತೆ.
92
ಸಗಣಿಯ ಬೆನಕಂಗೆ ಸಂಪಗೆಯರಳಲ್ಲಿ ಪೂಜಿಸಿದಡೆ
ರಂಜನೆಯಹುದಲ್ಲದೆ ಅದರ ಗಂಜಳ ಬಿಡದಣ್ಣಾ,
ಮಣ್ಣ ಪುತ್ಥಳಿಯ ಮಾಣದೆ ಜಲದಲ್ಲಿ ತೊಳೆದಡೆ
ನಿಚ್ಚ ಕೆಸರಹುದಲ್ಲದೆ ಅದರಚ್ಚಿಗ ಬಿಡದಣ್ಣಾ.
ಲೋಕದ ಮಾನವಂಗೆ ಶಿವದೀಕ್ಷೆಯ ಕೊಟ್ಟಡೆ
ಕೆಟ್ಟವನೇಕೆ ಸದ್ಭಕ್ತನಹನು ಕೂಡಲಸಂಗಮದೇವಾ.
93
ಕಬ್ಬುನದ ಕೋಡಗವ ಪರುಷ ಮುಟ್ಟಲು,
ಹೊನ್ನಾದಡೇನು ಮತ್ತೇನಾದಡೇನು
ತನ್ನ ಮುನ್ನಿನ ರೂಹ ಬಿಡದನ್ನಕ್ಕ
ಕೂಡಲಸಂಗಮದೇವಾ,
ನಿಮ್ಮ ನಂಬಿಯೂ ನಂಬದ ಡಂಬಕರುಗಳಯ್ಯಾ.
94
ತನುವಿನಲೊಂದಿಟ್ಟು ಮನದಲೆರಡಿಟ್ಟಡೆ,
ಬಲ್ಲನೊಲ್ಲನಯ್ಯಾ, ಲಿಂಗವು ಬಲ್ಲನೊಲ್ಲನಯ್ಯಾ.
ಪರಚಿಂತೆಯನೊಲ್ಲನೊಲ್ಲ
ಕೂಡಲಸಂಗಮದೇವ.
95
ಒಳಗೆ ಕುಟಿಲ, ಹೊರಗೆ ವಿನಯವಾಗಿ ಭಕ್ತರೆನಿಸಿಕೊಂಬವರ
ಬಲ್ಲನೊಲ್ಲನಯ್ಯಾ ಲಿಂಗವು,
ಅವರು ಪಥಕ್ಕೆ ಸಲ್ಲರು ಸಲ್ಲರಯ್ಯಾ.
ಒಳಹೊರಗೊಂದಾಗದವರಿಗೆ
ಅಳಿಯಾಸೆದೋರಿ ಬೀಸಾಡುವನವರ
ಜಗದೀಶ ಕೂಡಲಸಂಗಮದೇವ.
96
ಮನೆಯೊಳಗೆ ಮನೆಯೊಡೆಯನಿದ್ದಾನೊ, ಇಲ್ಲವೊ
ಹೊಸ್ತಿಲಲ್ಲಿ ಹುಲ್ಲು ಹುಟ್ಟಿ, ಮನೆಯೊಳಗೆ ರಜ ತುಂಬಿ,
ಮನೆಯೊಳಗೆ ಮನೆಯೊಡೆಯನಿದ್ದಾನೊ, ಇಲ್ಲವೊ
ತನುವಿನಲ್ಲಿ ಹುಸಿ ತುಂಬಿ, ಮನದೊಳಗೆ ವಿಷಯ ತುಂಬಿ
ಮನದೊಳಗೆ [ಮನದೊ]ಡೆಯನಿದ್ದಾನೊ, ಇಲ್ಲವೊ
ಇಲ್ಲ, ಕೂಡಲಸಂಗಮದೇವಾ.
97
ಓಡೆತ್ತ ಬಲ್ಲುದು ಅವಲಕ್ಕಿಯ ಸವಿಯ
ಕೋಡುಗ ಬಲ್ಲುದೆ ಸೆಳೆಮಂಚದ ಸುಖವ
ಕಾಗೆ ನಂದನವನದೊಳಗಿದ್ದಡೇನು,
ಕೋಗಿಲೆಯಾಗಬಲ್ಲುದೆ ಹೇಳಾ
ಕೊಳನ ತಡಿಯಲೊಂದು ಹೊರಸು ಕುಳ್ಳಿರ್ದಡೇನು,
ಕಳಹಂಸಿಯಾಗಬಲ್ಲುದೆ, ಕೂಡಲಸಂಗಮದೇವಾ.
98
ಎನಿಸು ಕಾಲ ಕಲ್ಲು ನೀರೊಳಗಿದ್ದಡೇನು,
ನೆನೆದು ಮೃದುವಾಗಬಲ್ಲುದೆ
ಎನಿಸು ಕಾಲ ನಿಮ್ಮ ಪೂಜಿಸಿ ಏವೆನಯ್ಯಾ,
ಮನದಲ್ಲಿ ದೃಡವಿಲ್ಲದನ್ನಕ್ಕ
ನಿದಾನವ ಕಾಯಿದಿರ್ದ ಬೆಂತರನಂತೆ
ಅದರ ವಿಧಿ ಎನಗಾಯಿತ್ತು, ಕೂಡಲಸಂಗಮದೇವಾ.
99
ಸಂತವಿದ್ದ ಮನೆಗೆ ಕೊಂತವ ತಂದಂತೆ
ಇದನೆಂತು ಸಂತೈಸುವೆನು
ಸಂತೆಯ ಗುಡಿಲ ಸೂಳೆಗೆ ಕೊಂತವಳವಡುವುದೆ
ಕೂಡಲಸಂಗಮದೇವರ ಮಹತ್ತು
ಆರಿಗೂ ಆಳವಡದು.
100
ಕೂಸುಳ್ಳ ಸೂಳೆ ಧನದಾಸೆಗೊತ್ತೆಯ ಕೊಂಡಡೆ
ಕೂಸಿಂಗಲ್ಲ, ಬೊಜಗಂಗಲ್ಲ.
ಕೂಸನೊಮ್ಮೆ ಸಂತವಿಡುವಳು, ಬೊಜಗನನೊಮ್ಮೆ ನೆರೆವಳು.
ಧನದಾಸೆ ಬಿಡದು ಕೂಡಲಸಂಗಮದೇವಾ.
101
ಎರದೆಲೆಯಂತೆ ಒಳಗೊಂದು ಹೊರಗೊಂದಾದಡೆ ಮೆಚ್ಚುವನೆ
ಬಾರದ ಭವಂಗಳ ಬರಿಸುವನಲ್ಲದೆ ಮೆಚ್ಚುವನೆ
ಅಘೋರ ನರಕವನುಣಿಸುವನಲ್ಲದೆ ಮೆಚ್ಚುವನೆ !
ಉಡುವಿನ ನಾಲಗೆಯಂತೆ ಎರಡಾದಡೆ
ಕೂಡಲಸಂಗಯ್ಯ ಮೆಚ್ಚುವನೆ.
102
ಭಕ್ತರ ಕಂಡಡೆ ಬೋಳರಪ್ಪಿರಯ್ಯಾ,
ಸವಣರ ಕಂಡಡೆ ಬತ್ತಲೆಯಪ್ಪಿರಯ್ಯಾ,
ಹಾರುವರ ಕಂಡಡೆ ಹರಿನಾಮವೆಂಬಿರಯ್ಯಾ,
ಅವರವರ ಕಂಡಡೆ ಅವರವರಂತೆ
ಸೂಳೆಗೆ ಹುಟ್ಟಿದವರ ತೋರದಿರಯ್ಯಾ.
ಕೂಡಲಸಂಗಯ್ಯನ ಪೂಜಿಸಿ, ಅನ್ಯದೈವಂಗಳಿಗೆರಗಿ
ಭಕ್ತರೆನಿಸಿಕೊಂಬ ಅಜ್ಞಾನಿಗಳ ನಾನೇನೆಂಬೆನಯ್ಯಾ.
103
ಗಂಡ ಶಿವಲಿಂಗದೇವರ ಭಕ್ತ,
ಹೆಂಡತಿ ಮಾರಿ ಮಸಣಿಯ ಭಕ್ತೆ.
ಗಂಡ ಕೊಂಬುದು ಪಾದೋದಕ-ಪ್ರಸಾದ,
ಹೆಂಡತಿ ಕೊಂಬುದು ಸುರೆ-ಮಾಂಸ.
ಭಾಂಡ-ಭಾಜನ ಶುದ್ಧವಿಲ್ಲದವರ ಭಕ್ತಿ
ಹೆಂಡದ ಮಡಿಕೆಯ ಹೊರಗೆ ತೊಳೆದಂತೆ
ಕೂಡಲಸಂಗಮದೇವಾ.
104
ಹಾವಡಿಗನು ಮೂಕೊರತಿಯು:
ತನ್ನ ಕೈಯಲ್ಲಿ ಹಾವು,
ಮಗನ ಮದುವೆಗೆ ಶಕುನವ ನೋಡಹೋಹಾಗ
ಇದಿರಲೊಬ್ಬ ಮೂಕೊರತಿಯ ಹಾವಡಿಗನ ಕಂಡು,
ಶಕುನ ಹೊಲ್ಲೆಂಬ ಚದುರನ ನೋಡಾ.
ತನ್ನ ಸತಿ ಮೂಕೊರತಿ, ತನ್ನ ಕೈಯಲ್ಲಿ ಹಾವು,
ತಾನು ಮೂಕೊರೆಯ.
ತನ್ನ ಬ್ಥಿನ್ನವನರಿಯದೆ ಅನ್ಯರನೆಂಬ
ಕುನ್ನಿಯನೇನೆಂಬೆ ಕೂಡಲಸಂಗಮದೇವಾ.
105
ಅಂಗದಿಚ್ಛೆಗೆ ಮದ್ಯಮಾಂಸವ ತಿಂಬರು,
ಕಂಗಳಿಚ್ಛೆಗೆ ಪರವಧುವ ನೆರೆವರು.
ಲಿಂಗಲಾಂಛನಧಾರಿಯಾದಲ್ಲಿ ಫಲವೇನು
ಲಿಂಗಪಥವ ತಪ್ಪಿ ನಡೆವವರು
ಜಂಗಮಮುಖದಿಂದ ನಿಂದೆ ಬಂದಡೆ
ಕೊಂಡ ಮಾರಿಂಗೆ ಹೋಹುದು ತಪ್ಪದು
ಕೂಡಲಸಂಗಮದೇವಾ.
106
ಶಿವಜನ್ಮದಲ್ಲಿ ಹುಟ್ಟಿ, ಲಿಂಗೈಕ್ಯರಾಗಿ,
ತನ್ನ ಅಂಗದ ಮೇಲೆ ಲಿಂಗವಿರುತಿರಲು,
ಅನ್ಯರನೆ ಹಾಡಿ, ಅನ್ಯರನೆ ಹೊಗಳಿ,
ಅನ್ಯರ ವಚನವ ಕೊಂಡಾಡಲು, ಕರ್ಮ ಬಿಡದು, ಭವಬಂಧನ !
ಶ್ವಾನಯೋನಿಯಲ್ಲಿ ಬಪ್ಪುದು ತಪ್ಪದು !
ಇದು ಕಾರಣ, ಕೂಡಲಸಂಗಮದೇವಾ,
ನಿಮ್ಮ ನಂಬಿಯೂ ನಂಬದ ಡಂಬಕರಿಗೆ
ಮಳಲ ಗೋಡೆಯನಿಕ್ಕಿ, ನೀರಲ್ಲಿ ತೊಳೆದಂತಾುತ್ತಯ್ಯಾ.
107
ಅರ್ಥರೇಖೆುದ್ದಲ್ಲಿ ಫಲವೇನು, ಆಯುಷ್ಯರೇಖೆ ಇಲ್ಲದನ್ನಕ್ಕರ
ಹಂದೆಯ ಕೈಯಲ್ಲಿ ಚಂದ್ರಾಯುಧವಿದ್ದಲ್ಲಿ ಫಲವೇನು
ಅಂಧಕನ ಕೈಯಲ್ಲಿ ದರ್ಪಣವಿದ್ದು ಫಲವೇನು
ಮರ್ಕಟನ ಕೈಯಲ್ಲಿ ಮಾಣಿಕವಿದ್ದು ಫಲವೇನು
ನಮ್ಮ ಕೂಡಲಸಂಗನ ಶರಣರನರಿಯದವರ ಕೈಯಲ್ಲಿ
ಲಿಂಗವಿದ್ದು ಫಲವೇನು ! ಶಿವಪಥವನರಿಯದನ್ನಕ್ಕ.
108
ಗಂಡನ ಮೇಲೆ ಸ್ನೇಹವಿಲ್ಲದ ಹೆಂಡತಿ,
ಲಿಂಗದ ಮೇಲೆ ನಿಷೆ*ುಲ್ಲದ ಭಕ್ತ,
ಇದ್ದಡೇನೊ ಶಿವ ಶಿವಾ ಹೋದಡೇನೊ
ಕೂಡಲಸಂಗಮದೇವಯ್ಯಾ
ಊಡದ ಆವಿಂಗೆ ಉಣ್ಣದ ಕರುವ ಬಿಟ್ಟಂತೆ.
109
ಅವಳ ವಚನ ಬೆಲ್ಲದಂತೆ, ಹೃದಯದಲಿಪ್ಪುದು ನಂಜು ಕಂಡಯ್ಯಾ.
ಕಂಗಳಲೊಬ್ಬನ ಕರೆವಳು, ಮನದಲೊಬ್ಬನ ನೆರೆವಳು.
ಕೂಡಲಸಂಗಮದೇವ ಕೇಳಯ್ಯಾ,
ಮಾನಿಸಗಳ್ಳೆಯ ನಂಬದಿರಯ್ಯಾ.
110
ಹಾದರಕ್ಕೆ ಹೋದಡೆ, ಕಳ್ಳದಮ್ಮವಾುತ್ತು;
ಹಾಳು ಗೋಡೆಗೆ ಹೋದಡೆ, ಚೇಳೂರಿತ್ತು;
ಅಬ್ಬರವ ಕೇಳಿ ತಳವಾರ ಉಟ್ಟ ಸೀರೆಯ ಸುಲಿದ;
ನಾಚಿ ಹೋದಡೆ ಮನೆಯ ಗಂಡ ಬೆನ್ನ ಬಾರನೆತ್ತಿದ,
ಅರಸು ಕೂಡಲಸಂಗಮದೇವ ದಂಡವ ಕೊಂಡ.
111
ಗರಿ ತೋರೆ ಗಂಡರೆಂಬವರ ಕಾಣೆ,
ನಿರಿ ಸೋಂಕೆ ಮುನಿ[ಯ]ಲ್ಲ ನೋಡಯ್ಯಾ.
ನಂಟುತನವೇನವನ ಬಂಟತನವೇನವನ
ಹುಲ್ಲುಕಿಚ್ಚು, ಹೊಲೆಯನ ಮೇಳಾಪ-
ಅಲ್ಲಿ ಹುರುಳಿಲ್ಲ, ಕೂಡಲಸಂಗಮದೇವಾ.
112
ಅಳೆವುತ್ತ ಅಳೆವುತ್ತ ಬಳಲುವರಲ್ಲದೆ, ಕೊಳಗ ಬಳಲುವುದೆ
ನಡೆವುತ್ತ ನಡೆವುತ್ತ ಬಳಲುವರಲ್ಲದೆ, ಬಟ್ಟೆ ಬಳಲುವುದೆ
ಶ್ರವವ ಮಾಡುತ್ತ ಮಾಡುತ್ತ ಬಳಲುವರಲ್ಲದೆ, ಕೋಲು ಬಳಲುವುದೆ
ನಿಜವನರಿಯದ ಭಕ್ತ ಬಳಲುವನಲ್ಲದೆ, ಲಿಂಗ ಬಳಲುವುದೆ
ಕೂಡಲಸಂಗಮದೇವಾ, ಅರಸರಿಯದ ಬಿಟ್ಟಿಯೋ.
113
ಒಲೆಯ ಬೂದಿಯ ಬಿಲಿಯಲು ಬೇಡ,
ಒಲಿದಂತೆ ಹೂಸಿಕೊಂಡಿಪ್ಪುದು.
ಹೂಸಿ ಏನು ಫಲ, ಮನದಲ್ಲಿ ಲೇಸಿಲ್ಲದನ್ನಕ್ಕ
ಒಂದನಾಡಹೋಗಿ ಒಂಬತ್ತನಾಡುವ ಡಂಬಕರ ಮೆಚ್ಚ
ಕೂಡಲಸಂಗಯ್ಯ.
114
ಧರಣಿಯ ಮೇಲೊಂದು ಹಿರಿದಪ್ಪ ಅಂಗಡಿಯನಿಕ್ಕಿ,
ಹರದ ಕುಳ್ಳಿರ್ದ ನಮ್ಮ ಮಹಾದೇವಸೆಟ್ಟಿ.
ಒಮ್ಮನವಾದಡೆ ಒಡನೆ ನುಡಿವನು,
ಇಮ್ಮನವಾದಡೆ ನುಡಿಯನು.
ಕಾಣಿಯ ಸೋಲ, ಅರ್ಧಗಾಣಿಯ ಗೆಲ್ಲ,
ಜಾಣ ನೋಡವ್ವಾ, ನಮ್ಮ ಕೂಡಲಸಂಗಮದೇವ.
115
ನಂಬರು ನಚ್ಚರು ಬರಿದೆ ಕರೆವರು,
ನಂಬಲರಿಯರೀ ಲೋಕದ ಮನುಜರು,
ನಂಬಿ ಕರೆದಡೋ ಎನ್ನನೆ ಶಿವನು
ನಂಬದೆ ನಚ್ಚದೆ ಬರಿದೆ ಕರೆವರ
ಕೊಂಬ ಮೆಟ್ಟಿ ಕೂಗೆಂದ ಕೂಡಲಸಂಗಮದೇವ.
116
ಹುತ್ತವ ಬಡಿದಡೆ ಹಾವು ಸಾಯಬಲ್ಲುದೆ ಅಯ್ಯಾ
ಅಘೋರ ತಪವ ಮಾಡಿದಡೇನು
ಅಂತರಂಗ ಆತ್ಮಶುದ್ಧಿುಲ್ಲದವರನೆಂತು ನಂಬುವನಯ್ಯಾ
ಕೂಡಲಸಂಗಮದೇವ.
117
ಕಾಮವೇಕೊ, ಲಿಂಗಪ್ರೇಮಿಯೆನಿಸುವಂಗೆ
ಕ್ರೋಧವೇಕೊ, ಶರಣವೇದ್ಯನೆನಿಸುವಂಗೆ
ಲೋಭವೇಕೊ, ಭಕ್ತಿಯ ಲಾಭವ ಬಯಸುವಂಗೆ
ಮೋಹವೇಕೊ ಪ್ರಸಾದವೇದ್ಯನೆನಿಸುವಂಗೆ
ಮದಮತ್ಸರವುಳ್ಳವಂಗೆ ಹೃದಯಶುದ್ಧವೆಲ್ಲಿಯದೊ
ಹದುಳಿಗರಾದಲ್ಲಿಪ್ಪ ಕೂಡಲಸಂಗಮದೇವ.
118
ಸಾರ: ಸಜ್ಜನರ ಸಂಗವ ಮಾಡೂದು,
ದೂರ ದುರ್ಜನರ ಸಂಗ ಬೇಡವಯ್ಯಾ.
ಆವ ಹಾವಾದಡೇನು:ವಿಷವೊಂದೆ,
ಅಂತವರ ಸಂಗ ಬೇಡವಯ್ಯಾ.
ಅಂತರಂಗ ಶುದ್ಧವಿಲ್ಲದವರ ಸಂಗವು
ಸಿಂಗಿ, ಕಾಳಕೂಟ ವಿಷವೊ, ಕೂಡಲಸಂಗಯ್ಯಾ.
119
ಹಸಿದು ಎಕ್ಕೆಯ ಕಾಯ ಮೆಲಬಹುದೆ
ನೀರಡಿಸಿ ವಿಷವ ಕುಡಿಯಬಹುದೆ
ಸುಣ್ಣದ, ತುಯ್ಯಲ[ದ] ಬಣ್ಣವೊಂದೆ ಎಂದಡೆ
ನಂಟುತನಕ್ಕೆ ಉಣಬಹುದೆ
ಲಿಂಗಸಾರಾಯ ಸಜ್ಜನರಲ್ಲದವರ
ಕೂಡಲಸಂಗಮದೇವರೆಂತೊಲಿವ.
120
ಎಲವದ ಮರ ಹೂತು ಫಲವಾದ ತೆರನಂತೆ;
ಸಿರಿಯಾದಡೇನು, ಶಿವಭಕ್ತಿುಲ್ಲದನ್ನಕ್ಕ
ಫಲವಾದಡೇನು ಹೇಳಾ, ಹಾವುಮೆಕ್ಕೆಯ ಕಾು
ಕುಲವಿಲ್ಲದ ರೂಹು ಎಲ್ಲದ್ದಡೇನು
ಬಚ್ಚಲ ನೀರು ತಿಳಿದಲ್ಲಿ ಫಲವೇನು
ಅವಗುಣಿಗಳನು ಮೆಚ್ಚ ಕೂಡಲಸಂಗಮದೇವ.
121
ಬಚ್ಚಲ ನೀರು ತಿಳಿದಡೇನು
ಸಲ್ಲದ ಹೊನ್ನು ಮತ್ತೆಲ್ಲಿದ್ದಡೇನು
ಆಕಾಶದ ಮಾವಿನ ಫಲವೆಂದಡೇನು
ಕೊಯ್ಯಲಿಲ್ಲ, ಮೆಲ್ಲಲಿಲ್ಲ.
ಕೂಡಲಸಂಗನ ಶರಣರ ಅನುಭಾವವಿಲ್ಲದವ
ಎಲ್ಲಿದ್ದಡೇನು, ಎಂತಾದಡೇನು.
122
ಗಿಳಿಯೋದಿ ಫಲವೇನು
ಬೆಕ್ಕು ಬಹುದ ಹೇಳಲರಿಯದು.
ಜಗವೆಲ್ಲವ ಕಾಬ ಕಣ್ಣು,
ತನ್ನ ಕೊಂಬ ಕೊಲ್ಲೆಯ ಕಾಣಲರಿಯದು.
ಇದಿರ ಗುಣವ ಬಲ್ಲೆವೆಂಬರು, ತಮ್ಮ ಗುಣವನರಿಯರು,
ಕೂಡಲಸಂಗಮದೇವಾ.
123
ಲೋಕದ ಡೊಂಕ ನೀವೇಕೆ ತಿದ್ದುವಿರಿ
ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ;
ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ.
ನೆರೆಮನೆಯ ದಃಖಕ್ಕೆ ಅಳುವವರ ಮೆಚ್ಚ
ಕೂಡಲಸಂಗಮದೇವ.
124
ಏತ ತಲೆವಾಗಿದಡೇನು, ಗುರುಭಕ್ತನಾಗಬಲ್ಲುದೆ
ಇಕ್ಕುಳ ಕೈಮುಗಿದಡೇನು, ಭೃತ್ಯಾಚಾರಿಯಾಗಬಲ್ಲುದೆ
ಗಿಳಿಯೋದಿದಡೇನು, ಲಿಂಗವೇದಿಯಾಗಬಲ್ಲುದೆ
ಕೂಡಲಸಂಗನ ಶರಣರು ಬಂದ ಬರವ, ನಿಂದ ನಿಲವ
ಅನಂಗಸಂಗಿಗಳೆತ್ತಬಲ್ಲರು!
125
ಒಲವಿಲ್ಲದ ಪೂಜೆ, ನೇಹವಿಲ್ಲದ ಮಾಟ:
ಆ ಪೂಜೆಯು, ಆ ಮಾಟವು
ಚಿತ್ರದ ರೂಹು ಕಾಣಿರಣ್ಣಾ, ಚಿತ್ರದ ಕಬ್ಬು ಕಾಣಿರಣ್ಣಾ,
ಅಪ್ಪಿದಡೆ ಸುಖವಿಲ್ಲ, ಮೆಲಿದಡೆ ರುಚಿುಲ್ಲ.
ಕೂಡಲಸಂಗಮದೇವಾ, ನಿಜವಿಲ್ಲದವನ ಭಕ್ತಿ.
126
ಸ್ನೇಹ ತಪ್ಪಿದಠಾವಿನಲ್ಲಿ ಗುಣವನರಸುವರೆ ಅಯ್ಯಾ
ಹೂ ಬಾಡಿದಲ್ಲಿ ಪರಿಮಳವನರಸುವರೆ ಅಯ್ಯಾ
ಎನ್ನ ತಂದೆ ಕೂಡಲಸಂಗಮದೇವಾ
ತೊರೆ ಇಳಿದಡೆ ಅಂಬಿಗಂಗೇನುಂಟು.
127
ಆಸೆಗೆ ಹುಟ್ಟಿದ ಪ್ರಾಣಿ ಆಸೆಯನೆ ಕಲಿತು,
ಪುಣ್ಯದ ಪದವಿಯ ಬಯಸಿದಡೆ
ಭವಮಾಲೆಯ ಬರವು ತಪ್ಪದು.
ಬೇಡಲು ಹುಟ್ಟಿದ ಪ್ರಾಣಿಗೆ, ಬೇಡಲು ವಿಧಿಯೆ
ಸೂಳೆಗೆ ಹುಟ್ಟಿದ ಪ್ರಾಣಿಗೆ ನಿಜಗುಣ ಸಜ್ಜನವಪ್ಪುದೆ
ಲಿಂಗ-ಉದಯ, ಶರಣ-ವಿಸ್ತಾರವು ಬಯಸಿದಡೊಳವೆ
ಕೂಡಲಸಂಗಮದೇವಾ, ನಿಮ್ಮಲ್ಲಿ.
128
ಹಬ್ಬಕ್ಕೆ ತಂದ ಹರಕೆಯ ಕುರಿ
ತೋರಣಕ್ಕೆ ತಂದ ತಳಿರ ಮೇುತ್ತು.
ಕೊಂದಹರೆಂಬುದನರಿಯದೆ
ಬೆಂದ ಒಡಲ ಹೊರೆವುತ್ತಲದೆ.
ಅದಂದೆ ಹುಟ್ಟಿತ್ತು, ಅದಂದೆ ಹೊಂದಿತ್ತು.
ಕೊಂದವರುಳಿವರೆ ಕೂಡಲಸಂಗಮದೇವಾ.
129
ಹಾವಿನ ಬಾಯ ಕಪ್ಪೆ ಹಸಿದು
ಹಾರುವ ನೊಣಕ್ಕೆ ಆಸೆಮಾಡುವಂತೆ,
ಶೂಲವನೇರುವ ಕಳ್ಳನು ಹಾಲು ತುಪ್ಪವ ಕುಡಿದು
ಮೇಲೇಸುಕಾಲ ಬದುಕುವನೊ
ಕೆಡುವೊಡಲ ನಚ್ಚಿ, ಕಡುಹುಸಿಯನೆ ಹುಸಿದು, ಒಡಲ ಹೊರೆವರ
ಕೂಡಲಸಂಗಮದೇವಯ್ಯನೊಲ್ಲ, ಕಾಣಿರಣ್ಣಾ.
130
ಆರತವಡಗದು, ಕ್ರೋಧ ತೊಲಗದು.
ಕ್ರೂರ ಕುಭಾಷೆ, ಕುಹಕ ಬಿಡದನ್ನಕ್ಕ
ನೀನೆತ್ತಲು ಶಿವನೆತ್ತಲು ಹೋಗುತ್ತ ಮರುಳೆ.
ಭವರೋಗವೆಂಬ ತಿಮಿರ ತಿಳಿಯದನ್ನಕ್ಕ
ಕೂಡಲಸಂಗಯ್ಯನೆತ್ತ, ನೀನೆತ್ತ ಮರುಳೆ.
131
ಹಾವು ತಿಂದವರ ನುಡಿಸಬಹುದು,
ಗರ ಹೊಡೆದವರ ನುಡಿಸಬಹುದು,
ಸಿರಿಗರ ಹೊಡೆದವರ ನುಡಿಸಲು ಬಾರದು ನೋಡಯ್ಯಾ.
ಬಡತನವೆಂಬ ಮಂತ್ರವಾದಿ ಹೊಗಲು
ಒಡನೆ ನುಡಿವರಯ್ಯಾ, ಕೂಡಲಸಂಗಮದೇವಾ.
132
ಅರೆಭಕ್ತರಾದವರ ನೆರೆ ಬೇಡ, ಹೊರೆ ಬೇಡ,
ದಾರಿ ಸಂಗಡ ಬೇಡ, ದೂರ ನುಡಿಯಲು ಬೇಡ,
ಕೂಡಲಸಂಗನ ಶರಣರಲ್ಲಿ
ಅಚ್ಚಲಿಂಗೈಕ್ಯಂಗೆ ತೊತ್ತಾಗಿಹುದಯ್ಯಾ.
133
ಸಾರ ಸಜ್ಜನರ ಸಂಗ ಲೇಸು ಕಂಡಯ್ಯಾ,
ದೂರ ದುರ್ಜನರ ಸಂಗವದು ಭಂಗವಯ್ಯಾ.
ಸಂಗವೆರಡುಂಟು:ಒಂದ ಹಿಡಿ, ಒಂದ ಬಿಡು,
ಮಂಗಳಮೂರ್ತಿ ನಮ್ಮ ಕೂಡಲಸಂಗನ ಶರಣರ.
134
ಹೊಲೆಯ ಹೊಲಬಿಗನಾದಡೆ,
ಅವನ ಹೊರೆಯಲಿಪ್ಪುದು ಲೇಸು ಕಂಡಯ್ಯಾ.
ಹೊಲಬುಗೆಡದೆ ಲಿಂಗ ಶರಣೆನ್ನಿರಯ್ಯಾ.
ಹೊಲಬುಗೆಡಬೇಡ, ಶಿವ ಶರಣೆನ್ನಿರಯ್ಯಾ.
ನಮ್ಮ ಕೂಡಲಸಂಗನ ಮಹಾಮನೆಯಲು
ಮಾದಾರ ಚೆನ್ನಯ್ಯ ಹೊಲಬಿಗನಯ್ಯಾ.
135
ದೂಷಕನವನೊಬ್ಬ ದೇಶವ ಕೊಟ್ಟಡೆ,
ಆಸೆಮಾಡಿ ಅವನ ಹೊರೆಯಲಿರಬೇಡ.
ಮಾದಾರ ಶಿವಭಕ್ತನಾದಡೆ,
ಆತನ ಹೊರೆಯಲು ಭೃತ್ಯನಾಗಿಪ್ಪುದು ಕರ ಲೇಸಯ್ಯಾ,
ತೊತ್ತಾಗಿಪ್ಪುದು ಕರ ಲೇಸಯ್ಯಾ.
ಕಾಡ ಸೊಪ್ಪು ತಂದು ಓಡಿನಲ್ಲಿ ಹುರಿದಿಟ್ಟು,
ಕೂಡಿಕೊಂಡಿಪ್ಪುದು ನಮ್ಮ ಕೂಡಲಸಂಗನ ಶರಣರ.
136
  137
  138
ದೇವಲೋಕ ಮರ್ತ್ಯಲೋಕವೆಂಬುದು ಬೇರೆ ಮತ್ತುಂಟೆ
‍ಈ ಲೋಕದೊಳಗೆ ಮತ್ತೆ ಅನಂತಲೋಕ
‍‍ಶಿವಲೋಕ, ಶಿವಾಚಾರವಯ್ಯಾ.
‍‍‍ಶಿವಭಕ್ತನಿದ್ದಠಾವೆ ದೇವಲೋಕ, 
‍‍ಭಕ್ತನಂಗಳವೆ ವಾರಣಾಸಿ, ಕಾಯಕವೆ ಕೈಲಾಸ, 
ಇದು ಸತ್ಯ, ಕೂಡಲಸಂಗಮದೇವಾ.
139
ಕಟ್ಟಿದಿರಿನಲ್ಲಿ ಶಿವಭಕ್ತನ ಕಂಡು
ದೃಷ್ಟವಾರಿ ಶರಣೆಂದಡೆ,
ಹುಟ್ಟೇಳು ಜನ್ಮದ ಪಾಪ ಬಿಟ್ಟು ಹಿಂಗುವುದು ನೋಡಾ.
ಮುಟ್ಟಿ ಚರಣಕ್ಕೆರಗಿದಡೆ ತನು[ವ]ಪ್ಪಿದಂತೆ,
ಅಹುದು ಪರುಷ ಮುಟ್ಟಿದಂತೆ.
ಕರ್ತೃ ಕೂಡಲಸಂಗನ ಶರಣರ ಸಂಗವು
ಮತ್ತೆ ಭವಮಾಲೆಗೆ ಹೊದ್ದಲೀಯದು ನೋಡಾ.
140
ಆರಾರ ಸಂಗವೇನೇನ ಮಾಡದಯ್ಯಾ
ಕೀಡೆ ಕೊಂಡಲಿಗನಾಗದೆ ಅಯ್ಯಾ
ಚಂದನದ ಸನ್ನಿಧಿಯಲ್ಲಿ ಪರಿಮಳ ತಾಗಿ
ಬೇವು, ಬೊಬ್ಬುಲಿ, ತರಿಯ ಗಂಧಂಗಳಾಗವೆ
ನಮ್ಮ ಕೂಡಲಸಂಗನ ಶರಣರ ಸನ್ನಿಧಿುಂದ
ಕರ್ಮ ನಿರ್ಮಳವಾಗದಿಹುದೆ.
141
ಎಂತಹವನಾದಡೇನು, ಲಿಂಗವ ಮುಟ್ಟದವನೆ ಕೀಳುಜಾತಿ.
ಕುಲವಹುದು ತಪ್ಪದು ಲಿಂಗ ಮುಟ್ಟಲೊಡನೆ,
ಹೊನ್ನಹುದು ತಪ್ಪದು ಪರುಷ ಮುಟ್ಟಲೊಡನೆ.
ಕೂಡಲಸಂಗಮದೇವನೊಲ್ಲ ಸರ್ವಸಂದೇಹಿಗಳ.
142
ಓದಿದಡೇನು, ಕೇಳಿದಡೇನು, ಶಿವಪಥವನರಿಯದನ್ನಕ್ಕ
ಓದಿತ್ತು ಕಾಣಿರೋ ಶುಕನು, ಶಿವಜ್ಞಾನವನರಿಯದನ್ನಕ್ಕ.
ಓದಿದ ಫಲವು ಮಾದಾರ ಚೆನ್ನಯ್ಯಂಗಾುತ್ತು
ಕೂಡಲಸಂಗಮದೇವಾ.
143
ಹಾವಿನ ಡೊಂಕು ಹುತ್ತಕ್ಕೆ ಸಸಿನ,
ನದಿಯ ಡೊಂಕು ಸಮುದ್ರಕ್ಕೆ ಸಸಿನ,
ನಮ್ಮ ಕೂಡಲಸಂಗನ ಶರಣರ ಡೊಂಕು ಲಿಂಗಕ್ಕೆ ಸಸಿನ.
144
ಭಕ್ತನ ಮುಖದರ್ಪಣದಲ್ಲಿ ಲಿಂಗವ ಕಾಣಬಹುದು,
ಭಕ್ತದೇಹಿಕ ದೇವ ಅನಿಮಿಷನಾಗಿ !
ಕೂಡಲಸಂಗಮದೇವ
ಭಕ್ತನ ನುಡಿಯ ನಡುವೆ ರಾಶಿಯಾಗಿಪ್ಪನು.
145
ಭಕ್ತಿ ಎಂತಹದಯ್ಯಾ
ದಾಸಯ್ಯ ಮಾಡಿದಂತಹದಯ್ಯಾ.
ಭಕ್ತಿ ಎಂತಹದಯ್ಯಾ
ಸಿರಿಯಾಳ ಮಾಡಿದಂತಹದಯ್ಯಾ.
ಭಕ್ತಿ ಎಂತಹದಯ್ಯಾ
ನಮ್ಮ ಬಲ್ಲಾಳ ಮಾಡಿದಂತಹದಯ್ಯಾ.
ಭಕ್ತಿ ಎಂತಹದಯ್ಯಾ
ಕೂಡಲಸಂಗಮದೇವಾ, ನೀ ಬಾಣನ ಬಾಗಿಲ ಕಾದಂತಹದಯ್ಯಾ.
146
ಮುನ್ನಿನವರು ಹೋದ ದಾರಿ ಭಯ ಕಾಣಿರಣ್ಣಾ,
ಬಲ್ಲಾಳನ ವಧುವಿನೊಡನೆ ಸರಸವನಾಡಿದಂದಿಂದ ಭಯ ಕಾಣಿರಣ್ಣಾ,
ಸಿರಿಯಾಳನ ಮಗನ ಬೇಡಿದಂದಿಂದ ಭಯ ಕಾಣಿರಣ್ಣಾ.
ದಾಸನ ವಸ್ತ್ರವ ಸೀಳಿದಂದಿಂದ ಭಯ ಕಾಣಿರಣ್ಣಾ.
ಅಘಟಿತಘಟಿತರು, ವಿಪರೀತಚರಿತ್ರರು-
ಕೂಡಲಸಂಗನ ಶರಣರು ನಡೆದ ದಾರಿ ಭಯ ಕಾಣಿರಣ್ಣಾ.
147
ದೇವನೊಳ್ಳಿದನೆಂದು ಮುಯ್ಯಾನಲು ಬೇಡ,
ತರಕಟಗಾಡಿದನೊಳ್ಳಿದನೆ
ಅಳಿಸುವ ನಗಿಸುವನೊಳ್ಳಿದನೆ
ಬೆಚ್ಚದೆ ಬೆದರದೆ ತೊತ್ತುತನವ ಮಾಡಲು,
ತನ್ನನೀವ ಕೂಡಲಸಂಗಮದೇವ.
148
ನೆರೆ ನಂಬೋ ನೆರೆ ನಂಬೋ ಧರಧುರವಿಲ್ಲದೆ ಸಾಮವೇದಿಗಳಂತೆ,
ನೆರೆ ನಂಬೋ ನೆರೆ ನಂಬೋ ದಾಸ-ದುಗ್ಗಳೆಯಂತೆ,
ನೆರೆ ನಂಬೋ ನೆರೆ ನಂಬೋ ಸಿರಿಯಾಳ-ಚಂಗಳೆಯಂತೆ,
ನೆರೆ ನಂಬೋ ನೆರೆ ನಂಬೋ ಸಿಂಧು-ಬಲ್ಲಾಳನಂತೆ,
ನೆರೆ ನಂಬಿದೆಯಾದಡೆ ತನ್ನನೀವ ಕೂಡಲಸಂಗಮದೇವ.
149
ಬಲ್ಲಿದರೊಡನೆ ಬವರವಾದಡೆ ಗೆಲಲುಂಟು, ಸೋಲಲುಂಟು,
ಕ[ಳ]ನೊಳಗೆ ಭಾಷೆ ಪೂರಾಯವಯ್ಯಾ.
ನಮ್ಮ ಕೂಡಲಸಂಗನ ಶರಣರಿಗೆ ಮಾಡಿ ಮಾಡಿ
ಧನ ಸವೆದು ಬಡವನಾದಡೆ
ಆ ಭಕ್ತನು ಆ ಲಿಂಗಕ್ಕೆ ಪೂಜೆಯಹನು.
150
ಗಿರಿಗಳ ಮೇಲೆ ಹಲವು ತರುಮರಾದಿಗಳಿದ್ದು
ಶ್ರೀಗಂಧದ ಸನ್ನಿಧಿಯಲು ಪರಿಮಳವಾಗವೆ
ಲಿಂಗವಂತನ ಸನ್ನಿಧಿುಂದ ಹಿಂದಣ ದುಸ್ಸಂಗವು ಕೆಡುವುದು.
ಕೂಡಲಸಂಗಮದೇವಯ್ಯಾ,
ಸಿರಿಯಾಳನ ಸಾರಿರ್ದ ನರರೆಲ್ಲಾ ಸುರರಾಗರೆ.
151
ಪರುಷದ ಹೊರೆಯಲ್ಲಿ ಕಬ್ಬುನವಿದ್ದು ಹೊನ್ನಾುತ್ತು, ನೋಡಿರೆ !
ಅವ್ವಾ ಚಂಗಳೆ, ನೀನಿದ್ದೇಳು ಕೇರಿಯವರು
ಲಿಂಗದ ನೋಂಪಿಯ ನೋಂತರೆ, ಹೇಳಾ
ಕೂಡಲಸಂಗಮದೇವಂಗೆ
ಚೀಲಾಳನೆಂಬ ಬಾುನವನಿಕ್ಕಿದರೆ ಹೇಳಾ.
152
ಗೀತವ ಬಲ್ಲಾತ ಜಾಣನಲ್ಲ, ಮಾತ ಬಲ್ಲಾತ ಜಾಣನಲ್ಲ.
ಜಾಣನು ಜಾಣನು, ಆತ ಜಾಣನು
ಲಿಂಗವ ನೆರೆ ನಂಬಿದಾತ ಜಾಣನು,
ಜಂಗಮಕ್ಕೆ ಸವೆಸುವಾತ ಆತ ಜಾಣನು,
ಜವನ ಬಾಯಲು ಬಾಲವ ಕೊಯ್ದುಹೋದಾತ ಆತ ಜಾಣನು,
ನಮ್ಮ ಕೂಡಲಸಂಗನ ಶರಣರನು.
153
ಲೇಸೆನಿಸಿಕೊಂಡು ಅಯ್ದು ದಿವಸ ಬದುಕಿದಡೇನು
ಲೇಸೆನಿಸಿಕೊಂಡು ನಾಲ್ಕು ದಿವಸ ಬದುಕಿದಡೇನು
ಲೇಸೆನಿಸಿಕೊಂಡು ಮೂರು ದಿವಸ ಬದುಕಿದಡೇನು
ಲೇಸೆನಿಸಿಕೊಂಡು ಎರಡು ದಿವಸ ಬದುಕಿದಡೇನು
ಜೀವಿತಂ ಶಿವಭಕ್ತಾನಾಂ ವರಂ ಪಂಚ ದಿನಾನಿ ಚ
ನಾಜಕಲ್ಪಸಹಸ್ರಾಣಿ ಭಕ್ತಿಹೀನಸ್ಯ ಶಾಂಕರಿ
ಎಂದುದಾಗಿ ಕೂಡಲಸಂಗನ ಶರಣರ ವಚನದಲ್ಲಿ
ಲೇಸೆನಿಸಿಕೊಂಡು ಒಂದು ದಿವಸ ಬದುಕಿದಡೇನೊ!
154
ಮತ್ರ್ಯಲೋಕವೆಂಬುದು ಕರ್ತಾರನ ಕಮ್ಮಟವಯ್ಯಾ,
ಇಲ್ಲಿ ಸಲ್ಲುವರು ಅಲ್ಲಿಯೂ ಸಲ್ಲುವರಯ್ಯಾ.
ಇಲ್ಲಿ ಸಲ್ಲದವರು ಅಲ್ಲಿಯೂ ಸಲ್ಲರು
ಕೂಡಲಸಂಗಮದೇವಾ.
155
ಶಿವಚಿಂತೆ ಶಿವಜ್ಞಾನವಿಲ್ಲದ ಮನುಜರು-
ಸಗಣಕ್ಕೆ ಸಾಸಿರ ಹುಳು, ಹುಟ್ಟವೆ ದೇವಾ
ಕಾಡ ಮೃಗವೊಂದಾಗಿರಲಾಗದೆ, ದೇವಾ
ಊರ ಮೃಗವೊಂದಾಗಿರಲಾಗದೆ, ಹರನೆ
ನಮ್ಮ ಕೂಡಲಸಂಗನ ಶರಣರಿಲ್ಲದ ಊರು, ದೇಶ_
ವನವಾಸ, ನರವಿಂಧ್ಯ ಕಾಣಿರಣ್ಣಾ.
156
ಹೊತ್ತಾರೆ ಎದ್ದು ಶಿವಲಿಂಗದೇವನ
ದೃಷ್ಟವಾರಿ ನೋಡದವನ ಸಂಸಾರವೇನವನ
ಬಾಳುವೆಣನ ಬೀಳುವೆಣನ ಸಂಸಾರವೇನವನ
ನಡೆವೆಣನ ನುಡಿವೆಣನ ಸಂಸಾರವೇನವನ
ಕರ್ತು ಕೂಡಲಸಂಗಾ
ನಿಮ್ಮ ತೊತ್ತುಗೆಲಸ ಮಾಡದವನ ಸಂಸಾರವೇನವನ.
157
ವ್ಯಾಧನೊಂದು ಮೊಲನ ತಂದಡೆ ಸಲುವ ಹಾಗಕ್ಕೆ ಬಿಲಿವರಯ್ಯಾ,
ನೆಲನಾಳ್ವನ ಹೆಣನೆಂದಡೆ ಒಂದಡಕೆಗೆ ಕೊಂಬವರಿಲ್ಲ ನೋಡಯ್ಯಾ.
ಮೊಲನಿಂದ ಕರಕಷ್ಟ ನರನ ಬಾಳುವೆ,
ಸಲೆ ನಂಬೊ ನಮ್ಮ ಕೂಡಲಸಂಗಮದೇವನ.
158
ಉತುಪತಿ ಶುಕ್ಲ-ಶೋಣಿತದಿಂದಾದ ಲಜ್ಜೆ ಸಾಲದೆ
ಮತ್ತೆ ದುರಿತಂಗಳ ಹೆರುವ ಹೇಗತನವೇಕಯ್ಯಾ
ಮೃತ್ಯುವಿನ ಬಾುಗೆ ಒಳಗಾಗಲೇಕೆ
ಒತ್ತೊತ್ತೆಯ ಜನನವ ಗೆಲುವಡೆ ಕರ್ತನ ಪೂಜಿಸು
ನಮ್ಮ ಕೂಡಲಸಂಗಮದೇವನ.
159
ಮನವೆ ಸರ್ಪ, ತನು ಹೇಳಿಗೆ :
ಹಾವಿನೊಡತಣ ಹುದುವಾಳಿಗೆ !
ಇನ್ನಾವಾಗ ಕೊಂದಹುದೆಂದರಿಯೆ.
ಇನ್ನಾವಾಗ ತಿಂದಹುದೆಂದರಿಯೆ.
ನಿಚ್ಚಕ್ಕೆ ನಿಮ್ಮ ಪೂಜಿಸಬಲ್ಲಡೆ
ಅದೆ ಗಾರುಡ, ಕೂಡಲಸಂಗಮದೇವಾ.
160
ನರೆ ಕೆನ್ನೆಗೆ, ತೆರೆ ಗಲ್ಲಕೆ, ಶರೀರ ಗೂಡುವೋಗದ ಮುನ್ನ,
ಹಲ್ಲು ಹೋಗಿ, ಬೆನ್ನು ಬಾಗಿ, ಅನ್ಯರಿಗೆ ಹಂಗಾಗದ ಮುನ್ನ,
ಕಾಲಮೇಲೆ ಕೈಯನೂರಿ ಕೋಲ ಹಿಡಿಯದ ಮುನ್ನ,
ಮುಪ್ಪಿಂದೊಪ್ಪವಳಿಯದ ಮುನ್ನ,
ಮೃತ್ಯು ಮುಟ್ಟದ ಮುನ್ನ
ಪೂಜಿಸು ಕೂಡಲಸಂಗಮದೇವನ.
161
ನೀರ ಬೊಬ್ಬುಳಿಕೆಗೆ ಕಬ್ಬುನದ ಕಟ್ಟುಕೊಟ್ಟು
ರಕ್ಷಿತವ ಮಾಡುವ ಭರವ ನೋಡಾ.
ಮಹಾದಾನಿ ಕೂಡಲಸಂಗಯ್ಯನ ಪೂಜಿಸಿ
ಬದುಕೋ ಕಾಯ ನಿಶ್ಚೈಸದೆ.
162
ಹಂಜರ ಬಲ್ಲಿತ್ತೆಂದು ಅಂಜದೆ ಓದುವ ಗಿಳಿಯೆ,
ಎಂದೆಂದೂ ಅಳಿಯೆನೆಂದು
ಗುಡಿಗಟ್ಟಿದೆಯಲ್ಲಾ, ನಿನ್ನ ಮನದಲ್ಲಿ.
ಮಾಯಾಮಂಜರ ಕೊಲುವಡೆ ನಿನ್ನ ಹಂಜರ ಕಾವುದೆ
ಕೂಡಲಸಂಗಮದೇವನಲ್ಲದೆ.
163
  164
ಎಲೆ ಎಲೆ ಮಾನವಾ, ಅಳಿಯಾಸೆ ಬೇಡವೋ,
ಕಾಳ, ಬೆಳೆದಿಂಗಳು, ಸಿರಿ ಸ್ಥಿರವಲ್ಲ.
ಕೇಡಿಲ್ಲದ ಪದವಿ
ಕೂಡಲಸಂಗಮದೇವಯ್ಯನ ಮರೆಯದೆ ಪೂಜಿಸು.
165
ಎಂತಕ್ಕೆ ಎಂತಕ್ಕೆ
ಹಡೆದ ಕಾಯ ಬೀಯವಾಗದ ಮುನ್ನ ಅಟ್ಟುಣ್ಣು ಓ !
ಬೆರಣಿಯುಳ್ಳಲ್ಲಿ ಹೊತ್ತು ಹೋಗದ ಮುನ್ನ ಅಟ್ಟುಣ್ಣು ಓ !
ಮರಳಿ ಭವಕ್ಕೆ ಬಾಹೆ, ಬಾರದಿಹೆ,
ಕರ್ತು ಕೂಡಲಸಂಗಂಗೆ ಶರಣೆನ್ನು ಓ !
166
ಶಕುನವೆಂದೆಂಬೆ, ಅವಶಕುನವೆಂದೆಂಬೆ.
ನಿಮ್ಮವರು ಅಳಲಿಕೆ ಅಂದೇಕೆ ಬಂದೆ
ನಿಮ್ಮವರು ಅಳಲಿಕೆ ಇಂದೇಕೆ ಹೋದೆ
ನೀ ಹೋಹಾಗಳಕ್ಕೆ ! ಬಾಹಾಗಳಕ್ಕೆ !
ಅಕ್ಕೆ ಬಾರದ ಮುನ್ನ ಪೂಜಿಸು
ಕೂಡಲಸಂಗಮದೇವನ.
167
ನಿಮಿಷದ ನಿಮಿಷಂ ಭೋ, ಕ್ಷಣದೊಳಗರ್ಧಂ ಭೋ,
ಕಣ್ಣುಮುಚ್ಚಿ ಬಿಚ್ಚುವಿನಿಸು ಬೇಗಂ ಭೋ,
ಸಂಸಾರದಾಗುಂ ಭೋ, ಸಂಸಾರದ ಹೋಗುಂ ಭೋ,
ಸಂಸಾರಂ ಭೋ :
ಕೂಡಲಸಂಗಮದೇವ ಮಾಡಿದ
ಮಾಯಂ ಭೋ, ಅಭ್ರಚ್ಛಾಯಂ ಭೋ.
168
ಹರನೀವ ಕಾಲಕ್ಕೆ ಸಿರಿಯು ಬೆನ್ನಲಿ ಬರ್ಕು
ಹರಿದು ಹೆದ್ದೊರೆಯು, ಕೆರೆ ತುಂಬಿದಂತಯ್ಯಾ,
ನೆರೆಯದ ವಸ್ತು ನೆರೆವುದು ನೋಡಯ್ಯಾ,
ಅರಸು ಪರಿವಾರ ಕೈವಾರ ನೋಡಯ್ಯಾ.
ಪರಮ ನಿರಂಜನನ ಮರೆವ ಕಾಲಕ್ಕೆ
ತುಂಬಿದ ಹರವಿಯ ಕಲ್ಲುಕೊಂಡಂತೆ,
ಕೂಡಲಸಂಗಮದೇವಾ.
169
ಹೊಯ್ದಡೆ ಹೊಯ್ಗಳು ಕೈಯ ಮೇಲೆ,
ಬೈದಡೆ ಬೈಗಳು ಕೈಯ ಮೇಲೆ.
ಹಿಂದಣ ಜನನವೇದಡಾಗಲಿ,
ಇಂದಿನ ಭೋಗವು ಕೈಯ ಮೇಲೆ.
ಕೂಡಲಸಂಗಮದೇವಯ್ಯಾ
ನಿಮ್ಮ ಪೂಜಿಸಿದ ಫಲ ಕೈಯ ಮೇಲೆ.
170
ಆದ್ಯರ ವಚನ ಪರುಷ ಕಂಡಣ್ಣಾ;
ಸದಾಶಿವನೆಂಬ ಲಿಂಗ[ವು] ನಂಬುವುದು,
ನಂಬಲೊಡನೆ ನೀ ವಿಜಯ ಕಂಡಣ್ಣಾ.
ಅಧರಕ್ಕೆ ಕಹಿ, ಉದರಕ್ಕೆ ಸಿಹಿ
ಕೂಡಲಸಂಗನ ಶರಣರ ವಚನ ಬೇವ ಸವಿದಂತೆ.
171
ಹೊತ್ತಾರೆ ಎದ್ದು, ಅಗ್ಫವಣಿ ಪತ್ರೆಯ ತಂದು,
ಹೊತ್ತು ಹೋಗದ ಮುನ್ನ ಪೂಜಿಸು ಲಿಂಗವ.
ಹೊತ್ತು ಹೋದ ಬಳಿಕ ನಿನ್ನನಾರು ಬಲ್ಲರು
ಹೊತ್ತು ಹೋಗದ ಮುನ್ನ, ಮೃತ್ಯುವೊಯ್ಯದ ಮುನ್ನ
ತೊತ್ತುಗೆಲಸವ ಮಾಡು ಕೂಡಲಸಂಗಮದೇವನ.
172
ಅಚ್ಚಿಗವೇಕಯ್ಯಾ ಸಂಸಾರದೊಡನೆ ?
ನಿಚ್ಚನಿಚ್ಚ ಶಿವರಾತ್ರಿಯ ಮಾಡುವುದು,
ಬೇಗ ಬೇಗ ಅರ್ಚನೆ-ಪೂಜನೆಯ ಮಾಡುವುದು,
ಕೂಡಲಸಂಗನ ಕೂಡುವುದು.
173
ಅಂದು ಇಂದು ಮತ್ತೊಂದೆನಬೇಡ,
ದಿನವಿಂದೇ `ಶಿವ ಶರಣೆಂ'ಬವಂಗೆ,
ದಿನವಿಂದೇ 'ಹರ ಶರಣೆಂ'ಬವಂಗೆ,
ದಿನವಿಂದೇ ನಮ್ಮ ಕೂಡಲಸಂಗನ ಮಾಣದೆ ನೆನೆವಂಗೆ.
174
ಅಷ್ಟವಿಧಾರ್ಚನೆ ಷೋಡಶೋಪಚಾರವ ಮಾಡುವುದು,
ಮಾಡಿದ ಪೂಜೆಯ ನೋಡುವುದಯ್ಯಾ.
ಶಿವತತ್ವಗೀತವ ಪಾಡುವುದು,
ಶಿವನ ಮುಂದೆ ನಲಿದಾಡುವುದಯ್ಯಾ.
ಭಕ್ತಿಸಂಭಾಷಣೆಯ ಮಾಡುವುದು,
ನಮ್ಮ ಕೂಡಲಸಂಗನ ಕೂಡುವುದು.
175
ಆಳಿಗೊಂಡಹರೆಂದು ಅಂಜಲದೇಕೆ
ನಾಸ್ತಿಕವಾಡಿಹರೆಂದುನಾಚಲದೇಕೆ
ಆರಾದಡಾಗಲಿ ಶ್ರೀಮಹಾದೇವರಿಗೆ ಶರಣೆನ್ನಿ. ಏನೂ ಅರಿಯೆನೆಂದು
ಮೋನಗೊಂಡಿರಬೇಡ.
ಕೂಡಲಸಂಗಮದೇವರ ಮುಂದೆ ದಂದಣ ದತ್ತಣಯೆನ್ನಿ.
176
  177
ಅಂಕ ಕಳನೇರಿ ಕೈಮರೆದಿರ್ದಡೆ ಮಾರಂಕ ಬಂದಿರಿವುದ ಮಾಂಬನೆ 
ನಿಮ್ಮ ನೆನಹ ಮನ ಮರೆದಿರ್ದಡೆ ಮಾಯೆ ತನುವನಂಡಲೆವುದ ಮಾಬುದೆ 
ಕೂಡಲಸಂಗಯ್ಯನ ನೆನೆದಡೆ, ಪಾಪ ಉರಿಗೊಡ್ಡಿದರಗಿನಂತೆ ಕರಗುವುದಯ್ಯಾ.
178
ಆಡಿಹರಯ್ಯಾ ಹಾಡಿಹರಯ್ಯಾ ಮನಬಂದ ಪರಿಯಲಿ,
ಶಿವಶರಣರ ಮುಂದೆ ಆಡಿಹರಯ್ಯಾ ಹಾಡಿಹರಯ್ಯಾ.
ಕೋಡಂಗಿಯಾಟವನಾಡಿದ ಭಕ್ತಂಗೆ ಬೇಡಿತ್ತನೀವ,
ನಮ್ಮ ಕೂಡಲಸಂಗಮದೇವ.
179
ಹೊಲಬುಗೊಂಡರಸಬೇಡ, ಬಿಲಿತು ತರಬೇಡ,
ಒಲಿದೊಮ್ಮೆ ಶಿವಶರಣೆನ್ನಿರಯ್ಯಾ.
ಒಂದು ಸೊಲ್ಲಿಂಗೆ ಮುಕ್ತಿ ಸಿದ್ಧಿ,
ಕೂಡಲಸಂಗಮದೇವ ಭಕ್ತಿಲಂಪಟನಾಗಿ.
180
ನಾದಪ್ರಿಯ ಶಿವನೆಂಬರು, ನಾದಪ್ರಿಯ ಶಿವನಲ್ಲಯ್ಯಾ.
ವೇದಪ್ರಿಯ ಶಿವನೆಂಬರು, ವೇದಪ್ರಿಯ ಶಿವನಲ್ಲಯ್ಯಾ.
ನಾದವ ನುಡಿಸಿದ ರಾವಳಂಗೆ ಅರೆ ಆಯುಷ್ಯವಾುತ್ತು.
ವೇದವನೋದಿದ ಬ್ರಹ್ಮನ ಶಿರ ಹೋಯಿತ್ತು.
ನಾದಪ್ರಿಯನೂ ಅಲ್ಲ, ವೇದಪ್ರಿಯನೂ ಅಲ್ಲ,
ಭಕ್ತಿಪ್ರಿಯ ನಮ್ಮ ಕೂಡಲಸಂಗಮದೇವ.
181
ಹಸಿವಾದಡುಂಬುದನು, ಸತಿಯ ಸಂಭೋಗವನು
ಆನಾಗಿ ನೀ ಮಾಡೆಂಬವರುಂಟೆ
ಮಾಡುವುದು, ಮಾಡುವುದು ಮನಮುಟ್ಟಿ,
ಮಾಡುವುದು, ಮಾಡುವುದು ತನುಮುಟ್ಟಿ,
ತನುಮುಟ್ಟಿ ಮನಮುಟ್ಟದಿರ್ದಡೆ
ಕೂಡಲಸಂಗಮದೇವನೇತರಲ್ಲಿಯೂ ಮೆಚ್ಚ.
182
ತನ್ನಾಶ್ರಯದ ರತಿಸುಖವನು, ತಾನುಂಬ ಊಟವನು
ಬೇರೆ ಮತ್ತೊಬ್ಬರ ಕೈಯಲ್ಲಿ ಮಾಡಿಸಬಹುದೆ
ತನ್ನ ಲಿಂಗಕ್ಕೆ ಮಾಡುವ ನಿತ್ಯನೇಮವ ತಾ ಮಾಡಬೇಕಲ್ಲದೆ
ಬೇರೆ ಮತ್ತೊಬ್ಬರ ಕೈಯಲ್ಲಿ ಮಾಡಿಸಬಹುದೆ
ಕೆಮ್ಮನೆ ಉಪಚಾರಕ್ಕೆ ಮಾಡುವರಲ್ಲದೆ
ನಿಮ್ಮನೆತ್ತಬಲ್ಲರು, ಕೂಡಲಸಂಗಮದೇವಾ.
183
ಬಂಡಿ ತುಂಬ ಪತ್ರೆಯ ತಂದು ಕಂಡ ಕಂಡಲ್ಲಿ ಮಜ್ಜನಕ್ಕೆರೆವಿರಿ.
ತಾಪತ್ರಯವ ಕಳೆದು ಪೂಜಿಸಿ, ತಾಪತ್ರಯವ ಲಿಂಗನೊಲ್ಲ.
ಕೂಡಲಸಂಗಮದೇವ ಬರಿಯುದಕದಲ್ಲಿ ನೆನೆವನೆ.
184
ಭಕ್ತನಾಗಿ ಲಿಂಗ ಜಂಗಮವ ಪೂಜಿಸಬೇಕು.
ಭಕ್ತನಾಗಿ ತನ್ನ ತಾ ಪೂಜಿಸಿಕೊಂಬುದು ಎಂತಯ್ಯಾ
ಸ್ವಾಮಿಭೃತ್ಯಸಂಬಂಧವು ಎಂತಯ್ಯಾ ಪೂರುಸುವುದು
ಕೂಡಲಸಂಗಮದೇವಾ, ಕಣ್ಣಕಟ್ಟಿ ಕನ್ನಡಿಯ ತೋರುವಂತೆ !
185
ಭೂಮಿಯೊಳಗೆ ನಿಧಾನವಿದ್ದುದ
ಅಂಜನವುಳ್ಳವರು ತೋರಿರಯ್ಯಾ.
ಅಂಜಲುಬೇಡ ಕಂಡಾ, ಮನದಲ್ಲಿ ಸಂದೇಹವ ಮಾಡದಿರಾ.
ಜಂಗಮದೊಳಗೆ ಲಿಂಗಯ್ಯನಿದ್ದಾನೆಂದು ನಂಬುಗೆಯುಳ್ಳಡೆ
ತೋರುವ ಕೂಡಲಸಂಗಯ್ಯ.
186
ಕನ್ನಡಿಯ ನೋಡುವ ಅಣ್ಣಗಳಿರಾ, ಜಂಗಮವ ನೋಡಿರೆ,
ಜಂಗಮದೊಳಗೆ ಲಿಂಗಯ್ಯ ಸನ್ನಹಿತನಾಗಿಪ್ಪ.
`ಸ್ಥಾವರ ಜಂಗಮ ಒಂದೆ' ಎಂದುದು ಕೂಡಲಸಂಗನ ವಚನ.
187
ಗೀತವ ಹಾಡಿದಡೇನು, ಶಾಸ್ತ್ರ-ಪುರಾಣವ ಕೇಳಿದಡೇನು,
ವೇದವೇದಾಂತವ ನೋಡಿದಡೇನು
ಮನವೊಲಿದು ಲಿಂಗಜಂಗಮವ ಪೂಜಿಸಲರಿಯದವರು
ಎಲ್ಲರಲ್ಲಿ [ಪ್ರಾ]ಜ್ಞರಾದಡೇನು
ಭಕ್ತಿುಲ್ಲದವರನೊಲ್ಲ ಕೂಡಲಸಂಗಮದೇವ.
188
ಲಿಂಗವ ಪೂಜಿಸಿದ ಬಳಿಕ ಜಂಗಮಕ್ಕೆ ಅಂಜಲೇಬೇಕು,
ದಕ್ಕ ನುಂಗಿದಂತೆ ಬೆರೆತುಕೊಂಡಿರಬೇಡ.
ಬೀಗಿ ಬೆಳೆದ ಕೊನೆವಾಳೆಯಂತೆ ಬಾಗಿಕೊಂಡಿದ್ದಡೆ,
ಬೇಡಿದ ಪದವಿಯನೀವ ಕೂಡಲಸಂಗಮದೇವ.
189
ಹಮ್ಮಿನ ಭಕ್ತಿ ಕರ್ಮಕ್ಕೆ ಮೊದಲು,
ವರ್ಮವನರಿಯದ ಮಾಟ ಸುದಾನದ ಕೇಡು.
ಬಂದ ಸಮಯೋಚಿತವನರಿಯದಿದ್ದಡೆ
ನಿಂದಿರಲೊಲ್ಲ ಕೂಡಲಸಂಗಮದೇವ.
190
ದ್ವೈತಾದ್ವೈತವನೋದಿ ಏನ ಮಾಡುವಿರಯ್ಯಾ
ನಮ್ಮ ಶರಣರಿಗುರಿ[ಯ]ರಗಾಗಿ ಕರಗದನ್ನಕ್ಕ,
ಸ್ಥಾವರ ಜಂಗಮವೊಂದೆ ಎಂದು ನಂಬದನ್ನಕ್ಕ.
ಕೂಡಲಸಂಗಮದೇವಾ,
ಬರಿಯ ಮಾತಿನ ಮಾಲೆಯಲೇನಹುದು.
191
ಲಾಂಛನ ಹೊರಗೆ ಬಂದಿರಲು, ಒಳಗೆ ಲಿಂಗಾರ್ಚನೆಯೆಂತಯ್ಯಾ
ಮುಖದಲ್ಲಿ ಕಟ್ಟಿದ ಕನ್ನಡಿ, ಮೂಗಿನ ಮೇಲಣ ಕತ್ತಿ !
ಸಮಯಾಚಾರವೆಂತುಟಯ್ಯಾ ರಿ ಕೂಡಲಸಂಗಮದೇವಯ್ಯಾ.
192
ಆಡುತ್ತ ಹಾಡುತ್ತ ಭಕ್ತಿಯ ಮಾಡಬಹುದು ಲಿಂಗಕ್ಕೆ;
ಅದು ಬೇಡದು, ಬೆಸಗೊಳ್ಳದು,
ತಂದೊಮ್ಮೆ ನೀಡಬಹುದು.
ಕಾಡುವ ಬೇಡುವ ಜಂಗಮ ಬಂದಡೆ,
ನೀಡಲುಬಾರದು ಕೂಡಲಸಂಗಮದೇವಾ.
193
ಕಲ್ಲ ನಾಗರ ಕಂಡಡೆ ಹಾಲನೆರೆಯೆಂಬರು
ದಿಟದ ನಾಗರ ಕಂಡಡೆ ಕೊಲ್ಲೆಂಬರಯ್ಯಾ
ಉಂಬ ಜಂಗಮ ಬಂದಡೆ ನಡೆಯೆಂಬರು,
ಉಣ್ಣದ ಲಿಂಗಕ್ಕೆ ಬೋನವ ಹಿಡಿಯೆಂಬರಯ್ಯಾ.
ನಮ್ಮ ಕೂಡಲಸಂಗನ ಶರಣರ ಕಂಡು ಉದಾಸೀನವ ಮಾಡಿದಡೆ,
ಕಲ್ಲ ತಾಗಿದ ಮಿಟ್ಟೆಯಂತಪ್ಪರಯ್ಯಾ.
194
ನಾಗಂಗೆ ಹೊಸತನಿಕ್ಕಿಹೆವೆಂಬರು,
ನಾಗ ಬಂದಡೆ ಕೋಲ ಕಳೆದುಕೊಂಬರು.
ಆಗದಯ್ಯಾ, ಜಂಗಮಲಿಂಗವೆಂಬ ಶಬ್ದವಾಗದಯ್ಯಾ,
ಕೂಡಲಸಂಗಮದೇವನಲ್ಲಿ ಸಿಂಧುಬಲ್ಲಾಳಂಗಲ್ಲದೆ ಆಗದಯ್ಯಾ.
195
ಎರೆದಡೆ ನನೆಯದು, ಮರೆದಡೆ ಬಾಡದು,
ಹುರುಳಿಲ್ಲ ಹುರುಳಿಲ್ಲ ಲಿಂಗಾರ್ಚನೆ;
ಕೂಡಲಸಂಗಮದೇವಾ, ಜಂಗಮಕ್ಕೆರೆದಡೆ ಸ್ಥಾವರ ನನೆುತ್ತು.
196
ಅಗ್ನಿಯಾಧಾರದಲ್ಲಿ ಕಬ್ಬುನ ನೀರುಂಬುದಯ್ಯಾ,
ಭೂಮಿಯಾಧಾರದಲ್ಲಿ ವೃಕ್ಷ ನೀರುಂಬುದಯ್ಯಾ,
ಜಂಗಮವಾಪ್ಯಾಯನವಾದಡೆ ಲಿಂಗ ಸಂತ್ಟುಯಹುದಯ್ಯಾ.
ವೃಕ್ಷಸ್ಯ ವದನಂ ಭೂಮಿಃ ಸ್ಥಾವರಸ್ಯ ಚ ಜಂಗಮಃ
ಅಹಂ ತುಷ್ಟೋsಡಿಸ್ಮ್ಯುಮಾದೇವಿ ಉಭಯೋರ್ಲಿಂಗಜಂಗಮಾತ್
ಇದು ಕಾರಣ ಕೂಡಲಸಂಗಮದೇವರಲ್ಲಿ
ಜಂಗಮವಾಪ್ಯಾಯನವಾದಡೆ ಲಿಂಗಸಂತ್ಟು.
197
ಭಂಡವ ತುಂಬಿದ ಬಳಿಕ ಸುಂಕವ ತೆತ್ತಲ್ಲದೆ ಹೋಗಬಾರದು.
ಕಳ್ಳನಾಣ್ಯ ಸಲುಗೆಗೆ ಸಲ್ಲದು,
ಕಳ್ಳನಾಣ್ಯವ ಸಲಲೀಯರಯ್ಯಾ.
ಭಕ್ತಿಯೆಂಬ ಭಂಡಕ್ಕೆ ಜಂಗಮವೆ ಸುಂಕಿಗ
ಕೂಡಲಸಂಗಮದೇವಾ.
198
ಮಾಡಿ ನೀಡಿ ಲಿಂಗವ ಪೂಜಿಸಿಹೆವೆಂಬವರು ನೀವೆಲ್ಲಾ ಕೇಳಿರಣ್ಣಾ:
ಹಾಗದ ಕೆರಹ ಹೊರಗೆ ಕಳೆದು,
ದೇಗುಲಕ್ಕೆ ಹೋಗಿ ನಮಸ್ಕಾರವ ಮಾಡುವನಂತೆ
ತನ್ನ ಕೆರಹಿನ ಧ್ಯಾನವಲ್ಲದೆ ದೇವರ ಧ್ಯಾನವಿಲ್ಲ.
ಧನವನಿರಿಸದಿರಾ, ಇರಿಸಿದಡೆ ಭವ ಬಪ್ಪುದು ತಪ್ಪುದು.
ಕೂಡಸಂಗನ ಶರಣರಿಗೆ ಸವೆಸಲೇಬೇಕು.
199
ಉಂಡುದು ಬಂದಿತ್ತೆಂಬ ಸಂದೇಹಿ ಮಾನವ ನೀ ಕೇಳಾ:
ಉಂಡುದೇನಾುತ್ತೆಂಬುದ ನಿನ್ನ ನೀ ತಿಳಿದು ನೋಡಾ,
ಉಂಡುದು ಆಗಳೆ ಅಪೇಯವಾುತ್ತು.
ಆ ಉಂಡುದನುಣಬಂದ ಹಂದಿಯ ಬಾಳುವೆಯವರ ಕಂಡು
ಆನು ಮರುಗುವೆನಯ್ಯಾ, ಕೂಡಲಸಂಗಮದೇವಯ್ಯಾ.
200
ಆಯುಷ್ಯವುಂಟು ಪ್ರಳಯವಿಲ್ಲೆಂದು ಅರ್ಥವ ಮಡುಗುವಿರಿ;
ಆಯುಷ್ಯ ತೀರಿ ಪ್ರಳಯ ಬಂದಡೆ ಆ ಅರ್ಥವನುಂಬುವರಿಲ್ಲ.
ನೆಲನನಗೆದು ಮಡುಗದಿರಾ, ನೆಲ ನುಂಗಿದಡುಗುಳುವುದೆ
ಕಣ್ಣಿನಲ್ಲಿ ನೋಡಿ, ಮಣ್ಣಿನಲ್ಲಿ ನೆರಹಿ, ಉಣ್ಣದೆ ಹೋಗದಿರಾ !
ನಿನ್ನ ಮಡದಿಗಿರಲೆಂದಡೆ, ಆ ಮಡದಿಯ ಕೃತಕ ಬೇರೆ;
ನಿನ್ನ ಒಡಲು ಕಡೆಯಲು ಮತ್ತೊಬ್ಬನಲ್ಲಿಗೆ ಅಡಕದೆ ಮಾಬಳೆ
ಹೆರರಿಗಿಕ್ಕಿ ಹೆಗ್ಗುರಿಯಾಗಿ ಕೆಡಬೇಡ,
ಕೂಡಲಸಂಗನ ಶರಣರಿಗೆ ಒಡನೆ ಸವೆಸುವುದು.
201
ತನು ಮನ ಧನವ ಹಿಂದಿಕ್ಕಿಕೊಂಡು
ಮಾತಿನ ಬಣಬೆಯ ಮುಂದಿಟ್ಟುಕೊಂಡು
ಒಳಲೊಟೆಯ ನುಡಿವವರು ನೀವೆಲ್ಲರೂ ಕೇಳಿರೆ.
ತಲಹಿಲ್ಲದ ಕೋಲು ಹೊಳ್ಳು ಹಾರುಹುದಲ್ಲದೆ
ಗುರಿಯ ತಾಗಬಲ್ಲುದೆ
ಮಾಯಾಪಾಶ ಹಿಂಗಿ, ಮನದ ಗಂಟು ಬಿಡದನ್ನಕ್ಕ
ಕೂಡಲಸಂಗಮದೇವನೆಂತೊಲಿವನಯ್ಯಾ
202
ತನು-ಮನ-ಧನವೆಂಬ ಮೂರು ಕತ್ತಿುವೆ,
ಸಲೆ ಮೂಗಿನ ಮೇಲೆ ಅಯ್ಯಾ,
ಲಿಂಗ ಜಂಗಮಕ್ಕೆ ಮಾಡಿಹೆನೆಂಬವಂಗೆ
ಇದು ಕಾರಣ, ಕೂಡಲಸಂಗನ ಶರಣರಿಗೆ ಅಂಜಲೇಬೇಕು.
203
ಸರ್ವಭೂತಾತ್ಮನೆಂಬ ಮಾತಿನ ಮಾತಿನಲ್ಲಿ ಹೋಗದು,
ತನುಮನಧನವ ಸವೆಸಲೇಬೇಕು.
ನಮ್ಮ ಕೂಡಲಸಂಗನ ಶರಣರಿಗೆ ಅಂಜಲೇಬೇಕು.
204
ಹಲವು ಮಣಿಯ ಕಟ್ಟಿ ಕುಣಿಕುಣಿದಾಡಿ,
ಹಲವು ಪರಿಯಲಿ ವಿಭೂತಿಯ ಹೂಸಿ,
ಗಣಾಡಂಬರದ ನಡುವೆ ನಲಿನಲಿದಾಡಿ,
ಉಂಡು, ತಂಬುಲಗೊಂಡು ಹೋಹುದಲ್ಲ.
ತನು ಮನ ಧನವ ಸಮರ್ಪಿಸದವರ
ಕೂಡಸಂಗಮದೇವರೆಂತೊಲಿವ.
205
ತನುವ ಕೊಟ್ಟು ಗುರುವನೊಲಿಸಬೇಕು,
ಮನವ ಕೊಟ್ಟು ಲಿಂಗವನೊಲಿಸಬೇಕು,
ಧನವ ಕೊಟ್ಟು ಜಂಗಮವನೊಲಿಸಬೇಕು.
ಈ ತ್ರಿವಿಧವ ಹೊರಗು ಮಾಡಿ,
ಹರೆಯ ಹೊುಸಿ, ಕುರುಹ ಪೂಜಿಸುವ ಗೊರವರ ಮೆಚ್ಚ
ಕೂಡಲಸಂಗಮದೇವ.
206
ಆಡಿದಡೇನು, ಹಾಡಿದಡೇನು, ಓದಿದಡೇನು ತ್ರಿವಿಧದಾಸೋಹವಿಲ್ಲದನ್ನಕ್ಕರಿ
ಆಡದೆ ನವಿಲು ಹಾಡದೆ ತಂತಿ ಓದದೆ ಗಿಳಿ
ಭಕ್ತಿುಲ್ಲದವರನೊಲ್ಲ ಕೂಡಲಸಂಗಮದೇವ.
207
ಶಾಸ್ತ್ರಘನವೆಂಬೆನೆ ಕರ್ಮವ ಭಜಿಸುತ್ತಿದೆ.
ವೇದ ಘನವೆಂಬೆನೆ ಪ್ರಾಣವಧೆಯ ಹೇಳುತ್ತಿದೆ.
ಶ್ರುತಿ ಘನವೆಂಬೆನೆ ಮುಂದಿಟ್ಟು ಅರಸುತ್ತಿದೆ.
ಅಲ್ಲೆಲ್ಲಿಯೂ ನೀವಿಲ್ಲದ ಕಾರಣ,
ತ್ರಿವಿಧದಾಸೋಹದಲಲ್ಲದೆ ಕಾಣಬಾರದು ಕೂಡಲಸಂಗಮದೇವನ.
208
ವೇದದಂತುಟಲ್ಲ, ಶಾಸ್ತ್ರದಂತುಟಲ್ಲ. ಗೀತಮಾತಿನಂತುಟಲ್ಲ ಕೇಳಯ್ಯಾ.
ಮಾತಿನ ಮಾತಿನ ಕವುಳುಗೋಲ ಶ್ರವದಲ್ಲಿ
ಸತ್ತವರೊಳರೆ ಅಯ್ಯಾ
ದಿಟದಲಗಿನ ಕಾಳೆಗವಿತ್ತಲಿದ್ದುದೆ ಕೂಡಲಸಂಗನ ಶರಣರು ಬಂದಲ್ಲಿ.
209
ಮಾತಿನ ಮಾತಿನಲಪ್ಪುದೆ ಭಕ್ತಿ
ಮಾಡಿ ತನು ಸವೆಯದನ್ನಕ್ಕ, ಮನ ಸವೆಯದನ್ನಕ್ಕ,
ಧನ ಸವೆಯದನ್ನಕ್ಕ ಅಪ್ಪುದೆ ಭಕ್ತಿ
ಕೂಡಲಸಂಗಮದೇವನೆಲುದೋರೆ ಸರಸವಾಡುವನು
ಸೈರಿಸದನ್ನಕ್ಕ ಅಪ್ಪುದೆ ಭಕ್ತಿ.
210
ಹಾವಸೆಗಲ್ಲ ಮೆಟ್ಟಿ ಹರಿದು, ಗೊತ್ತ ಮುಟ್ಟಬಾರದಯ್ಯಾ,
ನುಡಿದಂತೆ ನಡೆಯಲು ಬಾರದಯ್ಯಾ.
ಕೂಡಲಸಂಗನ ಶರಣರ ಭಕ್ತಿ, ಬಾಳ ಬಾಯಧಾರೆ.
211
ಭಕ್ತಿಯೆಂಬುದ ಮಾಡಬಾರದು,
ಕರಗಸದಂತೆ ಹೋಗುತ್ತ ಕೊರೆದು, ಬರುತ್ತ ಕೊಯ್ವುದು.
ಘಟಸರ್ಪನಲ್ಲಿ ಕೈದುಡುಕಿದಡೆ ಹಿಡಿವುದ ಮಾಬುದೆ
ಕೂಡಲಸಂಗಮದೇವಾ.
212
ಹಲವುಕಾಲ ಧಾವತಿಗೊಂದು ಒಟ್ಟಿದ ಹಿದಿರೆಯು
ಒಂದು ಮಿಡುಕುರಲ್ಲಿ ಬೇವಂತೆ,
ಸಲೆ ನೆಲೆ ಸನ್ನಿಹಿತನಾಗಿಪ್ಪ ಶರಣನ ಭಕ್ತಿ
ಒಂದನಾಯತದಿಂದ ಕೆಡುವುದು.
[ಸು]ಧರ್ಮದಲ್ಲಿ ಗಳಿಸಿದ ಪಿತನ ಧನವ
ಅಧರ್ಮದಲ್ಲಿ ಕೆಡಿಸುವ ಸುತನಂತೆ-
ಶಿವನ ಸೊಮ್ಮ ಶಿವಂಗೆ ಮಾಡದೆ, ಅನ್ಯಕ್ಕೆ ಮಾಡಿದಡೆ,
ತನ್ನ ಭಕ್ತಿ ತನ್ನನೆ ಕೆಡಿಸುವುದು ಕೂಡಲಸಂಗಮದೇವಾ!
213
ನಚ್ಚಿದೆನೆಂದಡೆ ಮಚ್ಚಿದೆನೆಂದಡೆ, ಸಲೆ ಮಾರುವೋದೆನೆಂದಡೆ
ತನುವನಲ್ಲಾಡಿಸಿ ನೋಡುವೆ ನೀನು.
ಮನವನಲ್ಲಾಡಿಸಿ ನೋಡುವೆ ನೀನು.
ಧನವನಲ್ಲಾಡಿಸಿ ನೋಡುವೆ ನೀನು.
ಇವಕ್ಕಂಜದಿದ್ದಡೆ ಭಕ್ತಿಕಂಪಿತ [ನೀನು] ಕೂಡಲಸಂಗಮದೇವಾ.
214
ಕವುಳುಗೋಲ ಹಿಡಿದು ಶ್ರವವ ಮಾಡಬಹುದಲ್ಲದೆ
ಕಳನೇರಿ ಕಾದುವುದರಿದು ನೋಡಾ.
ಬಣ್ಣವಿಟ್ಟು ನುಡಿದಲ್ಲಿ ಫಲವೇನು
ಚಿನ್ನಗೆಯ್ಕವನ್ನಾಡುವವನಂತೆ.
ಬಂದ ಸಮಯವನರಿತು, ಇದ್ದುದ ವಂಚಿಸದಿದ್ದಡೆ
ಕೂಡಸಂಗಮದೇವನೊಲಿದು ಸಲಹುವ.
215
ಧನಕ್ಕೆ ಮನವನೊಡ್ಡಿದಡೇನು ಮನಕ್ಕೆ ಧನವನೊಡ್ಡಿದಡೇನು
ತನು, ಮನ, ಧನವ ಮೀರಿ ಮಾತಾಡಬಲ್ಲಡೆ
ಆತ ನಿಸ್ಸೀಮನು, ಆತ ನಿಜೈಕ್ಯನು.
ತನು, ಮನ, ಧನವನುವಾದಡೆ
ಕೂಡಲಸಂಗಮದೇವನೊಲಿವ.
216
ಅರ್ಥ ಪ್ರಾಣ ಅಭಿಮಾನದಲ್ಲಿ ವಂಚನೆುಲ್ಲದಿಹುದೆ ಭಕ್ತಿ,
ಹೆಚ್ಚು ಕುಂದಿಲ್ಲದಿಹುದೆ ಸಮಯಾಚಾರ,
ಜಂಗಮವೆ ಲಿಂಗವೆಂಬುದಕ್ಕೆ ಏನು ಗುಣ
ಮನದ ಲಂಪಟತನ ಹಿಂಗದಾಗಿ
ಒಡೆಯರ ಬರವಿಂಗೆ ಕುನ್ನಿ ಬಾಲವ ಬಡಿದಡೆ
ವೆಚ್ಚವೇನು ಹತ್ತುವುದು ಕೂಡಲಸಂಗಮದೇವಾ.
217
ಹಸಿದು ಬಂದ ಗಂಡಂಗೆ ಉಣಲಿಕ್ಕದೆ,
ಬಡವಾದನೆಂದು ಮರುಗುವ ಸತಿಯ ಸ್ನೆಹದಂತೆ
ಬಂದುದನರಿಯಳು, ಇದ್ದುದ ಸವಸಳು.
ದುಃಖವಿಲ್ಲದ ಅಕ್ಕೆ ಹಗರಣಿಗನ ತೆರನಂತೆ
ಕೂಡಲಸಂಗಮದೇವಾ.
218
ಉದಯದ ಮಾಗಿಯ ಬಿಸಿಲು ಅಂಗಕ್ಕೆ ಹಿತವಾುತ್ತು,
ಮಧ್ಯಾಹ್ನದ ಬಿಸಿಲು ಅಂಗಕ್ಕೆ ಕರ ಕಠಿಣವಾುತ್ತು
ಮೊದಲಲ್ಲಿ ಲಿಂಗಭಕ್ತಿ ಹಿತವಾುತ್ತು,
ಕಡೆಯಲ್ಲಿ ಜಂಗಮಭಕ್ತಿ ಕಠಿಣವಾುತ್ತು
ಇದು ಕಾರಣ ಕೂಡಲಸಂಗಮದೇವನವರ ಬಲ್ಲನಾಗಿ ಒಲ್ಲನಯ್ಯಾ.
219
ಬರಬರ ಭಕ್ತಿ ಅರೆಯಾುತ್ತು ಕಾಣಿರಣ್ಣಾ :
ಮೊದಲದಿನ ಹಣೆಮುಟ್ಟಿ, ಮರುದಿನ ಕೈಮುಟ್ಟಿ,
ಮೂರೆಂಬ ದಿನಕ್ಕೆ ತೂಕಡಿಕೆ ಕಾಣಿರಣ್ಣಾ.
ಹಿಡಿದುದ ಬಿಡದಿದ್ದಡೆ ಕಡೆಗೆ ಚಾಚುವ,
ಅಲ್ಲದಿದ್ದಡೆ ನಡುನೀರಲದ್ದುವ ನಮ್ಮ ಕೂಡಲಸಂಗಮದೇವ.
220
ಬಿದಿರಲಂದಣವಕ್ಕು, ಬಿದಿರೆ ಸತ್ತಿಗೆಯಕ್ಕು,
ಬಿದಿರಲ್ಲಿ ಗುಡಿಯು ಗೂಡಾರವಕ್ಕು,
ಬಿದಿರಲ್ಲಿ ಸಕಲಸಂಪದವೆಲ್ಲವು,
ಬಿದಿರದವರ ಮೆಚ್ಚ ಕೂಡಲಸಂಗಮದೇವ.
221
ಉಂಬಾಗಳಿಲ್ಲೆನ್ನ, ಉಡುವಾಗಳಿಲ್ಲೆನ್ನ,
ಬಂಧುಗಳು ಬಂದಾಗಳಿಲ್ಲೆನ್ನ.
ಲಿಂಗಕ್ಕೆ ಇಲ್ಲೆಂಬ, ಜಂಗಮಕ್ಕೆ ಇಲ್ಲೆಂಬ,
ಬಂದ ಪುರಾತರಿಗೆ ಇಲ್ಲೆಂಬ,
ಸಾವಾಗ ದೇಹವ ದೇಗುಲಕ್ಕೆ ಒಯ್ಯೆಂಬ,
ದೇವರಿಗೆ ಹೆಣ ಬಿಟ್ಟಿ ಹೇಳಿತ್ತೆ ಕೂಡಲಸಂಗಮದೇವಾ.
222
ಪಾಪಿಯ ಧನ ಪ್ರಾಯಶ್ಚಿತ್ತಕ್ಕಲ್ಲದೆ ಸತ್ಪಾತ್ರಕ್ಕೆ ಸಲ್ಲದಯ್ಯಾ,
ನಾಯ ಹಾಲು ನಾುಗಲ್ಲದೆ ಪಂಚಾಮೃತಕ್ಕೆ ಸಲ್ಲದಯ್ಯಾ.
ನಮ್ಮ ಕೂಡಲಸಂಗನ ಶರಣರಿಗಲ್ಲದೆ
ಮಾಡುವ ಅರ್ಥ ವ್ಯರ್ಥ ಕಂಡಯ್ಯಾ.
223
ಬಲಿಯ ಭೂಮಿ, ಕರ್ಣನ ಕವಚ, ಖಚರನ ಆಸ್ಥಿ,
ಶಿಬಿಯ ಮಾಂಸ ವೃಥಾ ಹೋುತ್ತಲ್ಲಾ,
ಶಿವಭಕ್ತಿಮತಿಕ್ರಮ್ಯ ಯದ್ದಾನಂ ಚ ವಿದ್ಥೀಯತೇ
ನಿಷ್ಫಲಂ ತು ಭವೇದ್ದಾನಂ ರೌರವಂ ನರಕಂ ವ್ರಜೇತ್
ಇಂತೆಂದುದಾಗಿ, ಕೂಡಲಸಂಗನ ಶರಣರನರಿಯದೆ
ಕೀರ್ತಿವಾರ್ತೆಗೆ ಮಾಡಿದವನ ಧನವು ವೃಥಾ ಹೋುತ್ತಲ್ಲಾ.
224
ಹತ್ತು ಮತ್ತರ ಭೂಮಿ, ಬತ್ತದ ಹಯನು, ನಂದಾದೀವಿಗೆಯ
ನಡೆಸಿಹೆವೆಂಬವರ ಮುಖವ ನೋಡಲಾಗದು,
ಅವರ ನುಡಿಯ ಕೇಳಲಾಗದು.
ಅಂಡಜ, ಸ್ವೇದಜ, ಉದ್ಭಿಜ, ಜರಾಯುಜವೆಂಬ ಪ್ರಾಣಿಗಳಿಗೆ
ಭವಿತವ್ಯವ ಕೊಟ್ಟವರಾರೊ
ಒಡೆಯರಿಗೆ ಉಂಡಲಿಗೆಯ ಮುರಿದಿಕ್ಕಿದಂತೆ
ಎನ್ನಿಂದಲೆ ಆುತ್ತು, ಎನ್ನಿಂದಲೆ ಹೋುತ್ತು ಎಂಬವನ ಬಾಯಲ್ಲಿ
ಮೆಟ್ಟಿ ಹುಡಿಯ ಹೊಯ್ಯದೆ ಮಾಬನೆ
ಕೂಡಲಸಂಗಮದೇವ.
225
ಅನವರತ ಮಾಡಿಹೆನೆಂದು ಉಪ್ಪರ ಗುಡಿಯ ಕಟ್ಟಿ ಮಾಡುವ
ಭಕ್ತನ ಮನೆಯದು ಲಂದಣಗಿತ್ತಿಯ ಮನೆ.
ಸರ್ವಜೀವದಯಾಪಾರಿಯೆಂದು ಭೂತದೇಹಕಿಕ್ಕುವನ ಮನೆ
ಸುದಾನದ ಕೇಡು.
ಸೂಳೆಯ ಮಗ ಮಾಳವ ಮಾಡಿದಡೆ
ತಾಯ ಹೆಸರಾುತ್ತು, ತಂದೆಯ ಹೆಸರಿಲ್ಲ
ಕೂಡಲಸಂಗಮದೇವಾ.
226
ಕಾಲಾಗ್ನಿರುದ್ರನ ಮೇಳಾಪವನರಿಯದವರು
ಕಾಳುಬೇಳೆನುತಿಪ್ಪರಯ್ಯಾ.
ಕಾನನದಡವಿಯಲ್ಲಿ ಕಿಚ್ಚು [ಬೇ]ಳುವೆಯಾಗಿ
ಮಿಕ್ಕಡೊರಲುವ ಬಳ್ಳುವಿನಂತೆ ಇಪ್ಪರಯ್ಯಾ,
ಮನುಜರು ನರವಿಂಧ್ಯದೊಳಗೆ.
ತತ್ಕಾಲಪ್ರೇಮವನರಿಯದೆ ವಿಭವಕ್ಕೆ ಮಾಡಿದ ಭಕ್ತಿ
ಇರುಳು ಸತ್ತಿಗೆಯ ಹಿಡಿುಸಿಕೊಂಬಂತೆ ಕೂಡಲಸಂಗಮದೇವಾ.
227
ಹರ[ಹಿ] ಮಾಡುವುದು ಹರಕೆಯ ಕೇಡು,
ನೆರಹಿ ಮಾಡುವುದು ಡಂಬಿನ ಭಕ್ತಿ.
ಹರ[ಹ]ಬೇಡ, ನೆರಹಬೇಡ
ಬಂದ ಬರವನರಿತು ಮಾಡಬಲ್ಲಡೆ ಕೂಡಿಕೊಂಡಿಪ್ಪ
ನಮ್ಮ ಕೂಡಲಸಂಗಮದೇವ.
228
ಹಡೆದೊಡವೆ ವಸ್ತುವನು ಮೃಡಭಕ್ತರಿಗಲ್ಲದೆ
ಕಡಬಡ್ಡಿಯ ಕೊಡಲಾಗದು.
ಬಂದಡೊಂದು ಲೇಸು, ಬಾರದಿದ್ದಡೆರಡು ಲೇಸು.
ಅಲ್ಲಿದ್ದಡೆಯೂ ಲಿಂಗಕ್ಕೆ ಬೋನ. ಇಲ್ಲಿದ್ದಡೆಯೂ ಲಿಂಗಕ್ಕೆ ಬೋನ.
ಲಿಂಗದೊಡವೆ ಲಿಂಗಕ್ಕೆ ಸಾರಿತ್ತಾಗಿ
ಬಂದಿತ್ತೆಂಬ ಪರಿಣಾಮವಿಲ್ಲ, ಬಾರದೆಂಬ ದುಃಖವಿಲ್ಲ.
ಇದು ಕಾರಣ ಕೂಡಲಸಂಗಮದೇವಾ,
ನಿಮ್ಮ ಶರಣರಿಗಲ್ಲದೆ, ಕಡಬಡ್ಡಿಯ ಕೊಡಲಾಗದು.
229
ಓಡಲಾರದ ಮೃಗವು ಸೊಣಗಂಗೆ ಮಾಂಸವನೀವಂತೆ
ಮಾಡಲಾಗದು ಭಕ್ತನು, ಕೊಳಲಾಗದು ಜಂಗಮ,
ಹಿರಿಯರು ನರಮಾಂಸವ ಭುಂಜಿಸುವರೆ
ತನುವುಕ್ಕಿ ಮನವುಕ್ಕಿ ಮಾಡಬೇಕು ಭಕ್ತನು,
ಮಾಡಿಸಿಕೊಳ್ಳಬೇಕು ಜಂಗಮ, ಕೂಡಲಸಂಗಮದೇವಾ.
230
ಬಂದುದ ಕೈಕೊಳ್ಳಬಲ್ಲಡೆ ನೇಮ,
ಇದ್ದುದ ವಂಚನೆಯ ಮಾಡದಿದ್ದಡೆ ನೇಮ.
ನಡೆದು ತಪ್ಪದಿದ್ದಡೆ ಅದು ನೇಮ,
ನುಡಿದು ಹುಸಿಯದಿದ್ದಡೆ ಅದು ಮುನ್ನವೆ ನೇಮ.
ನಮ್ಮ ಕೂಡಲಸಂಗನ ಶರಣರು ಬಂದಡೆ
ಒಡೆಯರಿಗೊಡವೆಯನೊಪ್ಪಿಸುವುದೆ ನೇಮ.
231
ಹಾಲ ನೇಮ, ಹಾಲ ಕೆನೆಯ ನೇಮ,
ಕೆನೆ ತಪ್ಪಿದ ಬಳಿಕ ಕಿಚ್ಚಡಿಯ ನೇಮ,
ಬೆಣ್ಣೆಯ ನೇಮ, ಬೆಲ್ಲದ ನೇಮ,
ಅಂಬಲಿಯ ನೇಮದವರನಾರನೂ ಕಾಣೆ.
ಕೂಡಲಸಂಗನ ಶರಣರಲ್ಲಿ
ಅಂಬಲಿಯ ನೇಮದಾತ ಮಾದಾರ ಚೆನ್ನಯ್ಯ.
232
ಮಾಡಿ ಮಾಡಿ ಕೆಟ್ಟರು ಮನವಿಲ್ಲದೆ,
ನೀಡಿ ನೀಡಿ ಕೆಟ್ಟರು ನಿಜವಿಲ್ಲದೆ.
ಮಾಡುವ ನೀಡುವ ನಿಜಗುಣವುಳ್ಳಡೆ
ಕೂಡಿಕೊಂಬ ನಮ್ಮ ಕೂಡಲಸಂಗಮದೇವ.
233
ಮಾಡಿದೆನೆಂಬುದು ಮನದಲ್ಲಿ ಹೊಳೆದಡೆ,
ಏಡಿಸಿ ಕಾಡಿತ್ತು ಶಿವನ ಡಂಗುರ,
ಮಾಡಿದೆನೆನ್ನದಿರಾ ಲಿಂಗಕ್ಕೆ, ಮಾಡಿದೆನೆನ್ನದಿರಾ ಜಂಗಮಕ್ಕೆ,
ಮಾಡಿದೆನೆಂಬುದು ಮನದಲಿಲದಿದ್ದಡೆ,
ಬೇಡಿತ್ತನೀವನು ಕೂಡಲಸಂಗಮದೇವ.
234
ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ,
ಮುನಿಯಬೇಡ, ಅನ್ಯರಿಗೆ ಅಸಹ್ಯಬಡಬೇಡ,
ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ.
ಇದೇ ಅಂತರಂಗಶುದ್ಧಿ, ಇದೇ ಬಹಿರಂಗಶುದ್ಧಿ
ಇದೇ ನಮ್ಮ ಕೂಡಲಸಂಗಮದೇವರನೊಲಿಸುವ ಪರಿ.
235
ಕೆಡೆ ನಡೆಯದೆ, ಕೆಡೆ ನುಡಿಯದೆ, ಅನ್ಯರ ಪ್ರತಿಪಾದಿಸದಿದ್ದಡೆ
ಏನ ಮಾಡನಯ್ಯಾ ಲಿಂಗವು ಏನ ಕೊಡನಯ್ಯಾ
ತಾನು ಏನ ಬೇಡಿದುದನೀವನಾಗಿ,
ನಂಬುಗೆಯುಳ್ಳ ಶಿವಭಕ್ತಂಗೆ ಇದೇ ದಿಬ್ಯ, ಕೂಡಲಸಂಗಮದೇವಾ.
236
ಸ್ವಾಮಿಭೃತ್ಯಸಂಬಂಧಕ್ಕೆ ಆವುದು ಪಥವೆಂದಡೆ:
ದಿಟವ ನುಡಿವುದು, ನುಡಿದಂತೆ ನಡೆವುದು.
ನುಡಿದು ಹುಸಿವ, ನಡೆದು ತಪ್ಪುವ ಪ್ರಪಂಚಿಯನೊಲ್ಲ
ಕೂಡಲಸಂಗಮದೇವ.
237
ಸತ್ಯವುಳ್ಳ ಭಂಡವ ತುಂಬುವುದಯ್ಯಾ.
ಸುುಧಾನವಯ್ಯಾ, ಸುುಧಾನವಯ್ಯಾ, ಮನ ಧಾರೆವಟ್ಟಲು.
ಕೂಡಲಸಂಗನ ಶರಣರು ಹಿಡಿಯದ ಭಂಡವನು
ಆರಾದಡಾಗಲಿ ಹೋಗಲೀಯರಯ್ಯಾ.
238
ದೇವಲೋಕ ಮತ್ರ್ಯಲೋಕವೆಂಬುದು ಬೇರಿಲ್ಲ ಕಾಣಿರೋ !
ಸತ್ಯವ ನುಡಿವುದೇ ದೇವಲೋಕ, ಮಿಥ್ಯವ ನುಡಿವುದೇ ಮತ್ರ್ಯಲೋಕ.
ಆಚಾರವೆ ಸ್ವರ್ಗ, ಅನಾಚಾರವೆ ನರಕ. ಕೂಡಲಸಂಗಮದೇವಾ, ನೀವೆ ಪ್ರಮಾಣು.
239
ಪುಣ್ಯಪಾಪಂಗಳೆಂಬವು ತಮ್ಮ ಇಷ್ಟ ಕಂಡಿರೆ,
`ಅಯ್ಯಾ ಎಂದಡೆ ಸ್ವರ್ಗ, `ಎಲವೊ ಎಂದಡೆ ನರಕ.
ದೇವಾ, ಭಕ್ತಾ, ಜಯಾ, ಜೀ[ಯಾ] ಎಂಬ ನುಡಿಯೊಳಗೆ
ಕೈಲಾಸವೈದುವುದೆ ಕೂಡಲಸಂಗಮದೇವಾ.
240
ಏನಿ ಬಂದಿರಿ, ಹದುಳಿದ್ದಿರೆ ಎಂದಡೆ ನಿ[ಮ್ಮೈ]ಸಿರಿ ಹಾರಿ ಹೋಹುದೆ
ಕುಳ್ಳಿರೆಂದಡೆ ನೆಲ ಕುಳಿಹೋಹುದೆ ಒಡನೆ ನುಡಿದಡೆ ಸಿರ,
ಹೊಟ್ಟೆಯೊಡೆವುದೆ ಕೊಡಲಿಲ್ಲದಿದ್ದಡೊಂದು ಗುಣವಿಲ್ಲದಿದ್ದಡೆ ಮೂಗ
ಕೊಯ್ವುದ ಮಾಬನೆ ಕೂಡಲಸಂಗಮದೇವಯ್ಯ.
241
  242
ಭಕ್ತಿಯೆಂಬ ನಿಧಾನವ ಸಾದ್ಥಿಸುವಡೆ
ಶಿವಪ್ರೇಮವೆಂಬ ಅನಂಜನವನೆಚ್ಚಿಕೊಂಬುದು,
ಭಕ್ತನಾದವಂಗೆ ಇದೇ ಪಥವಾಗಿರಬೇಕು.
ನಮ್ಮ ಕೂಡಲಸಂಗನ ಶರಣರ ಅನುಭಾವ ಗಜವೈದ್ಯ.
243
ಕಂಡ ಭಕ್ತರಿಗೆ ಕೈಮುಗಿಯುವಾತನೆ ಭಕ್ತ,
ಮೃದುವಚನವೆ ಸಕಲ ಜಪಂಗಳಯ್ಯಾ,
ಮೃದುವಚನವೆ ಸಕಲ ತಪಂಗಳಯ್ಯಾ,
ಸದುವಿನಯವೆ ಸದಾಶಿವನ ಒಲುಮೆಯಯ್ಯಾ.
ಕೂಡಲಸಂಗಯ್ಯನಂತಲ್ಲದೊಲ್ಲನಯ್ಯಾ.
244
ಇತ್ತ ಬಾರಯ್ಯಾ, ಇತ್ತ ಬಾರಯ್ಯಾ ಎಂದು
ಭಕ್ತರೆಲ್ಲರೂ ಕೂರ್ತು ಹತ್ತಿರೆ ಕರೆವುತ್ತಿರಲು,
ಮತ್ತೆ ಕೆಲಕ್ಕೆ ಸಾರ್ದು, ಶರಣೆಂದು ಹಸ್ತ ಬಾಯನೆ ಮುಚ್ಚಿ,
ಕಿರಿದಾಗಿ ಭೃತ್ಯಾಚಾರವ ನುಡಿದು,
ವಿನಯ ತದ್ಧ್ಯಾನವುಳ್ಳಡೆ ಎತ್ತಿಕೊಂಬನಯ್ಯಾ,
ಕೂಡಲಸಂಗಮದೇವ ಪ್ರಮಥರ ಮುಂದೆ.
245
ಭಕ್ತ ಭಕ್ತನ ಮನೆಗೆ ಬಂದಡೆ, ಭೃತ್ಯಾಚಾರವ ಮಾಡಬೇಕು.
ಕರ್ತನಾಗಿ ಕಾಲ ತೊಳೆುಸಿಕೊಂಡಡೆ ಹಿಂದೆ ಮಾಡಿದ ಭಕ್ತಿಗೆ ಹಾನಿ. ಲಕ್ಕಗಾವುದ
ದಾರಿಯ ಹೋಗಿ
ಭಕ್ತನು ಭಕ್ತನ ಕಾಂಬುದು ಸದಾಚಾರ. ಅಲ್ಲಿ ಕೂಡಿ ದಾಸೋಹವ ಮಾಡಿದಡೆ
ಕೂಡಿಕೊಂಬನು ನಮ್ಮ ಕೂಡಲಸಂಗಯ್ಯ.
246
ದಯವಿಲ್ಲದ ಧರ್ಮವದೇವುದಯ್ಯಾ
ದಯವೇ ಬೇಕು ಸರ್ವಪ್ರಾಣಿಗಳೆಲ್ಲರಲ್ಲಿ.
ದಯವೇ ಧರ್ಮದ ಮೂಲವಯ್ಯಾ,
ಕೂಡಲಸಂಗಯ್ಯನಂತಲ್ಲದೊಲ್ಲನಯ್ಯಾ.
247
ತನಗೆ ಮುನಿವರಿಗೆ ತಾ ಮುನಿಯಲೇಕಯ್ಯಾ
ತನಗಾದ ಆಗೇನು ಅವರಿಗಾದ ಚೇಗೆಯೇನು
ತನುವಿನ ಕೋಪ ತನ್ನ ಹಿರಿಯತನದ ಕೇಡು.
ಮನದ ಕೋಪ ತನ್ನ ಅರಿವಿನ ಕೇಡು.
ಮನೆಯೊಳಗಣ ಕಿಚ್ಚು ಮನೆಯ ಸುಟ್ಟಲ್ಲದೆ
ನೆರೆಮನೆಯ ಸುಡದು ಕೂಡಲಸಂಗಮದೇವಾ.
248
ಅರ್ಥಕ್ಕೆ ತಪ್ಪಿದಡೇನು, ಪ್ರಾಣಕ್ಕೆ ತಪ್ಪಿದಡೇನು,
ಅಭಿಮಾನಕ್ಕೆ ತಪ್ಪಿದಡೇನು
ಶರಣರು ಶರಣರಲ್ಲಿ ಗುಣವನರಸುವರೆ
ಕೂಡಲಸಂಗನ ಶರಣರು ನೊಂದು ಸೈರಿಸಬೇಕು.
249
ಕಾಣದಠಾವಿನಲಿ ಜರೆದರೆಂದಡೆ ಕೇಳಿ ಪರಿಣಾಮಿಸಬೇಕು.
ಅದೇನು ಕಾರಣ
ಕೊಳ್ಳದೆ ಕೊಡದೆ ಅವರಿಗೆ ಸಂತೋಷವಹುದಾಗಿ !
ಎನ್ನ ಮನದ ತದ್‍ದ್ವೇಷವಳಿದು
ನಿಮ್ಮ ಶರಣರಿಗೆ ಶರಣೆಂಬುದ ಕರುಣಿಸು,
ಕೂಡಲಸಂಗಮದೇವಾ.
250
ಕರಗಿಸಿ ಎನ್ನ ಮನದ ಕಾಳಿಕೆಯ ಕಳೆಯಯ್ಯಾ,
ಒರೆಗೆ ಬಣ್ಣಕ್ಕೆ ತಂದೆನ್ನ ಪುಟವನಿಕ್ಕಿ ನೋಡಯ್ಯಾ,
ಕಡಿಹಕ್ಕೆ ಬಡಿಹಕ್ಕೆ ತಂದೆನ್ನ ಕಡೆಯಾಣಿಯ ಮಾಡಿ,
ನಿಮ್ಮ ಶರಣರ ಪಾದಕ್ಕೆ ತೊಡಿಗೆಯ ಮಾಡಿ ಸಲಹು
ಕೂಡಲಸಂಗಮದೇವಾ.
251
ವೇದಾದಿ ನಾಮ ನಿರ್ನಾಮ ಮಹತ್ತತ್ತ್ಜಂ ಮದೀಶ್ವರಃ
ಗುರೂಕ್ತಮಂತ್ರಮಾರ್ಗೇಣ ಇಷ್ಟಲಿಂಗಂ ತು ಶಾಂಕರಿ
ಎಂದುದಾಗಿ, ವಚನಪಾತಕವೆನ್ನ, ವಚನದೋಷಂಗಳೆನ್ನ,
ಕಾಡಿ ಕಾಡಿ ಕೆಡಿಸಿಹವೆನ್ನ ! ಕೂಡಲಸಂಗಮದೇವಾ `ಅಹಂ ಎಂಬ ಅಹಂಕಾರವೆನ್ನ.
252
ಅವರಿವರೆನ್ನದೆ ಚರಣಕ್ಕೆರಗಲು ಅಯ್ಯತನವೇರಿ,
[ಬಿ]ಬ್ಬನೆ ಬಿರಿವೆ ನಾನು, ಕೆಚ್ಚು ಬೆಳೆುತ್ತಯ್ಯಾ.
ಆ ಕೆಚ್ಚಿಂಗೆ ಕಿಚ್ಚನಿಕ್ಕಿ ಸುಟ್ಟು ಬೆಳ್ಳುಕನ ಮಾಡಿ,
ಬೆಳುಗಾರದಂತೆ ಮಾಡು ಕೂಡಲಸಂಗಮದೇವಾ.
253
ನಡೆಯ ಕಂಡಾ ನಂಬಿ, ನುಡಿಯೆಲ್ಲಾ ಉಪಚಾರ !
ಮಿಗಿಲೊಂದು ಮಾತು ಬಂದಡೆ ಸೈರಿಸಲಾರೆನು.
ತುಯ್ಯಲಾದಡೆ ಉಂಬೆ, ಹುಯ್ಯಲಾದಡೆ ಓಡುವೆ,
ಆಳು ಬೇಡಿದಡೆ ಆಳ್ದನೇನನೀವನಯ್ಯಾ ಆಳಾಗಿ ಹೊಕ್ಕು ಅರಸಾಗಿ ನಡೆದಡೆ,
ಆಳಿಗೊಂಡಿತೆನ್ನ ಕೂಡಲಸಂಗನ ಭಕ್ತಿ.
254
ಇರಿಸಿಕೊಂಡು ಭಕ್ತರಾದರೆಮ್ಮವರು,
ತರಿಸಿಕೊಂಡು ಭಕ್ತರಾದರೆಮ್ಮವರು,
ಕೊರೆಸಿಕೊಂಡು ಭಕ್ತರಾದರೆಮ್ಮವರು,
ಜರಿಸಿಕೊಂಡು ಭಕ್ತರಾದರೆಮ್ಮವರು.
ಕೂಡಲಸಂಗನ ಶರಣರಿಗೆ ಮುಳಿಸ ತಾಳಿ
ಎನ್ನ ಭಕ್ತಿ ಅರೆಯಾುತ್ತು.
255
ಮನಕ್ಕೆ ನಾಚದ ವಚನ, ವಚನಕ್ಕೆ ನಾಚದ ಮನ !
ಕುಂದು-ಹೆಚ್ಚ ನುಡಿವೆ.
ಒಂದು ಮಾತಿನ ಗೆಲ್ಲಕ್ಕೆ ಹಿಡಿದು ಹೋರುವೆ,
ಕೂಡಲಸಂಗನ ಶರಣರ ಎನ್ನಾಳ್ದರೆಂಬೆ.
256
ಇಲ್ಲವೆಯ ಮೇಲೆ ಕಂಚೊಡೆದಂತೆ ಬಡ ಮನವೆನ್ನ ಕಾಡಿಹಿತಯ್ಯಾ,
ಮತಿುಲ್ಲದ ಮರುಳ ನಾನಯ್ಯಾ,
ಭಕ್ತಿುಲ್ಲದ ಬಡವ ನಾನು.
ನಿಮ್ಮ ನೆನಹವಿಲ್ಲದೆ ನಿರ್ಭಾಗ್ಯನಾದೆ,
ಎನಗೆ ನೀ ಕರುಣಿಸು ಕೂಡಲಸಂಗಮದೇವಾ.
257
ಲಿಂಗವ ನಚ್ಚದೀ ಮನವು, ಜಂಗಮವ ನಂಬದೀ ಮನವು,
ಕೂಪರ ಕಂಡಡೆ ಒಲ್ಲದೀ ಮನವು. ಈ ಮನದ ಭ್ರಮೆಯನೆಲ್ಲವ ಮರೆಸಿ,
ನಿಮ್ಮ ಶರಣರಿಗೆ ಶರಣೆಂಬುದ ಕರುಣಿಸು
ಕೂಡಲಸಂಗಮದೇವಾ.
258
ಅಶನ ಕುಂದದು, ವ್ಯಸನ ಮಾಣದು,
ಆರತವಡಗದು, ಬೆವಹಾರ ಮಾಣದು.
ಮಜ್ಜನಕ್ಕೆರೆವೆನಯ್ಯಾ:ಕಾಯವಿಕಾರಿಯಾನು.
ಮಜ್ಜನಕ್ಕೆರೆವೆನಯ್ಯಾ:ಜೀವವಿಕಾರಿಯಾನು.
ಮಜ್ಜನಕ್ಕೆರೆವೆನಯ್ಯಾ:ಶರಣನಲ್ಲ, ಲಿಂಗೈಕ್ಯನಲ್ಲ.
ಕೂಡಲಸಂಗಮದೇವರಲ್ಲಿ
ಅಂತರಬೆಂತರ ನಾನಯ್ಯಾ.
259
ಕುದುರನೇಸ ತೊಳೆದಡೆಯೂ ಕೆಸರು ಮಾಬುದೆ
ಎನ್ನ ಕಾಯದಲುಳ್ಳ ಅವಗುಣಂಗಳ ಕಳೆದು ಕೃಪೆಯ ಮಾಡಯ್ಯಾ.
ಕಂಬಳಿಯಲ್ಲಿ ಕಣಕವ ನಾದಿದಂತೆ ಕಾಣಿರೇ ಎನ್ನ ಮನ.
ಕೂಡಲಸಂಗಮದೇವಾ, ನಿಮಗೆ ಶರಣೆಂದು ಶುದ್ಧ ಕಾಣಯ್ಯಾ.
260
ಕಾಮಧೇನು ನಿಮ್ಮ ಸಾರಿರಲು ಪರರ ಬೇಡಲಾರೆನಯ್ಯಾ. ನಿಮ್ಮುವ ಪೂಜಿಸಿ
ಭವಬಂಧನ ಬಿಡದೇಕಯ್ಯಾ ಹಿಂದಣ ಜನ್ಮದ ಚಿಹ್ನೆ ಬಿಡದನ್ನಕ್ಕ ನಿಮ್ಮ ಪೂಜಿಸಿ
ಏವೆನಯ್ಯಾ ಎನ್ನ ಮನದ ಅವಗುಣವ ಕಳೆದು ನಿಮ್ಮ ಶರಣರಿಗೆ ಶರಣೆಂಬುದ
ಕರುಣಿಸು, ಕೂಡಸಂಗಮದೇವಾ.
261
ದುವ್ರ್ಯಸನಿ ದುರಾಚಾರಿ ಎಂದೆನಿಸದಿರಯ್ಯಾ, ಎನ್ನ. ಲಿಂಗವ್ಯಸನಿ ಜಂಗಮಪ್ರೇಮಿ
ಎಂದೆನಿಸಯ್ಯಾ,
`ಅವಶ್ಯಮನುಭೋಕ್ತವ್ಯಂ' ಎಂದೆನಿಸದಿರಯ್ಯಾ ಕೂಡಲಸಂಗಮದೇವಾ,
ಸೆರಗೊಡ್ಡಿ ಬೇಡುವೆನು.
262
ಧೃತಿಗೆಟ್ಟು ಅನ್ಯರ ಬೇಡದಂತೆ,
ಮತಿಗೆಟ್ಟು ಪರರುವ ಹೊಗಳದಂತೆ,
ಪರಸತಿಯರ ರತಿಗೆ ಮನ ಹಾರದಂತೆ,
ಶಿವಪಥವೊಲ್ಲದವರೊಡನಾಡದಂತೆ,
ಅನ್ಯಜಾತಿಯ ಸಂಗವ ಮಾಡದಂತೆ,
ಎನ್ನ ಪ್ರತಿಪಾಲಿಸು, ಕೂಡಲಸಂಗಮದೇವಾ.
263
ಮತ್ತೊಂದ ಕಾಣದೆ, ಮತ್ತೊಂದ ಕೇಳದೆ,
ನಿಮ್ಮ ಶರಣರ ಪಾದವಲ್ಲದೆ ಅನ್ಯವಿಷಯಕ್ಕೆಳಸದಂತೆ
ಇರಿಸಯ್ಯಾ, ಕೂಡಲಸಂಗಮದೇವಾ.
264
ಮತಿಮಂದನಾಗಿ ಗತಿಯ ಕಾಣದೆ ಇದ್ದೆನಯ್ಯಾ :
ಹುಟ್ಟುಗುರುಡನ ಕೈಯ ಕೋಲ ಕೊಟ್ಟು ನಡೆಸುವಂತೆ
ನಡೆಸಯ್ಯಾ ಎನ್ನ. ನಿಮ್ಮ ಅಚ್ಚ ಶರಣರ ಒಕ್ಕುದ ಮಿಕ್ಕುದ ನಚ್ಚಿಸು,
ಮಚ್ಚಿಸು,  ಕೂಡಲಸಂಗಮದೇವಾ.
265
ಕಾಣದುದನೆಲ್ಲವ ಕಾಣಲಾರೆನಯ್ಯಾ,
ಕೇಳದುದನೆಲ್ಲವ ಕೇಳಲಾರೆನಯ್ಯಾ.
ದ್ರೋಹವಿಲ್ಲ ಎಮ್ಮ ಶಿವನಲ್ಲಿ, ಸೀಮೆಯಯ್ಯಾ.
ಒಲೆಯ ಮುಂದಿದ್ದು ಮಾಡದ ಕನಸ ಕಾಂಬವರನೊಲ್ಲನಯ್ಯಾ
ಕೂಡಲಸಂಗಮದೇವ.
266
ಎತ್ತು ತೊತ್ತಾಗಿ, ಭೃತ್ಯನಾಗಿ ಎಂದಿಪ್ಪೆನಯ್ಯಾ.
ನಿಮ್ಮವರ ಮನೆಯಲು ಕೂಡಲಸಂಗಮದೇವಾ,
ಲಿಂಗಜಂಗಮದ ಲೆಂಗಿಯಾಗಿ.
267
ಕಾಣಬಹುದೆ ಪರುಷದ ಗಿರಿ ಅಂಧಕಂಗೆ
ಮೊಗೆಯಬಹುದೆ ರಸದ ಬಾವಿ ನಿರ್ಭಾಗ್ಯಂಗೆ
ತೆಗೆಯಬಹುದೆ ಕಡವರವು ದಾರಿದ್ರಂಗೆ
ಕರೆಯಬಹುದೆ ಕಾಮಧೇನು ಅಶುದ್ಧಂಗೆ
ಹೊನ್ನ ಹುಳುವ ಕಂಡು ನರಿ ತನ್ನ ಬಾಲವ
ಹುಣ್ಣು ಮಾಡಿಕೊಂಡಡೆ ಹೋಲಬಹುದೆ
ಎನ್ನೊಡೆಯ ಕೂಡಲಸಂಗನ ಶರಣರನು
ಪುಣ್ಯವಿಲ್ಲದೆ ಕಾಣಬಹುದೆ.
268
ಎಂತಕ್ಕೆ ಎಂತಕ್ಕೆ ನಾ ನಿಮ್ಮ ದೇವರೆಂದರಿದೆನು, ಇಂತಾಗಿ ನೀವೆನ್ನನಾರೆಂದರಿುರಿ.
ನಂಬಲರಿಯೆ, ನಂಬಿಸಲರಿಯೆ. ಒಲಿಯಲರಿಯೆ, ಒಲಿಸಲರಿಯೆ. ಯಥಾ ಭಾವಸ್ತಥಾ
ಲಿಂಗಂ ಸತ್ಯಂ ಸತ್ಯಂ ನ ಸಂಶಯಃ ಯಥಾ ಭಕ್ತಿಸ್ತಥಾ ಸಿದ್ಧಿ:ಸತ್ಯಂ ಸತ್ಯಂ
ನ ಸಂಶಯಃ ಎಂದುದಾಗಿ, ಕೂಡಲಸಂಗಮದೇವಾ, ಕೇಳಯ್ಯಾ ಕೋಟಿ ಕೋಟಿ
ವರುಷ ಕೋಟಲೆಗೊಂಡೆನಯ್ಯಾ.
269
ಅರಿಸಿನವನೆ ಮಿಂದು, ಹೊಂದೊಡಿಗೆಯನೆ ತೊಟ್ಟು,
ಪುರುಷನ ಒಲವಿಲ್ಲದ ಲಲನೆಯಂತೆ ಆನಿದ್ದೇನಯ್ಯಾ.
ವಿಭೂತಿಯನೆ ಹೂಸಿ, ರುದ್ರಾಕ್ಷಿಯನೆ ಕಟ್ಟಿ,
ಶಿವ ನಿಮ್ಮ ಒಲವಿಲ್ಲದಂತೆ ಆನಿದ್ದೇನಯ್ಯಾ.
ಕೆಟ್ಟು ಬಾಳುವರಿಲ್ಲ ಎಮ್ಮವರ ಕುಲದಲ್ಲಿ,
ನೀನೊಲಿದಂತೆ ಸಲಹಯ್ಯಾ, ಕೂಡಲಸಂಗಮದೇವಾ.
270
ಉದಯಾಸ್ತಮಾನವೆನ್ನ ಬೆಂದ ಬಸುರಿಂಗೆ ಕುದಿಯಲಲ್ಲದೆ, ನಿಮ್ಮ ನೆನೆಯಲು
ತೆರಹಿಲ್ಲಯ್ಯಾ. ಎಂತೋ ಲಿಂಗ ತಂದೆ, ಎಂತಯ್ಯಾ ಎನ್ನ ಪೂರ್ವಲಿಖಿತ
ಬೆರಣಿಯನಾಯಲಲ್ಲದೆ ಅಟ್ಟುಣ್ಣ ತೆರಹಿಲ್ಲೆನಗೆ, ನೀ ಕರುಣಿಸು,
ಕೂಡಲಸಂಗಮದೇವಾ.
271
ತಾಮಸ ಮುಸುಕಿ ಕಂಗಳ ಕೆಡಿಸಿತ್ತೆನ್ನ, ಭಕ್ತಿ.
ಕಾಮವೆಂಬ ಅಗ್ನಿಗೆ ಮುರಿದಿಕ್ಕಿತ್ತೆನ್ನ, ಭಕ್ತಿ.
ಉದರಕ್ಕೆ ಕುದಿಕುದಿದು ಮುಂದುಗೆಡಿಸಿತ್ತೆನ್ನ, ಭಕ್ತಿ.
ಇದಿರನಾಶ್ರುಸಲು ಹೋುತ್ತೆನ್ನ, ಭಕ್ತಿ.
ಹೆಣಮೂಳನು ನಾನು ಕೂಡಲಸಂಗಮದೇವಾ,
ಕ್ಷಣ ಹದುಳವಿರದೆ ಬಾಯ ಟೊಣೆದು ಹೋುತ್ತೆನ್ನ, ಭಕ್ತಿ.
272
ಏನಿದ್ದಡೇನಿದ್ದಡೊಲ್ಲದು ನಿಮ್ಮನುಭಾವಕ್ಕೆನ್ನ ಮನವು.
ಡಂಬಕನೆಂಬವ ನಾನು ಕಂಡಯ್ಯಾ,
ಕೂಡಲಸಂಗಮದೇವರ ಪೂಜಿಸಿ ಮಾನವರಾಸೆ ಬಿಡದಾಗಿ.
273
ಬೆಲ್ಲವ ತಿಂದ ಕೋಡಗದಂತೆ ಸಿಹಿಯ ನೆನೆಯದಿರಾ, ಮನವೆ,
ಕಬ್ಬ ತಿಂದ ನರಿಯಂತೆ ಹಿಂದಕ್ಕೆಳಸದಿರಾ, ಮನವೆ.
ಗಗನವನಡರಿದ ಕಾಗೆಯಂತೆ ದೆಸೆದಸೆಗೆ ಹಂಬಲಿಸದಿರಾ, ಮನವೆ.
ಕೂಡಲಸಂಗನ ಶರಣರ ಕಂಡು ಲಿಂಗವೆಂದೆ ನಂಬು, ಮನವೆ.
274
ಒಡೆಯರ ಕಂಡಡೆ ಕಳ್ಳನಾಗದಿರಾ, ಮನವೆ.
ಭವದ ಬಾರಿಯ ತಪ್ಪಿಸಿಕೊಂಬಡೆ ನೀನು ನಿಯತನಾಗಿ, ಭಯಭರಿತನಾಗಿ,
ಅಹಂಕಾರಿಯಾಗದೆ ಶರಣೆನ್ನು, ಮನವೆ. ಕೂಡಲಸಂಗನ ಶರಣರಲ್ಲಿ
ಭಕ್ತಿಯ ನೋನುವಡೆ
ಕಿಂಕಿಲನಾಗಿ ಬದುಕು, ಮನವೆ.
275
ಕೋಟ್ಯನುಕೋಟಿ ಜಪವ ಮಾಡಿ ಕೋಟಲೆಗೊಳ್ಳಲದೇಕೆ ಮನವೆ
ಕಿಂಚಿತು ಗೀತವೊಂದನಂತಕೋಟಿ ಜಪ.
ಜಪವೆಂಬುದೇಕೆ, ಮನವೆ
ಕೂಡಲಸಂಗನ ಶರಣರ ಕಂಡು,
ಆಡಿ ಹಾಡಿ ಬದುಕು ಮನವೆ.
276
ಮನವೆ, ನಿನ್ನ ಜನ್ಮದ ಪರಿಭವವ ಮರೆದೆಯಲ್ಲಾ, ಮನವೆ !
ಲಿಂಗವ ನಂಬು ಕಂಡಾ, ಮನವೆ !
ಜಂಗಮವ ನಂಬು ಕಂಡಾ, ಮನವೆ !
ಕೂಡಲಸಂಗಮದೇವರ ಬಿಡದೆ ಬೆಂಬತ್ತು ಕಂಡಾ, ಮನವೆ !
277
ಸುರರ ಬೇಡಿದಡಿಲ್ಲ, ನರರ ಬೇಡಿದಡಿಲ್ಲ ಬರೆದ ಧೃತಿಗೆಡಬೇಡ ಮನವೆ !
ಆರನಾದಡೆಯೂ ಬೇಡಿ ಬೇಡಿ ಬರಿದೆ ಧೃತಿಗೆಡಬೇಡ ಮನವೆ !
ಕೂಡಲಸಂಗಮದೇವ[ನ]ಲ್ಲದೆ, ಆರ ಬೇಡಿದಡಿಲ್ಲ ಮನವೆ !
278
ಆಡಿ ಅಳುಪದಿರಾ, ಲೇಸಮಾಡಿ ಮರುಗದಿರಾ, ಎಲೆ ಮನವೆ.
ಕೂಡಿ ತಪ್ಪದಿರಾ, ಬೇಡಿದವರಿಗಿಲ್ಲೆನ್ನದಿರು ಕಂಡಾ.
ನಾಡ ಮಾತು ಬೇಡ, ಸೆರಗೊಡ್ಡಿ ಬೇಡು
ಕೂಡಲಸಂಗನ ಶರಣರ.
279
ಹೃದಯ ಕತ್ತರಿ, ತುದಿನಾಲಗೆ ಬೆಲ್ಲೇಂ ಭೋ !
ಆಡಿಹೆನು ಏಂ ಭೋ, ಹಾಡಿಹೆನು ಏಂ ಭೋ !
ನಿಚ್ಚ ನಿಚ್ಚ ಶಿವರಾತ್ರಿಯ ಮಾಡಿಹೆನು ಏಂ ಭೋ !
ಆನು ಎನ್ನಂತೆ, ಮನ ಮನದಂತೆ,
ಕೂಡಲಸಂಗಮದೇವ ತಾನು ತನ್ನಂತೆ.
280
ಒಳ್ಳಿಹ ಮೈಲಾರನ ಒಳಗೆಲ್ಲ ಸಣಬು, ಹೊರಗಣ ಬಣ್ಣ ಕರ ಲೇಸಾುತ್ತಯ್ಯಾ.
ಶ್ವಾನನ ನಿದ್ರೆ, ಅಜ್ಞಾನಿಯ ತಪದಂತೆ ಆುತ್ತಯ್ಯಾ ಎನ್ನ ಮತಿ,
ಕೂಡಲಸಂಗಮದೇವಾ.
281
ಲೋಕೋಪಚಾರಕ್ಕೆ ಮಜ್ಜನಕ್ಕೆರೆವೆನಯ್ಯಾ.
ಮನದ ತಾಮಸ ಬಿಡದು, ಮನದ ಕಪಟ ಬಿಡದು,
ಶಿವಶರಣೆಂಬುದು ಅಳವಡದಯ್ಯಾ.
ಎನ್ನ ಮನದಲ್ಲಿ ಎರಡುಳ್ಳನ್ನಕ್ಕ
ಕೂಡಲಸಂಗಮದೇವನೆಂತೊಲಿವ.
282
ಮಜ್ಜನಕ್ಕೆರೆವೆನಲ್ಲದಾನು, ಸಜ್ಜನವೆನ್ನಲ್ಲಿಲ್ಲಯ್ಯಾ !
ಎನ್ನಲ್ಲೇನನರಸುವೆ
ನಂಬಿಯೂ ನಂಬದ ಡಂಬಕ ನಾನಯ್ಯಾ,
ಹಾವ ತೋರಿ ಹವಿಯ ಬೇಡುವಂತೆ-
ಕೂಡಲಸಂಗಮದೇವಾ.
283
ಕೆಲಕ್ಕೆ ಶುದ್ಧನಾದೆನಲ್ಲದೆ, ಎನ್ನ ಮನಕ್ಕೆ ಶುದ್ಧನಾಗೆನೇಕಯ್ಯಾ
ಕೈಮುಟ್ಟಿ ಪೂಜಿಸುವಡೆ, ಎನ್ನ ಕೈ ಶುದ್ಧವಲ್ಲಯ್ಯಾ.
ಮನಮುಟ್ಟಿ ಪೂಜಿಸುವಡೆ, ಎನ್ನ ಮನ ಶುದ್ಧವಲ್ಲಯ್ಯಾ.
ಭಾವ ಶುದ್ಧವಾದಡೆ, ಕೂಡಲಸಂಗಯ್ಯನು
ಇತ್ತ ಬಾಯೆಂದತ್ತಿಕೊಳ್ಳನೇಕಯ್ಯಾ.
284
ಕುಲಮದಕ್ಕೆ ಹೋರಿ ಜಂಗಮಭೇದವ ಮಾಡುವೆ, ಫಲವೇನು
ನಿತ್ಯಲಿಂಗಾರ್ಚನೆ ಪ್ರಾಯಶ್ಚಿತ್ತ.
ಛಲಮದಕ್ಕೆ ಹೋರಿ ಲಿಂಗಭೇದವ ಮಾಡುವೆ,
ಜಂಗುಳಿಯ ಕಾವ ಗೋವ ಹಲವು ಪಶುವ ನಿವಾರಿಸುವಂತೆ
ತನು ಭಕ್ತನಾುತ್ತು, ಎನ್ನ ಮನ ಭವಿ
ಕೂಡಲಸಂಗಮದೇವಾ.
285
ಲಿಂಗದಲ್ಲಿ ಕಠಿಣವುಂಟೆ ಜಂಗಮದಲ್ಲಿ ಕುಲವುಂಟೆ
ಪ್ರಸಾದದಲ್ಲಿ ಆರುಚಿಯುಂಟೆ
ಈ ತ್ರಿವಿಧದಲ್ಲಿ ಭಾವಭೇದವನರಸುವೆನು,
ಕೂಡಲಸಂಗಮದೇವಾ, ಧಾ[ರಾ]ವಟ್ಟಲೆನ್ನ ಭಕ್ತಿ.
286
ಲೌಕಿಕರ ಕಂಡು ಆಡುವೆ, ಹಾಡುವೆ.
ತಾರ್ಕಿಕರ ಕಂಡು ಆಡುವೆ, ಹಾಡುವೆ.
ಸಹಜಗುಣವೆನ್ನಲಿಲ್ಲಯ್ಯಾ, ನಿಜಭಕ್ತಿಯೆನಗಿಲ್ಲ, ತಂದೆ.
ಏಕೋಭಾವ ಎನಗುಳ್ಳಡೆ, ಏಕೆ ನೀ ಕರುಣಿಸೆ
ಕೂಡಲಸಂಗಮದೇವಾ.
287
ಓತಿ ಬೇಲಿವರಿವಂತೆ ಎನ್ನ ಮನವಯ್ಯಾ,
ಹೊತ್ತಿಗೊಂದು ಪರಿನಪ್ಪ ಗೋಸುಂಬೆಯಂತೆನ್ನ ಮನವು,
ಬಾವುಲ ಬಾಳುವೆಯಂತೆನ್ನ ಮನವು.
ನಡುವಿರುಳೆದ್ದ ಕುರುಡಂಗೆ ಅಗುಸೆಯಲ್ಲಿ ಬೆಳಗಾದಂತೆ
ನಾನಿಲ್ಲದ ಭಕ್ತಿಯ ಬಯಸಿದಡುಂಟೆ
ಕೂಡಲಸಂಗಮದೇವಾ.
288
  289
ಶಬ್ದಸಂಭಾಷಣೆಯ ನುಡಿಯ ವರ್ತಿಸಿ ನುಡಿವೆ,
ತೊಡಹದ ಕೆಲಸದ ಬಣ್ಣದಂತೆ
ಕಡಿಹಕ್ಕೆ ಒರೆಗೆ ಬಾರದು, ನೋಡಾ.
ಎನ್ನ ಮನದಲೊಂದು, ಹೃದಯದಲೊಂದು,
ವಚನದಲೊಂದು ನೋಡಾ.
ಕೂಡಲಸಂಗಮದೇವಾ,
ಆನು ಭಕ್ತನೆಂಬ ಹುಸಿಯ ಮಸಕವನೇನ ಬಣ್ಣಿಸುವೆನಯ್ಯಾ.
290
ಹಾಲ ತೊರೆಗೆ ಬೆಲ್ಲದ ಕೆಸರು, ಸಕ್ಕರೆಯ ಮಳಲು,
ತವರಾಜದ ನೊರೆ ತೆರೆಯಂತೆ ಆದ್ಯರ ವಚನವಿರಲು,
ಬೇರೆ ಬಾವಿಯ ತೋಡಿ ಉಪ್ಪನೀರನುಂಬವನ ವಿಧಿಯಂತೆ
ಆುತ್ತೆನ್ನ ಮತಿ, ಕೂಡಲಸಂಗಮದೇವಾ.
291
ಜನ್ಮ ಹೊಲ್ಲೆಂಬೆನೆ, ಜನ್ಮವ ಬಿಡಲಹೆನು.
ಭಕ್ತರೊಲವ ಪಡೆವೆನೆ, ಭಕ್ತಿಯ ಪಥವನರಿವೆನು.
ಲಿಂಗವೆಂದು ಬಲ್ಲೆನೆ, ಜಂಗಮವೆಂದು ಕಾಬೆನು.
ನಿಚ್ಚ ನಿಚ್ಚ ಶಿವರಾತ್ರಿಯ ಮಾಡಬಲ್ಲೆನೆ, ಕೈಲಾಸವ ಕಾಣಬಲ್ಲೆನು.
ಎನ್ನಲ್ಲಿ ನಡೆುಲ್ಲಾಗಿ, ನಾನು ಭಕ್ತನೆಂತಹೆನಯ್ಯಾ,
ಕೂಡಲಸಂಗಮದೇವಾ.
292
ಉಡುವಿನ ಭಾವದಲ್ಲಿ ಹಡೆದರೆಮ್ಮವರು, ಊಸರವಳ್ಳಿಯಂತೆ ಎನ್ನ ಇರವು,
ಬಾವುಲ ಬಾಳುವೆಯ ತರನಂತೆ ! ಹೊತ್ತಾರೆ ಎದ್ದ ಕುರುಡಂಗೆ ಆಗುಸೆಯಲ್ಲಿ
ಅಸ್ತಮಾನದಂತೆ- ಆನು ಭಕ್ತಿಯ ಬಯಸಿದಡಹುದೆ ಕೂಡಲಸಂಗಮದೇವಾ.
293
ಬಸುರ ಬಾಳುವೆಗೆ, ನಿಮ್ಮಲ್ಲಿ ಮಸಿಯ ಹೂಸಿ ನೇರಿಲಹಣ್ಣ ಮಾರುವಂತೆ, ಕಾಲ ಸಾಲ
ದಾರಿದ್ರ್ಯಕ್ಕಂಜಿ ನಿಮ್ಮ ಮರೆಹೊಕ್ಕೆನಯ್ಯಾ. ಆವುದ ಹುಸಿಯೆಂಬೆ ಆವುದ
ಕಿರಿದೆಂಬೆ ಇದ ನೀನೆ ಬಲ್ಲೆಯಯ್ಯಾ, ಕೂಡಲಸಂಗಮದೇವಾ, ನಾನು
ಉದರಪೋಷಕನಯ್ಯಾ.
294
ಮೂಗ ಕಂಡ ಕನಸಿನಂತಾುತೆನ್ನ ಭಕ್ತಿ;
ಗುಣವ ಹೇಳಬಾರದಾರಿಗೆಯೂ, ಕೇಳಲೆಂತೂ ಬಾರದು.
ಎನ್ನ ಹೇಗತನವ ಮಾಣಿಸು, ಕೂಡಲಸಂಗಮದೇವಾ.
295
ಕಾಣಿಯ ಲೋಭ ಕೋಟಿಯ ಲಾಭವ ಕೆಡಿಸಿದುದ ನಾನರಿಯೆನಯ್ಯಾ.
ಭಕ್ತಿಯ ಕುಳವನರಿಯದೆ ಮತಿಗೆಟ್ಟ ಪರಿಯ ನಾನರಿಯೆನಯ್ಯಾ.
ಕೂಡಲಸಂಗನ ಶರಣರ ಸಂಗದಿಂದ ಅರಿದಡೆ
ನಾನು ಬದುಕುವೆನಯ್ಯಾ.
296
ಏನನೋದಿ, ಏನ ಕೇಳಿ, ಏನ ಮಾಡಿಯೂ ಫಲವೇನು,
ನಿಮ್ಮವರೊಲಿಯದನ್ನಕ್ಕ
ಶಿವ ಶಿವ, ಮಹಾದೇವಾ,
ಬಾಳಿಲ್ಲದವಳ ಓಲೆಯಂತಾುತ್ತೆನಗೆ,
ಕೂಡಲಸಂಗಮದೇವಾ.
297
ಮುನ್ನೂರರುವತ್ತು ದಿನ ಶ್ರವವ ಮಾಡಿ,
ಕಳನೇರಿ ಕೈಮರೆದಂತಾುತ್ತೆನ್ನ ಭಕ್ತಿ.
ಎನಿಸು ಕಾಲ ಲಿಂಗಾರ್ಚನೆಯ ಮಾಡಿ,
ಏವೆನಯ್ಯಾ ಮನದಲ್ಲಿ ದೃಢವಿಲ್ಲದನ್ನಕ್ಕ
ಕೊಡನ ತುಂಬಿದ ಹಾಲ ಕೆಡಹಿ,
ಉಡುಗಲೆನ್ನಳವೆ, ಕೂಡಲಸಂಗಮದೇವಾ.
298
ಶಬ್ದಸುಖಕ್ಕೆ ಮಚ್ಚಿ, ಮಾತಿಂಗೆ ಮಾತನೆ ಕೊಟ್ಟು, ಕೆಟ್ಟೆನಯ್ಯಾ !
ಅನುಭಾವದ ಅಕ್ಕವೆಯಾಗದೆ, ಬಿಬ್ಬನೆ ಬಿರಿದೆನಯ್ಯಾ !
ಅಮೃತದ ಕೊಡನ ತುಂಬಿ, ಒಡೆಯ ಹೊಯ್ದು, ಅರಸಲುಂಟೇ
ಸ್ವಾಮಿಭೃತ್ಯಸಂಬಂಧವೇ ಎನ್ನ ಭಕ್ತಿ, ಪ್ರತ್ಯುತ್ತರ ನಾಯಕನರಕ
ಕೂಡಲಸಂಗಮದೇವಾ.
299
ಅಂಕವೋಡಿದಡೆ ತೆತ್ತಿಗಂಗೆ ಭಂಗವಯ್ಯಾ,
ಕಾದಿ ಗೆಲಿಸಯ್ಯಾ ಎನ್ನನು.
ಕಾದಿ ಗೆಲಿಸಯ್ಯಾ ಕೂಡಲಸಂಗಮದೇವಯ್ಯಾ,
ಎನ್ನ ತನು ಮನ ಧನದಲ್ಲಿ ವಂಚನೆುಲ್ಲದೆ.
300
ಹೇಡಿ ಬಿರಿದ ಕಟ್ಟಿದಂತೆ ಆುತೆನ್ನ ವೇಷ:
ಕಾದಬೇಕು, ಕಾದುವಡೆ ಮನವಿಲ್ಲ-
ಆಗಳೆ ಹೋುತ್ತು ಬಿರಿದು,
ಹಗರಣ ನಗೆಗೆಡೆಯಾುತ್ತು.
ಮಾರಂಕ ಜಂಗಮ ಮನೆಗೆ ಬಂದಡೆ
ಕಾಣದಂತಡ್ಡ ಮುಸುಡಿಟ್ಟಡೆ
ಕೂಡಲಸಂಗಮದೇವ ಜಾಣ, ಹಲುದೋರೆ ಮೂಗ ಕೊಯ್ವ.
301
ಅಚ್ಚ ಶರಣರು ನಿಮ್ಮ ನಿಚ್ಚ ನೆನೆವರು,
ಬಚ್ಚ ಬರಿಯ ಮಾತನಾಡುವೆನು.
ಒಪ್ಪಚ್ಚಿ ಅರೆಭಕ್ತಿ, ನೆನೆಯಲೀಯದು ನಿಮ್ಮ.
ಮೆಚ್ಚರು ನಿಮ್ಮವರು ಎನ್ನನು ಕೂಡಲಸಂಗಮದೇವಾ.
302
ಆಡುವುದಳವಟ್ಟಿತ್ತು, ಹಾಡುವುದಳವಟ್ಟಿತ್ತು,
ಅರ್ಚನೆಯಳವಟ್ಟಿತ್ತು, ಪೂಜನೆಯಳವಟ್ಟಿತ್ತು,
ನಿತ್ಯಲಿಂಗಾರ್ಚನೆ ಮುನ್ನವೆಯವಳವಟ್ಟಿತ್ತು.
ಕೂಡಲಸಂಗನ ಶರಣರು ಬಂದಡೆ,
ಏಗುವುದು, ಏ ಬೆಸೆನೆಂಬುದು ಒಪ್ಪಚ್ಚಿ ಅಳವಡದು.
303
ಒಡೆಯರಿಗೆ ಒಡವೆಯನೊಪ್ಪಿಸಲಾರದೆ
ಮೊರೆುಡುವ ಮನವ ನಾನೇನೆಂಬೆ
ನೆತ್ತಿಯಲ್ಲಿ ಆಲಗ ತಿರುಹುವಂತಪ್ಪ
ವೇದನೆಯಹುದೆನಗೆ.
ಕೊಯ್ದ ಮೂಗಿಂಗೆ ಕನ್ನಡಿಯ ತೋರುವಂತಪ್ಪ
ವೇದನೆಯಹುದೆನಗೆ.
ಬೆಂದ ಹುಣ್ಣ ಕಂಬಿಯಲ್ಲಿ ಕೀಸುವಂತಪ್ಪ
ವೇದನೆಯಹುದೆನಗೆ.
ಕೂಡಲಸಂಗಮದೇ[ವಾ] ನೀ ಮಾಡಿ ನೋಡುವ ಹಗರಣವ
ನಾ ಮಾಡಿಹೆನೆಂದಡೆ, ಮನಕ್ಕೆ ಮನ ನಾಚದೆ ಅಯ್ಯಾ.
304
ಹೊರಿಸಿಕೊಂಡು ಹೋದ ನಾು, ಮೊಲನನೇನ ಹಿಡಿವುದಯ್ಯಾ
ಇರಿಯದ ವೀರ, ಇಲ್ಲದ ಸೊಬಗುವ ಹೇಳುವುದೆ ನಾಚಿಕೆ.
ಆನು ಭಕ್ತನೆಂತೆಂಬೆನಯ್ಯಾ, ಕೂಡಲಸಂಗಮದೇವಾ.
305
ಎನ್ನ ಭಕ್ತನೆಂದೆಂಬರು:
ಎನ್ನ ಹೊರಹಂಚೆ, ಒಳಬೊಳ್ಳೆತನವನರಿಯರಾಗಿ.
ಎನ್ನ ಮಾನಾಪಮಾನವೂ ಶರಣರಲ್ಲಿ, ಜಾತಿವಿಜಾತಿಯೂ ಶರಣರಲ್ಲಿ,
ತನುಮನಧನ[ವೂ] ಶರಣರಲ್ಲಿ.
ವಂಚನೆಯುಳ್ಳ ಡಂಭಕ ನಾನು.
ತಲೆಯೊಡೆಯಂಗೆ ಕಣ್ಣ ಬೈಚಿಡುವೆ
ಕೂಡಲಸಂಗಮದೇವಾ.
306
ನೋಡುವರುಳ್ಳಡೆ ಮಾಡುವೆ ದೇಹಾರವ.
ಎನಗೊಂದು ನಿಜವಿಲ್ಲ, ಎನಗೊಂದು ನಿಷ್ಪತ್ತಿುಲ್ಲ.
ಲಿಂಗವ ತೋರಿ ಉದರವ ಹೊರೆವ ಭಂಗಗಾರ ನಾನು,
ಕೂಡಲಸಂಗಮದೇವಾ.
307
ಭಕ್ತಿ ಎಳ್ಳನಿತಿಲ್ಲ, ಯುಕ್ತಿಶೂನ್ಯನಯ್ಯಾ ನಾನು.
ತನುವಂಚಕ, ಮನವಂಚಕ, ಧನವಂಚಕ ನಾನಯ್ಯಾ.
ಕೂಡಲಸಂಗಮದೇವಾ, ಒಳಲೊಟ್ಟೆ ಎನ್ನ ಮಾತು.
308
ತನು ನಿಮ್ಮದೆಂಬೆ, ಮನ ನಿಮ್ಮದೆಂಬೆ, ಧನ ನಿಮ್ಮದೆಂಬೆ,
ಮತ್ತೆಯೂ ವಂಚನೆ ಮಾಣದಯ್ಯಾ.
ಲಿಂಗ ಜಂಗಮವೆಂಬೆ, ಜಂಗಮ ಲಿಂಗವೆಂಬೆ,
ಮತ್ತೆಯೂ ವಂಚನೆ ಮಾಣದಯ್ಯಾ.
ಒಡಲೊಡವೆ ಹಡೆದರ್ಥ ನಿಮ್ಮದೆಂದರಿಯದೆ
ಕೆಮ್ಮನೆ ಕೆಟ್ಟೆ, ಕೂಡಲಸಂಗಮದೇವಾ.
309
ಊರ ಸೀರೆಗೆ ಅಸಗ ಬಡಿ ಹಡೆದಂತೆ
ಹೊನ್ನೆನ್ನದು, ಮಣ್ಣೆನ್ನದು ಎಂದು ಮರುಳಾದೆ,
ನಿಮ್ಮನರಿಯದ ಕಾರಣ ಕೆಮ್ಮನೆ ಕೆಟ್ಟೆ,
ಕೂಡಲಸಂಗಮದೇವಾ.
310
ಅರ್ಥಪ್ರಾಣಾಭಿಮಾನ ನಿಮ್ಮದೆಂಬೆ,
ಮತ್ತೆಯೂ ಆಸೆ ಬಿಡದನ್ನಕ್ಕ ಭಕ್ತನೆಂತಪ್ಪೆನಯ್ಯಾ
ಶರಣನೆಂತೆನಿಸುವೆನಯ್ಯಾ,
ಕೂಡಲಸಂಗನ ಶರಣರ ಸಕಲರತಿಗೆ ಸಲ್ಲದನ್ನಕ್ಕ.
311
ನಿಮ್ಮ ಭಕ್ತಿಯಲ್ಲಿ ಧರಧುರನೆಂಬೆ.
ದಿಟಕ್ಕೆ ಬಂದಡೆ ಅಡ್ಡ ಮುಖವನಿಕ್ಕುವೆ-
ಗರುಡಂಗೆ ಘಟಸರ್ಪನ ತೋರುವಂತೆ !
ಶಿವಶರಣೆಂದಡೆ ಕಿವಿ ಕೇಳದಂತಿಹೆನು,
ಮನಕ್ಕೆ ಮನವೇ ಸಾಕ್ಷಿಯಯ್ಯಾ, ಕೂಡಲಸಂಗಮದೇವಾ.
312
ಆದ್ಯರ ವಚನ ಪರುಷವೆಂಬೆನು,
ಆ ಪರುಷವೆನಗೆಂತು ದೊರೆಕೊಂಬುದಯ್ಯಾ
ತನು ಮನ ಧನವ ವಿವರಿಸಿ ನುಡಿವೆ
ಸೋಂಕಿಂಗೆ ಸೈರಿಸಲಾರೆ,
ಹೊಲೆಯರ ಮದ್ದಳೆಯಂತೆ ನುಡಿವ ಡಂಬಕ ನಾನಯ್ಯಾ,
ಕೂಡಲಸಂಗಮದೇವಾ.
313
ಕಾಂಚನವೆಂಬ ನಾಯ ನಚ್ಚಿ ನಿಮ್ಮ ನಾನು ಮರೆದೆನಯ್ಯಾ.
ಕಾಂಚನಕ್ಕೆ ವೇಳೆಯಲ್ಲದ ಲಿಂಗಕ್ಕೆ ವೇಳೆ[ಯ]ಲ್ಲ.
ಹಡಿಕೆಗೆ ಮಚ್ಚಿದ ಸೊಣಗ
ಅಮೃತದ ರುಚಿಯ ಬಲ್ಲುದೆ ಕೂಡಲಸಂಗಮದೇವಾ.
314
ಒಲಿದ ಗಂಡನೊಮ್ಮೆ ಒಲ್ಲದಿಪ್ಪ ಕಂಡವ್ವಾ.
ತಪ್ಪೆನ್ನದು, ತಪ್ಪೆನ್ನದು !
ತನು ಮನ ಧನದಲ್ಲಿ ಮಾಟಕೂಟವೆಂದರಿಯದ
ತಪ್ಪೆನ್ನದು, ತಪ್ಪೆನ್ನದು !
ಕಡೆುಲ್ಲದ ಹುಸಿ ಎನ್ನದು, ಕೂಡಲಸಂಗಮದೇವಾ.
315
ಕಾಣುತ್ತ ಕಡೆಗಣಿಸಿ, ಕೆಡಿಸಿ, ಅರಸುವ ಮತಿಭ್ರಷ್ಟ ನಾನು ಲಿಂಗಯ್ಯಾ.
ತನುಲೋಭ ಮನಲೋಭ ಧನಲೋಭ ಮುಂದುಗೆಡಿಸಿ ಕಾಡಿಹವೆನ್ನ.
ತನು ಮನ ಧನವ ನಿವೇದಿಸಿದವರ ಮನೆಯ ಮಗ ನಾನಯ್ಯಾ,
ಕೂಡಲಸಂಗಮದೇವಾ.
316
ಹಗಹದಲ್ಲಿ ಬಿದ್ದವರ ಮೇಲೆ ಒರಳ ನೂಕುವರೆ
ಕೋಳದ ಮೇಲೆ ಸಂಕೋಲೆಯನಿಕ್ಕುವರೆ
ಬೆಂದ ಹುಣ್ಣ ಕಂಬಿಯಲ್ಲಿ ಕೀಸುವರೆ
ಕೂಡಲಸಂಗಯ್ಯ ಕಾಡುವ ಕಾಟ
ಸಿರಿಯಾಳಂಗಲ್ಲದೆ ಸೈರಿಸಬಹುದೆ.
317
ಸೋಲಬಲ್ಲರು ಅವರು, ಗೆಲಲರಿಯರಯ್ಯಾ.
ತನು ಮನ ಧನದಲ್ಲಿ ವಂಚನೆಯನರಿಯರಯ್ಯಾ,
ದಾಸ ಸಿರಿಯಾಳನವರು.
ಕೂಡಲಸಂಗ ಶರಣರು ಉಪಚಾರವನರಿಯರಯ್ಯಾ.
318
ಮಾತಿನಲ್ಲಿ ಶ್ರೋತ್ರಸುಖವ ನುಡಿಯಬಹುದಲ್ಲದೆ
ಮಾಡುವ ಸತ್ಕ್ರಿಯೆುಂದ ಭಕ್ತನೆನಿಸಲು ಬಾರದು.
ಅರ್ಥಪ್ರಾಣಾಭಿಮಾನವಾರಿಗೆಯೂ ಸಮನಿಸದು,
ಲಿಂಗಮುಖದಲುದಯವಾದ ಶರಣಂಗಲ್ಲದೆ ಅಯ್ಯಾ.
ಕೂಡಲಸಂಗನ ಶರಣರ ಭಕ್ತಿಭಂಡಾರವು
ಎನಗೆಂತು ಸಾಧ್ಯವಪ್ಪುದು ಹೇಳೆನ್ನ ತಂದೆ.
319
ಬಾಣ ಮಯೂರನಂತೆ ಬಣ್ಣಿಸಬಲ್ಲೆನೆ
ಸಿರಿಯಾಳನಂತೆ ಊಣಲಿಕ್ಕಬಲ್ಲೆನೆ
ದಾಸಿಮಯ್ಯನಂತೆ ಉಡಕೊಡಬಲ್ಲೆನೆ
ಉಂಡು ಉಟ್ಟು, ಕೊಟ್ಟಡೆ ಮು್ಯುಗೆ ಮುಯ್ಯೆನಿಸಿತ್ತು,
ಎನಗೆ ಕೊಟ್ಟಡೆ ಧರ್ಮವೆನಿಸಿತ್ತು,
ಕೂಡಲಸಂಗಮದೇವಾ.
320
ದಾಸಿದೇವ ತನ್ನ ವಸ್ತ್ರವನಿತ್ತು ತವನಿದ್ಥಿಯ ಪ್ರಸಾದವ ಪಡೆದ.
ಸಿರಿಯಾಳ ತನ್ನ ಮ ಗನನಿತ್ತು ಪ್ರಾಣಪ್ರಸಾದವ ಪಡೆದ.
ಬಲ್ಲಾಳದೇವ ತನ್ನ ವಧುವನಿತ್ತು ಸಮತೆಪ್ರಸಾದವ ಪಡೆದ.
ಇವರೆಲ್ಲರೂ ತಮತಮಗೆ ಮಾಡಿ ಹಡೆದರು ಸಮ್ಯಕ್‍ಪದವಿಯನು.
ನಾನೇನನೂ ಅರಿಯದ ಭಕ್ತಿಯ ಬಡವಂಗೆ ಕರುಣಿಸು
ಕೂಡಲಸಂಗಮದೇವಾ.
321
ತ್ರಿವಿಧ ತ್ರಿವಿಧದಲ್ಲಿ ತಪ್ಪಿದ ತಪ್ಪುಕ ನಾನಯ್ಯಾ,
ಒಮ್ಮಿಂಗೆ ಕರುಣಿಸಯ್ಯಾ.
ಇದನರಿದು ಇನ್ನು ತಪ್ಪಿದೆನಾದಡೆ
ನೀವು ಮಾಡಿತ್ತೆ ಸಲುವುದು, ಕೂಡಲಸಂಗಮದೇವಾ.
322
ಎನ್ನ ತಪ್ಪು ಅನಂತಕೋಟಿ, ನಿಮ್ಮ ಸೈರಣೆಗೆ ಲೆಕ್ಕವಿಲ್ಲ,
ಇನ್ನು ತಪ್ಪಿದೆನಾದಡೆ ನಿಮ್ಮ ಪಾದವೆ ದಿಬ್ಯ.
ಕೂಡಲಸಂಗಮದೇವಯ್ಯಾ,
ನಿಮ್ಮ ಪ್ರಮಥರ ಮುಂದೆ ಕಿನ್ನರ ಬೊಮ್ಮಣ್ಣ ಸಾಕ್ಷಿ.
323
ಅಡಿಗಡಿಗೆ ಎನ್ನ ಮನವ ಜಡಿದು ನೋಡದಿರಯ್ಯಾ.
ಬಡವನೆಂದೆನ್ನ ಕಾಡದಿರಯ್ಯಾ.
ಎನಗೆ ಒಡೆಯರುಂಟು ಕೂಡಲಸಂಗನ ಶರಣರು.
324
ಭಕ್ತಿವಿಶೇಷವ ಮಾಡುವಡೆ ಹತ್ತು ಬೆರಳುಂಟು,
ಹಾಸಿ ದುಡಿವಡೆ ತನಗುಂಟು, ತನ್ನ ಪ್ರಮಥರಿಗುಂಟು.
ಮಾರಿತಂದೆಗಳಂತೆ ಎನಗೇಕಹುದಯ್ಯಾ
ರತ್ನದ ಸಂಕಲೆಯನಿಕ್ಕಿ ಕಾಡಿಹ ಕೂಡಲಸಂಗಮದೇವ,
ಶಿವಧೋ ಶಿವಧೋ !
325
ಮನೆ ನೋಡಾ ಬಡವರು:ಮನ ನೋಡಾ ಘನ.
ಸೋಂಕಿನಲ್ಲಿ ಶುಚಿ:ಸರ್ವಾಂಗ ಕಲಿಗಳು.
ಪಸರಕ್ಕನುವಿಲ್ಲ :ಬಂದ ತತ್‍ಕಾಲಕೆ ಉಂಟು,
ಕೂಡಲಸಂಗನ ಶರಣರು ಸ್ವತಂತ್ರಧೀರರು.
326
ತತ್ವವನರಿದೆಹೆನೆಂದು ಮೃತ್ಯುವ ಕರೆಕೊಂಡೆನಯ್ಯಾ.
ನಾನೆತ್ತ ಬಲ್ಲೆ ನಿಮ್ಮ ಶರಣರಂತುವನು
ನಾನೆತ್ತ ಬಲ್ಲೆ ನಿಮ್ಮ ಪ್ರಮಥರಂತುವನು
ಸರ್ವಾಪರಾಧಿ ನಾನು.
ಎನ್ನ ಮನದ ಕೊನೆಯ ಸೂತಕ ಹಿಂಗದು,
ಕೂಡಲಸಂಗಮದೇವಾ.
327
ಆ ಮಿಹಿಲಾಳು ಭೋಜ ದೇವುಲಾಳು.
ಆನು ಸೂಳೆ, ನಮ್ಮಕ್ಕ ಸೂಳೆ.
ಬೆಳ್ಳಿಗೆಯಾವಿನ ಕರುವೆಂದಡೆ ಬಳ್ಳವಾಲ ಕರೆವುದೆ
ಕೂಡಲಸಂಗನ ಶರಣರ ಮುಂದೆ ನಾನು ಕಾದಿಹೆ, ಬಾ ಬಿಸಿಲೆ.
328
ಆನೆಯೂ ಆ ದಾರಿಯಲ್ಲಿ ಹೋುತ್ತೆಂದಡೆ,
ಆಡೂ ಆ ದಾರಿಯಲ್ಲಿ ಹೋುತ್ತೆನ್ನಬಹುದೆ
ಸಂಗನ ಶರಣರಿಗೆ ಆನು ಸರಿಯೆಂದು ಗಳಹಲಿಬಹುದೆ
ಜಂಗಮಕ್ಕೆ ಮಾಡುವ ಭಕ್ತರಿಗೆ ಆನು ಸರಿಯೆ
ಹೇಳಾ, ಕೂಡಲಸಂಗಮದೇವಾ?
329
ಆ ಕರಿಯಾಕೃತಿಯ ಸೂಕರನ ಹೋಲಿಸಿದಡೆ
ಆ ಕರಿಯಾಗಲರಿವುದೆ
ಭೂನಾಗನಾಕೃತಿಯನು ವ್ಯಾಳೇಶನ ಹೋಲಿಸಿದಡೆ
ವ್ಯಾಳೇಶನಾಗಲರಿವುದೆ
ನಾನು ಭಕ್ತನಾದಡೇನಯ್ಯಾ,
ನಮ್ಮ ಕೂಡಲಸಂಗಮದೇವನ ಸದ್ಭಕ್ತರ ಹೋಲಲರಿವೆನೆ.
330
ಮೋಟನ ಮೌಳಿ, ಮೂಕೊರತಿಯ ಶೃಂಗಾರ,
ಬೇಟ ಕುರುಡಂಗೆ ನಗೆಗೆಡೆಯಾಯಿತ್ತು.
ನಮ್ಮ ಕೂಡಲಸಂಗನ ಶರಣರ ಮುಂದೆ
ನಾನು ಭಕ್ತನೆಂಬ ನಾಚಿಕ್ಕೆ ಸಾಲದೆ.
331
ಮೂಗಿಲ್ಲದ ಮುಖಕ್ಕೆ ಶೃಂಗಾರವೆ
ವಿಕೃತವೇಷಧಾರಿಯಾನು, ಭಂಡನು ! ಲಜ್ಜೆಭಂಡನು !
ಕೂಡಲಸಂಗನ ಶರಣರಲ್ಲಿ
ಹಾವ ತೋರಿ ಹವಿಯ ಬೇಡುವಂತೆ.
332
ಮಾವಿನಕಾಯೊಳಗೆ ಒಂದು ಎಕ್ಕೆಯ ಕಾಯಿ ನಾನಯ್ಯಾ.
ಆನು ಭಕ್ತನೆಂತೆಂಬೆ ನಿಮ್ಮ ಶರಣರ ಮುಂದೆ ನಾಚಿಕೆಯಿಲ್ಲದೆ
ಕೂಡಲಸಂಗನ ಶರಣರ ಮುಂದೆ ನಾನೆಂತು ಭಕ್ತನಪ್ಪೆನಯ್ಯಾ.
333
ಮರದ ನೆಳಲಲಿದ್ದು ತನ್ನ ನೆಳಲನರಸಬಹುದೆ
ನಿಮ್ಮ ಶರಣರ ಮುಂದೆ ನಾನೇತರ ಭಕ್ತನಯ್ಯಾ
ನಿಮ್ಮ ಶರಣರ ಮುಂದೆ ನಾನೇತರ ಯುಕ್ತನಯ್ಯಾ
ಆನು ಭಕ್ತನೆಂಬ ನುಡಿ ಸುಡದೆ, ಕೂಡಲಸಂಗಮದೇವಾ.
334
ಎನ್ನಿಂದ ಕಿರಿಯರಿಲ್ಲ, ಶಿವಭಕ್ತರಿಂದ ಹಿರಿಯರಿಲ್ಲ.
ನಿಮ್ಮ ಪಾದ ಸಾಕ್ಷಿ, ಎನ್ನ ಮನ ಸಾಕ್ಷಿ.
ಕೂಡಲಸಂಗಮದೇವಾ, ಎನಗಿದೇ ದಿಬ್ಯ.
335
ಆನು ಭಕ್ತನಲ್ಲಯ್ಯಾ, ಆನು ವೇಷಧಾರಿಯಯ್ಯಾ.
ಕಾಟುಗ, ಕೇತುಗ, ಪೋಲುಗ ಎಂಬುದು ಎನ್ನ ಹೆಸರು.
ಕೂಡಲಸಂಗಮದೇವಾ ನಿಮ್ಮ ಶರಣರ ಮನೆಯ ಮಗ ನಾನಯ್ಯಾ
336
ಡಂಬೂ ಡಳುಹೂ ಎನ್ನದಯ್ಯಾ, ಡಂಬಕನೆಂಬವ ನಾನಯ್ಯಾ.
ನಿಮ್ಮ ನಂಬಿದ ಶರಣರ [ನಂಬದ] ಡಿಂಗರಿಗ ನಾನು,
ಕೂಡಲಸಂಗಮದೇವಾ.
337
ಚೆನ್ನ ಚೇರಮನ ಬಂಟ ನಾನಯ್ಯಾ,
ಎನ್ನ ಚಾಗುಬೊಲ್ಲನ ಕಾವ ಗೋವನೆಂಬರು.
ಕೂಡಲಸಂಗನ ಶರಣರೊಡೆಯರಾಗಿ
ತಮ್ಮ ತೊತ್ತಿನ ಮಗನೆಂದು ಒಲಿದಂತೆ ನುಡಿವರು.
338
ಕಾಲಲೊದೆದು ಬಡಿದು ಜಡಿವರಯ್ಯಾ, ಭಕ್ತಿಯೆಯ್ದದೆಂದೆನ್ನ.
ಜರೆವರಯ್ಯಾ, ನುಡಿವರಯ್ಯಾ,
ಕೂಡಲಸಂಗನ ಶರಣರೊಡೆಯರಾಗಿ.
339
ನಡೆವರಯ್ಯಾ ಒಡೆಯರು ತನು-ಮನ-ಧನದ ಮೇಲೆ,
ನುಡಿವರಯ್ಯಾ ಒಂದು ನಿಮಿಷ ಬಾರದಿರ್ದಡೆ,
ಜರೆವರಯ್ಯಾ ಒಡೆಯರು ಮನಬಂದ ಪರಿಯಲು.
ಶಿವಾ ಶಿವಾ ! ಅಣಿವರಯ್ಯಾ ಮಂಡೆಯನೂರಿ.
ಪ್ರಾಣದ ಒಡೆಯರಯ್ಯಾ,
ಕೂಡಲಸಂಗಮದೇವಾ, ನಿಮ್ಮ ಶರಣರು.
340
ಅರ್ಥ ಪ್ರಾಣ ಅಬ್ಥಿಮಾನಕ್ಕೆ ಒಡೆಯರು ಸದ್‍ಭಕ್ತರಲ್ಲದೆ
ಎನಗಾರೂ ಇಲ್ಲಯ್ಯಾ.
`ಭೃತ್ಯಾಪರಾಧಃ ಸ್ವಾಮಿನೋ ದಂಡಃ
ಕೂಡಲಸಂಗಮದೇವಾ, ನೀವೇ ಪ್ರಮಾಣು.
341
ಅರ್ಚಿಸಲರಿಯೆ, ಪೂಜಿಸಲರಿಯೆ,
ನಿಚ್ಚ ಶಿವರಾತ್ರಿಯ ನಾ ಮಾಡಲರಿಯೆ.
ಕಪ್ಪಡಿವೇಷದಿಂದಾನು ಬಂದಾಡುವೆ, ಕಪ್ಪಡಿವೇಷದಿಂದ.
ಈಶ ನಾ ನಿಮ್ಮ ದಾಸರ ದಾಸಿಯ ದಾಸನಯ್ಯಾ,
ನಿಮ್ಮ ವೇಷಧಾರಿಯ ಮನೆಯ ಪಂಗುಳ ನಾನಯ್ಯಾ,
ಕೂಡಲಸಂಗಮದೇವಾ
ನಿಮ್ಮ ಲಾಂಛನ ಧರಿಸಿಪ್ಪ ಉದರಪೋಷಕ ನಾನಯ್ಯಾ.
342
ಅಪ್ಪನು ಡೋಹರ ಕಕ್ಕಯ್ಯನಾಗಿ,
ಮುತ್ತಯ್ಯ ಚೆನ್ನಯ್ಯನಾದರೆ ಆನು ಬದುಕೆನೆ
ಮತ್ತಾ ಶ್ವಪಚಯ್ಯನ ಸನ್ನಿಧಿುಂದ
ಭಕ್ತಿಯ ಸದ್‍ಗುಣವ ನಾನು ಅರಿವೆನಯ್ಯಾ.
ಕಷ್ಟಜಾತಿ ಜನ್ಮದಲಿ ಜನಿುಸಿದೆ ಎನ್ನ,
ಎನಗಿದು ವಿಧಿಯೆ ಕೂಡಲಸಂಗಮದೇವಾ.
343
ಉತ್ತಮಕುಲದಲ್ಲಿ ಹುಟ್ಟಿದೆನೆಂಬ
ಕಷ್ಟತನದ ಹೊರೆಯ ಹೊರಿಸದಿರಯ್ಯಾ,
ಕಕ್ಕಯ್ಯನೊಕ್ಕುದನಿಕ್ಕ ನೋಡಯ್ಯಾ,
ದಾಸಯ್ಯಾ ಶಿವದಾನವನೆರೆಯ ನೋಡಯ್ಯಾ,
ಮನ್ನಣೆಯ ಚೆನ್ನಯ್ಯನೆನ್ನುವ ಮನ್ನಿಸ.
ಉನ್ನತ ಮಹಿಮ,
ಕೂಡಲಸಂಗಮದೇವಾ, ಶಿವಧೋ ಶಿವಧೋ !
344
ಸೆಟ್ಟಿಯೆಂದೆನೆ ಸಿರಿಯಾಳನ
ಮಡಿವಾಳನೆಂಬೆನೆ ಮಾಚಯ್ಯನ
ಡೋಹರನೆಂಬೆನೆ ಕಕ್ಕಯ್ಯನ
ಮಾದಾರನೆಂಬೆನೆ ಚೆನ್ನಯ್ಯನ
ಆನು ಹಾರುವನೆಂದಡೆ ಕೂಡಲಸಂಗಯ್ಯ ನಗುವನಯ್ಯಾ.
345
ಚೆನ್ನಯ್ಯನ ಮನೆಯ ದಾಸನ ಮಗನು,
ಕಕ್ಕಯ್ಯನ ಮನೆಯ ದಾಸಿಯ ಮಗಳು,
ಇವರಿಬ್ಬರು ಹೊಲದಲು ಬೆರಣಿಗೆ ಹೋಗಿ, ಸಂಗವ ಮಾಡಿದರು.
ಇವರಿಬ್ಬರಿಗೆ ಹುಟ್ಟಿದ ಮಗ ನಾನು,
ಕೂಡಲಸಂಗಮದೇವ ಸಾಕ್ಷಿಯಾಗಿ.
346
  347
ಹರನು ಮೂಲಿಗನಾಗಿ, ಪುರಾತರೊಳಗಾಗಿ,
ಬಳಿ ಬಳಿಯಲು ಬಂದ ಮಾದಾರನ ಮಗ ನಾನಯ್ಯಾ.
ಕಳೆದ ಹೊಲೆಯನೆಮ್ಮಯ್ಯ, ಜಾತಿಸೂತಕ.
ಮಾದಾರನ ಮಗ ನಾನಯ್ಯಾ.
ಪನ್ನಗಭೂಷಣ ಕೂಡಲಸಂಗಯ್ಯಾ,
ಚೆನ್ನಯ್ಯನೆನ್ನ ಮುತ್ತಯ್ಯನಜ್ಜನಪ್ಪನಯ್ಯಾ.
348
ಅಪ್ಪನು ನಮ್ಮ ಮಾದಾರ ಚೆನ್ನಯ್ಯ,
ಬೊಪ್ಪನು ನಮ್ಮ ಡೋಹರ ಕಕ್ಕಯ್ಯ,
ಚಿಕ್ಕಯ್ಯನೆಮ್ಮಯ್ಯ ಕಾಣಯ್ಯ,
ಅಣ್ಣನು ನಮ್ಮ ಕಿನ್ನರ ಬೊಮ್ಮಯ್ಯ,
ಎನ್ನನೇತಕ್ಕರಿುರಿ, ಕೂಡಲಸಂಗಯ್ಯಾ.
349
ಭಕ್ತಿುಲ್ಲದ ಬಡವ ನಾನಯ್ಯಾ:
ಕಕ್ಕಯ್ಯನ ಮನೆಯಲ್ಲೂ ಬೇಡಿದೆ,
ಚೆನ್ನಯ್ಯನ ಮನೆಯಲ್ಲೂ ಬೇಡಿದೆ,
ದಾಸಯ್ಯನ ಮನೆಯಲ್ಲೂ ಬೇಡಿದೆ.
ಎಲ್ಲಾ ಪುರಾತರು ನೆರೆದು ಭಕ್ತಿಭಿಕ್ಷವನಿಕ್ಕಿದಡೆ
ಎನ್ನ ಪಾತ್ರೆ ತುಂಬಿತ್ತು, ಕೂಡಲಸಂಗಮದೇವಾ.
350
ಹಿರಿಯಯ್ಯ ಶ್ವಪಚಯ್ಯ,
ಕಿರಿಯಯ್ಯ ಡೋಹರ ಕಕ್ಕಯ್ಯ,
ಅಯ್ಯಗಳಯ್ಯ ನಮ್ಮ ಮಾದಾರ ಚೆನ್ನಯ್ಯ.
ಕೂಡಲಸಂಗಮದೇವಾ,
ನಿಮ್ಮ ಶರಣರು ಎನ್ನ ಸಲಹುವರಾಗಿ.
351
ಎಮ್ಮ ತಾಯಿ ನಿಂಬಿಯವ್ವೆ ನೀರನೆರೆದುಂಬಳು,
ಎಮ್ಮಯ್ಯ ಚೆನ್ನಯ್ಯ ರಾಯಕಂಪಣವ ಹೇರುವ.
ಎಮಗೆ ಆರೂ ಇಲ್ಲವೆಂಬಿರಿ,
ಎಮ್ಮಕ್ಕ ಕಂಚಿಯಲ್ಲಿ ಬಾಣಸವ ಮಾಡುವಳು.
ಎಮಗೆ ಆರೂ ಇಲ್ಲವೆಂಬಿರಿ,
ಎಮ್ಮ ಅಜ್ಜರ ಅಜ್ಜರು ಹಡೆದ ಭಕ್ತಿಯ ನಿಮ್ಮ ಕೈಯಲು ಕೊಂಬೆ,
ಕೂಡಲಸಂಗಮದೇವಾ.
352
ಎನಗಾರೂ ಇಲ್ಲ, ಎನಗಾರೂ ಇಲ್ಲವೆಂಬರು.
ಬಾಣನವ ನಾನು, ಮಯೂರನವ ನಾನು,
ಕಾಳಿದಾಸನವ ನಾನು.
ಕಕ್ಕಯ್ಯ ಹಿರಿಯಯ್ಯ, ಚಿಕ್ಕಯ್ಯ ಚೆನ್ನಯ್ಯ
ಎತ್ತಿ ಮುದ್ದಾಡಿಸಿದರೆನ್ನ, ಕೂಡಲಸಂಗಯ್ಯಾ.
353
ಅಯ್ಯಾ, ನಿಮ್ಮ ವಂಶವಳಿಯಲು ಒಬ್ಬ ತೊತ್ತಿನ ಮಗ ಹುಟ್ಟಿದ.
ಆತನ ತೊತ್ತಿನ ಮಗ ನಾನಯ್ಯಾ,
ಬಳಿದೊತ್ತು, ಬಳಗದೊತ್ತು, ವಂಶದೊತ್ತು ನಾನಯ್ಯಾ.
ಕೂಡಲಸಂಗಮದೇವಯ್ಯಾ,
ನಿಮ್ಮ ಒಡೆತನಕ್ಕೆ ಕೇಡಿಲ್ಲವಾಗಿ, ಎನ್ನ ತೊತ್ತುತನಕ್ಕೆ ಕೇಡಿಲ್ಲ.
354
ಕೈಯ ಬೋಹರಿಗೆ, ಮಂಡೆಯ ಮೇಲೆ ಸಿಂಬೆ,
ಸಿಂಬಕನ ಮನೆಯ ಮಗ ನಾನಯ್ಯಾ.
ಕೂಡಲಸಂಗಮದೇವರ ಮಂಚದ ಕೋಡೇರಿ ಬಂದ
ತೊತ್ತಿನ ಮಗ ನಾನಯ್ಯಾ.
355
ಅರಸರ ಮನೆಯಲ್ಲಿ ಅರಸಿಯಾಗಿಪ್ಪುದರಿಂದ,
ಭಕ್ತರ ಮನೆಯ ತೊತ್ತಾಗಿಪ್ಪುದು ಕರ ಲೇಸಯ್ಯಾ.
`ತಾರೌ ಅಗ್ಘವಣಿ, ನೀಡೌ ಪತ್ರೆಯ,
ಲಿಂಗಕ್ಕೆ ಬೋನವ ಹಿಡಿಯೌ ಎಂಬರು.
`ಕೂಡಲಸಂಗನ ಮಹಾಮನೆಯಲ್ಲು
ಒಕ್ಕುದನುಣೌ ತೊತ್ತೇ ಎಂಬರು.
356
ಆನು ನಿಮ್ಮ ಶರಣರಿಗೆ, ಮಂಡೆಯ ಬೋಳಿಸಿಕೊಂಡು
ಗಂಡುದೊತ್ತಾದೆನಯ್ಯಾ.
ಕೂಡಲಸಂಗಮದೇವಯ್ಯಾ, ನಿಮ್ಮ ಶರಣರಿಗೆ.
357
ಅನುದಿನ ಮನಮುಟ್ಟಿ ಧನ್ಯನಯ್ಯಾ, ದಮ್ಮಯ್ಯಾ! ದಮ್ಮಯ್ಯಾ!
ನಿಮ್ಮ ಧರ್ಮದ ಕವಿಲೆಯಾನಯ್ಯಾ.
ಕೂಡಲಸಂಗಮದೇವಯ್ಯಾ,
ನಿಮ್ಮ ಶರಣರ ಮನೆಯ ಮಗ ನಾನಯ್ಯಾ.
358
ಕಾಮವ ತೊರೆದಾತ, ಹೇಮವ ಜರೆದಾತ,
ಭಾನುವಿನ ಉದಯಕ್ಕೆ ಒಳಗಾಗದ ಶರಣನು.
ಆಗಳೂ ನಿಮ್ಮ ಮಾಣದೆ ನೆನೆವರ ಮನೆಯಲು ಶ್ವಾನನಾಗಿರಿಸು,
ಮಹಾದಾನಿ ಕೂಡಲಸಂಗಮದೇವಾ.
359
ಮೇಲಾಗಲೊಲ್ಲೆನು ಕೀಳಾಗಲಲ್ಲದೆ,
ಕೀಳಿಂಗಲ್ಲದೆ ಹಯನು ಕರೆವುದೆ
ಮೇಲಾಗಿ ನರಕದಲೋಲಾಡಲಾರೆನು.
ನಿಮ್ಮ ಶರಣರ ಪಾದಕ್ಕೆ ಕೀಳಾಗಿರಿಸು,
ಮಹಾದಾನಿ ಕೂಡಲಸಂಗಮದೇವಾ.
360
ಬ್ರಹ್ಮಪದವಿಯನೊಲ್ಲೆ, ವಿಷ್ಣುಪದವಿಯನೊಲ್ಲೆ,
ರುದ್ರಪದವಿಯನೊಲ್ಲೆ.
ನಾನು ಮತ್ತಾವ ಪದವಿಯನೊಲ್ಲೆನಯ್ಯಾ.
ಕೂಡಲಸಂಗಮದೇವಾ, ನಿಮ್ಮ ಸದ್ಭಕ್ತರ
ಪಾದವನರಿದಿಪ್ಪ ಮಹಾಪದವಿಯ ಕರುಣಿಸಯ್ಯಾ.
361
ಕಾಗೆ ವ್ಟಿಸುವ ಹೊನ್ನಕಳಸವಹುದರಿಂದ
ಒಡೆಯರು ಜೋಗೈಸುವ ಚಮ್ಮಾವುಗೆಯ ಮಾಡಯ್ಯಾ.
ಅಯ್ಯಾ ನಿಮ್ಮ ಶರಣರ ಪಾದಕ್ಕೆ ಚಮ್ಮಾವುಗೆಯ ಮಾಡಯ್ಯಾ.
ಕರ್ಮಾವಲಂಬಿನಃ ಕೇಚಿತ್ ಕೇಚಿತ್ ಜ್ಞಾನಾವಲಂಬಿನಃ
ವಯಂ ತು ಶಿವಭಕ್ತಾನಾಂ ಪಾದರಕ್ಷಾವಲಂಬಿನಃ
ಕೂಡಲಸಂಗಮದೇವಾ,
ನಿಮ್ಮ ಸೆರಗೊಡ್ಡಿ ಬೇಡುವುದೊಂದೇ ವರವ ಕರುಣಿಸಯ್ಯಾ.
362
ಆವಾವ ಭಾವದಲ್ಲಿ ಮಾಡಿ ಕೂಡಿಹೆನೆಂಬವರ
ಬಾಗಿಲ ತೋರಯ್ಯಾ.
ತನುವನೊಪ್ಪಿಸಿದವರ, ಮನವನೊಪ್ಪಿಸಿದವರ, ಧನವನೊಪ್ಪಿಸಿದವರ
ಬಾಗಿಲ ತೋರಯ್ಯಾ.
ಇವೆಲ್ಲವನೊಪ್ಪಿಸಿ ಜಂಗಮವೆನ್ನವರೆನ್ನವರೆಂಬವರ
ಕೆರಹ ಹೊತ್ತಿರಿಸೆನ್ನನು, ಕೂಡಲಸಂಗಮದೇವಾ.
363
ಆಯತ, ಸ್ವಾಯತದನುಭಾವವ ನಾನೆತ್ತ ಬಲ್ಲೆನು
ಲಿಂಗ ಜಂಗಮಕ್ಕೆ ಮಾಡಿ ನೀಡುವ
ಅಚ್ಚ ಶರಣರ ಮನೆಯಲು ಭೃತ್ಯನಾಗಿಪ್ಪೆನಯ್ಯಾ.
ಇದು ಕಾರಣ ಕೂಡಲಸಂಗನ ಶರಣರಲ್ಲದೆ ಅನ್ಯವನರಿಯೆನಾಗಿ.
364
ಚಕೋರಂಗೆ ಚಂದ್ರಮನ ಬೆಳಗಿನ ಚಿಂತೆ,
ಅಂಬುಜಕೆ ಭಾನುವಿನ ಉದಯದ ಚಿಂತೆ,
ಭ್ರಮರಂಗೆ ಪರಿಮಳದ ಬಂಡುಂಬ ಚಿಂತೆ,
ಎನಗೆ ನಮ್ಮ ಕೂಡಲಸಂಗನ ಶರಣರ ನೆನೆವುದೆ ಚಿಂತೆ.
365
ಹೊಲಬುಗೆಟ್ಟ ಶಿಶು ತನ್ನ ತಾಯ ಬಯಸುವಂತೆ,
ಬಳಿದಪ್ಪಿದ ಪಶು ತನ್ನ ಹಿಂಡನರಸುವಂತೆ,
ಬಯಸುತ್ತಿರ್ದೆನಯ್ಯಾ ನಿಮ್ಮ ಶರಣರ ಬರವನು.
ಬಯಸುತ್ತಿರ್ದೆನಯ್ಯಾ ನಿಮ್ಮ ಭಕ್ತರ ಬರವನು.
ದಿನಕರನುದಯಕ್ಕೆ ಕಮಳ ವಿಕಸಿತವಾದಂತೆ
ಎನಗೆ ನಿಮ್ಮ ಶರಣರ ಬರವು, ಕೂಡಲಸಂಗಮದೇವಾ.
366
ಸೂರ್ಯನ ಉದಯ ತಾವರೆಗೆ ಜೀವಾಳ,
ಚಂದ್ರಮನುದಯ ನೆ್ದುಲೆಗೆ ಜೀವಾಳ.
ಕೂಪರಠಾವಿನಲ್ಲಿ ಕೂಟ ಜೀವಾಳವಯ್ಯಾ,
ಒಲಿದ ರಾವಿನಲ್ಲಿ ನೋಟ ಜೀವಾಳವಯ್ಯಾ.
ಕೂಡಲಸಂಗನ ಶರಣರ
ಬರವೆನಗೆ ಪ್ರಾಣ ಜೀವಾಳವಯ್ಯಾ.
367
ಜಲವ ತಪ್ಪಿದ ಮತ್ಸ್ಯ ಬದುಕುವುದೇ ಸೋಜಿಗ,
ಗಣತಿಂತಿಣಿಯೊಳಗಿರಿಸೆನ್ನ ಲಿಂಗವೆ.
ಶಿವ ಶಿವಾ, ಕೂಡಲಸಂಗª Àುದೇವಾ,
ಸೆರಗೊಡ್ಡಿ ಬೇಡುವೆನು.
368
ಅಯ್ಯಾ, ನಿಮ್ಮ ಮಹಾವ್ರತಿಗಳನಗಲಿ ಬದುಕಲಾರೆನು.
ಶಿವಧೋ ಶಿವಧೋ ! ಕಂಗಳಶ್ರುಗಳಲ್ಲಿ ಮುಂದುಗಾಣೆನು.
ಲಿಂಗಸಂಗಿಗಳನಗಲಿ ಆನೆಂತು ಬದುಕುವೆ,
ಕೂಡಲಸಂಗಮದೇವಾ.
369
ಜಜ್ಜನೆ ಜರಿದೆನು, ಜಜ್ಜನೆ ಜರಿದೆನು, ಜಜ್ಜನೆ ಜರಿದೆ ನೋಡಯ್ಯಾ,
ಬಿಬ್ಬನೆ ಬಿರಿದೆನು, ಬಿಬ್ಬನೆ ಬಿರಿದೆನು, ಬಿಬ್ಬನೆ ಬಿರಿದೆ ನೋಡಯ್ಯಾ.
ನಾನೊಬ್ಬನೆ ಉಳಿದೆನು, ನಾನೊಬ್ಬನೆ ಉಳಿದೆನು,
ನಾನೊಬ್ಬನೆ ಉಳಿದೆ ನೋಡಯ್ಯಾ.
ಕೂಡಲಸಂಗಮದೇವಾ, ನಿಮ್ಮ ಶರಣರನಗಲಿದ ಕಾರಣ.
370
ಕಂಡರೆ ಮನೋಹರವಯ್ಯಾ, ಕಾಣದಿದ್ದರೆ ಅವಸ್ಥೆ ನೋಡಯ್ಯಾ.
ಹಗಲಿರುಳಹುದು, ಇರುಳು ಹಗಲಹುದು.
ಎಂತದನು ಆಳವಾಡಿ ಕಳೆವೆನು
ಒಂದು ಜುಗ ಮೇಲೆ ಕೆಡೆದಂತೆ ಇಹುದು.
ಕೂಡಲಸಂಗನ ಶರಣರನಗಲುವ ದಾವತಿುಂದ
ಮರಣವೇ ಲೇಸು ಕಂಡಯ್ಯಾ.
371
ಅಂಗೈ ತಿಂದುದೆನ್ನ, ಕಂಗಳು ಕೆತ್ತಿಹವಯ್ಯಾ,
ಬಂದಹರಯ್ಯಾ ಪುರಾತರೆನ್ನ ಮನೆಗೆ,
ಬಂದಹರಯ್ಯಾ ಶರಣರೆನ್ನ ಮನೆಗೆ.
ಕಂಡ ಕನಸು ದಿಟವಾಗಿ ಜಂಗಮ ಮನೆಗೆ ಬಂದರೆ,
ಶಿವಾರ್ಚನೆಯ ಮಾಡುವೆ,
ಕೂಡಲಸಂಗಮದೇವಯ್ಯಾ, ನಿಮ್ಮ ಮುಂದೆ.
372
ಲಿಂಗವ ಪೂಜಿಸುತ್ತ ಜಂಗಮದ ಮುಖವ ನೋಡುತ್ತಿಪ್ಪ
ಸುಖವ ಕೊಡು, ಕಂಡಾ ಲಿಂಗವೆ,
ಪರಮಸುಖವ ಕೊಡು, ಕಂಡಾ ಲಿಂಗವೆ.
ಕೂಡಲಸಂಗಮದೇವಾ, ಇದೇ ವರವ ನಿಮ್ಮಲ್ಲಿ ಬೇಡುವೆ.
373
ಮನೆದೈವ, ಕುಲದೈವ ಎನಗೆ ನಿಮ್ಮವರಯ್ಯಾ.
ತನು ವಿೂಸಲು, ಮನ ಮೀಸಲು, ನಯನ ವಿೂಸಲು ಎನ್ನ,
ಕೂಡಲಸಂಗಮದೇವಾ, ನಿಮ್ಮ ಶರಣರಿಗೆ.
374
ಗಿಳಿಯ ಹಂಜರವಿಕ್ಕಿ, ಸೊಡರಿಂಗೆಣ್ಣೆಯನೆರೆದು, ಬತ್ತಿಯನಿಕ್ಕಿ
ಬರವ ಹಾರುತ್ತಿದ್ದೆನೆಲೆಗವ್ವಾ.
ತರಗೆಲೆ ಗಿರಿಕೆಂದಡೆ ಹೊರಗನಾಲಿಸುವೆ;
ಅಗಲಿದೆನೆಂದೆನ್ನ ಮನ ಧಿಗಿಲೆಂದಿತ್ತೆಲೆಗವ್ವಾ.
ಕೂಡಲಸಂಗಮದೇವನ ಶರಣರು ಬಂದು, ಬಾಗಿಲ ಮುಂದೆ ನಿಂದು
`ಶಿವಾ' ಎಂದಡೆ, ಸಂತೋಷ ಪಟ್ಟೆನೆಲೆಗವ್ವಾ.
375
  376
ಇಂದೆನ್ನ ಮನೆಗೆ ಪ್ರಮಥರು ಬಂದಾರೆಂದು
ಗುಡಿ ತೋರಣವ ಕಟ್ಟಿ, ಷಡುಸಮ್ಮಾರ್ಜನೆಯ ಮಾಡಿ,
ರಂಗವಾಲಿಯನಿಕ್ಕಿ `ಉಘೇ, ಚಾಂಗು ಭಲಾ' ಎಂದೆಂಬೆ.
ಕೂಡಲಸಂಗನ ಶರಣರು
ತಮ್ಮ ಒಕ್ಕುದನಿಕ್ಕಿ ಸಲಹುವರಾಗಿ.
377
  378
ಮನ ಮನ ಬೆರಸಿದಲ್ಲಿ ತನು ಕರಗದಿದ್ದಡೆ,
ಸೋಂಕಿನಲ್ಲಿ ಪುಳಕಂಗಳು ಹೊರಹೊಮ್ಮದಿದ್ದಡೆ,
ಕಂಡಾಗಳಶ್ರುಜಲಂಗಳು ಸುರಿಯದಿದ್ದಡೆ,
ನುಡಿವಲ್ಲಿ ಗದ್ಗದಂಗಳು ಪೊಣ್ಮದಿದ್ದಡೆ,
ಕೂಡಲಸಂಗಮದೇವರ ಭಕ್ತಿಗಿದು ಚಿಹ್ನ
ಎನ್ನಲ್ಲಿ ಇವಿಲ್ಲಾಗಿ, ಆನು ಡಂಬಕ ಕಾಣಿರೇ.
379
ಅಷ್ಟವಿಧಾರ್ಚನೆ ಷೋಡಶೋಪಚಾರಂಗಳನು,
ಅರಸರಿಯದ ಬಿಟ್ಟಿ ಮಾಡುವೆನು.
ಎನ್ನ ತಾಗಿದ ಸುಖವ ಜಂಗಮಕ್ಕರ್ಪಿಸಲರಿಯದ ಉಪಚಾರಿಯಾನು.
ಸ್ಥಾವರ ಜಂಗಮವನರಿಯದ ಪೂಜಕ ನಾನು.
ಮತ್ತೆ ನಾಚದೇ ಕೂಡಲಸಂಗಮದೇವಯ್ಯಾ,
ಜಂಗಮವೆನ್ನ ಪ್ರಾಣಲಿಂಗವೆಂಬೆನು.
380
ಆವಗೆಯಲೊದಗಿದ ಕರ್ಪಿನಂತೆ,
ಅಮೃತದೊಳಗಿರ್ದ ಸರ್ಪನ ತನುವಿನಂತೆ,
ಇರ್ದೆನಯ್ಯಾ, ಹೊರಗೆ ನುಂಪಾಗಿ.
ಸಿಂಹಕ್ಕೊಲಿದ ಮದಕರಿಯಂತೆ
ಆನು ಜಂಗಮಕ್ಕೊಲಿದೆನಯ್ಯಾ, ಕೂಡಲಸಂಗಮದೇವಾ.
381
ಸ್ಥಾವರ ಜಂಗಮ ಒಂದೆಯೆಂದು ಇದಿರ ನುಡಿದು ನಾನೆಡಹುತಿಪ್ಪೆ.
ಸಹಜನಲ್ಲಯ್ಯಾ,
ಆನು ಸಮ್ಯಕ್ಕನಲ್ಲಯ್ಯಾ.
ಆನುಭಯಲಿಂಗಸಂಗಿಯೆಂಬೆನು,
ಈ ನುಡಿ ಸುಡದಿಹುದೆ, ಕೂಡಲಸಂಗಮದೇವಾ.
382
ಮಸಿಯನೇಸುಕಾಲ ಬೆಳಗಿದರೆ, ಬಿಳಿದಾಗಬಲ್ಲುದೆ
ಕರ್ಮಸ್ಥಿತಿ ಬೆನ್ನ ಬಿಡದು.
ಅನಂತಕೋಟಿ ಸನ್ಮಾನವ ಮಾಡಿದರೇನು
ನಿಮಿಷದ ಉದಾಸೀನ ಕೆಡಿಸಿತ್ತು.
ಕೂಡಲಸಂಗಮದೇವಾ
ನಿಮ್ಮ ನಂಬಿಯೂ ನಂಬದ ಡಂಬಕ ನಾನಯ್ಯಾ.
383
ಎಳ್ಳಿಲ್ಲದ ಗಾಣವನಾಡಿದ ಎತ್ತಿನಂತಾುತ್ತೆನ್ನ ಭಕ್ತಿ.
ಉಪ್ಪ ಅಪ್ಪುವಿನಲ್ಲಿ ಅದ್ದಿ ಮೆಲಿದಂತಾುತ್ತೆನ್ನ ಭಕ್ತಿ.
ಕೂಡಲಸಂಗಮದೇವಾ,
ಆನು ಮಾಡದೆನೆಂಬ ಕಿಚ್ಚು ಸಾಲದೆ.
384
ಅಷ್ಟವಿಧಾರ್ಚನೆ ಷೋಡಶೋಪಚಾರವ
ಮಾಡುವ ಹಮ್ಮಿನಲ್ಲಿ ಬೆಂದೆನಯ್ಯಾ.
ಲಿಂಗವೆಂದರಿಯದೆ, ಜಂಗಮವೆಂದರಿಯದೆ,
ಪ್ರಸಾದವೆಂದರಿಯದೆ ಆನು ಬೆಂದೆನಯ್ಯಾ.
ಕೂಡಲಸಂಗಮದೇವಾ, ಆನು ಮಾಡುವುದೆಲ್ಲವೂ
ಉಪಚಾರವಯ್ಯಾ.
385
  386
ಎನ್ನವರೊಲಿದು ಹೊನ್ನ ಶೂಲದಲ್ಲಿಕ್ಕಿದರೆನ್ನ ಹೊಗಳಿ, ಹೊಗಳಿ,
ಎನ್ನ ಹೊಗಳತೆ ಎನ್ನನಿಮ್ಮೈಗೊಂಡಿತ್ತಲ್ಲಾ-
ಅಯ್ಯೋ, ನೊಂದೆನು, ಸೈರಿಸಲಾರೆನು !
ಅಯ್ಯಾ, ನಿಮ್ಮ ಮನ್ನಣೆಯೆ ಮಸೆದಲಗಾಗಿ ತಾಗಿತ್ತಲ್ಲಾ-
ಅಯ್ಯೋ ನೊಂದೆನು, ಸೈರಿಸಲಾರೆನು.
ಕೂಡಲಸಂಗಮದೇವಾ,
ನೀನೆನಗೆ ಒಳ್ಳಿದನಾದಡೆ
ಎನ್ನ ಹೊಗಳತೆಗಡ್ಡ ಬಾರಾ, ಧರ್ಮೀ !
387
ಎನ್ನವರೆನಗೊಲಿದು ಹೊನ್ನಶೂಲವನಿಕ್ಕಿದರಯ್ಯಾ.
ಅಹಂಕಾರಪೂರಾಯ ಘಾಯದಲ್ಲಿ
ಆನೆಂತು ಬದುಕುವೆನೆಂತು ಜೀವಿಸುವೆ
ಜಂಗಮವಾಗಿ ಬಂದು ಜರೆದು, ಸೂಲವನಿಳುಹಿ,
ಪ್ರಸಾದದ ಮದ್ದನಿಕ್ಕಿ,
ಸಲಹು ಕೂಡಲಸಂಗಮದೇವಾ.
388
ಎಡದ ಕೈಯಲು ಹಾಲ ಬಟ್ಟಲು, ಬಲದ ಕೈಯಲು ಓಜುಗಟ್ಟಿಗೆ,
ಆವಾಗ ಬಂದಾನೆಮ್ಮಯ್ಯ,
ಬಡಿದು ಹಾಲ ಕುಡಿಸುವ ತಂದೆ.
ದಂಡಕ್ಷೀರದ್ವಯಂ ಹಸ್ತೇ ಜಂಗಮೋ ಭಕ್ತಿಮಂದಿರಂ
ಅತಿಭಕ್ತ್ಯಾ ಲಿಂಗತ್ಟುರಪಹಾಸ್ಯಾದ್ಯಮದಂಡನಮ್!
ಎಂದುದಾಗಿ, ಕೂಡಲಸಂಗಮದೇವಯ್ಯ, ತಾನೆ
ಭಕ್ತಿಯ ಪಥವ ತೋರುವ ತಂದೆ.
389
ಎನ್ನ ಆಪತ್ತು, ಸುಖ-ದುಃಖವನಿನ್ನಾರಿಗೆ ಹೇಳುವೆ
ಶರಣಸ್ಥಲದವರಿಗೆ ಹೇಳಿದಡೆ ಮಚ್ಚರ !
ಸವತಿ-ಸಕ್ಕರೆ, ಬೇವು-ಬೆಲ್ಲ ಉಂಟೆ! ಇನ್ನಾರಿಗೆ ಹೇಳುವೆ!
ಕೂಡಲಸಂಗಮದೇವಾ, ಜಂಗಮವಾಗಿ ಬಂದು
ಎನ್ನ ಮನದ ಸೂತಕವ ಕಳೆಯಾ.
390
ನಾನಾಸ್ಥಾನಂಗಳಲ್ಲಿ ಬಂದು ಕುಳ್ಳಿರ್ದುದು ತೆರಳುವುದೆ, ಅಯ್ಯಾ;
ಉಭಯಕುಳಕ್ಕಲ್ಲದೆ ತೆರಳದು.
ಬೀದಿಯಲ್ಲಿ ಬಿದ್ದ ಶಿಶುವನು
ಹೆತ್ತ ತಾು ಹತ್ತಿರೆ ಬಂದು ಎತ್ತುವಂತೆ,
ಎನ್ನನಾರು ಜನ್ಮಕ್ಕೆ ತಂದು ಅಘೋರನರಕದಲ್ಲಿಕ್ಕಿದುದ ನಾನು ಬಲ್ಲೆ.
ಕೂಡಲಸಂಗಮದೇವಾ ನಿಮ್ಮ ಹಂಗೇನು ಹರಿಯೇನು
ಉಭಯ ಲಿಂಗ ಜಂಗಮದ ಮೊರೆಹೊಕ್ಕು ಬದುಕಿದೆನು.
391
ಅಯ್ಯಾ, ನಿಮ್ಮ ದೇವರೆಂದು ನಂಬಿ ಪೂಜಿಸಲಾಗದಯ್ಯಾ :
ಮೀನಜ, ರೋಮಜ ಮಹಾಮುನಿಗಳ
ಲಯವ ಮಾಡುವುದ ನಾ ಬಲ್ಲೆನಾಗಿ.
ಅಯ್ಯಾ ನಿಮ್ಮ ದೇವರೆಂದು ನಂಬಿ ಪೂಜಿಸಲಾಗದಯ್ಯಾ :
ನವಕೋಟಿಬ್ರಹ್ಮರಿಗೆ
ಪ್ರಳಯವ ಮಾಡುವುದ ನಾ ಬಲ್ಲೆನಾಗಿ.
ಅಯ್ಯಾ, ನಿಮ್ಮ ದೇವರೆಂದು ನಂಬಿ ಪೂಜಿಸಲಾಗದಯ್ಯಾ :
ದಶಕೋಟಿ ನಾರಾಯಣರಿಗೆ
ಮರಣವ ಮಾಡುವುದ ನಾ ಬಲ್ಲೆನಾಗಿ.
ಅಯ್ಯಾ, ನಿಮ್ಮ ದೇವರೆಂದು ನಂಬಿ ಪೂಜಿಸಲಾಗದಯ್ಯಾ :
ಅನಂತಕೋಟಿರುದ್ರರಿಗೆ
ಲಯವ ಮಾಡುವುದ ನಾ ಬಲ್ಲೆನಾಗಿ.
ಅಯ್ಯಾ, ನಿಮ್ಮ ದೇವರೆಂದು ನಂಬಿ ಪೂಜಿಸಲಾಗದಯ್ಯಾ :
ಎನ್ನನೇಳೇಳು ಭವಕ್ಕೆ ತಂದಲ್ಲಿ,
ಆನುಭಯಲಿಂಗಜಂಗಮದ ಮೊರೆಹೊಕ್ಕು
ಭವಂ ನಾಸ್ತಿಯಾಗಿ ಬದುಕಿದೆನಯ್ಯಾ,
ಕೂಡಲಸಂಗಮದೇವಾ.
392
ಲಿಂಗದರ್ಶನ ಕರಮುಟ್ಟಿ, ಜಂಗಮದರ್ಶನ ಶಿರಮುಟ್ಟಿ,
ಆವುದ ಘನವೆಂಬೆ, ಆವುದ ಕಿರಿದೆಂಬೆ
ತಾಳಸಂಪುಟಕ್ಕೆ ಬಾರದ ಘನವ ಅರ್ಪಿಸ ಹೋದಡೆ.
393
ಶಿವಭಕ್ತರೆ ಅದ್ಥಿಕರು ನೋಡಯ್ಯಾ.
ಇದಕ್ಕೆ ಅದ್ಥಿಕವಾಗಿ ಜಂಗಮವ ಕಂಡೆ.
ಈ ದ್ವಿವಿಧವನೊಂದೆ ಎಂದು ನಂಬಿದೆ,
ಕೂಡಲಸಂಗಮದೇವಾ.
394
ಕೃತಯುಗದಲ್ಲಿ ಕೇತಾರವೆಂಬ ಮೂಲಸ್ಥಾನ,
ತ್ರೇತಾಯುಗದಲ್ಲಿ ವಾರಣಾಸಿಯೆಂಬ ಮೂಲಸ್ಥಾನ,
ದ್ವಾಪರದಲ್ಲಿ ವಿರೂಪಾಕ್ಷನೆಂಬ ಮೂಲಸ್ಥಾನ,
ಕಲಿಯುಗದಲ್ಲಿ ಪರ್ವತವೆಂಬ ಮೂಲಸ್ಥಾನ-
ಈ ನಾಲ್ಕು ಮೂಲಸ್ಥಾನ.
ನಾನಾ ಸ್ಥಾನವ ಮುಟ್ಟದೆ ಜಂಗಮವೆ ಲಿಂಗವೆಂದು ನಂಬಿದೆ,
ಕೂಡಲಸಂಗಮದೇವಾ.
395
ಭಕ್ತದೇಹಿಕನಪ್ಪ ದೇವನು ಸದ್ಭಕ್ತರ ಬಳಿಯಲ್ಲಿ ಬಪ್ಪನಾಗಿ,
ಆಳ್ದನು ಬರಲಾಳು ಮಂಚದ ಮೇಲಿಪ್ಪುದು ಗುಣವೇ ಹೇಳಾ.
ಕೂಡಲಸಂಗಮದೇವಾ,
ಜಂಗಮರೂಪಾಗಿ ಸಂಗಯ್ಯ ಬಂದಾನೆಂದು
ಎಂದೆಂದೂ ನಾನು ಮಂಚವನೇರದ ಭಾಷೆ.
396
ಜಂಗಮದ ಸನ್ನಿಧಿಯಲ್ಲಿ ವಾಹನವನೇರಲಮ್ಮೆ :
ಏರಿದರೆ ಭವ ಹಿಂಗದು.
ಏನು ಕಾರಣ ಮುಂದೆ ಸೂಲವನೇರುವ ಪ್ರಾಪ್ತಿಯುಂಟಾದ ಕಾರಣ,
ಜಂಗಮ ಬರಲಾಸನದಲ್ಲಿ ಇರಲಮ್ಮೆ :
ಇದ್ದರೆ ಭವ ಹಿಂಗದು.
ಏನು ಕಾರಣ ಮುಂದೆ ಕಾಯ್ದ ಇಟ್ಟಿಗೆಯ ಮೇಲೆ
ಕುಳ್ಳಿರುವ ಪ್ರಾಪ್ತಿಯುಂಟಾದ ಕಾರಣ.
ಜಂಗಮದ ಮುಂದೆ ದಿಟ್ಟತನದಲ್ಲಿ ಬೆರೆತು ನಿಂದಿರಲಮ್ಮೆನು
ನಿಂದಡೆ ಭವ ಹಿಂಗದಾಗಿ.
ಏನು ಕಾರಣ:ಮುಂದೆ ಹೆಡಗುಡಿಯ ಕಟ್ಟಿ
ಕುಳ್ಳಿರಿಸುವ ಪ್ರಾಪ್ತಿಯುಂಟಾದ ಕಾರಣ.
ಇಂತೀ ಬಾಧೆ ಭವಂಗಳಿಗಂಜುವೆನಯ್ಯಾ.
ನಿಮ್ಮವರ ಸುಳುಹು ನೀವೆಂದೇ ಭಾವಿಸಿ,
ತೊತ್ತು-ಭೃತ್ಯನಾಗಿಪ್ಪೆನಯ್ಯಾ, ಕೂಡಲಸಂಗಮದೇವಾ.
397
ಜಂಗಮವಿರಹಿತ ಲಿಂಗಾರ್ಚನೆ :ಓಡ ಬಿಲಲೆರೆದ ಜಲದಂತೆ.
ಜಂಗಮಸನ್ನಿಹಿತ ಲಿಂಗಾರ್ಚನೆ :ಇದೆ ಭಕ್ತಿಗೆ ಪಥವಯ್ಯಾ
ಜಂಗಮಪ್ರಸಾದಭೋಗೋಪಭೋಗವು :ಎನಗಿದೇ ಲಿಂಗಾರ್ಚನೆ.
ಬೇರೆ ಮತ್ತೊಂದನರಿದೆನಾದಡೆ,
ಕೂಡಲಸಂಗಮದೇವ ನರಕದಲ್ಲಿಕ್ಕುವ.
398
ಭಿತ್ತಿುಲ್ಲದೆ ಬರೆಯಬಹುದೆ ಚಿತ್ತಾರವ
ಬಿತ್ತಿ ಬೆಳೆಯಬಹುದೆ ಧರೆುಲ್ಲದೆ
ಜಂಗಮವಿಲ್ಲದೆ ಲಿಂಗಾರ್ಚನೆಯ ಮಾಡಬಹುದೆ
ರೂಡ್ಥೀಶ್ವರನ ಭೇದಿಸಬಹುದೆ ! ಒಡಲಿಲ್ಲ[ದೆ].
ನಿರಾಳಕರ್ತೃ ಕೂಡಲಸಂಗಮದೇವ
ಜಂಗಮಮುಖವಾದನಾಗಿ ಮತ್ತೊಂದನರಿಯೆನಯ್ಯಾ.
399
ಸಮಯೋಚಿತದಲ್ಲಿ ಲಿಂಗಾರ್ಚನೆಯ ಮಾಡುತಿಪ್ಪನಾ ಭಕ್ತನು.
ಮಾಡಿದಡೆ ಮಾಡಲಿ, ಮಾಡಿದಡೆ ತಪ್ಪೇನು
ಆ ಜಂಗಮದ ಶಬ್ದವ ಕೇಳಿ ಪ್ರಸಾದಕ್ಕೆ ಕೈದುಡುಕಿದಡೆ
ಅದು ಪ್ರಸಾದವಲ್ಲ, ಕಿಲ್ಬಿಷ.
ಆ ಸಮಯೋಚಿತದಲ್ಲಿ ಬಂದ ಜಂಗಮದ ಶಬ್ದವ ಕೇಳಿ
ಪ್ರಸಾದಕ್ಕೆ ಕೈದೆಗೆದಡೆ, ಅದು ಲಿಂಗಕ್ಕೆ ಬೋನ.
ಇದು ಕಾರಣ, ಕೂಡಲಸಂಗಮದೇವಾ,
ಇಂತಪ್ಪ ಸದಾಚಾರಿಗಳನೆನಗೆ ತೋರಾ.
400
ಉತ್ತಮ ಮಧ್ಯಮ ಕನಿಷ್ಟವೆಂದು, ಬಂದ ಜಂಗಮವನೆಂದೆನಾದಡೆ
ನೊಂದೆನಯ್ಯಾ, ಬೆಂದೆಯಯ್ಯಾ, ಎನ್ನ ಕಿಚ್ಚು ಎನ್ನ ಸುಟ್ಟಿತ್ತು.
ಸುಖಿಜಂಗಮ, ಸಾಮಾನ್ಯಜಂಗಮ ಉಂಟೆ,
ಕೂಡಲಸಂಗಮದೇವಾ.
401
ಲಾಂಛನವ ಕಂಡು ನಂಬುವೆ, ಅವರಂತರಂಗವ ನೀನೇ ಬಲ್ಲೆ.
ತೊತ್ತಿಂಗೆ ತೊತ್ತುಗೆಲಸವಲ್ಲದೆ, ಅರಸರ ಸುದ್ದಿ ಎಮಗೇಕಯ್ಯಾ
ರತ್ನಂವಕ್ತಿಕದಚ್ಚು,
ಕೂಡಲಸಂಗಮದೇವಾ ನಿಮ್ಮ ಶರಣರು.
402
ಆರಾರ ಮನದಲ್ಲಿ ಏನೇನಿಹುದೆಂದರಿಯೆ.
ಒಳ್ಳಿಹರೆಂದೆನಲಮ್ಮೆ, ಹೊಲ್ಲಹರೆಂದೆನಲಮ್ಮೆ, ಶಿವಭಕ್ತರಾದ ಕಾರಣ.
ಜಂಗಮವೆ ಲಿಂಗ ಕೂಡಲಸಂಗಮದೇವಾ.
403
ಸಂಗಸಹಿತ ಶರಣರು ಬಂದರೆ
ನಂಬುವುದೆನ್ನ ಮನವು, ನಚ್ಚುವುದೆನ್ನ ಮನವು.
ಹಾವು ನೇಣೆಂಬ ಭ್ರಾಂತುಳ್ಳನ್ನಕ್ಕ ನಾನು ಭಕ್ತನೆಂತಪ್ಪೆನು
ಅಂಗಲಿಂಗ ಸನ್ನಿಹಿತವಾಗಿ ಬಂದಡೆ, ಸಂಗ ನೀನೆಂದು,
ಮತ್ತೆ ಮನದಲ್ಲಿ ಸಂದೇಹ ಹೊಳೆದಡೆ
ಬೆಂದೆನಲ್ಲಾ ನಾನು, ಕೂಡಲಸಂಗಮದೇವಾ.
404
ಕೆಂಡದಲ್ಲಿಟ್ಟಡೆ ಮೆರ್ಐ ಬೆಂದುದೆಂಬರು.
ಕೊಂಡಿಟ್ಟವನ ಕೈ ಮುನ್ನವೆ ಬೆಂದೂದು.
ನೊಂದೆ, ನಾನು ನೊಂದೆನಯ್ಯಾ. ಬೆಂದೆ, ನಾನು ಬೆಂದೆನಯ್ಯಾ.
ಕೂಡಲಸಂಗನ ಶರಣರ ಕಂಡು ಕಾಣದಂತಿದ್ದಡೆ
ಅಂದೇ ಬೆಂದೆನಯ್ಯಾ.
405
ಎಡದ ಕೈಯಲು ನಿಗಳವನಿಕ್ಕಿ
ಬಲದ ಕೈಯ ಕಡಿದುಕೊಂಡಡೆ ನೋಯದಿಪ್ಪುದೆ
ಪ್ರಾಣವೊಂದಾಗಿ ದೇಹ ಬೇರಿಲ್ಲ.
ಲಿಂಗವ ಪೂಜಿಸಿ ಜಂಗಮವನುದಾಸೀನವ ಮಾಡಿದಡೆ
ಬೆಂದೆನಯ್ಯಾ ನಾನು, ಕೂಡಲಸಂಗಮದೇವಾ.
406
ತನುವ ನೋುಸಿ, ಮನವ ಬಳಲಿಸಿ,
ನಿಮ್ಮ ಪಾದವಿಡಿದವರೊಳರೆ ಈ ನುಡಿ ಸುಡದಿಹುದೆ
ಕೂಡಲಸಂಗಮದೇವಾ,
ಶಿವಭಕ್ತರ ನೋವೇ ಅದು ಲಿಂಗದ ನೋವು.
407
ಆತ್ಮಸ್ತುತಿ ಪರನಿಂದೆಯ ಕೇಳಿಸದಿರಯ್ಯಾ, ನಿಮ್ಮ ಧರ್ಮ
ಆನು ಭಕ್ತನೆನ್ನಲ್ಲಿ ಲೇಸುಂಟೆಂದು ಪರಿಣಾಮಿಸಿದಡೆ
ನಿಮಗಾನು ದ್ರೋಹಿಯಯ್ಯಾ.
ಕೂಡಲಸಂಗಮದೇವಾ,
ನಿಮ್ಮ ಶರಣರ ಲೇಸೇ ಎನ್ನ ಲೇಸಯ್ಯಾ.
408
ನಡೆಯಲರಿಯದೆ, ನುಡಿಯಲರಿಯದೆ
ಲಿಂಗವ ಪೂಜಿಸಿ ಫಲವೇನು ! ಫಲವೇನು !
ಅವರ ದುಃಖವೆನ್ನ ದುಃಖ, ಅವರ ಸುಖವೆನ್ನ ಸುಖ.
ಕೂಡಲಸಂಗನ ಶರಣರ ಮನನೊಂದಡೆ
ಆನು ಬೆಂದೆನಯ್ಯಾ.
409
ಬಂಜೆ ಬೇನೆಯನರಿಯದಂತೆ
ಒಬ್ಬರೊಂದ ನುಡಿವಿರಿ, ಕೇಳಿರಯ್ಯಾ.
ಎನಗೆ ಆಯುಷ್ಯ ಭವಿಷ್ಯ, ಎನ್ನ ಭಕ್ತರು.
ಎನಗೆ ಆಯುಷ್ಯ ಭವಿಷ್ಯ, ಎನ್ನ ಪ್ರಮಥರು ಕಂಡಯ್ಯಾ.
ಕೂಡಲಸಂಗನ ಶರಣರು ಮುಖಲಿಂಗಿಗಳಯ್ಯಾ.
410
ಬೇರೂರಲಿದ್ದು ಬಂದ ಜಂಗಮವೆ ಲಿಂಗವೆಂದು,
ಮನೆಯಲಿದ್ದ ಜಂಗಮವನುದಾಸೀನವ ಮಾಡಿದಡೆ
ನಾನು ಬೆಂದೆನಯ್ಯಾ.
ಆನು ಬೆಂದ ಬೇಗೆಯನರಿಯೆ, ಕಾಣಾ
ಕೂಡಲಸಂಗಮದೇವಾ.
411
ಉಟ್ಟು-ತೊಟ್ಟು ಪೂಜ್ಯವಾಗಿ ಬಂದ ಜಂಗಮ ವಿಶೇಷವೆಂದು,
ಕಂತೆ-ಬೊಂತೆಯ ಜಂಗಮ ಬಂದಡೆ ಹೀನವೆಂದು
ಕಂಡೆನಾದಡೆ ಪಂಚಮಹಾಪಾತಕ.
ಇದು ಕಾರಣ, ಅನ್ನ-ವಸ್ತ್ರ-ಧನ ಮಾಟದಲ್ಲಿ
ಎರಡಾಗಿ ಕಂಡೆನಾದಡೆ ನರಕದಲ್ಲಿಕ್ಕುವ,
ಕೂಡಲಸಂಗಮದೇವ.
412
ಅಡ್ಡದೊಡ್ಡ ನಾನಲ್ಲಯ್ಯಾ, ದೊಡ್ಡ ಬಸುರನಲ್ಲಯ್ಯಾ,
ದೊಡ್ಡವರನಲ್ಲದೆ ನಿಮ್ಮ ಶರಣರು ಮನ್ನಿಸರಯ್ಯಾ.
ಹಡೆದುಂಬ ಸೂಳೆಯಂತೆ ಧನವುಳ್ಳವರನರಸಿ ಅರಸಿ
ಬೋದ್ಥಿಸಲು, ಪ್ರಾರ್ಥಿಸಲು ಮುನ್ನ ನಾನರಿಯೆನಯ್ಯಾ,
ದೊಡ್ಡತನವೆನಗಿಲ್ಲಯ್ಯಾ, ಅಂಜುವೆನಂಜುವೆ ನಿಮ್ಮ ಪ್ರಮಥರಿಗೆ.
ಅನಾಥ ನಾನಯ್ಯಾ, ಕೂಡಲಸಂಗಮದೇವಾ.
413
ಕುದುರೆ- ಸತ್ತಿಗೆಯವರ ಕಂಡಡೆ ಹೊರಳಿಬಿದ್ದು ಕಾಲಹಿಡಿವರು,
ಬಡಭಕ್ತರು ಬಂದಡೆ `ಎಡೆುಲ್ಲ, ಅತ್ತ ಸನ್ನಿ' ಎಂಬರು.
ಎನ್ನೊಡೆಯ ಕೂಡಲಸಂಗಯ್ಯನವರ
ತಡಗೆಡಹಿ ಮೂಗ ಕೊಯ್ಯದೆ ಮಾಬನೆ.
414
ದೂರದಿಂದ ಬಂದ ಜಂಗಮವನಯ್ಯಗಳೆಂದು,
ಸಾರಿದ್ದ ಜಂಗಮವ ಪರಿಚಾರಕರೆಂಬ ಕೇಡಿಂಗೆ ಬೆರಗಾದೆನಯ್ಯಾ.
ಸಾರಿದ್ದವರು, ದೂರದವರೆಂದು ಬೇರೆ ಮಾಡಿ ಕಂಡಡೆ,
ಕೂಡಲಸಂಗಮದೇವ ಸಿಂಗಾರದ ಮೂಗ ಕೊಯ್ಯದೆ ಮಾಬನೆ.
415
ಹಿಡಿವೆಡೆಯನೆ ಕಾಸಿ ಹಿಡಿವ,
ಕೈಬೆಂದು ಮಿಡುಮಿಡನೆ ಮಿಡುಕುವ,
ಮರುಳ ಮಾನವನೇ
ಬಡವರೆಂದೆನಬೇಡ ಲಾಂಛನಧಾರಿಯನು,
ಕಡುಸ್ನೇಹದಿಂದವರ ಪೂಜೆಮಾಡುವುದು.
ನಿಜವಡಗಿದ ರೂಪು, ನಿರ್ವಯಲಸ್ಥಾನ,
ನಡೆಲಿಂಗ ಜಂಗಮ ±ಕೂಡಲಸಂಗಮದೇವ.
416
ಹಾಲ ಕಂದಲು, ತುಪ್ಪದ ಮಡಕೆಯ
ಬೋಡು ಮುಕ್ಕೆನಬೇಡ.
ಹಾಲು ಸಿಹಿ, ತುಪ್ಪ ಕಮ್ಮನೆ :ಲಿಂಗಕ್ಕೆ ಬೋನ.
ಕೂಡಲಸಂಗನ ಶರಣರ
ಅಂಗಹೀನರೆಂದಡೆ ನಾಯಕನರಕ.
417
ಆಚಾರವರಿುರಿ, ವಿಚಾರವರಿುರಿ
ಜಂಗಮಸ್ಥಲ ಲಿಂಗ ಕಾಣಿರಯ್ಯಾ.
ಜಾತಿಭೇದವಿಲ್ಲ, ಸೂತಕವಿಲ್ಲ, ಅಜಾತಂಗೆ ಕುಲವಿಲ್ಲ.
ನುಡಿದಂತೆ ನಡೆಯದಿದ್ದಡೆ
ಕೂಡಲಸಂಗಯ್ಯ ಮೆಚ್ಚ ಕಾಣಿರಯ್ಯಾ.
418
ಸ್ಥಾವರಭಕ್ತಂಗೆ ಸೀಮೆಯಲ್ಲದೆ
ಘನಲಿಂಗಜಂಗಮಕ್ಕೆ ಸೀಮೆಯೆಲ್ಲಿಯದು
ಅಂಬುಧಿಗೆ ಸೀಮೆಯಲ್ಲದೆ
ಹರಿವ ನದಿಗೆ ಸೀಮೆಯೆಲ್ಲಿಯದು
ಭಕ್ತಂಗೆ ಸೀಮೆಯಲ್ಲದೆ
ಜಂಗಮಕ್ಕೆ ಸೀಮೆಯುಂಟೆ
ಕೂಡಲಸಂಗಮದೇವಾ.
419
ಎತ್ತಿಕೊಳ್ಳಲೇಕೆ, ಮತ್ತಿಳುಹಲೇಕಯ್ಯಾ
ಧರಧುರ ಭಕ್ತಿಯ ಮಾಡಲೇಕಯ್ಯಾ
ನಿಂದಿಸಲೇಕೆ ಸ್ತುತಿುಸಲೇಕೆ
ಹೋಗಬಿಟ್ಟು ಜಂಗಮವ ಹಿಂದೆಯಾಡುವನ ಬಾಯಲ್ಲಿ
ಮೆಟ್ಟಿ ಹುಡಿಹೊಯ್ಯದೆ ಮಾಬನೆ
ಕೂಡಲಸಂಗಮದೇವ.
420
ಮರಕ್ಕೆ ಬೇರು ಬಾುಯೆಂದು ತಳುಂಕೆ ನೀರನೆರೆದಡೆ
ಮೇಲೆ ಪಲ್ಲವಿಸಿತ್ತು ನೋಡಾ.
ಲಿಂಗದ ಬಾು ಜಂಗಮವೆಂದು ಪಡಿಪದಾರ್ಥವ ನೀಡಿದಡೆ
ಮುಂದೆ ಸಕಳಾರ್ಥವನೀವನು.
ಆ ಜಂಗಮವ ಹರನೆಂದು ಕಂಡು, ನರನೆಂದು ಭಾವಿಸಿದಡೆ
ನರಕ ತಪ್ಪದು, ಕಾಣಾ ಕೂಡಲಸಂಗಮದೇವಾ.
421
ಆರಾಧನೆಯ ಮಾಡಿದಡೆ ಅಮೃತದ ಬೆಳಸು,
ವಿರೋದ್ಥಿಸಿದಡೆ ವಿಷದ ಬೆಳಸು,
ಇದು ಕಾರಣ ಜಂಗಮಕ್ಕೆ ಅಂಜಲೇಬೇಕು.
ಸ್ಥಾವರ ಜಂಗಮ ಒಂದೆಂದರಿದಡೆ
ಕೂಡಲಸಂಗಮದೇವ ಶರಣಸನ್ನಿಹಿತ.
422
ಹೊಸತಿಲ ಪೂಜಿಸಿ ಹೊಡವಂಟು ಹೋದ
ಒಕ್ಕಲಿತಿಯಂತಾುತ್ತೆನ್ನ ಭಕ್ತಿ.
ಜಂಗಮವೆನ್ನೊಡೆಯರೆಂದು ಒಕ್ಕುದ ಕೊಂಡು
ಉದಾಸೀನವ ಮಾಡಿದಡೆ,
ಇಹಲೋಕಕ್ಕೆ ದೂರ, ಪರಲೋಕಕ್ಕೆ ದೂರ !
ಕೂಡಲಸಂಗಮದೇವ ಅಘೋರನರಕದಲ್ಲಿಕ್ಕುವ.
423
ಲಿಂಗವ ಪೂಜಿಯ ಮಾಡಿ, ಜಂಗಮವ ಕಂಡು ಉದಾಸೀನವ ಮಾಡಿದಡೆ,
ಆ ಲಿಂಗಪೂಜಕರಿಗೆ ಮಾಡಿದ, ಶಿವದೂತರ ದಂಡವೆಂಬುದ.
ಲೋಕದ ಕರ್ಮಿಗಳಿಗೆ ಮಾಡಿದ, ಯಮದೂತರ ದಂಡವೆಂಬುದ.
ಇದು ಕಾರಣ ಲಿಂಗ ಜಂಗಮವನೊಂದೆಂದರಿಯದವರ ಎನಗೆ
ತೋರದಿರಯ್ಯಾ, ಕೂಡಲಸಂಗಮದೇವಾ.
424
ಜಂಗಮನಿಂದೆಯ ಮಾಡಿ, ಲಿಂಗವ ಪೂಜಿಸುವ ಭಕ್ತನ ಆಂಗವಣಿಯೆಂತೊರಿ
ಶಿವಾ ಶಿವಾ ನಿಂದಿಸುವ ಪೂಜಿಸುವ ಪಾತಕವಿದ ಕೇಳಲಾಗದು.
ಗುರುವಿನ ಗುರು ಜಂಗಮ-
ಇಂತೆಂದುದು ಕೂಡಲಸಂಗನ ವಚನ.
425
ಅರಸನ ಕಂಡು ತನ್ನ ಪುರುಷನ ಮರೆದಡೆ
ಮರನನೇರಿ ಕಯ್ಯ ಬಿಟ್ಟಂತಾುತ್ತಯ್ಯಾ.
ಇಹಲೋಕಕ್ಕೆ ದೂರ, ಪರಲೋಕಕ್ಕೆ ದೂರ !
ನಮ್ಮ ಕೂಡಲಸಂಗಮದೇವಯ್ಯ
ಜಂಗಮಮುಖ ಲಿಂಗವಾದ ಕಾರಣ.
426
ಜಂಗಮವಿಲ್ಲದ ಮಾಟ ಕಂಗಳಿಲ್ಲದ ನೋಟ,
ಹಿಂಗಿತ್ತು ಶಿವಲೋಕ ಇನ್ನೆಲ್ಲಿಯದಯ್ಯಾ.
ಲಿಂಗಕ್ಕೆ ಮಾಡಿದ ಬೋನವ ಸಿಂಬಕ ತಿಂಬಂತೆ,
ಸಮಯೋಚಿತವನರಿಯದೆ ಉದರವ ಹೊರೆವವರ
ನರಕದಲ್ಲಿಕ್ಕದೆ ಮಾಬನೆ ಕೂಡಲಸಂಗಮದೇವ.
427
ಲಿಂಗದಲ್ಲಿ ದಿಟವನರಸುವಡೆ ಜಂಗಮವ ನೆರೆ ನಂಬುವುದು.
ನಡೆಲಿಂಗ, ನುಡಿಲಿಂಗ, ಮುಖಲಿಂಗವೆಂದೆ ನಂಬೋ !
`ಯತ್ರ ಮಾಹೇಶ್ವರಸ್ತತ್ರಸನ್ನಿಹಿತನಾಗಿ
ಅಧರ ತಾಗಿದ ರುಚಿಯನುದರ ತಾಗಿದ ಸುಖವ
ಉಂಬ ಉಡುವ ಕೂಡಲಸಂಗಮದೇವ, ಜಂಗಮಮುಖದಲ್ಲಿ.
428
ಜಂಗಮದ ಮನ-ಭಾವದಲ್ಲಿ ಭಕ್ತನೆ ಭೃತ್ಯನೆಂದು,
ಭಕ್ತನ ಮನ-ಭಾವದಲ್ಲಿ ಜಂಗಮವೆ ಕರ್ತನೆಂದು ಇದ್ದ ಬಳಿಕ,
ಬಂದಿತ್ತು-ಬಾರದು, ಇದ್ದತ್ತು-ಹೋುತ್ತೆಂಬ ಸಂದೇಹವಿಲ್ಲದಿರಬೇಕು.
ಹೋುತ್ತೆಂಬ ಗುಣವುಳ್ಳನ್ನಕ್ಕ
ನಿಮಗೆ ದೂರ, ನಿಮ್ಮವರಿಗೆ ಮುನ್ನವೆ ದೂರ,
ಶಿವಾಚಾರಕ್ಕಲ್ಲಿಂದತ್ತ ದೂರ.
ಜಂಗಮದ ಹರಿದ ಹರಿವು, ಜಂಗಮದ ನಿಂದ ನಿಲವು,
ಜಂಗಮದ ಗಳಗರ್ಜನೆ, ಜಂಗಮದ ಕೋಳಾಟಕ್ಕೆ ಸೈರಿಸದಿದ್ದಡೆ
ನೀನಂದ ಮೂಗ ಕೊಯ್ ಕೂಡಲಸಂಗಮದೇವಾ.
429
ನಯನದಾಹಾರವ ಜಂಗಮವ ನೋಡಿಸುವೆನು,
ಶ್ರೋತ್ರದಾಹಾರವ ಜಂಗಮವ ಕೇಳಿಸುವೆನು,
ಘ್ರಾಣದಾಹಾರವ ಜಂಗಮವ ವಾಸಿಸುವೆನು,
ಜಿಹ್ವೆಯಾಹಾರವ ಜಂಗಮವನೂಡಿಸುವೆನು,
ಕವಚದಾಹಾರವ ಜಂಗಮಕ್ಕೆ ಹೊದ್ದಿಸುವೆನು,
ಅಧಿಕ ಪ್ರೇಮ ಪರಿಣಾ[ಮ]ವ ಮಾಡುವೆನು,
ಸಕಲಪದಾರ್ಥಂಗಳ ನೀಡುವೆನು,
ಕೂಡಲಸಂಗಾ ನಿಮ್ಮ ಶರಣರಿಗೆ.
430
ಎಂಬತ್ತುನಾಲ್ಕುಲಕ್ಷ ಮುಖದೊಳಗೊಂದೆ ಮುಖವಾಗಿ
ಕಾಡಿ ನೋಡೆನ್ನನು, ಬೇಡಿ ನೋಡೆನ್ನನು,
ಬೇಡದಿದ್ದಡೆ, ಅಯ್ಯಾ, ನಿಮಗೆ ಪ್ರಮಥರಾಣೆ.
ನೀನಾವ ಮುಖದಲ್ಲಿ ಬಂದು ಬೇಡಿದೊಡೀವೆನು.
ಕೂಡಲಸಂಗಮದೇವಾ.
431
ಕಂದಿದೆನಯ್ಯಾ ಎನ್ನ ನೋಡುವರಿಲ್ಲದೆ,
ಕುಂದಿದೆನಯ್ಯಾ ಎನ್ನ ನುಡಿಸುವರಿಲ್ಲದೆ,
ಬಡವಾದೆನಯ್ಯಾ ಎನ್ನ ತನು ಮನ ಧನವ ಬೇಡುವರಿಲ್ಲದೆ.
ಕಾಡುವ ಬೇಡುವ ಶರಣರ ತಂದು
ಕಾಡಿಸು ಬೇಡಿಸು ಕೂಡಲಸಂಗಮದೇವಾ.
432
ವೇಷ ಅವಿಚಾರದಲ್ಲಿ ನಡೆುತ್ತೆಂದು
ಆಸುರದಲ್ಲಿ ಬಗುಳುವ ಕುನ್ನಿ, ನೀ ಕೇಳಾ :
ಹರಿಯನೆ ದಾಸನ ವಸ್ತ್ರವ:ಉಣ್ಣನೆ ಚೆನ್ನಯ್ಯನ ಸಂಗಾತ
ಪರವಧುವ ಕೊಳ್ಳನೆ ಸಿಂಧುಬಲ್ಲಾಳನ:ಬೇಡನೆ ಸಿರಿಯಾಳನ ಮಗನ
ನಡೆವುದು ನುಡಿವುದು ಅವಿಚಾರವೆಂದು,
ಭಾವ ವಿಭಾವವೆಂದು ಕಂಡೆನಾದಡೆ ತಪ್ಪೆನ್ನದು, ಮೂಗ ಕೊ್ಯು,
ಕೂಡಲಸಂಗಮದೇವಾ.
433
ನೀನಿಕ್ಕಿದ ಬೀಯದಲ್ಲಿ ವಂಚನೆಯುಳ್ಳಡೆ
ಸಂಗಾ, ನಿಮ್ಮ ತೊತ್ತುತನಕ್ಕೆ ದೂರವಯ್ಯಾ.
ಕದ್ದು ತಿಂದಡೆ ಕೈಹಿಡಿದೊಮ್ಮೆ ಬಡಿದು
ತುಡುಗುಣಿತನವ ಬಿಡಿಸಯ್ಯಾ.
ಜಂಗಮ ಮನೆಗೆ ಬಂದಲ್ಲಿ ಓಸರಿಸಿದಡೆ
ಹಿಡಿದು ಮೂಗ ಕೊಯ್ಯಯ್ಯಾ
ಕೂಡಲಸಂಗಮದೇವಾ.
434
ದೇವನಿಂತಹನೆಂದು ತೋರಿಯೆ ಕೊಡುವೆನು ಗಣಂಗಳಿಗೆ;
ಬಲ್ಲಾಳನ ವಧುವ ಬೇಡಿದಾತನೀ ದೇವ.
ದೇವನಿಂತಹನೆಂದು ತೋರಿಯೆ ಕೊಡುವೆನು ಗಣಂಗಳಿಗೆ;
ದಾಸನ ವಸ್ತ್ರವ ಬೇಡಿದಾತನೀ ದೇವ.
ದೇವನಿಂತಹನೆಂದು ತೋರಿಯೆ ಕೊಡುವೆನು ಗಣಂಗಳಿಗೆ;
ಸಿರಿಯಾಳನ ಮಗನ ಬೇಡಿದಾತನೀ ದೇವ.
ಕೂಡಲಸಂಗಮದೇವ ಜಂಗಮಮುಖಲಿಂಗವಾಗಿ
ಕಾಡಿ ನೋಡುವ, ಬೇಡಿ ನೋಡುವ.
435
ಹೊನ್ನಿನೊಳಗೊಂದೊರೆಯ, ಸೀರೆಯೊಳಗೊಂದೆಳೆಯ
ಇಂದಿಂಗೆ ನಾಳಿಂಗೆ ಬೇಕೆಂದೆನಾದಡೆ
ನಿಮ್ಮಾಣೆ, ನಿಮ್ಮ ಪ್ರಮಥರಾಣಿ.
ನಿಮ್ಮ ಶರಣರಿಗಲ್ಲದೆಮತೊಂದನರಿಯೆ
ಕೂಡಲಸಂಗಮದೇವಾ.
436
ಆಲುತ್ತಲು ಹರೆಯ ಹೊುಸಿ, ಅಂಕವ ಮಾಡಿದೆನೆಲ್ಲರ ಕಂಡು.
ಆನು ಬೇಡೆಂದಡೆ ಮಾಣೆ, ಕಲಿತನ ಮಾಡಿದೆನೆಲ್ಲರ ಕಂಡು.
ಅಲ್ಲಿ ಹೋುತ್ತು ಗಳೆಯೆಂದಡೆ
ಆಸೆ ಮಾಡೆನು, ಕೂಡಲಸಂಗಮದೇವಾ.
437
ಕಾಗೆ ಒಂದಗುಳ ಕಂಡಡೆ ಕರೆಯದೆ ತನ್ನ ಬಳಗವನು
ಕೋಳಿ ಒಂದು ಕುಟುಕ ಕಂಡಡೆ ಕೂಗಿ ಕರೆಯದೆ ತನ್ನ ಕುಲವನೆಲ್ಲವ
ಶಿವಭಕ್ತನಾಗಿ ಭಕ್ತಿಪಕ್ಷವಿಲ್ಲದಿದ್ದಡೆ ಕಾಗೆ ಕೋಳಿುಂದ ಕರಕಷ್ಟ
ಕೂಡಲಸಂಗಮದೇವಾ.
438
ಆವನೇವನಾದಡೇನು ಹೇಮವಿಲ್ಲದಂಗೈಸಬಹುದೆ
ಕೊಡಲಿಲ್ಲೆಂಬುದರಿಂದ ಸಾಯಲುಬಹುದು, ಸೈರಿಸಬಾರದು.
ಬೇಡುವವರ ನೋಡಿ ನೋಡಿ, ಈಯಲಿಲ್ಲದ ಜೀವನವದೇಕೆ
ಕೂಡಲಸಂಗಮದೇವಾ.
439
ಹರಗಣಪಙ್ತಯ ನಡುವೆ ಕುಳ್ಳಿರ್ದು
ನಾನು ಒಡೆತನದ ನಾುತೇಜವ ಹೊತ್ತುಕೊಂಡು,
ಮಡದಿಯೆನ್ನಗಲೊಳಗೆ ಸಕಲದೇವಾನ್ನವ
ಒಡೆಯರಿಂದವೂ ಮಿಗಿಲಾಗಿ ಇಕ್ಕಲು, ತೆಗೆದಿರಿಸಿದೆನು.
ಈ ಪರಿಯ ಆಯ ಕಣ್ಗೆ ತೋರಲು ಕಿಲ್ಬಿಷವಾದವು.
ಕರುಣಿ ಚನ್ನಬಸವಣ್ಣಾ, ಮರೆದು ಕೊಂಡೆನಾದಡೆ,
ಒಡೆಯ ಕೂಡಲಸಂಗಯ್ಯ ಕೆಡಹಿ ನರಕದಲ್ಲಿಕ್ಕುವ.
440
ಭಕ್ತಿ ಸುಭಾಷೆಯ ನುಡಿಯ ನುಡಿವೆ, ನುಡಿದಂತೆ ನಡೆವೆ,
ನಡೆಯೊಳಗೆ ನುಡಿಯ ಪೂರೈಸುವೆ.
ಮೇಲೆ ತೂಗುವ ತ್ರಾಸು ಕಟ್ಟಳೆ ನಿಮ್ಮ ಕೈಯಲ್ಲಿ.
ಒಂದು ಜವೆ ಕೊರತೆಯಾದಡೆ
ಎನ್ನನದ್ದಿ ನೀನೆದ್ದು ಹೋಗು, ಕೂಡಲಸಂಗಮದೇವಾ.
441
ಓಡುವಾತ ಲೆಂಕನಲ್ಲ, ಬೇಡುವಾತ ಭಕ್ತನಲ್ಲ.
ಓಡಲಾಗದು ಲೆಂಕನು, ಬೇಡಲಾಗದು ಭಕ್ತನು.
ಓಡೆನಯ್ಯಾ, ಬೇಡೆನಯ್ಯಾ,
ಕೂಡಲಸಂಗಮದೇವಾ.
442
ಚಂದ್ರನ ಶೈತ್ಯದಲು ಬೆಳೆವ ಕಾಯಕ್ಕೆ
ಬೆಳುದಿಂಗಳು ಬಯಸುವ ಹಂಗೇಕಯ್ಯಾ
ಶರಣರ ಸಂಗದಲಿರ್ದು ಶಿವನ ಬೇಡುವ ಹಂಗೇಕಯ್ಯಾ
ಕೂಡಲಸಂಗನ ಶರಣರು ಬಂದು ತಮ್ಮವನೆಂದಡೆ ಸಾಲದೆ ಅಯ್ಯಾ.
443
ದಾಸನ ವಸ್ತ್ರವ ಬೇಡದ ಮುನ್ನ
ತವನಿಧಿಯನಿತ್ತಡೆ ನಿಮ್ಮ ದೇವರೆಂಬೆ.
ಸಿರಿಯಾಳನ ಮಗನ ಬೇಡದ ಮುನ್ನ
ಕಂಚಿಯಪುರವ ಕೈಲಾಸಕ್ಕೊಯ್ದಡೆ ನಿಮ್ಮ ದೇವರೆಂಬೆ.
ಬಲ್ಲಾಳನ ವಧುವ ಬೇಡದ ಮುನ್ನ
ಸ್ವಯಲಿಂಗವ ಮಾಡಿದಡೆ ನಿಮ್ಮ ದೇವರೆಂಬೆ.
ದೇಹಿ ನೀನು, ವ್ಯಾಪಾರಿಗಳು ನಮ್ಮವರು.
ಬೇಡು, ಕೂಡಲಸಂಗಮದೇವಾ, ಎಮ್ಮವರ ಕೈಯಲು.
444
ಎಲ್ಲರೂ ವೀರರು, ಎಲ್ಲರೂ ದ್ಥೀರರು,
ಎಲ್ಲರೂ ಮಹಿಮರು, ಎಲ್ಲರೂ ಪ್ರಮಥರು.
ಕಾಳಗದ ಮುಖದಲ್ಲಿ ಕಾಣಬಾರದು,
ಓಡುವ ಮುಖದಲ್ಲಿ ಕಾಣಬಹುದು.
ನಮ್ಮ ಕೂಡಲಸಂಗನ ಶರಣರು ದ್ಥೀರರು,
ಉಳಿದವರೆಲ್ಲರೂ ಅಧೀರರು.
445
ಎಲ್ಲಿ ನೋಡಿದಡಲ್ಲಿ ಮನವೆಳಸಿದಡೆ
ಆಣೆ, ನಿಮ್ಮಾಣೆ, ನಿಮ್ಮ ಪ್ರಮಥರಾಣೆ.
ಪರವಧುವನುಮಾದೇವಿಯೆಂಬೆ
ಕೂಡಲಸಂಗಮದೇವಾ.
446
ಹರಿವ ಹಾವಿಂಗಂಜೆ, ಉರಿಯ ನಾಲಗೆಗಂಜೆ,
ಸುರಗಿಯ ಮೊನೆಗಂಜೆ,
ಒಂದಕ್ಕಂಜುವೆ, ಒಂದಕ್ಕಳುಕುವೆ
ಪರಸ್ತ್ರೀ ಪರಧನವೆಂಬೀ ಜೂಬಿಂಗಂಜುವೆ.
ಮುನ್ನಂಜದ ರಾವಳನೇವಿಧಿಯಾದ !
ಅಂಜುವೆನಯ್ಯಾ, ಕೂಡಲಸಂಗಮದೇವಾ.
447
ಒಂದಕ್ಕೊಂಬತ್ತ ನುಡಿದು, ಕಣ್ಣ ಕೆಚ್ಚನೆ ಮಾಡಿ, ಗಂಡುಗೆದರಿ
ಮುಡುಹಿಕ್ಕಿ ಕೆ[ಲೆ]ವರ ಕಂಡಡಂಜುವೆ, ಓಸರಿಸುವೆ !
ಓಡಿದೆನೆಂಬ ಭಂಗವಾದಡಾಗಲಿ.
ನಮ್ಮ ಕೂಡಲಸಂಗನ ಶರಣರ ಅನುಭಾವವಿಲ್ಲದವರ
ಹೊಲಮೇರೆಯ ಹೊಂದೆ, ಹೊಲನ ಬಿಟ್ಟೋಡುವೆ.
448
ಒಡೆಯರು ಬಂದಡೆ ಗುಡಿ ತೋರಣವ ಕಟ್ಟಿ,
ನಂಟರು ಬಂದಡೆ ಸಮಯವಿಲ್ಲೆನ್ನಿ.
ಅಂದೇಕೆ ಬಾರರು
ನೀರಿಂಗೆ ನೇಣಿಂಗೆ ಹೊರಗಾದಂದು, ಸಮಯಾಚಾರಕ್ಕೆ ಒಳಗಾದಂದು.
ಪರುಷ ಮುಟ್ಟಲು ಕಬ್ಬುನ ಸುವರ್ಣವಾಯಿತ್ತು.
ಬಳಿಕ ಬಂಧುಗಳುಂಟೆ, ಕೂಡಲಸಂಗಮದೇವಾ.
449
ಒಡೆಯರಾಡುವ ಮಾತ ಕಡೆಪರಿಯಂತರ ಕೇಳಿ,
ಇದರುವೋಗಿ ಕಿಂಕರನಾಗಿ ನಡುಗುತ್ತ ಬಿನ್ನಹಮಾಡುವ
ಸದ್ಭಕ್ತನ ತೋರಯ್ಯಾ.
ಒಡೆಯರಾಡುವ ಮಾತ ಕಂಡು, ಕರೆದಲ್ಲಿ ಕೆಡೆಮೆಟ್ಟಿ
ಬಾು ಘನವೆಂದು ಆಡುವನ ತೋರದಿರಯ್ಯಾ,
ಅವನ ಸಂಗದಲ್ಲಿರಿಸಯ್ಯಾ,
ಅವನ ಸಹಪಂಕ್ತ್ತಿಯಲ್ಲಿ ಕುಳ್ಳಿರಿಸದಿರಯ್ಯಾ.
ಕೂಡಲಸಂಗಮದೇವಯ್ಯಾ, ನಿಮ್ಮ ಬೇಡುವುದೊಂದೆ ವರವು.
450
ಬಡಹಾರುವನೇಸು ಭಕ್ತನಾದಡೆಯೂ ನೇಣಿನ ಹಂಗ ಬಿಡ !
ಮಾಲೆಗಾರನೇಸು ಭಕ್ತನಾದಡೆಯೂ ಬಾವಿಯ ಬೊಮ್ಮನ ಹಂಗ ಬಿಡ !
ಬಣಜಿಗನೇಸು ಭಕ್ತನಾದಡೆಯೂ ಒಟ್ಟಿಲ ಬೆನಕನ ಹಂಗ ಬಿಡ !
ಕಂಚುಗಾರನೇಸು ಭಕ್ತನಾದಡೆಯೂ ಕಾಳಿಕಾದೇವಿಯ ಹಂಗ ಬಿಡ !
ನಾನಾ ಹಂಗಿನವನಲ್ಲ, ನಿಮ್ಮ ಶರಣರ ಹಂಗಿನವನಯ್ಯಾ
ಕೂಡಲಸಂಗಮದೇವಾ.
451
ಶ್ರೀವಿಭೂತಿ ರುದ್ರಾಕ್ಷಿುದ್ದವರ ಲಿಂಗವೆಂಬೆ,
ಇಲ್ಲದವರ ಭವಿಯೆಂಬೆ.
ಕೂಡಲಸಂಗಮದೇವಾ,
ಸದುಭಕ್ತರ ನೀನೆಂಬೆ.
452
ದೇವಸಹಿತ ಭಕ್ತ ಮನೆಗೆ ಬಂದಡೆ
ಕಾಯಕವಾವುದೆಂದು ಬೆಸಗೊಂಡೆನಾದಡೆ
ನಿಮ್ಮಾಣೆ ! ನಿಮ್ಮ ಪುರಾತರಾಣೆ ! ತಲೆದಂಡ ! ತಲೆದಂಡ !
ಕೂಡಲಸಂಗಮದೇವಾ, ಭಕ್ತರಲ್ಲಿ ಕುಲವನರಸಿದಡೆ
ನಿಮ್ಮ ರಾಣಿವಾಸದಾಣೆ.
453
ಲಿಂಗಾಂಗಿಗಳಲ್ಲದವರ, ಶರಣಸಂಗವಿಲ್ಲದವರ
ಕಂಡಡೆ ನಾಚುವೆ.
ಅವರ ನುಡಿ ಎನಗೆ ಸಮನಿಸದಯ್ಯಾ ಕೂಡಲಸಂಗಮದೇವಾ,
ನೀನು ಅಲ್ಲಿ ಇಲ್ಲದ ಕಾರಣ.
454
ಶ್ರೀವಿಭೂತಿಯ ಹೂಸದವರ,
ಶ್ರೀರುದ್ರಾಕ್ಷಿಯ ಧರಿಸದವರ,
ನಿತ್ಯಲಿಂಗಾರ್ಚನೆಯ ಮಾಡದವರ,
ಜಂಗಮವೇ ಲಿಂಗವೆಂದರಿಯದವರ,
ಸದ್ಭಕ್ತರ ಸಂಗದಲ್ಲಿರದವರ ತೋರದಿರು.
ಕೂಡಲಸಂಗಮದೇವಾ, ಸೆರಗೊಡ್ಡಿ ಬೇಡುವೆನು.
455
ಕೂಪವರಿಗೆ ಹೇಳುವೆನು ಕುಳಸ್ಥಳಂಗಳನೆಲ್ಲವ,
ಕೂರದವರಿಗೆ ಹೇಳಿ ನಾನೇವೆನು ಶಿವನೆ
ಕರಲ ಭೂಮಿಯಲ್ಲಿ ಕರೆದ ವ್ಟೃಯ ತೆರನಂತೆ
ಅವರೆತ್ತ ಬಲ್ಲರೆನ್ನ ಸುಖ-ದುಃಖವನು
ಅಂಗತವಿಲ್ಲದ ಸಂಗವು ಅಳಲಿಲ್ಲದ ಹುಯ್ಯಲಂತ,
ಇದು ಕಾರಣ, ಕೂಡಲಸಂಗಮದೇವಾ,
ನಿಮ್ಮ ಶರಣರಿಗಲ್ಲದೆ ಬಾುದೆರೆಯೆನು.
456
ಒಡೆದೋಡು ಎನ್ನ ಮನೆಯಲಿಲ್ಲದಂತೆ ಮಾಡಯ್ಯಾ,
ಕೊಡು ದೇವ, ಎನ್ನ ಕೈಯಲೊಂದು ಕರಿಕೆಯನು.
`ಮೃಡದೇವಾ ಶರಣೆಂದು ಭಿಕ್ಷಕ್ಕೆ ಹೋದಡೆ
ಅಲ್ಲಿ, `ನಡೆ ದೇವಾ' ಎಂದೆನಿಸು ಕೂಡಲಸಂಗಮದೇವಾ.
457
ಭವಿರಹಿತ ಭಕ್ತನಾದ ಬಳಿಕ,
ಭಕ್ತಿಭಾಜನದಲ್ಲಿ ಮಾಡಿ ಭವಿಗಿಕ್ಕಲಾಗದಯ್ಯಾ.
ಯುಕ್ತಿಶೂನ್ಯರಿಗೆ ಮುಂದೆ ಪ್ರಸಾದ ದೂರ,
ಮುಕ್ತಿುಲ್ಲ-ಮುಂದೆ ನಾಯ ಬಸುರಲ್ಲಿ ಬಪ್ಪುದು ತಪ್ಪದು ಪೃಥ್ವಿಯೊಳಗೆ.
ಕೂಡಲಸಂಗಮದೇವಾ, ನಿಮ್ಮ ಶರಣರಿಗಲ್ಲದೆ
ಅನಾಚಾರಕ್ಕೆಲ್ಲಿಯದೊ.
458
ಅಯ್ಯಾ, ನಿಮ್ಮ ಶರಣರ ದಾಸೋಹಕ್ಕೆ
ತನುಮನಧನವಲಸದಂತೆ ಮಾಡಯ್ಯಾ,
ತನು ದಾಸೋಹಕ್ಕೆ ಉಬ್ಬುವಂತೆ ಮಾಡಯ್ಯಾ,
ಮನ ದಾಸೋಹಕ್ಕೆ ಲೀಯವಹಂತೆ ಮಾಡು,
ಧನ ದಾಸೋಹಕ್ಕೆ ಸವೆದು ನಿಮ್ಮ ಶರಣರ ಪ್ರಸಾದದಲ್ಲಿ
ನಿರಂತರ ಆಡಿ, ಹಾಡಿ, ನೋಡಿ, ಕೂಡಿ, ಭಾವಿಸಿ, ಸುಖಿಸಿ,
ಪರಿಣಾಮಿಸುವಂತೆ ಮಾಡು ಕೂಡಲಸಂಗಮದೇವಾ.
459
ಹಾರುವ ಹಾರುವನಪ್ಪೆ ನಾನು, ಸದ್ಭಕ್ತರೆನ್ನವರೆನ್ನವರೆಂದು
ಹಾರು[ವೆ] ಹಾರು[ವೆ]ನವ್ವಾ ನಾನು, ಶರಣರು ಎನ್ನವರೆನ್ನವರೆನ್ನವರೆಂದು,
ಕೂಡಲಸಂಗನ ಶರಣರು ಒಕ್ಕುದನಿಕ್ಕಿ ಸಲಹುವರೆಂದು.
460
ಒಕ್ಕುದ ಮಿಕ್ಕುದನುಂಡು ಕಿವಿಕಿವಿದಾಡುವೆ.
ಶರಣರ ಮನೆಯ ಲೆಂಗಿಯ ಡಿಂಗರಿಗ ನಾನು,
ಕೂಡಲಸಂಗನ ಶರಣರ ಮನೆಯ
ಭಕ್ತಿಯ ಮರುಳ ನಾನು.
461
ಗುರು ಲಿಂಗ ಜಂಗಮದಿಂದ ಪಾದೋದಕ ಪ್ರಸಾದವಾುತ್ತು.
ಆ ಭಾವವೆ ಮಹಾಪ್ರಸಾದವಾಗಿ
ಎನಗೆ ಬೇರೆ ಪ್ರಸಾದವೆಂಬುದಿಲ್ಲ
ಕೂಡಲಸಂಗಮದೇವಾ.
462
ಅಹುದೆಂದರಿಯೆ, ಆಗದೆಂದರಿಯೆ,
ಆದಿಪಥವ ತೋರಲರಿಯೆ,
ಸತ್ಯವನರಿಯೆ, ಸಹಜವನರಿಯೆ,
ಸಜ್ಜನ ಶುದ್ಧವ ಮುನ್ನರಿಯೆ.
ನಿಮ್ಮ ಶರಣರ ಒಕ್ಕುದನುಂಡಿಪ್ಪೆ
ಕೂಡಲಸಂಗಮದೇವಾ.
463
ಆವನಾದಡೇನು ಶ್ರೀಮಹಾದೇವನ ನೆನೆವನ
ಬಾಯ ತಂಬುಲವ ಮೆಲುವೆ, ಬೀಳುಡೆಯ ಹೊದೆವೆ,
ಪಾದರಕ್ಷೆಯ ಕಾಯ್ದು ಬದುಕುವೆ,
ಕೂಡಲಸಂಗಮದೇವಾ.
464
ಒಂದುವನರಿಯದ ಸಂದೇಹಿ ನಾನಯ್ಯಾ,
ನಂಬುಗೆುಲ್ಲದ ಡಂಬಕ ನಾನಯ್ಯಾ,
ನಿಮ್ಮ ನಂಬಿದ ಶರಣರ ಡಿಂಗರಿಗ ನಾನು,
ಕೂಡಲಸಂಗಮದೇವಾ.
465
ಬಿಡದೆ ಬಾಗಿಲ ಎಂಜಲ ಕಾ್ದುಪ್ಪೆನು, ಕಿಂಕರನು.
ಕಿಂಕರರ ಮನೆಯಲ್ಲಿ ಕಿಂಕಿಲವನು ಆನು ಹಾರುತ್ತಿಪ್ಪೆನು,
ನಮ್ಮ ಕೂಡಲಸಂಗನ ಶರಣರ
ಒಕ್ಕುದ ಮಿಕ್ಕುದನುಂಬ ಕಿಂಕರ ನಾನು.
466
ತೊತ್ತಿಂಗೇಕೆ ಲಕ್ಷಣ ಬಂಟಂಗೇಕೆ ಆಚಾರ
ಆಗಮವೇಕೆ ಡಿಂಗರಿಗಂಗೆ
ಒಕ್ಕುದನುಂಬುವಂಗಯ್ಯಾ, ಕೂಡಲಸಂಗಮದೇವಾ
ನಿಮ್ಮ ನಂಬುವುದಾಚಾರವಯ್ಯಾ.
467
ತೊತ್ತಿಂಗೆ ಲಕ್ಷಣವೇಕಯ್ಯಾ
ಅವರೊಕ್ಕುದನುಂಡು ಮಿಕ್ಕುದ ಕಾ್ದುಪ್ಪುದು.
ಸಾರೆ ಹೊರಸೇಕೆ, ಅವಳಿಗೆ ಮಾರುತ್ತರವೇಕೆ
ಕೂಡಲಸಂಗನ ಶರಣರೊಡನೆ
ಇದಿರುತ್ತರವೇಕೆ ಸಿಂಬಕಂಗೆ.
468
  469
ಪಾತಕ ಮಹಾಪಾತಕವ ಮಾಡಿದವನು
ಸದ್ಭಕ್ತರ ಮನೆಗೆ ಹೋಗಿ,
ಅವರೊಕ್ಕ ಪ್ರಸಾದವನಾಯ್ದುಂಡಡೆ,
ಸಕಲ ಬ್ರಹ್ಮಹತ್ಯಾದಿ ಪಾತಕ ಪರಿಹಾರ.
ಒಮ್ಮೆ ಬೇಡಿಕೊಂಡುಂಡಡೆ !
ಪಾತಕೇ ಸಮನುಪ್ರಾಪ್ತೇ ಶಿವಭಕ್ತಗೃಹಂ ವ್ರಜೇತ್
ಯಾಚಯೇದನ್ನಮಮೃತಂ ತದಲಾಭೇ ಜಲಂ ಪಿಬೇತ್
ಇದು ಕಾರಣ ಕೂಡಲಸಂಗಮದೇವಾ,
ನಿಮ್ಮ ಸದ್ಭಕ್ತರಿಗೆ ನಮೋ ನಮೋ ಎಂಬೆನು.
470
ನಾನು ಹೊತ್ತ ಹುಳ್ಳಿಯನಂಬಲಿಗೆ ಕೊಂಬುವರಿಲ್ಲ ನೋಡಯ್ಯಾ.
ಆನು ನಿಮ್ಮ ಶರಣರ ಒಕ್ಕುದನುಂಡು ಬದುಕುವೆನಯ್ಯಾ.
ಮೇರುವ ಸಾರಿದ ಕಾಗೆ ಹೊಂಬಣ್ಣವಪ್ಪುದು ತಪ್ಪದು
ಕೂಡಲಸಂಗಮದೇವಾ.
471
ಭವಭವದಲ್ಲಿ ನಿಮ್ಮ ಜಂಗಮವೆ ಶರಣಯ್ಯಾ.
ಅವರುಂಡು ಮಿಕ್ಕುದ ಉಡುಗಿ,
ಒಕ್ಕಪ್ರಸಾದವನಾಯ್ದುಕೊಂಬ ಮರುಳ ನಾನಯ್ಯಾ.
ನಮ್ಮ ಕೂಡಲಸಂಗನ ಶರಣರ ರಿಣವ ನಾ ಹಿಂಗಲಾರೆ.
472
ದಾಸಿಯ ವರ್ಗದಲ್ಲಿಪ್ಪೆನು ಶಿವಶರಣರ ಮನೆಯಲ್ಲಿ.
ಅವರೊಕ್ಕುದನುಂಡು, ಮಿಕ್ಕುದ ಕಾಯ್ದುಕೊಂಡಿಪ್ಪ ಕಾರಣ
ಕಾಲ ಮುಟ್ಟಲಮ್ಮನು, ಕಲ್ಪಿತ ತೊಡೆುತ್ತು.
ಭವಬಂಧನ ಹಿಂಗಿತ್ತು, ಕರ್ಮ ನಿರ್ಮಳವಾಗಿತ್ತು.
ಅವರ ತೊತ್ತಿನ ತೊತ್ತಿನ ಪಡಿದೊತ್ತಿನ ಮಗನೆಂದು
ಕೂಡಲಸಂಗಮದೇವನು `ಇತ್ತ ಬಾ ಎಂದು ಎತ್ತಿಕೊಂಡನು.
473
ಜನ್ಮ ಜನ್ಮಕ್ಕೆ ಹೊಗಲೀಯದೆ,
ಸೋsಹಂ ಎಂದೆನಿಸದೆ ದಾಸೋsಹಂ ಎಂದೆನಿಸಯ್ಯಾ.
ಲಿಂಗಜಂಗಮದ ಪ್ರಸಾದವ ತೋರಿ ಬದುಕಿಸಯ್ಯಾ
ಕೂಡಲಸಂಗಮದೇವಾ.
474
ಕರ್ತರು ನಿಮ್ಮ ಗಣಂಗಳು ಎನ್ನ ತೊತ್ತುಮಾಡಿ ಸಲಹಿದ ಸುಖವು
ಸಾಲೋಕ್ಯ, ಸಾಮಿಪ್ಯ, ಸಾರೂಪ್ಯ, ಸಾಯುಜ್ಯದಂತುಟಲ್ಲ_
ಕೇಳಯ್ಯಾ, ಕೂಡಲಸಂಗನ ಶರಣರು
ತಮ್ಮ ಒಕ್ಕುದನಿಕ್ಕಿ ಸಲಹಿದ ಸುಖವು.
475
ತೊತ್ತಿಂಗೆ ಬಲ್ಲಹನೊಲಿದಡೆ ಪದವಿಯ ಮಾಡದೆ ಮಾಬನೆ
ಜೇಡರ ದಾಸಯ್ಯಂಗೊಲಿದಾತ ಮತ್ತೊಬ್ಬ ದೇವನೆ, ಅಯ್ಯಾ
ಮಾದಾರ ಚೆನ್ನಯ್ಯಂಗೆ, ಡೋಹರ ಕಕ್ಕಯ್ಯಂಗೆ,
ತೆಲುಗು ಜೊಮ್ಮಯ್ಯಂಗೆ ಒಲಿದಾತ ಮತ್ತೊಬ್ಬ ದೇವನೆ, ಅಯ್ಯಾ
ಎನ್ನ ಮನದ ಪಂಚೇಂದ್ರಿಯ ನಿಮ್ಮತ್ತಲಾದಡೆ
ತನ್ನತ್ತ ಮಾಡುವ ಕೂಡಲಸಂಗಮದೇವಯ್ಯ.
476
ಹೊರಗೆ ಹೂಸಿ ಏವೆನಯ್ಯಾ, ಒಳಗೆ ಶುದ್ಧವಿಲ್ಲದನ್ನಕ್ಕ
ಮಣಿಯ ಕಟ್ಟಿ ಏವೆನಯ್ಯಾ, ಮನ ಮುಟ್ಟದನ್ನಕ್ಕ
ನೂರನೋದಿ ಏವೆನಯ್ಯಾ,
ನಮ್ಮ ಕೂಡಸಂಗಮದೇವರ ಮನಮುಟ್ಟದನ್ನಕ್ಕ.
477
ಸುಚಿತ್ತದಿಂದ ನಿಮ್ಮ ನೆನೆಯಲೊಲ್ಲದೆನ್ನ ಮನ,
ಎಂತಯ್ಯಾ ಎನಗಿನ್ನಾವುದು ಗತಿ
ಎಂತಯ್ಯಾ ಎನಗಿನ್ನಾವುದು ಮತಿ
ಎಂತಯ್ಯಾ ಹರಹರಾ, ಕೂಡಲಸಂಗಮದೇವಾ
ಮನದ ಸಂತೈಸೆನ್ನ.
478
ಅಷ್ಟದಳ ಕಮಲವ ಸುತ್ತುವ ಜೀವಾತ್ಮನ
ಮೆಟ್ಟಿದ ದಳವನರಿಯದೆ,
ಆನು ಭಕ್ತನೆಂತೆಂಬೆ ! ಆನು ಶರಣನೆಂತೆಂಬೆ !
ಆನು ಲಿಂಗೈಕ್ಯನೆಂತೆಂಬೆ ಕೂಡಲಸಂಗಮದೇವಾ
ಎನ್ನ ಮನವು ಸಮಾಧಾನವಾಗದನ್ನಕ್ಕ.
479
ನಾ ನಿಮ್ಮ ನೆನೆವನು, ನೀವೆನ್ನನರಿುರಿ.
ನಾ ನಿಮ್ಮನೋಲೈಸುವೆನು, ನೀವೆನ್ನ ಕಾಣಿರಿ.
ನಾನೆಂತು ಬದುಕುವೆನೆಂತು ಜೀವಿಸುವೆನಯ್ಯಾ
ಕೂಡಲಸಂಗಮದೇವಾ,
ಎನಗೆ ನೀವೆ ಪ್ರಾಣ ಗತಿ ಮತಿ, ನೋಡಯ್ಯಾ.
480
ತಂದೆ ನೀನು ತಾಯಿ ನೀನು, ಬಂಧು ನೀನು ಬಳಗ ನೀನು.
ನೀನಲ್ಲದೆ ಮತ್ತಾರೂ ಇಲ್ಲಯ್ಯಾ,
ಕೂಡಲಸಂಗಮದೇವಾ,
ಹಾಲಲದ್ದು, ನೀರಲದ್ದು.
481
ಎನ್ನ ಆಪತ್ತು-ಸುಖ-ದುಃಖ ನೀನೆ ಕಂಡಯ್ಯಾ,
ಮತ್ತಾರೂ ಇಲ್ಲ, ಹರಹರಾ, ನೀನೆ ಕಂಡಯ್ಯಾ,
ಎನ್ನ ಮಾತಾಪಿತನು ನೀನೆ ಕಂಡಯ್ಯಾ.
ಕೂಡಸಂಗಮದೇವಾ.
482
ಎನ್ನ ಜನ್ಮವ ತೊಡೆದನೀ ಧರ್ಮಿ,
ಎನ್ನ ಜನ್ಮವನತಿಗಳೆದಾ ಸಧರ್ಮಿ.
ಎನ್ನ ಭವಬಂಧನವ ನಿಃಕರಿಸಿದೆಯಾಗಿ,
ಶಿವನೆ ಗತಿಯೆಂದು ನಂಬಿದೆನಯ್ಯಾ.
ಎನ್ನ ಅಷ್ಟಮದಂಗಳ ಸುಟ್ಟುರುಹಿದೆಯಾಗಿ,
ಕಟ್ಟುಗ್ರದಿಂದ ನಿಮ್ಮ ಶ್ರೀಚರಣವ ಕಂಡೆ.
ಸ್ಟೃಪ್ರತಿಪಾಲಕಾ, ನಿಮ್ಮ ನಂಬಿದೆ,
ಕರುಣಿಸು ಕೂಡಲಸಂಗಮದೇವಾ.
483
ಭವರೋಗವೈದ್ಯನೆಂದು ನಾ ನಿಮ್ಮ ಮರೆಹೊಕ್ಕೆ,
ಭಕ್ತಿದಾಯಕ ನೀನು ಕರುಣಿಸು ಲಿಂಗತಂದೆ.
ಜಯ ಜಯ ಶ್ರೀ ಮಹಾದೇವ, ಜಯ ಜಯ ಶ್ರೀ ಮಹಾದೇವ,
ಜಯ ಜಯ ಶ್ರೀ ಮಹಾದೇವ ಎನ್ನುತ್ತಿದ್ದಿತೆನ್ನ ಮನವು.
ಕೂಡಲಸಂಗಮದೇವಂಗೆ ಶರಣೆಂದಿತ್ತೆನ್ನ ಮನವು.
484
ಅಂಗಯ್ಯ ಒಳಗಣ ಲಿಂಗವ ನೋಡುತ್ತ,
ಕಂಗಳು ಕಡೆಗೋಡಿವರಿಯುತ್ತ ಸುರಿಯುತ್ತ ಎಂದಿಪ್ಪೆನೊ
ನೋಟವೆ ಪ್ರಾಣವಾಗಿ ಎಂದಿಪ್ಪೆನೊ
ಕೂಟವೇ ಪ್ರಾಣವಾಗಿ ಎಂದಿಪ್ಪೆನೊ
ಎನ್ನ ಅಂಗವಿಕಾರದ ಸಂಗವಳಿದು,
ಕೂಡಲಸಂಗಯ್ಯಾ, ಲಿಂಗ ಲಿಂಗವೆನುತ್ತ.
485
ಎದೆ ಬಿರಿವನ್ನಕ್ಕ, ಮನ ದಣಿವನ್ನಕ್ಕ,
ನಾಲಗೆ ನಲಿನಲಿದೋಲಾಡುವನ್ನಕ್ಕ
ನಿಮ್ಮ ನಾಮಾಮೃತವ ತಂದೆರೆಸು ಕಂಡಯ್ಯಾ, ಎನಗೆನ್ನ ತಂದೆ.
ಬಿರಿಮುಗುಳಂದದಿ ಎನ್ನ ಹೃದಯ
ನಿಮ್ಮ ಶ್ರೀಚರಣದ ಮೇಲೆ ಬಿದ್ದರಳುಗೆ,
ಕೂಡಲಸಂಗಯ್ಯಾ.
486
ಆಡಿ ಕಾಲು ದಣಿಯವು, ನೋಡಿ ಕಣ್ಣು ದಣಿಯವು,
ಹಾಡಿ ನಾಲಿಗೆ ದಣಿಯದು, ಇನ್ನೇವೆನಿನ್ನೇವೆ.
ನಾ ನಿಮ್ಮ ಕೈಯಾರೆ ಪೂಜಿಸಿ ಮನದಣಿಯಲೊಲ್ಲದಿನ್ನೇವೆನಿನ್ನೇವೆ
ಕೂಡಲಸಂಗಮದೇವಾ ಕೇಳಯ್ಯಾ,
ನಿಮ್ಮ ಉದರವ ಬಗಿದಾನು ಹೊಗುವ ಭರವೆನಗೆ.
487
ಕಾಯಸಂಗ ನಿಸ್ಸಂಗವಾಗಿ ಇನ್ನಾವ ಸಂಗವನರಿಯೆನಯ್ಯಾ.
ಮಿಗೆ ಒಲಿದೆನಾಗಿ ಅಗಲಲಾರೆ.
ನಗೆಮೊಗದರಸ, ಅವಧಾರು.
ಕೂಡಲಸಂಗಮದೇವಾ,
ಬಗಿದು ಹೊಗುವೆನು ನಾ ನಿಮ್ಮ ಮನವನು.
488
ನೋಡಿ ನೋಡಿ ಲಿಂಗಧ್ಯಾನವೆನ್ನ ಮನ !
ರಾಗರಂಜನೆಯ ಉತುಪತಿ ಸ್ಥಿತಿಲಯ ನಿನಗೆಂದಾದುವು.
ರಾಗರಂಜನೆಯ ಪೂಜೆ ಎನ್ನ ಮನ !
ಕೂಡಲಸಂಗಮದೇವಾ, ಅಹಾ, ಎನ್ನ ಮನ !
489
ವಾರವೆಂದರಿಯೆ, ದಿನವೆಂದರಿಯೆ,
ಏನೆಂದರಿಯೆನಯ್ಯಾ.
ಇರುಳೆಂದರಿಯೆ, ಹಗಲೆಂದರಿಯೆ,
ಏನೆಂದರಿಯೆನಯ್ಯಾ.
ನಿಮ್ಮ ಪೂಜಿಸಿ ಎನ್ನುವ ಮರೆದೆ
ಕೂಡಲಸಂಗಮದೇವಾ.
490
ನಿಮ್ಮ ನೋಟವನಂತಸುಖ, ನಿಮ್ಮ ಕೂಟ ಪರಮಸುಖ.
ಅವಟುಕೋಟಿ ರೋಮಂಗಳು ಕಂಗಳಾಗಿ ನೋಡುತ್ತಿದ್ದೆನು.
ಕೂಡಲಸಂಗಮದೇವಯ್ಯಾ, ನಿಮ್ಮ ನೋಡಿ ನೋಡಿ
ಮನದಲ್ಲಿ ರತಿಹುಟ್ಟಿ, ನಿಮಿರ್ದವೆನ್ನ ಕಳೆಗಳು.
491
ವಚನದಲ್ಲಿ ನಾಮಾಮೃತ ತುಂಬಿ,
ನಯನದಲ್ಲಿ ಮೂರುತಿ ತುಂಬಿ,
ಮನದಲ್ಲಿ ನಿಮ್ಮ ನೆನಹು ತುಂಬಿ,
ಕಿವಿಯಲ್ಲಿ ಕೀರುತಿ ತುಂಬಿ.
ಕೂಡಲಸಂಗಮದೇವಾ
ನಿಮ್ಮ ಚರಣಕಮಲದೊಳಗಾನು ತುಂಬಿ.
492
ಅಡಿಗಡಿಗೆ ಲಿಂಗವನಡಿಯಡರಿ ನೋಡಿ ನೋಡಿ,
ಕಂಗಳು ಕಡೆಗೋಡಿವರಿದವೆನಗಯ್ಯಾ, ಎನ್ನ ಅಶ್ರುಜಲಂಗಳು !
ಆಲಿಕಲ್ಲ ರೂಹಿನಂತೆ, ಅರಗಿನ ಪುತ್ಥಳಿಯಂತೆ
ತನು ಪುಳಕಿತವಾದ ಬೆಮರ ಬಿಂದುಗಳೆಲ್ಲಾ !
ಕೂಡಲಸಂಗನ ದರ್ಶನಸ್ಪರ್ಶದಿಂದ
ಮನವೊಲಿದು ನೆರೆವ ಭರವನೇನ ಹೇಳುವೆನಯ್ಯಾ.
493
ತಾಳಮಾನ ಸರಿಸವನರಿಯೆ,
ಓಜೆ ಬಜಾವಣೆಯ ಲೆಕ್ಕವನರಿಯೆ,
ಅಮೃತಗಣ ದೇವಗಣವನರಿಯೆ,
ಕೂಡಲಸಂಗಮದೇವಾ, ನಿನಗೆ ಕೇಡಿಲ್ಲವಾಗಿ
ಆನು ಒಲಿದಂತೆ ಹಾಡುವೆ.
494
ವರಂ ಪ್ರಾಣಪರಿತ್ಯಾಗಶ್ಚೇದನಂ ಶಿರಸೋಡಿಪಿ ವಾ±
ನತ್ವನಭ್ಯಚ್ರ್ಯ ಭುಂಜೀಯಾತ್ ಭಗವಂತಂ ತ್ರಿಲೋಚನಂ
ಎಂದುದಾಗಿ, ಧೇಹಧರ್ಮ ತನ್ನ ಆದಂತೆ ಆಗಲಿ,
ಕೂಡಲಸಂಗನ ಪೂಜಿಸಿದಲ್ಲದೆ ನಿಲಲಾರೆನು.
495
ಸುರರು ಕಿನ್ನರರು ಕಿಂಪುರುಷರೆಂಬವರನಾರು ಬಲ್ಲರು
ಎನ್ನ ಚಿತ್ತವು ನಿಮ್ಮ ಮೇಲೆ ಸಂಗಯ್ಯಾ,
ಎನ್ನ ಚಿತ್ತವು ನಿಮ್ಮ ಮೇಲೆ ಲಿಂಗಯ್ಯಾ.
ಕೂಡಲಸಂಗಮದೇವಾ
ಅನ್ಯವೆಂಬುದನರಿಯೆನಯ್ಯಾ.
496
ಮುಂಡೆಯ ಬೋಳಿಸಿಕೊಂಡು ಗಂಡುದೊತ್ತುವೊಕ್ಕೆನಯ್ಯಾ.
ಲಜ್ಜೆಗೆಟ್ಟಾದಡೂ ಲಿಂಗವನೊಲಿಸುವೆ,
ನಾಣುಗೆಟ್ಟಾದಡೂ ಲಿಂಗವನೊಲಿಸುವೆ,
ಕೆಲದ ಸಂಸಾರಿಗಳು ನಗುತಿರ್ದಡಿರಲಿ,
ಕೂಡಲಸಂಗಮದೇವಾ, ಶರಣಗತಿವೊಕ್ಕೆನಯ್ಯಾ.
497
ಎನಗೆ ನಿಮ್ಮ ನೆನಹಾದಾಗ ಉದಯ,
ಎನಗೆ ನಿಮ್ಮ ಮರಹಾದಾಗ ಅಸ್ತಮಾನ.
ಎನಗೆ ನಿಮ್ಮ ನೆನೆಹವೆ ಜೀವನ,
ಎನಗೆ ನಿಮ್ಮ ನೆನಹವೆ ಪ್ರಾಣ, ಕಾಣಾ ತಂದೆ.
ಸ್ವಾಮಿ, ಎನ್ನ ಹೃದಯದಲ್ಲಿ ನಿಮ್ಮ ಚರಣದುಂಡಿಗೆಯನೊತ್ತಯ್ಯಾ,
ವದನದಲಿ ಷಡಕ್ಷರಿಯ ಬರೆಯಯ್ಯಾ ಕೂಡಲಸಂಗಮದೇವಾ.
498
ಎನ್ನ ಕಾಯವ ದಂಡಿಗೆಯ ಮಾಡಯ್ಯಾ,
ಎನ್ನ ಶಿರವ ಸೋರೆಯ ಮಾಡಯ್ಯಾ,
ಎನ್ನ ನರವ ತಂತಿಯ ಮಾಡಯ್ಯಾ,
ಎನ್ನ ಬೆರಳ ಕಡ್ಡಿಯ ಮಾಡಯ್ಯಾ,
ಬತ್ತೀಸ ರಾಗವ ಪಾಡಯ್ಯಾ, ಉರದಲೊತ್ತಿ ಬಾರಿಸು,
ಕೂಡಲಸಂಗಮದೇವಾ.
499
ಕುರುಳು ಬೆರಳು ಮುಡುಹು ಮುಂಬಲ್ಲ ಕೊಳ್ಳಾ,
ನಿರಿಯನಿಕ್ಕಿ ದಾಂಟಿದಡೆ ಅಂತೆನ್ನ ನಂಬಾ,
ಪರಪುರುಷರ ಮುಖವ ನೋಡದಂತೆ ಮಾಡಾ,
ಬಳಿಕ ನೀನೆಹಗೆ ಇರಿಸಿದಂತಿರಿಸಾ,
ಎನ್ನ ಉರದಲ್ಲಿ ಕೂಡಲಸಂಗಯ್ಯನೆಂದು ಬರೆಯಾ,
ಹರಿಬ್ರಹ್ಮರಿಗೆ ಎರಗದಂತೆ ಬಳಿನೀರನೆರೆಯಾ.
500
ಕಂಡ ಕನಸು ನಿಧಾನವ ಕಂಡೆನಯ್ಯಾ,
ಬಿಡಲಾರದ ನಿಧಾನವ ಕಂಡೆನಯ್ಯಾ,
ಕೂಡಲಸಂಗಯ್ಯನೆಂಬ ನಿಧಾನವ ಕಂಡು
ಬಿಡಲಾರೆನಯ್ಯಾ.
501
ಹೊನ್ನ ಹಾವುಗೆಯ ಮೆಟ್ಟಿದವನ !
ಮಿಡಿಮುಟ್ಟಿದ ಕೆಂಜೆಡೆಯವನ !
ಮೈಯಲ್ಲಿ ವಿಭೂತಿಯ ಹೂಸಿದವನ !
ಕರದಲ್ಲಿ ಕಪಾಲವ ಹಿಡಿದವನ !
ಅರ್ಧನಾರಿಯಾದವನ !
ಬಾಣನ ಬಾಗಿಲ ಕಾಯ್ದವನ !
ನಂಬಿಗೆ ಕುಂಟಣಿಯಾದವನ !
ಚೋಳಂಗೆ ಹೊನ್ನಮಳೆಯ ಕರೆದವನ !
ಎನ್ನ ಮನಕ್ಕೆ ಬಂದವನ
ಸದ್ಭಕ್ತರ ಹೃದಯದಲಿಪ್ಪವನ !
ಮಾಡಿದ ಪೂಜೆಯಲೊಪ್ಪುವನ !
ಕೂಡಲಸಂಗಯ್ಯನೆಂಬವನ !!
502
ಮನಕ್ಕೆ ಮನೋಹರವಲ್ಲದ ಗಂಡರು
ಮನಕೆ ಬಾರರು, ಕೇಳವ್ವಾ ಕೆಳದೀ,
ಪನ್ನಗಭೂಷಣರಲ್ಲದ ಗಂಡರು
ಇನ್ನೆನಗಾಗದ ಮೊರೆ, ನೋಡವ್ವಾ.
ಕನ್ನೆಯಂದಿನ ಕೂಟ, ಚಿಕ್ಕಂದಿನ ಬಾಳುವೆ,
ನಿಮ್ಮಾಣೆಯಯ್ಯಾ, ಕೂಡಲಸಂಗಮದೇವಾ.
503
ಜಗವೆಲ್ಲಾ ಅರಿಯಲು ಎನಗೊಬ್ಬ ಗಂಡನುಂಟು,
ಆನು ಮುತ್ತೈದೆ, ಆನು ನಿಟ್ಟೈದೆ.
ಕೂಡಲಸಂಗಮದೇವಯ್ಯಾನಂತಪ್ಪ ಎನಗೊಬ್ಬ ಗಂಡನುಂಟು.
504
  505
ನೀನೊಲಿುತ್ತೆ ಪುಣ್ಯ, ನೀನೊಲ್ಲದುವೆ ಪಾಪ,
ಸಕಲ ಜಗದೊಳಗೆ ಅನುಶ್ರುತನಾಗಿಪ್ಪೆಯಯ್ಯಾ.
ನೀನೊಲಿದವನೆ ನಿಮ್ಮನರಿದವನು.
ಪ್ರಸಾದಾದ್ದೇವತಾಭಕ್ತಿಃ ಪ್ರಸಾದೋ ಭಕ್ತಿಸಂಭವಃ
ಯಥೈವಾಂಕುರತೋ ಬೀಜಂ ಬೀಜತೋ ವಾ ಯಥಾಂಕುರಃ
ನೀನೊಲಿದವನೆ ಧನ್ಯ, ಜಗಕ್ಕೆ ಪಾವನ ಕೂಡಲಸಂಗಮದೇವಾ.
506
ಅಷ್ಟವಿಧಾರ್ಚನೆ ಷೋಡಶೋಪಚಾರವ
ಅಂದಂದಿನ ಕೃತ್ಯವ ಅಂದಂದಿಗೆ ಆನು ಮಾಡಿ ಶುದ್ಧನಯ್ಯಾ.
ಹಂಗು ಹರಿಯಿಲ್ಲದ ಕಾರಣ,
ಕೂಡಲಸಂಗಮದೇವ ನಿಷ್ಫಲದಾಯಕನಾಗಿ
ಆನು ಮಾಡಿ ಶುದ್ಧನಯ್ಯಾ. 
507
  508
ಅಯ್ಯಾ, ನಿಮ್ಮ ಅನುಭಾವದಿಂದ ಎನ್ನ ತನು ಹಾಳಾಯಿತ್ತಯ್ಯಾ,
ಅಯ್ಯಾ, ನಿಮ್ಮ ಅನುಭಾವದಿಂದ ಎನ್ನ ಮನ ಹಾಳಾಯಿತ್ತಯ್ಯಾ,
ಅಯ್ಯಾ, ನಿಮ್ಮ ಅನುಭಾವದಿಂದ ಎನ್ನ ಕರ್ಮಛೇದನವಾಯಿತ್ತಯ್ಯಾ,
ನಿಮ್ಮವರು ಅಡಿಗಡಿಗೆ ಹೇಳಿ ಭಕ್ತಿಯೆಂಬೀ ಒಡವೆಯನು
ದಿಟವ ಮಾಡಿ ತೋರಿದರು ಕಾಣಾ, ಕೂಡಲಸಂಗಮದೇವಾ.
509
ಭಕ್ತನೆಂತೆಂಬೆನಯ್ಯಾ ಭವಿಯ ಸಂಗ ಬಿಡದನ್ನಕ್ಕ
ಮಾಹೇಶ್ವರನೆಂತೆಂಬೆನಯ್ಯಾ ಪರಸ್ತ್ರೀ ಪರಧನದಾಸೆ
ಬಿಡದನ್ನಕ್ಕ.ಪ್ರಸಾದಿಯೆಂತೆಂಬೆನಯ್ಯಾ ಆಧಿವ್ಯಾಧಿ ನಷ್ಟವಾಗದನ್ನಕ್ಕ.
ಪ್ರಾಣಲಿಂಗಿಯೆಂತೆಂಬೆನಯ್ಯಾ ಪ್ರಾಣ ಸ್ವಸ್ಥಿರವಾಗದನ್ನಕ್ಕ.
ಶರಣನೆಂತೆಂಬೆನಯ್ಯಾ ಪಂಚೇಂದ್ರಿಯ ನಾಶವಾಗದನ್ನಕ್ಕ.
ಐಕ್ಯನೆಂತೆಂಬೆನಯ್ಯಾ ಜನನ ಮರಣ ವಿರಹಿತವಾಗದನ್ನಕ್ಕ.
ಇಂತಪ್ಪ ಭಾಷೆ ವ್ರತ ನೇಮಂಗಳ ನಾನರಿಯೆನಯ್ಯಾ,
ಅಘಟಿತಘಟಿತ ವರ್ತಮಾನದ ನಾನರಿಯೆನಯ್ಯಾ.
ನಿಮ್ಮ ಶರಣರ ತೊತ್ತು-ಭೃತ್ಯಾಚಾರವ ಮಾಡುವೆ
ಕೂಡಲಸಂಗಮದೇವಾ.
510
ಅಭ್ಯಾಸವೆನ್ನ ವರ್ತಿಸಿತ್ತಯ್ಯಾ, ಭಕ್ತಿ ಸಾಧ್ಯವಾಗದು,
ನಾನೇವೆನಯ್ಯಾ
ಅನು ನಿಮ್ಮ ಮನಂಬೊಗುವನ್ನಕ್ಕ ನೀವೆನ್ನ ಮನಂಬೊಗುವನ್ನಕ್ಕ
ಕಾಯಗುಣಂಗಳ ಕಳೆದವರಿಗೆ ಶರಣೆಂಬೆ
ಕೂಡಲಸಂಗಮದೇವಾ.
511
ತನುಸಾರಾಯರ ಮನಸಾರಾಯರ ಜ್ಞಾನಸಾರಾಯರ
ತೋರಯ್ಯಾ, ನಿಮ್ಮ ಧರ್ಮ.
ಭಾವಸಾರಾಯರ ಭಕ್ತಿಸಾರಾಯರ
ತೋರಯ್ಯಾ, ನಿಮ್ಮ ಧರ್ಮ.
ಕೂಡಲಸಂಗಮದೇವಯ್ಯಾ
ನಿಮ್ಮನರಿಯದ ಅವಗುಣಿಗಳ
ತೋರದಿರಯ್ಯಾ, ನಿಮ್ಮ ಧರ್ಮ.
512
ಸಂಚಲವಿಲ್ಲದ, ಭಕ್ತಿವಂಚನೆಯಿಲ್ಲದ ಮಹಾಂತರ ತೋರಾ.
ತನುಶುಚಿ ಮನಶುಚಿಗಳನು ತೋರಾ,
ಇಂತಪ್ಪ ಶಿವಲಿಂಗೈಕ್ಯರ ತೋರಿ ಬದುಕಿಸು,
ಕೂಡಲಸಂಗಮದೇವಾ.
513
ಕಾಮಸಂಗವಳಿದು ಅನುಭಾವಸಂಗದಲುಳಿದವರ ಅಗಲಲಾರೆನು,
ಶಿವಂಗೆ ಮಿಗೆ ಒಲಿದವರನು ನಾನು ಆಗಲಲಾರೆನು ಕಾಣಾ,
ಕೂಡಲಸಂಗಮದೇವಾ.
514
ಭಕುತಿರತಿಯ ವಿಕಳತೆಯ ಯುಕುತಿಯನೇನ ಬೆಸಗೊಂಬಿರಯ್ಯಾ!
ಕಾಮಿಗುಂಟೆ ಲಜ್ಜೆ ನಾಚಿಕೆ
ಕಾಮಿಗುಂಟೆ ಮಾನಾಪಮಾನವು
ಕೂಡಲಸಂಗನ ಶರಣರಿಗೊಲಿದ
ಮರುಳನನೇನ ಬೆಸಗೊಂಬಿರಯ್ಯಾ.
515
ಇಂದು ಹುಟ್ಟಿದ ಕೂಸಿಂಗೆ ಇಂದೆ ಜವ್ವನವಾಯಿತ್ತಯ್ಯಾ.
ಆ ಕೂಸು ಬೀದಿಯಲ್ಲಿ ಒತ್ತೆಗೊಳಲು ನಿಂದಿತ್ತಯ್ಯಾ.
ಇದರ ಸಂಗಸುಖದನುಭಾವವನು
ಕೂಡಲಸಂಗಮದೇವ ತಾನೆ ಬಲ್ಲ.
516
  517
ಕಾಳಿದಾಸಂಗೆ ಕಣ್ಣನಿತ್ತೆ, ಓಹಿಲಯ್ಯನ ನಿಜಪುರಕ್ಕೊಯ್ದೆ,
ನಂಬಿ ಕರೆದಡೋ ಎಂದೆ,
ತೆಲುಗು ಜೊಮ್ಮಯ್ಯಂಗೆ ಒಲಿದೆ ದೇವಾ,
ಕೂಡಲಸಂಗಮದೇವಾ
ಎನ್ನನೇಕೆ ಒಲ್ಲೆಯಯ್ಯಾ.
518
ಪರ ಚಿಂತೆ ಎಮಗೇಕಯ್ಯಾ ನಮ್ಮ ಚಿಂತೆ ನಮಗೆ ಸಾಲದೆ
ಕೂಡಲಸಂಗಯ್ಯ ಒಲಿದಾನೊ ಒಲ್ಲನೊ ಎಂಬ ಚಿಂತೆ
ಹಾಸಲುಂಟು, ಹೊದೆಯಲುಂಟು.
519
ಕಣ್ಣ ಕೋಪಕ್ಕೆ ಮುಂದರಿಯದೆ ನುಡಿದು,
ಮನಮಚ್ಚಿ ಮರುಳಾದೆ ನೋಡವ್ವಾ !
ಕೇಳು, ಕೇಳವ್ವಾ ಕೆಳದಿ,
ಸಖಿಯರಿಲ್ಲದೆ ಸುಖವ ಬಯಸಿದಡೆ
ದೊರಕೊಂಬುದೆ ಹೇಳಾ.
ಎನ್ನ ಮುನಿಸು ಎನ್ನಲ್ಲೆ ಅಡಗಿತ್ತು,
ಇನ್ನು ಬಾರಯ್ಯಾ, ಕೂಡಲಸಂಗಯ್ಯಾ.
520
ಲಜ್ಜೆಗೆಟ್ಟೆನು, ನಾಣುಗೆಟ್ಟೆನು.
ಕುಲಗೆಟ್ಟೆನು, ಛಲಗೆಟ್ಟೆನು.
ಸಂಗಾ, ನಿಮ್ಮ ಪೂಜಿಸಿ ಭವಗೆಟ್ಟೆನು ನಾನಯ್ಯಾ.
ಕೂಡಲಸಂಗಮದೇವಯ್ಯಾ
ನಿಮ್ಮ ಮುಟ್ಟಿ ಹುಟ್ಟುಗೆಟ್ಟೆನು ನಾನಯ್ಯಾ.
521
ಮಾಡುವ ಭಕ್ತನ ಕಾಯ ಬಾಳೆಯ ಕಂಬದಂತಿರಬೇಕು;
ಮೆಲ್ಲಮೆಲ್ಲನೆ ಹೊರೆಯೆತ್ತಿ ನೋಡಿದಡೆ
ಒಳಗೆ ಕೆಚ್ಚಿಲ್ಲದಿರಬೇಕು.
ಮೇಲಾದ ಫಲವ ನಮ್ಮವರು ಬೀಜಸಹಿತ ನುಂಗಿದರು.
ಎನಗಿನ್ನಾವ ಭಯವಿಲ್ಲ ಕಾಣಾ,
ಕೂಡಲಸಂಗಮದೇವಾ.
522
ಜಂಗಮವ ಕೂಡಿಕೊಂಡು
ಲಿಂಗಾರ್ಚನೆಯ ಮಾಡುವುದು ಲೇಸಯ್ಯಾ ಭಕ್ತಂಗೆ.
ಆ ಭಕ್ತನ ಕೂಡಿಕೊಂಡು
ಲಿಂಗಾರ್ಚನೆಯ ಮಾಡುವುದು ಲೇಸಯ್ಯಾ ಜಂಗಮಕ್ಕೆ.
ಆ ಜಂಗಮದ ಕರ್ತೃತ್ವವೆ ಭಕ್ತಂಗೆ ದಾಸೋಹ,
ಆ ಭಕ್ತನ ಕಿಂಕಲವೆ ಆ ಜಂಗಮಕ್ಕೆ ದಾಸೋಹ.
ಆ ಭಕ್ತರೊಳಗೆ ಆ ಜಂಗಮವಡಗಿ,
ಆ ಜಂಗಮದೊಳಗೆ ಆ ಭಕ್ತನಡಗಿ,
ಇದನೇನೆಂದು ಹವಣಿಸುವೆನಯ್ಯಾ, ಎರಡೊಂದಾದ ಘನವ ?
ಇದನೇನೆಂದುಪಮಿಸುವೆನಯ್ಯಾ, ತೆರಹಿಲ್ಲದ ಘನವ ?
ಈ ಎರಡಕ್ಕೆ ಭವವಿಲ್ಲೆಂದು ಕೂಡಲಸಂಗಯ್ಯಾ,
ನಿಮ್ಮ ಶ್ರುತಿಗಳು ಹೇಳಿದವಾಗಿ,
ನಿಮ್ಮ ಕರುಣವೆನಗೆ ಆುತ್ತು.
523
ಹರವ ನದಿಯ ತೆರನ ಹೋಲಬಲ್ಲಡೆ ಭಕ್ತಿ,
ಕೂಡೆ ಸಯದಾನವ ನೀಡಬಲ್ಲಡೆ ಭಕ್ತಿ,
ನೀಡಿ ಮಿಕ್ಕುದ ಕಾಯ್ದುಕೊಂಡಿರಬಲ್ಲಡೆ
ಕೂಡಿಕೊಂಡಿಪ್ಪ ನಮ್ಮ ಕೂಡಲಸಂಗಮದೇವ.
524
ಏನ ಮಾಡುವೆ ಎನ್ನ ಪುಣ್ಯವ ಫಲವು !
ಶಾಂತಿಯ ಮಾಡಹೋದಡೆ ಬೇತಾಳನಾಯಿತ್ತು.
ಕೂಡಲಸಂಗಮದೇವರ ಪೂಜಿಸಿಹೆನೆಂದಡೆ
ಭಕ್ತಿಯೆಂಬ ಮೃಗ ಎನ್ನನಟ್ಟಿ ಬಂದು ನುಂಗಿತ್ತಯ್ಯಾ.
525
ಭಕ್ತಿಯೆಂಬ ಪೃಥ್ವಿಯ ಮೇಲೆ, ಗುರುವೆಂಬಬೀಜವಂಕುರಿಸಿ,
ಲಿಂಗವೆಂಬ ಎಲೆಯಾುತ್ತು.
ಲಿಂಗವೆಂಬ ಎಲೆಯ ಮೇಲೆ
ವಿಚಾರವೆಂಬ ಹೂವಾುತ್ತು,
ಆಚಾರವೆಂಬ ಕಾಯಾುತ್ತು.
ನಿಷ್ಪತ್ತಿಯೆಂಬ ಹಣ್ಣು ತೊಟ್ಟು ಬಿಟ್ಟು ಕಳಚಿ ಬೀಳುವಲ್ಲಿ
ಕೂಡಲಸಂಗಮದೇವ ತನಗೆ ಬೇಕೆಂದು ಎತ್ತಿಕೊಂಡ.
526
ಸ್ವಾಮಿ ನೀನು, ಶಾಶ್ವತ ನೀನು,
ಎತ್ತಿದೆಬಿರಿದ ಜಗವೆಲ್ಲರಿಯಲು,
ಮಹಾದೇವ, ಮಹಾದೇವ,
ಇಲ್ಲಿಂದ ಮೇಲೆ ಶಬ್ದವಿಲ್ಲ.
ಪಶುಪತಿ ಜಗಕ್ಕೇಕೋದೇವ
ಸ್ವರ್ಗ ಮತ್ರ್ಯ ಪಾತಾಳದೊಳಗೆ
ಒಬ್ಬನೇ ದೇವ ಕೂಡಲಸಂಗಮದೇವ.
527
ಶ್ರುತಿಗಗಮ್ಯ ದ್ವಾದಶಾದಿತ್ಯನಪ್ರತಿಮಮಹಿಮಂಗೆ ಪ್ರತಿಯುಂಟೆ
`ಸೋಮಃ ಪವತೇ' ಎಂಬ ಶ್ರುತಿಯನರಿತು
`ಶಿವನೇಕೋದೇವ ರುದ್ರನದ್ವಿತೀಯ'ನೆಂದು
ನಂಬುವುದು ಕಾಣಿರಣ್ಣಾ.
ಕೂಡಲಸಂಗಮದೇವನಲ್ಲದೆ ಇಲ್ಲವೆಂದು ಎತ್ತಿದೆ ಬಿರಿದ,
ಜಗವೆಲ್ಲರಿಯಲು.
528
ಉಪ್ಪರಗುಡಿ ನಂದಿವಾಹನ ಸದ್ಯೋಜಾತನ ಬಾಗಿಲ ಮುಂದೆ
ಸಾರುತ್ತೈದಾವೆ, ನೋಡಾ, ಶ್ರುತಿಗಳೂ ನಾಲ್ಕು ವೇದವೂ ಹುಸಿಯಿದೆ
`ಭರ್ಗೋ ದೇವಸ್ಯ ದ್ಥೀಮಹಿ' ಎಂದುದಾಗಿ,
ಕೂಡಲಸಂಗನಲ್ಲದಿಲ್ಲೆಂದುದು ವೇದ.
529
  530
ಶ್ರುತಿತತಿಯ ಶಿರದ ಮೇಲೆ ಅತ್ಯತಿಷ*ದ್ದಶಾಂಗುಲನ ನಾನೇನೆಂಬೆನಯ್ಯಾ
ಘನಕ್ಕೆ ಘನಮಹಿಮನ ಮನಕ್ಕಗೋಚರನ !
`ಅಣೋರಣೀಯಾನ್ ಮಹತೋ ಮಹೀಯಾನ್
ಮಹಾದಾನಿ ಕೂಡಲಸಂಗಮದೇವ.
531
ಸಕಳ ನಿಷ್ಕಳವ ಕೂಡಿಕೊಂಡಿಪ್ಪೆಯಾಗಿ
ಸಕಳ ನೀನೇ, ನಿಷ್ಕಳ ನೀನೇ ಕಂಡಯ್ಯಾ.
`ವಿಶ್ವತಶ್ಚಕ್ಷು' ನೀನೇ ದೇವಾ, `ವಿಶ್ವತೋಮುಖ' ನೀನೇ ದೇವಾ,
`ವಿಶ್ವತೋಬಾಹು' ನೀನೇ ದೇವಾ, ಕೂಡಲಸಂಗಮದೇವಾ.
532
ಎತ್ತೆತ್ತ ನೋಡಿದಡತ್ತತ್ತ ನೀನೇ ದೇವಾ,
ಸಕಲವಿಸ್ತಾರದ ರೂಹು ನೀನೇ ದೇವಾ,
`ವಿಶ್ವತಶ್ಚಕ್ಷು' ನೀನೆ ದೇವಾ,
`ವಿಶ್ವತೋಮುಖ' ನೀನೆ ದೇವಾ,
`ವಿಶ್ವತೋಬಾಹು' ನೀನೇ ದೇವಾ,
`ವಿಶ್ವತಃಪಾದ' ನೀನೆ ದೇವಾ, ಕೂಡಲಸಂಗಮದೇವಾ.
533
ಜಲ ಕೂರ್ಮ ನಾಗ ಮೇದಿನಿ ಸಪ್ತಸಾಗರ
ಅಜಾಂಡ ಹರಿವಿರಂಚಿಗಳು
ನಿಮ್ಮ ಉದರದ ಕೊನೆಯ ಪ್ರಾಣಿಗಳಯ್ಯಾ.
ಕೂಡಲಸಂಗನ ಮಹಾಮನೆಯಲ್ಲಿ ಅಸ್ತಿಗ್ರಾಹಕನೆಂಬ ಗಣೇಶ್ವರನ
ಇಚ್ಛಾಮಾತ್ರದಿಂದ ಜಗಜುಗವಯ್ಯಾ.
534
ರುದ್ರ ಮುಖದಲ್ಲಿ ವಿಷ್ಣು ಭುಜದಲ್ಲಿ,
ಜಂಘೆಯಲ್ಲಿ ಅಜ ಜನನವೊ.
ಇಂದ್ರ ಪಾದದಲ್ಲಿ ಚಂದ್ರ ಮನದಲ್ಲಿ,
ಚಕ್ಷುವಿನಲ್ಲಿ ಸೂರ್ಯ ಜನನವೊ.
ಮುಖದಲ್ಲಿ ಅಗ್ನಿಯು ಪ್ರಾಣದಲ್ಲಿ ವಾಯು
ನಾಭಿಯಲ್ಲಿ ಅಂತರಿಕ್ಷವೊ.
ಸಿರದಲುದಯ ತೆತ್ತೀಸಕೋಟಿ ದೇವತೆಗಳು
ಪಾದತಳದಲ್ಲಿ ಭೂಮಿ ಜನನವೊ.
ಶ್ರೋತ್ರದಲ್ಲಿ ದಶದಿಕ್ಕುವೊ.
ಜಗವ ನಿಕ್ಷೇಪಿಸಿದ ಕುಕ್ಷಿಯಲ್ಲಿ, ಅಕ್ಷಯನಗಣಿತನು.
ಸಾಸಿರ ತಲೆ, ಸಾಸಿರ ಕಣ್ಣು, ಸಾಸಿರ ಕೈ, ಸಾಸಿರ ಪಾದ.
ಸಾಸಿರ ಸನ್ನಿಹಿತ ನಮ್ಮ ಕೂಡಲಸಂಗಯ್ಯ.
535
ವಿಶ್ವಾಧಿಕೋ ರುದ್ರನ ಹೊಗಳುವ ಶ್ರುತಿಗಳು
`ವಿಶ್ವರೂಪಾಯ ವೈ ನಮಃ
`ಪರಮರೂಪನೆ ನಮೋ, ಪರತತ್ವನೆ ನಮೋ,
ಆದಿಯಾರೂಢಭಯಂಕರನೆ ನಮೋ,
ಹರಿಯನು ಹರಿಸಿದನೇ' ಎಂದು ಶ್ರುತಿ ಸಾರುತ್ತಿರಲು
ಸಂಹಾರಕಾರಣನೆ ನಮೋ, ನಮ್ಮ ಕೂಡಲಸಂಗ
ಮಹದ್ ಮಹದ್ಭ್ಯೋ ನಮಃ.
536
ಅಯ್ದುದೇ ಬ್ರಹ್ಮನ ಕಪಾಲ ಕರದಲ್ಲಿ,
ಅಯ್ದುದೇ ವಿಷ್ಣುವಿನ ನಯನ ಪಾದದಲ್ಲಿ,
ಅಯ್ದುದೇ ಕಾಮನ ಸುಟ್ಟ ಭಸ್ಮ ಮೈಯ ಮೇಲೆ,
ಮುಖ ಮೂದಲೆಯೇಕಯ್ಯಾ, ಕೂಡಲಸಂಗಮದೇವಾ.
537
ಹರನ ಕೊರಳಲಿಪ್ಪ ಕರೋಟಿಮಾಲೆಯ
ಶಿರದ ಲಿಖಿತವ ಕಂಡು, ಮರುಳ ತಂಡಗಳು ಓದಿ ನೋಡಲು,
ಇವನಜ ಇವ ಹರಿ ಇವ ಸುರಪತಿ ಇವ ಧರಣೇಂದ್ರ
ಇವನಂತಕನೆಂದು ಹರುಷದಿಂದ ಸರಸವಾಡಿತ ಕಂಡು,
ಹರ ಮುಕುಳಿತನಾಗಿ ನಕ್ಕ, ನಮ್ಮ ಕೂಡಲಸಂಗಮದೇವ.
538
ಅದುರಿತು ಪಾದಾಘಾತದಿಂದ ಧರೆ,
ಬಿದಿರಿದುವು ಮಕುಟ ತಾಗಿ ತಾರಕೆಗಳು,
ಉದುರಿದವು ಕೈ ತಾಗಿ ಲೋಕಂಗಳೆಲ್ಲಾ !
ಮಹೀಪಾದಾಘಾತಾದ್ ವ್ರಜತಿ ಸಹಸಾ ಸಂಶಯಪದಂ
ಪದಂ ವಿಷ್ಣೋಭ್ರ್ರಾಮ್ಯದ್ ಭುಜಪರಿಘರುಗ್ಣಗ್ರಹಗಣಂ
ಮುಹುರ್‍ದ್ಯೌದೌzõ್ರ್ಞಸ್ಥ್ಯಂ ಯಾತ್ಯನಿಭೃತಜಟಾತಾಡಿತತಟಾ
ಜಗದ್ರಕ್ಷಾಯೈ ತ್ವಂ ನಟಸಿ ನನು ವಾಮೈವ ವಿಭುತಾ
ನಮ್ಮ ಕೂಡಲಸಂಗಮದೇವನಿಂದು ನಾಂಟ್ಯವನಾಡೆ.
539
ಆರು ಕೋಟಿ ಬ್ರಹ್ಮರು ಮಡಿವಲ್ಲಿ
ನಾರಾಯಣಗೊಂದು ದಿನವಾಯಿತ್ತು.
ನಾರಾಯಣರೊಂದು ಕೋಟಿ ಮಡಿವಲ್ಲಿ
ರುದ್ರನ ಕಣ್ಣೆವೆ ಹಳಚಿತ್ತು.
ರುದ್ರಾವತಾರ ಹಲವಳಿವಲ್ಲಿ
ಕೂಡಲಸಂಗಮದೇವನೇನೆಂದರಿಯ.
540
ಯುಗ ಜುಗ ಪ್ರಳಯವಹಂದೂ ಕಾಣೆನಿಂದೂ ಕಾಣೆ !
ಧಗಿಲು ಭುಗಿಲು ಎಂದುರಿವಂದೂ ಕಾಣೆನಿಂದೂ ಕಾಣೆ !
ಕೂಡಲಸಂಗಮದೇವನಲ್ಲದೆ ತಲೆದೋರುವ
ದೈವಂಗಳನಂದೂ ಕಾಣೆನಿಂದೂ ಕಾಣೆ.
541
ಒಬ್ಬ ಕೆಂಚ, ಒಬ್ಬ ಕರಿಕ, ಒಬ್ಬ ಶುದ್ಧಧವಳಿತನೆಂತಯ್ಯಾ ಲಿಂಗವೆ
ಒಬ್ಬರಿಗೊಬ್ಬರು ಘನವೆಂಬರು, ಅದೆಂತಯ್ಯಾ
ಒಬ್ಬರಿಗೊಬ್ಬರು ಹಿರಿದೆಂಬರು, ಎಂತಯ್ಯಾ
ಬ್ರಹ್ಮಂಗೆ ಪ್ರಳಯ, ವಿಷ್ಣುವಿಂಗೆ ಮರಣ ಉಂಟು.
ಕೂಡಲಸಂಗಂಗಿಲ್ಲ.
542
ಹರಿ ಹರನೊಂದೆ ಎಂದಡೆ, ಸುರಿಯುವೆ ಬಾಯಲಿ ಬಾಲಹುಳುಗಳು
ಹರಿಗೆ ಹತ್ತು ಪ್ರಳಯ, ಬ್ರಹ್ಮಂಗನಂತ ಪ್ರಳಯ,
ಹರಂಗೆ ಪ್ರಳಯ ಉಂಟೆಂಬುದ ಬಲ್ಲಡೆ ನೀವು ಹೇಳಿರೆ
ಪ್ರಳಯ ಪ್ರಳಯ ಅಂದಂದಿಂಗೆ
ಹಳೆಯ, ನಮ್ಮ ಕೂಡಲಸಂಗಮದೇವ.
543
ವಿಷ್ಣು ಕರ್ಮಿ ರುದ್ರ ನಿಷ್ಕರ್ಮಿ:ಕ್ರಮವನರಿಯದೆ ನುಡಿವಿರೊ !
ವೇದಶ್ರುತಿಗಳ ತಿಳಿಯಲರಿಯದೆ ವಾದುಮಾಡುವರೆಲ್ಲ ಕೇಳಿ:
ವಿಷ್ಣು ನಾನಾಯೋನಿಯಲ್ಲಿ ಬಾರದ ಭವಂಗಳಲ್ಲಿ ಬರುತಿಪ್ಪ,
ರುದ್ರನಾವ ಯೋನಿಯಲ್ಲಿ ಬಂದನೆಂದು ನೀವು ಹೇಳಿರೊ !
ಓಂ ವಿಷ್ಣೋಃ ಕರ್ಮಾಣಿ ಪಶ್ಯತ ಯತೋ ವ್ರತಾನಿ ಪಸ್ಪಶೇ
ಇಂದ್ರಸ್ಯ ಯುಜ್ಯಃ ಸಖಾ
ತದ್ ವಿಷ್ಣೋಃ ಪರಮಂ ಪದಂ ಸದಾ ಪಶ್ಯಂತಿ ಸೂರಯಃ
ದಿವೀವ ಚಕ್ಷುರಾತತಂ
ತದ್ ವಿಪ್ರಾಸೋ ವಿಪನ್ಯವೋ ಜಾಗೃವಾಂ ಸಃ ಸಮಿಂಧತೇ !
ವಿಷ್ಣೋರ್ಯತ್ಪರಮಂ ಪದಂ
ಎಂಬ ಶ್ರುತಿವಚನವ ತಿಳಿಯಿಂ ಭೋ !
ವರ್ಮವನೆತ್ತಿ ನುಡಿದಲ್ಲದೆ ನಿಲ್ಲಿರಿ;
ನಿಮ್ಮ ಕರ್ಮವು ಅತ್ಯತಿಷ*ದ್ದಶಾಂಗುಲದಿಂದತ್ತತ್ತಲೆ,
ಕೂಡಲಸಂಗಮದೇವಾ.
544
ಅಮೃತಮತಿ ಸೋಮಶಂಭುವಿಂಗೆ ಹುಟ್ಟಿದಾತನಿಂದ್ರ
ಸತ್ಯಋಷಿ ಜೇಷ್ಠಾದೇವಿಗೆ ಹುಟ್ಟಿದಾತ ಬ್ರಹ್ಮ.
ವಸುದೇವ ದೇವಕಿಗೆ ಹುಟ್ಟಿದಾತ ವಿಷ್ಣು.
ನಾಭಿರಾಜ ಮರುತಾದೇವಿಗೆ ಹುಟ್ಟಿದಾತನರುಹ
ಇವರೆಲ್ಲರು ಯೋನಿಜರೆಂಬುದ ತ್ರೈಜಗ ಬಲ್ಲುದು.
ಉತ್ಪತ್ತಿ ಸ್ಥಿತಿ ಪ್ರಳಯಕ್ಕೆ ಹೊರಗಾದ ಕೂಡಲಸಂಗಮದೇವಂಗೆ
ಮಾತಾಪಿತರುಗಳುಳ್ಳಡೆ ಹೇಳಿರೊ !
545
ಇಬ್ಬರು ಮೂವರು ದೇವರೆಂದು ಉಬ್ಬಿ ಮಾತನಾಡಬೇಡ,
ಒಬ್ಬನೆ ಕಾಣಿರೊ, ಇಬ್ಬರೆಂಬುದು ಹುಸಿ ನೋಡಾ !
ಕೂಡಲಸಂಗಮದೇವನಲ್ಲದಿಲ್ಲೆಂದಿತ್ತು ವೇದ.
546
ಹುಟ್ಟಿಸುವಾತ ಬ್ರಹ್ಮನೆಂಬರು, ರಕ್ಷಿಸುವಾತ ವಿಷ್ಣುವೆಂಬರು ನೋಡಾ,
ಬ್ರಹ್ಮ ತನ್ನ ಶಿರವನೇತಕ್ಕೆ ಹುಟ್ಟಿಸಲಾರ
ವಿಷ್ಣು ತನ್ನ ಮಗನನೇತಕ್ಕೆ ರಕ್ಷಿಸಲಾರ
ದುಷ್ಟನಿಗ್ರಹ ಶಿಷ್ಟಪ್ರತಿಪಾಲಕ ನಮ್ಮ ಕೂಡಲಸಂಗಮದೇವ.
547
  548
ನಾರಾಯಣನೆಂಬವನ ಕಾಣೆ, ಗೀರಾಯಣನೆಂಬವನ ಕಾಣೆ
ಬೊಮ್ಮನೆಂಬವನ ಕಾಣೆ, ಗಿಮ್ಮನೆಂಬವನ ಕಾಣೆ.
ವಿಷವಟ್ಟಿ ಸುಡುವಲ್ಲಿ, ವೀರಭದ್ರ ಬಡಿವಲ್ಲಿ
ಕೂಡಲಸಂಗಯ್ಯಂಗೆ ಶರಣೆಂದು ಮೊರೆಯಿಟ್ಟರೆಲ್ಲರು.
549
ಅಮೃತವ ಕಡೆವಲ್ಲಿ, ವಿಷವಟ್ಟಿ ಸುಡುವಲ್ಲಿ,
ದೇವರೆಂಬವರೆತ್ತ ಹೋದರೇನಿಂ ಭೋ
ಅಂದೊಮ್ಮೆ ಓಡಿಹೋಗಿ ಆ ಶಿವನ ಮರೆಯ ಹೋಗುವಂದು
ದೇವರೆಂಬವರೆತ್ತ ಹೋದರೇನಿಂ ಭೋ
ಕೂಡಲಸಂಗಯ್ಯ ದೇವರಿಗೆ ದೇವನು,
ಇವರೆಲ್ಲ ಆಳೆಂಬುದನರಿಯಿರಿಂ ಭೋ !
550
ವಿಷ್ಣು ಬಲ್ಲಿದನೆಂಬೆನೆ
ದಶಾವತಾರದಲ್ಲಿ ಭಂಗಬಟ್ಟುದಕ್ಕೆ ಕಡೆಯಿಲ್ಲ.
ಬ್ರಹ್ಮ ಬಲ್ಲಿದನೆಂಬೆನೆ
ಶಿರ ಹೋಗಿ ನಾನಾ ವಿಧಿಯಾದ.
ವೇದ ಬಲ್ಲಿತ್ತೆಂಬೆನೆ
ನಾನಾಮುಖದಲ್ಲಿ ಸ್ತುತಿಯಿಸಿತ್ತಲ್ಲದೆ
ಲಿಂಗದ ನಿಲುಕಡೆಯ ಕಾಣದು.
ಶಾಸ್ತ್ರ ಬಲ್ಲಿತ್ತೆಂಬೆನೆ ಶಬ್ದಕ್ರೀ.
ಪುರಾಣ ಬಲ್ಲಿತ್ತೆಂಬೆನೆ ಪೂರ್ವಕ್ರೀ.
ಆಗಮ ಬಲ್ಲಿತ್ತೆಂಬೆನೆ ವಾಯ ಹೊಂದಿತ್ತು.
ಇದು ಕಾರಣ ಕೂಡಲಸಂಗಯ್ಯನೆ ನಿತ್ಯ,
ಉಳಿದ ದೈವವೆಲ್ಲ ಅನಿತ್ಯ ಕಾಣೆ ಭೋ.
551
ಮರೆಯಲಾಗದು ಹರಿಯ ಮರೆಯಲಾಗದು ಬ್ರಹ್ಮನ !
ಮರೆಯಲಾಗದು ತೆತ್ತೀಸಕೋಟಿ ದೇವರ್ಕಳ !
ನಮ್ಮ ಕೂಡಲಸಂಗಮದೇವರ ಮರೆಯಲಹುದು.
552
ಬಿದಿರೆಲೆಯ ಮೆಲಿದಡೆ ಮೆಲಿದಂತಲ್ಲದೆ,
ರಸವ ಹಡೆಯಲು ಬಾರದು,
ಮಳಲ ಹೊಸೆದಡೆ ಹೊಸೆದಂತಲ್ಲದೆ,
ಸರವಿಯ ಹಡೆಯಲುಬಾರದು.
ನೀರ ಕಡೆದಡೆ ಕಡೆದಂತಲ್ಲದೆ,
ಬೆಣ್ಣೆಯ ಹಡೆಯಲುಬಾರದು.
ನಮ್ಮ ಕೂಡಲಸಂಗಮದೇವನಲ್ಲದೆ
ಅನ್ಯದೈವಕ್ಕೆರಗಿದಡೆ
ಹೊಳ್ಳ ಕುಟ್ಟಿ ಕೈ ಹೊಟ್ಟೆಯಾದಂತೆ ಆಯಿತ್ತಯ್ಯಾ.
553
ಅಗಳೂ ಲೋಗರ ಮನೆಯ ಬಾಗಿಲ ಕಾಯ್ದುಕೊಂಡಿಪ್ಪವು ಕೆಲವು
ದೈವಂಗಳು.
ಹೋಗೆಂದಡೆ ಹೋಗವು,
ನಾಯಿಗಿಂದ ಕರಕಷ್ಟ ಕೆಲವು ದೈವಂಗಳು.
ಲೋಗರ ಬೇಡಿಕೊಂಡುಂಬ ದೈವಂಗಳು
ತಾವೇನ ಕೊಡುವವು ಕೂಡಲಸಂಗಮದೇವಾ.
554
ಗಾಡಿಗ ಡಿಂಬುಗಂಗೆ
ಚಿಕ್ಕುಮುಟ್ಟಿಗೆ, ಹಸುರಂಬಲಿಮುಟ್ಟಿಗೆ, ಹುರಿಬುತ್ತಿಯ ಬೇಡಿ,
ಮನುಷ್ಯರ ಪಿಡಿದು ಪೀಡಿಸಿ, ತಮ್ಮ ಬಸುರ್ಗೆ ಕಾಣದೆ,
ಈಡಾಡಿದ ಕೂಳಂಬಲಿಯನಾಯ್ದು ಕುರುಕುವ
ಹೇಸಿ ದೈವಂಗಳ ಬೇಡಿ ಬೇಡಿ ನಿರರ್ಥ ಕೆಡಬೇಡ, ಎಲವೋ,
ಕೂಡಲಸಂಗಮದೇವರ ನೆರೆನಂಬುವುದೆಲವೊ.
555
ಹಾಳು ಮೊರಡಿಗಳಲ್ಲಿ ಊರ ದಾರಿಗಳಲ್ಲಿ
ಕೆರೆ ಬಾವಿ ಹೂಗಿಡು ಮರಂಗಳಲ್ಲಿ
ಗ್ರಾಮಮಧ್ಯಂಗಳಲ್ಲಿ ಜಲಪಥ ಪಟ್ಟಣಪ್ರವೇಶದಲ್ಲಿ
ಹಿರಿಯಾಲದ ಮರದಲ್ಲಿ ಮನೆಯ ಮಾಡಿ,
ಕರೆವೆಮ್ಮೆಯ ಹಸುಗೂಸು ಬಸುರಿ ಬಾಣಂತಿ
ಕುಮಾರಿ ಕೊಡಗೂಸು ಎಂಬವರ ಹಿಡಿದುಂಬ ತಿರಿದುಂಬ
ಮಾರಯ್ಯ ಬೀರಯ್ಯ ಕೇಚರಗಾವಿಲ ಅಂತರಬೆಂತರ
ಕಾಳಯ್ಯ ಮಾರಯ್ಯ ಮಾಳಯ್ಯ ಕೇತಯ್ಯಗಳೆಂಬ ನೂರು ಮಡಕೆಗೆ
ನಮ್ಮ ಕೂಡಲಸಂಗಮದೇವ ಶರಣೆಂಬುದೊಂದೆ ದಡಿ ಸಾಲದೆ.
556
ಅರಗು ತಿಂದು ಕರಗುವ ದೈವವನೆಂತು ಸರಿಯೆಂಬೆನಯ್ಯಾ
ಉರಿಯ ಕಂಡಡೆ ಮುರುಟುವ ದೈವವನೆಂತು ಸರಿಯೆಂಬೆನಯ್ಯಾ
ಅವಸರ ಬಂದಡೆ ಮಾರುವ ದೈವವನೆಂತು ಸರಿಯೆಂಬೆನಯ್ಯಾ
ಅಂಜಿಕೆಯಾದಡೆ ಹೂಳುವ ದೈವವನೆಂತು ಸರಿಯೆಂಬೆನಯ್ಯಾ
ಸಹಜಭಾವ ನಿಜೈಕ್ಯ ಕೂಡಲಸಂಗಮದೇವನೊಬ್ಬನೆ ದೇವ.
557
ಮಾರಿಕವ್ವೆಯ ನೋಂತು ಕೊರಳಲ್ಲಿ ಕಟ್ಟಿಕೊಂಬರು,
ಸಾಲಬಟ್ಟಡೆ ಮಾರಿಕೊಂಬರಯ್ಯಾ,
ಸಾಲಬಟ್ಟಡೆ ಅವರನೊತ್ತೆಯಿಟ್ಟು ಕೊಂಡುಂಬರಯ್ಯಾ.
ಮಾರುವೋಗನೊತ್ತೆಯೋಗ
ನಮ್ಮ ಕೂಡಲಸಂಗಮದೇವ.
558
ಉಣಲುಡಲು ಮಾರಿಯಲ್ಲದೆ, ಕೊಲಲು ಕಾಯಲು ಮಾರಿಯೆ
ತನ್ನ ಮಗನ ಜವನೊಯ್ದಲ್ಲಿ ಅಂದೆತ್ತ ಹೋದಳು ಮಾರಿಕವ್ವೆ
ಈವಡೆ ಕಾವಡೆ ನಮ್ಮ ಕೂಡಲಸಂಗಯ್ಯನಲ್ಲದೆ
ಮತ್ತೊಂದು ದೈವವಿಲ್ಲ.
559
ಮೊರನ ಗೋಟಿಲಿ ಬಪ್ಪ ಕಿರುಕುಳದೈವಕ್ಕೆ
ಕುರಿಯನಿಕ್ಕಿಹೆವೆಂದು ನಲಿನಲಿದಾಡುವರು,
ಕುರಿ ಸತ್ತು ಕಾವುದೆ ಹರ ಮುಳಿದವರ
ಕುರಿ ಬೇಡ ಮರಿ ಬೇಡ,
ಬರಿಯ ಪತ್ರೆಯ ತಂದು ಮರೆಯದೆ ಪೂಜಿಸು
ನಮ್ಮ ಕೂಡಲಸಂಗಮದೇವನ.
560
ಬನ್ನಿರೇ ಅಕ್ಕಗಳು, ಹೋಗಿರೇ ಆಲದ ಮರಕ್ಕೆ.
ಕಚ್ಚುವುದೇ ನಿಮ್ಮ, ಚಿಪ್ಪಿನ ಹಲ್ಲುಗಳು.
ಬೆಚ್ಚಿಸುವುವೇ ನಿಮ್ಮ, ಬಚ್ಚಣಿಯ ರೂಹುಗಳು.
ನಮ್ಮ ಕೂಡಲಸಂಗಮದೇವನಲ್ಲದೆ
ಪರದೈವಂಗಳು ಮನಕ್ಕೆ ಬಂದವೆ
ಬಿಕ್ಕನೆ ಬಿರಿವ ದೈವಂಗಳು.
561
ಮಡಕೆ ದೈವ, ಮೊರ ದೈವ, ಬೀದಿಯ ಕಲ್ಲು ದೈವ,
ಹಣಿಗೆ ದೈವ, ಬಿಲ್ಲನಾರಿ ದೈವ, ಕಾಣಿರೊ !
ಕೊಳಗ ದೈವ, ಗಿಣ್ಣಿಲು ದೈವ, ಕಾಣಿರೊ !
ದೈವ ದೈವವೆಂದು ಕಾಲಿಡಲಿಂಬಿಲ್ಲ,
ದೈವನೊಬ್ಬನೆ ಕೂಡಲಸಂಗಮದೇವ.
562
  563
ಲಿಂಗಶಿವಾಲಯದ ಮುಂದೆ ಸಿಂಹ ಶೂದ್ರಿಕನಲ್ಲದಿಲ್ಲ,
ನಂದಿಕೇಶ್ವರ ಭೃಂಗಿನಾಂಟ್ಯ ನಮ್ಮ ಲಿಂಗನ ಮುಂದೆ.
ಇದಕ್ಕೆ ದಿಷ್ಟದೀವಿಗೆ, ನಮ್ಮ ಲಿಂಗನ ಮುಂದೆ
ಅನ್ಯದೈವವೆಂಬುದ ತೋರಿಯೂ ಕಾಣಬಾರದು.
ನೊಸಲಕಣ್ಣ ಅಭವನೊಬ್ಬನೆ ದೈವ ಕೂಡಲಸಂಗಮದೇವ.
564
ಗುಡಿಯೊಳಗಿರ್ದು ಗುಡಿಯ ನೇಣ ಕೊಯಿದಡೆ,
ಗುಡಿಯ ದಡಿಗೆ ಬಿದ್ದು ಹಲ್ಲು ಹೋಹುದು, ನೋಡಾ,
ಪೊಡವಿಗೀಶ್ವರನ ಗರ್ಭಾವಾಸದೊಳಗಿರ್ದು ನುಡಿವರು
ಮತ್ತೊಂದು ದೈವವುಂಟೆಂದು.
ತುಡುಗುಣಿನಾಯನು ಪಿಡಿತಂದು ಸಾಕಿದಡೆ
ತನ್ನೊಡೆಯಂಗೆ ಬಗಳುವಂತೆ ಕಾಣಾ
ಕೂಡಲಸಂಗಮದೇವಾ.
565
ಅಸಮಾಕ್ಷಲಿಂಗಕ್ಕೆ ಅನ್ಯದೈವವ ಸರಿಯೆಂಬವನ ಬಾಯಲ್ಲಿ
ಮಸೆದ ಕೂರಲಗನಿಕ್ಕದೆ ಮಾಬನೆ
ಹುಸಿಯಾಗಿ ನುಡಿವವನ ನಾಯಾಗಿ ಬಗುಳಿಸನೆ
ಹಿರಿಯರುತ್ತಮರೆನ್ನದವರ ಕುದುರೆಯಾಗಿ ಕಟ್ಟಿಸನೆ
ಗುರುಲಘುವೆನ್ನದವರ ಬಾಯಲ್ಲಿ ಮೆಟ್ಟಿ ಹುಡಿಯ ಹೊಯ್ಯದೆ ಮಾಬನೆ
ಪರಸ್ತ್ರೀಗಳುಪಿದವರ ಗಾಣದಲಿಕ್ಕಿ ಹಿಳಿಯನೆ
ಪರಧನಕ್ಕಳುಪಿದವರ ಹಿಡಿ ಖಂಡವ ಕೊಯ್ಯನೆ
ಎಲೆ ಕೂಡಲಸಂಗಮದೇವಾ, ನಿಮ್ಮ ಹೇಳಿದ ಹೇಳಿಕೆಯಿಂದ
ಪಿಂಬೇರ ಮೈ[ಲುಗ] ಮೇಳವಾಡುತ ಇದ್ದ ಕಾಣಾ, ತೃಜಗದೊಳಗೆ.
566
ಶಿವಮಯ ವಿಷ್ಣುವಲ್ಲ, ವಿಷ್ಣುಮಯ ಶಿವನಲ್ಲ, ನುಡಿಯದಿರಿಂ ಭೋ !
ನಾರಾಯಣ ಹರನಲ್ಲ ನುಡಿಯದಿರಿಂ ಭೋ !
ಶಿವನು ವಿಷ್ಣುವಲ್ಲ ನುಡಿಯದಿರಿಂ ಭೋ !
ನಮ್ಮ ಕೂಡಲಸಂಗಯ್ಯನನರಿಯದ ಸೂನೆಗಾರರೆಲ್ಲ
ನುಡಿಯದಿರಿಂ ಭೋ !
567
ಅವಲಕ್ಷಣ ನಾಯನುಡಿಯ ನಾಲಗೆಯ ಸಡಗರ
ಡೊವಿಗೆ ಮೃತ್ಯುವಿನ ನುಡಿಗೊಳಗಾಯಿತ್ತು.
ಬೇಡವೋ ಪರವಾದಿ ಗಳುಹದಿರು.
ಬೇಡವೊ ದೂಷಕ ಬಗುಳದಿರು.
ಭಕ್ತಿಗೆಯೂ ಬೋಟ್ಟಕ್ಕೆಯೂ ಜಾತಿಸೂತಕವುಂಟೆ
ಪರುಷ ಮುಟ್ಟಲು ಕಬ್ಬುನ ಹೊನ್ನಾಯಿತ್ತು, ಕಾಣಾ.
ನಮ್ಮ ಕೂಡಲಸಂಗನ ಶರಣರನವರಿವರೆಂದಡೆ
ಕುಂಭಿಪಾತಕ ನಾಯಕನರಕ ತಪ್ಪದು ಕಾಣಾ.
568
ವಿಷ್ಣುವ ಪೂಜಿಸಿ ಮುಡುಹ ಸುಡಿಸಿಕೊಂಬುದ ಕಂಡೆ,
ಜಿನನ ಪೂಜಿಸಿ ಬತ್ತಲೆಯಿಪ್ಪುದ ಕಂಡೆ,
ಮೈಲಾರನ ಪೂಜಿಸಿ ನಾಯಾಗಿ ಬಗಳುವುದ ಕಂಡೆ,
ನಮ್ಮ ಕೂಡಲಸಂಗನ ಪೂಜಿಸಿ ದೇವಾ,
ಭಕ್ತರೆನಿಸಿಕೂಂಬುದ ಕಂಡೆ.
569
ಬ್ರಾಹ್ಮಣನೆ ದೈವನೆಂದು ನಂಬಿದ ಕಾರಣ
ಗೌತಮಮುನಿಗೆ ಗೋವೇಧೆಯಾಯಿತ್ತು.
ಬ್ರಾಹ್ಮಣನೆ ದೈವವೆಂದು ನಂಬಿದ ಕಾರಣ
ಬಲಿಗೆ ಬಂಧನವಾಯಿತ್ತು.
ಬ್ರಾಹ್ಮಣನೆ ದೈವವೆಂದು ನಂಬಿದ ಕಾರಣ
ಕರ್ಣನ ಕವಚ ಹೋಯಿತ್ತು
ಬ್ರಾಹ್ಮಣನೆ ದೈವವೆಂದು ನಂಬಿದ ಕಾರಣ
ದಕ್ಷಂಗೆ ಕುರಿದಲೆಯಾಯಿತ್ತು.
ಬ್ರಾಹ್ಮಣನೆ ದೈವವೆಂದು ನಂಬಿದ ಕಾರಣ
ಪರಶುರಾಮ ಸಮುದ್ರಕ್ಕೆ ಗುರಿಯಾದನು.
ಬ್ರಾಹ್ಮಣನೆ ದೈವವೆಂದು ನಂಬಿದ ಕಾರಣ
ನಾಗಾರ್ಜುನನ ತಲೆ ಹೋಯಿತ್ತು.
ದೇವಾ, ಭಕ್ತನೆಂದು ನಂಬಿದ ಕಾರಣ
ನಮ್ಮ ಕೂಡಲಸಂಗನ ಶರಣರು ಕೈಲಾಸವಾಸಿಗಳಾದರು.
570
ಆದಿ ಪುರಾಣ ಅಸುರರಿಗೆ ಮಾರಿ,
ವೇದಪುರಾಣ ಹೋತಿಂಗೆ ಮಾರಿ,
ರಾಮಪುರಾಣ ರಕ್ಕಸರಿಗೆ ಮಾರಿ,
ಭಾರತಪುರಾಣ ಗೋತ್ರಕ್ಕೆ ಮಾರಿ.
ಎಲ್ಲಾ ಪುರಾಣ ಕರ್ಮಕ್ಕೆ ಮೊದಲು,
ನಿಮ್ಮ ಪುರಾಣಕ್ಕೆ ಪ್ರತಿಯಿಲ್ಲ
ಕೂಡಲಸಂಗಮದೇವಾ.
571
ನಿಮ್ಮ ವಚನವೆನ್ನ ಪುಣ್ಯವೆಂಬುದು.
ಹುಸಿಯಾಯಿತ್ತು ನೋಡಾ ಶಾಸ್ತ್ರದ ವಚನ ಹೋತಿಂಗೆ ಮಾರಿ,
ಎಂತು ನಂಬುವೆನಯ್ಯಾ ?
ನಾನು ಕೊಲ್ಲೆನು, ನೇಣು ಕೊಂದಿತೆಂಬ ಸೂನೆಗಾರರನೇನೆಂಬೆ
ಕೂಡಲಸಂಗಮದೇವಾ.
572
ಮಾತಿನ ಮಾತಿಂಗೆ ನಿನ್ನ ಕೊಂದಹರೆಂದು
ಎಲೆ ಹೋತೇ ಅಳು, ಕಂಡಾ !
ವೇದವನೋದಿದವರ ಮುಂದೆ ಅಳು, ಕಂಡಾ !
ಶಾಸ್ತ್ರ ಕೇಳಿದವರ ಮುಂದೆ ಅಳು, ಕಂಡಾ !
ನೀನತ್ತುದಕ್ಕೆ ತಕ್ಕುದ ಮಾಡುವ ಕೂಡಲಸಂಗಮದೇವ.
573
ದಕ್ಷಯಾಗವ ನಡೆಸಲೆಂದು ಅಜಮುಖ್ಯರಾದ ಸುರರೆಲ್ಲ
ನೆರೆದು ಬಂದ ಬಾಯ ನೋಡಾ.
ಬಾಯ ತಪ್ಪಿಸಿ ಉಣಬಂದ ದೈವದ ಬೆಂದ ಬಾಯ ನೋಡಾ.
ಉಣ್ಣದೆ ಉಡದೆ ಹೊಗೆಯ ಕೈಯಲಿ ಸತ್ತ ಅಣ್ಣಗಳ ಕೇಡ ನೋಡಾ
ಕೂಡಲಸಂಗಮದೇವಾ.
574
ಏನಯ್ಯಾ, ವಿಪ್ರರು ನುಡಿದಂತೆ ನಡೆಯರು, ಇದೆಂತಯ್ಯಾ
ತಮಗೊಂದು ಬಟ್ಟೆ, ಶಾಸ್ತ್ರಕೊಂದು ಬಟ್ಟೆ !
ಕೂಡಲಸಂಗಮದೇವಯ್ಯಾ, ಹೊಲೆಯರ ಬಸುರಲ್ಲಿ
ವಿಪ್ರರು ಹುಟ್ಟಿ ಗೋಮಾಂಸ ತಿಂಬರೆಂಬುದಕ್ಕೆ ಇದೆ ದೃಷ್ಟ.
575
ಹೊಲೆಯೊಳಗೆ ಹುಟ್ಟಿ ಕುಲವನರಸುವೆ,
ಎಲವೊ, ಮಾತಂಗಿಯ ಮಗ ನೀನು.
ಸತ್ತುದನೆಳೆವನೆತ್ತಳ ಹೊಲೆಯ
ಹೊತ್ತು ತಂದು ನೀವು ಕೊಲುವಿರಿ.
ಶಾಸ್ತ್ರವೆಂಬುದು ಹೋತಿಂಗೆ ಮಾರಿ,
ವೇದವೆಂಬುದು ನಿಮಗೆ ತಿಳಿಯದು.
ನಮ್ಮ ಕೂಡಲಸಂಗನ ಶರಣರು.
ಕರ್ಮವಿರಹಿತರು, ಶರಣಸನ್ನಿಹಿತರು, ಅನುಪಮಚಾರಿತ್ರರು.
ಅವರಿಗೆ ತೋರಲು ಪ್ರತಿಯಿಲ್ಲವೋ.
576
ಇಟ್ಟಿಯ ಹಣ್ಣ ನರಿ ತಿಂದು ಸೃಷ್ಟಿ ತಿರುಗಿತ್ತೆಂಬಂತೆ
ಮಟ್ಟಿಯನಿಟ್ಟ ದ್ವಿಜರ ಮಾತದೇಕೆ
ಹಗಲುಗಾಣದ ಗೂಗೆ ಇರುಳಾಯಿತ್ತೆಂದಡೆ,
ಜಗಕ್ಕೆ ಇರುಳಪ್ಪುದೆ ಮರುಳೆ
ಹೋಮದ ನೆವದಲ್ಲಿ ಹೋತನು ಕೊಂದು ತಿಂಬ
ಅನಾಮಿಕರೊಡನಾಡಿ ಗೆಲಿವುದೇನು
ಕೂಡಲಸಂಗಮದೇವಾ.
577
ಮೀಂಬುಲಿಗನ ಹಕ್ಕಿಯಂತೆ ನೀರ ತಡಿಯಲಿದ್ದು
ಮೂಗ ಹಿಡಿದು ಧ್ಯಾನಮಾಡುವರಯ್ಯಾ.
ಬಿಟ್ಟ ಮಂಡೆವೆರಸಿ ಬಾಯ ಮಿಡುಕಿಸುತ
ಕಣ್ಣ ಮುಚ್ಚಿ ಬೆರಳನೆಣಿಸುವರಯ್ಯಾ-
[ತ]ಮ್ಮ ಕೈಯಲಿ ಕಟ್ಟಿದ ದರ್ಭೆಯ ಹುಲ್ಲು
ಕೂಡಲಸಂಗನನರಿಯದೆ ಮೊರೆಯಿಡುವಂತೆ.
578
ಮಾಣದೆ ಅರಳೆಯ ತಿಟ್ಟನೆ ತಿರುಗುವ ಗಾಣದೆತ್ತಿನಂತೆ,
ಪೂರ್ವಲಿಖಿತ ಮುಂದುಗಾಣಲೀಯದು.
ನೀವೆಲ್ಲ ವಾಯಕ್ಕೆ ಕೆಡಬೇಡ, ಮಾಣದೆ ಪೂಜಿಸು ಲಿಂಗವ.
ಹೆರರ ಗೋಣ ಕೊಯ್ದೆನೆಂದು ಮಂತ್ರವನೋದುವ
ನೇಣುಗಾರರ ಮೆಚ್ಚ ಕೂಡಲಸಂಗಮದೇವ.
579
ನೀರ ಕಂಡಲ್ಲಿ ಮುಳುಗುವರಯ್ಯಾ,
ಮರನ ಕಂಡಲ್ಲಿ ಸುತ್ತುವರಯ್ಯಾ.
ಬತ್ತುವ ಜಲವ, ಒಣಗುವ ಮರನ
ಮಚ್ಚಿದವರು ನಿಮ್ಮನೆತ್ತ ಬಲ್ಲರು
ಕೂಡಲಸಂಗಮದೇವಾ.
580
ಕಣ್ಣ ಮಚ್ಚಿ ಕನ್ನಡಿಯ ತೋರುವಂತೆ,
ಇರುಳು ಹಗಲಿನ ನಿದ್ರೆ ಸಾಲದೆ
ಬೆರಳನೆಣಿಸಿ ಪರಮಾರ್ಥವ ಹಡೆವಡೆ
ಚೋದ್ಯವಲ್ಲವೆ ಹೇಳಾ.
ಮೂಗ ಮುಚ್ಚಿ ಮುಕ್ತಿಯ ಬಯಸುವ
ನಾಚಿಕೆಯಿಲ್ಲದವರ ನಾನೇನೆಂಬೆ,
ಕೂಡಲಸಂಗಮದೇವಾ.
581
ಬ್ರಹ್ಮಸಭೆ ನೆರೆದಲ್ಲಿ ಬ್ರಹ್ಮವಿತ್ತುಗಳು ಬ್ರಹ್ಮತ್ವವಡೆದು,
ತಮ್ಮ ವಚನಬ್ರಹ್ಮರೆನಿಸಿಕೊಂಡು ನೆಮ್ಮುವರು ವಿಷ್ಣುವನು-
ತಮ್ಮ ದೈವವ ಬಿಡುವುದಾವುದುಚಿತ
ವಿಷ್ಣು ಶಿವಭಕ್ತನಾಗಿ ನಿಷ್ಠೆಯಿಂದ ಕಣ್ಣನಿತ್ತು ಹಡೆದನು
ಶಿವಭಕ್ತಿಯಿಂದ.
ಕಷ್ಟಜಾತಿ ಜೀವಿಗಳಿಗೆ ಮಟ್ಟಿ ಎಂತು ಬಂದತ್ತೊ !
ಮುಟ್ಟರೊಂದುವನು ಮೂವಿಧಿಬಟ್ಟರೊ !
ಹುಸಿವನೆ ಹೊಲೆಯನೆಂದು ವಚನವುಂಟು ಲೋಕದಲ್ಲಿ.
ಹುಸಿದಜನ ಶಿರ ಹೋಯಿತ್ತಾದಿಯಲ್ಲಿ,
ಎಸವೋದ ಕಿರುಪಶುವನುಸರಲೀಯದೆ
ವಿ[ದಾರಿ]ಸಿ ತಿಂಬ ಜನ್ಮ ಅದಾವ ಫಲವೋ.
ದಕ್ಷ ಯಾಗವ ಮಾಡಿ ನಿಕ್ಷೇತ್ರ ನೆರೆದ ಅಕಟಕಟಾ,
ಕೇಳಿಯೂ ಏಕೆ ಮಾಣಿರೊ
ಮಮಕರ್ತ ಕೂಡಲಸಂಗನ ಶರಣರು ಅಕ್ಷಯರದ್ಥಿಕರು,
ವಿಪ್ರರು ಕೀಳು ಜಗವೆಲ್ಲರಿಯಲು !
582
ಕುಲದಲ್ಲಿ ಹಾರುವನು ಬ್ರಹ್ಮೇತಿಗೆ ಸಾರುವನು
ಆರೊ ಮಾಡಿದ ಪಾಪಕ್ಕೆ ತಾನೆ ಕೈಯಾನುವನು.
ಸರಿಯೆ ದೇವಭಕ್ತಂಗಿವನು
ಸರಿಯೆ ಲಿಂಗಭಕ್ತಂಗಿವನು
ಬಡಗಿ ಮಾಚಲದೇವಿಯ ಕುಲಜೆಯ ಮಾಡಿಹೆವೆಂದು
ಹೊನ್ನ ಕಪಿಲೆಯ ರವಣಶಾಖದ ಉಚ್ಛಿಷ್ಟದ ಹಾಲಿನಿಂದ
ಕೂಳನಟ್ಟುಂಬವರನೇನೆಂಬೆ
ಕೂಡಲಸಂಗಮದೇವಾ.
583
ನರಜನ್ಮದಲ್ಲಿ ಹುಟ್ಟಿ ಲಿಂಗಮುಖವನರಿಯದೆ
ಉದಮದ ಸೊಕ್ಕಿ ತಲೆಗೇರಿತ್ತೆ ಅಯ್ಯಾ
`ಜೀವೋ ಜೀವೇನ ಭಕ್ಷ್ಯತೇ ಕರ್ಮಕರ್ಮದಲಿಪ್ಪೆಯಯ್ಯಾ.
ಅಂದೊಮ್ಮೆ ದಕ್ಷನು ಹೋತನ ಕೊಂದಲ್ಲಿ
ಘೋಳಿಡಲಿ ಘೋಳಿಡಲಿ ತಂದಿಕ್ಕಿತ್ತೆ ವೇದ
ಶಾಸ್ತ್ರಂಗಳು ಮೂರುತಿಗೊಂಡಲ್ಲಿ
ಚತುರ್ವೇದಿಗಳಿಗೊಮ್ಮೆ ಅಕ್ಕಿತ್ತೆ ಅಯ್ಯಾ !
ನಮ್ಮ ಕೂಡಲಸಂಗಮದೇವನನರಿಯದ ಕಾರಣ
ನಾಯಕನರಕದಲ್ಲಿಕ್ಕಿತ್ತಯ್ಯಾ.
584
ಕಿಚ್ಚು ದೈವವೆಂದು ಹವಿಯನಿಕ್ಕುವ ಹಾರುವರ ಮನೆಯಲು
ಕಿಚ್ಚೆದ್ದು ಸುಡುವಾಗ
ಬಚ್ಚಲ ನೀರ, ಬೀದಿಯ ದೂಳ ಹೊಯ್ದು
ಬೊಬ್ಬಿಟ್ಟೆಲ್ಲರ ಕರೆವರಯ್ಯಾ.
ಕೂಡಲಸಂಗಮದೇವಾ,
ವಂದನೆಯ ಮರೆದು ನಿಂದಿಸುತ್ತಿದ್ದರು.
585
ವೇದವನೋದಿದ ವಿಪ್ರರು ಹೊನಲಲ್ಲಿ ಹೋದ ಕೇಡ ನೋಡಿರೇ!
`ಭರ್ಗೋ ದೇವಸ್ಯ ಧೀಮಹಿ' ಎಂಬರು,
ಒಬ್ಬರಿಗಾಗಿ ವಿಚಾರವಿಲ್ಲ, ನೋಡಿರೇ
ಕೂಡಲಸಂಗಮದೇವಾ.
586
ಎನಿಸನೋದಿದಡೇನು ! ಎನಿಸ ಕೇಳಿದಡೇನು !
ಚತುರ್ವೇದಪಠ ತೀವ್ರವಾದಡೇನು
ಲಿಂಗಾರ್ಚನೆ ಹೀನವಾದಡೆ, ಶಿವಶಿವಾ !
ಬ್ರಾಹ್ಮಣನೆಂಬೆನೆ ಎನಲಾಗದು.
ಜನ್ಮನಾ ಜಾಯತೇ ಶೂದ್ರಃ ಕರ್ಮಣಾ ದ್ವಿಜ ಉಚ್ಯತೇ
ಶ್ರುತೇನ ಶ್ರೋತ್ರಿಯಶ್ಚೈವ ಬ್ರಹ್ಮ ಚರತಿ ಬ್ರಾಹ್ಮಣಾ ಎಂದುದಾಗಿ
ಬ್ರಹ್ಮನಾಸ್ತಿ ಶ್ವಪಚರಧಮರೆಂದುದಾಗಿ,
ಇದು ಕಾರಣ ಕೂಡಲಸಂಗಮದೇವಾ
`ವೇದಭಾರಭರಾಕ್ರಾಂತಾ ಬ್ರಾಹ್ಮಣಾಃ ಗರ್ದಭಾಃ ಎಂಬೆನು.
587
ನಿಮ್ಮನರಿಯದ ಕಾರಣ ಕೈಯಲ್ಲಿ ಹುಲ್ಲು !
ನಿಮಗೆರಗದ ಕಾರಣ ಕೊರಳಲ್ಲಿ ನೇಣು !
ಹಿಂಡಲೇಕೋ ತೊಳೆಯಲೇಕೋ !
ಮುಳುಗಿ ಮುಳುಗಿ ಮೂಗ ಹಿಡಿಯಲೇಕೋ !
ಕೂಡಲಸಂಗನ ಶರಣರಲ್ಲಿ
ಡೋಹರ ಕಕ್ಕಯ್ಯನಾವ ತೊರೆಯಲಿ ಮಿಂದ.
588
ವ್ಯಾಸ ಬೋವಿತಿಯ ಮಗ, ಮಾರ್ಕಂಡೇಯ ಮಾತಂಗಿಯ ಮಗ,
ಮಂಡೋದರಿ ಕಪ್ಪೆಯ ಮಗಳು.
ಕುಲವನರಸದಿರಿಂ ಭೋ ! ಕುಲದಿಂದ ಮುನ್ನೇನಾದಿರಿಂ ಭೋ !
ಸಾಕ್ಷಾತ್ ಅಗಸ್ತ್ಯ ಕಬ್ಬಿಲ, ದುರ್ವಾಸ ಮುಚ್ಚಿಗ, ಕಶ್ಯಪ ಕಮ್ಮಾರ,
Põ್ಞಂಡಿನ್ಯನೆಂಬ ಋಷಿ ಮೂರು ಭುವನರಿಯದೆ ನಾವಿದ ಕಾಣಿ ಭೋ !
ನಮ್ಮ ಕೂಡಲಸಂಗನ ವಚನವಿಂತೆಂದುದು
ಶ್ವಪಚೋಪಿಯಾದಡೇನು, ಶಿವಭಕ್ತನೆ ಕುಲಜಂ ಭೋ !
589
ಹೊಲೆಗಂಡಲ್ಲದೆ ಪಿಂಡದ ನೆಲೆಗಾಶ್ರಯವಿಲ್ಲ
ಜಲ-ಬಿಂದುವಿನ ವ್ಯವಹಾರ ಒಂದೇ,
ಆಶೆಯಾಮಿಷರೋಷಹರುಷ ವಿಷಯಾದಿಗಳೆಲ್ಲಾ ಒಂದೇ.
ಏನನೋದಿ, ಏನ ಕೇಳಿ, ಏನು ಫಲ
ಕುಲಜನೆಂಬುದಕ್ಕೆ ಆವುದು ದೃಷ್ಟ
ಸಪ್ತಧಾತುಸಮಂ ಪಿಂಡಂ ಸಮಯೋನಿಸಮದ್ಭವಂ
ಆತ್ಮಜೀವಸಮಾಯುಕ್ತಂ ವರ್ಣಾನಾಂ ಕಿಂ ಪ್ರಯೋಜನಂ ಎಂದುದಾಗಿ,
ಕಾಸಿ ಕಮ್ಮಾರನಾದ, ಬೀಸಿ ಮಡಿವಾಳನಾದ,
ಹಾಸನಿಕ್ಕಿ ಸಾಲಿಗನಾದ, ವೇದವನೋದಿ ಹಾರುವನಾದ.
ಕರ್ಣದಲ್ಲಿ ಜನಿಸಿದರುಂಟೆ ಜಗದೊಳಗೆ
ಇದು ಕಾರಣ ಕೂಡಲಸಂಗಮದೇವಾ,
ಲಿಂಗಸ್ಥಲವನರಿದವನೆ ಕುಲಜನು.
590
ಕೊಲುವನೇ ಮಾದಿಗ, ಹೊಲಸು ತಿಂಬವನೇ ಹೊಲೆಯ
ಕುಲವೇನೊ ಅವದಿರ ಕುಲವೇನೊ !
ಸಕಲಜೀವಾತ್ಮರಿಗೆ ಲೇಸನೆ ಬಯಸುವ
ನಮ್ಮ ಕೂಡಲಸಂಗನ ಶರಣರೆ ಕುಲಜರು.
591
ಹಾರುವನ ಭಕ್ತಿ ಓಡಿನೊಳಗೆ ಅಗೆಯ ಹೊಯ್ದಂತೆ
ಕೆಳಯಿಂಕೆ ಬೇರೂರದು, ಮೇಲೆ ಫಲವಾಗದು.
ಪ್ರಾಣಲಿಂಗದ ಪ್ರಸಾದವ ಮುಂದಿಟ್ಟುಕೊಂಡು
`ಪ್ರಾಣಾಯ ಸ್ವಾಹಾ, ಅಪಾನಾಯ ಸ್ವಾಹಾ, ವ್ಯಾನಾಯ ಸ್ವಾಹಾ,
ಉದಾನಾಯ ಸ್ವಾಹಾ, ಸಮಾನಾಯ ಸ್ವಾಹಾ ಎಂಬ
ಕರ್ಮಿಗಳನೇನೆಂಬೆ, ಕೂಡಲಸಂಗಮದೇವಾ.
592
  593
ಹೊನ್ನ ನೇಗಿಲಲುತ್ತು ಎಕ್ಕೆಯ ಬೀಜವ ಬಿತ್ತುವರೆ
ಕರ್ಪುರದ ಮರನ ತರಿದು ಕಳ್ಳಿಗೆ ಬೇಲಿಯನಿಕ್ಕುವರೆ
ಶ್ರೀಗಂಧದ ಮರನ ತರಿದು ಬೇವಿಂಗೆ ಅಡೆಯನಿಕ್ಕುವರೆ
ನಮ್ಮ ಕೂಡಲಸಂಗನ ಶರಣರಿಗಲ್ಲದೆ ಬೇರೆ ಇಚ್ಛಾಭೋಜನವನಿಕ್ಕಿದಡೆ
ಕಿಚ್ಚಿನೊಳಗೆ ಉಚ್ಚೆಯ ಹೊಯಿದು ಹವಿಯ ಬೇಳ್ದಂತಾಯಿತ್ತು.
594
ಜಾತಿವಿಡಿದು ಸೂತಕವನರಸುವೆ
ಜ್ಯೋತಿವಿಡಿದು ಕತ್ತಲೆಯನರಸುವೆ !
ಇದೇಕೊ ಮರುಳುಮಾನವಾ
ಜಾತಿಯಲ್ಲಿ ಅಧಿಕನೆಂಬೆ !
ವಿಪ್ರ ಶತಕೋಟಿಗಳಿದ್ದಲ್ಲಿ ಫಲವೇನೊ
`ಭಕ್ತನೆ ಶಿಖಾಮಣ' ಎಂದುದು ವಚನ.
ನಮ್ಮ ಕೂಡಲಸಂಗನ ಶರಣರ ಪಾದಪರುಷವ ನಂಬು,
ಕೆಡಬೇಡ ಮಾನವಾ.
595
ಹೊಲೆಯ ಮಾದಿಗ ಭಕ್ತನಾದಡೆ ಆತನ ಮನೆಯ ಸೊಣಗಂಗೆ
ಪಂಚಮಹಾವಾದ್ಯದಲಿ ಸನ್ಮಾನವ ಮಾಡೆನೆ
ನೆಲನನುಗ್ಘಡಿಸಿ ಉಘೇ ಚಾಂಗು ಭಲಾ ಎಂದು !
ಕುಲಕಧಿಕ ಹಾರುವಂಗೆ ಸಿದ್ಧಿಗೆ ಎಯಿಸಲೆ !
ನಿಮ್ಮ ಶರಣರ ಮಹಿಮೆ ಘನಕ್ಕೆ ಘನ.
ಎಲೆ ಎಲೆ ಕೂಡಲಸಂಗಮದೇವಾ, ನಿಮ್ಮ ನಂಬದವ ಹೊಲೆಯ.
596
ಕುರಿವಿಂಡು ಕಬ್ಬಿನ ಉಲಿವ ತೋಟವ ಹೊಕ್ಕು-
ತೆರನನರಿಯದೆ ತನಿರಸದ-
ಹೊರಗಣ ಎಲೆಯನೆ ಮೆಲಿದುವು !
ನಿಮ್ಮನರಿವ ಮದಕರಿಯಲ್ಲದೆ
ಕುರಿ ಬಲ್ಲುದೆ ಕೂಡಲಸಂಗಮದೇವಾ.
597
ಪ್ರಣವನುಚ್ಚರಿಸುವ ಅಪ್ರಮಾಣಿಕರೆಲ್ಲರೂ
ಪ್ರಣವಮಂತ್ರಾರ್ಥವನೋದಿ ಮಂತ್ರಾರ್ಥವನರಿಯರು.
`ಪ್ರಣವ ಓಂ ನಮಃ ಶಿವಾಯ' ಪ್ರಣವ ಓಂ ನಮಃ ಶಿವಾಯ,
ಪ್ರಣವ ಓಂ ನಮಃ ಶಿವಾಯ' ಎಂದುವು ಶ್ರುತಿಗಳೆಲ್ಲಾ.
`ಪ್ರಣವ ಓಂ ಭರ್ಗೋ ದೇವ' ಎಂದುವು ಶ್ರುತಿಗಳೆಲ್ಲಾ.
ಕೂಡಲಸಂಗಯ್ಯನನರಿಯದ ದ್ವಿಜರೆಲ್ಲಾ ಭ್ರಮಿತರು.
598
ವೇದವನೋದಿದಡೇನು ಶಾಸ್ತ್ರವ ಕೇಳಿದಡೇನಯ್ಯಾ
ಜಪವ ಮಾಡಿದಡೇನು ತಪವ ಮಾಡಿದಡೇನಯ್ಯಾ
ಏನ ಮಾಡಿದಡೇನು
ನಮ್ಮ ಕೂಡಲಸಂಗಯ್ಯನ ಮನಮುಟ್ಟದನ್ನಕ್ಕ.
599
ನೀವು ಹಿರಿಯರೆಂಬಿರಿ, ಕರ್ಮಿಗಳು, ನೀವು ಕೇಳಿರಿ,
ನಿಮ್ಮ ವೇದಶಾಸ್ತ್ರಂಗಳು ಆರ ಹೊಗಳುತ್ತಿದ್ದಾವು
`ಓಂ ದ್ಯಾವಾ ಭೂಮೀ ಜನಯನ್ ದೇವ ಏಕಃ'
ಎಂದು ಶ್ರುತಿ ಸ್ಮøತಿಗಳು ಸಾರುತ್ತಿದ್ದಾವು.
`ವರ್ಣಾನಾಂ ಬ್ರಾಹ್ಮಣೋ ಗುರುಃ' ಎಂಬುದು ಹುಸಿ,
`ವರ್ಣಾನಾಂ ಗುರುಃ' ನಮ್ಮ ಕೂಡಲಸಂಗನ ಶರಣರು.
600
ನಿಜಭಾವ ಲಕ್ಷ್ಮಿಸರಸ್ವತಿ ಒಲಿದಡೆ ಕುಲವನರಸಲದೇಕೆ
ಆ ದೇವನೊಲಿದ ಭಕ್ತಂಗೆ ಇನ್ನಾವ ಮಂತ್ರವೇಕೆಯೊ
ಕಾಮಧೇನು ಮನೆಯಲಿರಲು ಬೇರೆ ಹಯನನರಸಲೇಕೆ
ಮೋಹವುಳಠಾವಿನಲ್ಲಿ ಲಜ್ಜೆಯನರಸಲೇಕೆಯೊ
ಮಹಾದಾನಿ ಕೂಡಲಸಂಗಯ್ಯನೊಲಿದು
ಮಾದಾರ ಚೆನ್ನಯ್ಯನ ಮನೆಯಲುಂಡ.
ವೇದವನೋದಿದವರು ಲಿಂಗವನೊಲಿಸಿ ತೋರಿರೋ.
601
ಆದ್ಯರಿಗಲ್ಲದೆ ವೇದ್ಯವಾಗದು; ಮಾಣಿ ಭೋ, ಮಾಣಿ ಭೋ !
ಶಿವಭಕ್ತನೇ ಕುಲಜ,
ಕೈವರ್ತಗರ್ಭಸಂಭೂತಮಾರ್ಕಂಡೇಯಮಹಾಮುನಿಃ
ತಪಸಾ ಜಾಯತೇ ವಿಪ್ರಕುಲಂ ಜಾತಿರ್ನ ವಿದ್ಯತೇ
ಜಾತನಲ್ಲ ಅಜಾತನಲ್ಲ,
ಕೂಡಲಸಂಗನ ಶರಣರು ನಿಸ್ಸೀಮರಯ್ಯಾ.
602
ಎಮ್ಮವರು ಅದ್ಥಿಕರು, ಎಲ್ಲರಿಂದವೂ ಅದ್ಥಿಕರು;
ಪಾಕವ ಮಾಡುವ ಭಾಂಡ ಸೊಣಗನ ಡೊವಿಗೆಯಯ್ಯಾ !
ಕೆರಹಿನಲ್ಲಿ ಮುಚ್ಚುವುದು ಆವ ಆಗಮವಯ್ಯಾ
ಕೂಡಲಸಂಗಮದೇವಾ, ನಿಮ್ಮ ವಚನವಿಂತೆಂದುದು
ಭವಿ ನೋಡಿದ ಓಗರ ಲಿಂಗಾರ್ಪಿತವಾಗದೆಂದೂ.
603
ನಿಮ್ಮ ಶರಣರ ಚಮ್ಮಾವುಗೆಗೆ ಪೃಥ್ವಿ ಸಮಬಾರದು;
ಸರಿಯಲ್ಲ, ನೋಡಾ.
ಕೂಡಲಸಂಗಮದೇವಾ,
ನಿಮ್ಮ ಶರಣರ ಚಮ್ಮಾವುಗೆಗೆ !
604
ದೇವಾ, ನಿಮ್ಮ ಪೂಜಿಸಿ ಚೆನ್ನನ ಕುಲ ಚೆನ್ನಾಯಿತ್ತು,
ದೇವಾ, ನಿಮ್ಮ ಪೂಜಿಸಿ ದಾಸನ ಕುಲ ದೇಸೆವಡೆಯಿತ್ತು,
ದೇವಾ, ನಿಮ್ಮಡಿಗೆರಗಿದ ಮಡಿವಾಳ ಮಾಚಯ್ಯನಿಮ್ಮಡಿಯಾದ.
ನೀನೊಲಿದ ಕುಲಕೆ, ನೀನೊಲ್ಲದ ಹೊಲೆಗೆ ಮೇರೆಯುಂಟೆ ದೇವಾ
ಶ್ವಪಚೋಪಿ ಮುನಿಶ್ರೇಷೊ*ೀ ಯಸ್ತು ಲಿಂಗಾರ್ಚನೇ ರತಃ
±ಲಿಂಗಾರ್ಚನವಿಹೀನೋ[s]ಪಿ ಬ್ರಾಹ್ಮಣಃ ಶ್ವಪಚಾಧಮಃ± ಎಂದುದಾಗಿ,
ಜಾತಿ-ವಿಜಾತಿಯಾದಡೇನು ಅಜಾತಂಗೆ ಶರಣೆಂದನ್ನದವನು
ಆತನೇ ಹೊಲೆಯ, ಕೂಡಲಸಂಗಮದೇವಾ.
605
ಚತುರ್ವೇದಿಯಾದಡೇನು! ಲಿಂಗವಿಲ್ಲದವನೆ ಹೊಲೆಯ!
ಶ್ವಪಚನಾದಡೇನು ಲಿಂಗವಿದ್ದವನೆ ವಾರಣಾಸಿ !
ಆತನ ನುಡಿಗಡಣ ಲೇಸು, ಆತ ಜಗಕ್ಕೆ ಪಾವನ,
ಆತನ ಪ್ರಸಾದವೆನಗೆ ಅಮೃತಸೇವನೆ.
ನ ಮೇ ಪ್ರಿಯಶ್ಚತುರ್ವೇದೀ ಮದ್ಭಕ್ತಃ ಶ್ವಪಚೋಪಿ ವಾ|
ತಸ್ಮೈ ದೇಯಂ ತತೋ ಗ್ರಾಹ್ಯಂ ಸ ಚ ಪೂಜ್ಯೋ ಯಥಾಹ್ಯಹಂ|| ಎಂಬುದಾಗಿ
ಕೂಡಲಸಂಗಮದೇವರನರಿದು ಪೂಜಿಸಿದಾತ
ಷಡುದರುಶನಕ್ಕಧಿಕ, ಜಗಕ್ಕೆ ಪಾವನ ನೋಡಾ.
606
ಭಕ್ತಿಹೀನನ ದಾಸೋಹವ ಸದ್ಭಕ್ತರು ಸವಿಯರು;
ಬೇವಿನ ಹಣ್ಣು ಕಾಗೆಗೆ ಇನಿದಲ್ಲದೆ ಕೋಗಿಲೆಗೆ ಮೆಲಬಾರದು.
ಲಿಂಗಸಂಬಂಧವಿಲ್ಲದವರ ನುಡಿ
ಕೂಡಲಸಂಗನ ಶರಣರಿಗೆ ಸಮನಿಸದು.
607
ಬಂದು ಬಲ್ಲಹ ಬಿಡಲು ಹೊಲೆಗೇರಿ ಎಂಬ ಹೆಸರೊಳವೆ ಅಯ್ಯಾ
ಲಿಂಗವಿದ್ದವರ ಮನೆ ಕೈಲಾಸವೆಂದು ನಂಬಬೇಕು,
ಚಾಂಡಾಲವಾಟಿಕಾಯಾಂ ವಾ ಶಿವಭಕ್ತಃ ಸ್ಥಿತೋ ಯದಿ
ತತ್‍ಶ್ರೇಣಿಃ ಶಿವಲೋಕಸ್ಯ ತದ್ ಗೃಹಂ ಶಿವಮಂದಿರಮ್ ಎಂದುದಾಗಿ,
ಲೋಕದ ಡಂಬಕರ ಮಾತು ಬೇಡ,
ಕೂಡಲಸಂಗನಿದ್ದುದೇ ಕೈಲಾಸ.
608
ಲಿಂಗವಿಲ್ಲದೆ ನಡೆವವರ, ಲಿಂಗವಿಲ್ಲದೆ ನುಡಿವವರ
-ಲಿಂಗವಿಲ್ಲದೆ ಉಗುಳ ನುಂಗಿದಡೆ
ಅಂದಂದಿಗೆ ಕಿಲ್ಬಿಷವಯ್ಯಾ_
ಏನೆಂಬೆನೇನೆಂಬೆನಯ್ಯಾ
ಲಿಂಗವಿಲ್ಲದೆ ನಡೆವವರ ಅಂಗ ಲೌಕಿಕ ಮುಟ್ಟಲಾಗದು.
ಲಿಂಗವಿಲ್ಲದೆ ನುಡಿವವರ ಶಬ್ದ ಸೂತಕ ಕೇಳಲಾಗದು.
ಲಿಂಗವಿಲ್ಲದೆ ಗಮನಿಸಿದಡೆ ಆ ನಡೆನುಡಿಗೊಮ್ಮೆ ವ್ರತಗೇಡಿ
ಕೂಡಲಸಂಗಮದೇವಾ.
609
ಇಪ್ಪತ್ತುನಾಲ್ಕು ತಿಥಿಯಿಂದ ವೆಗ್ಗಳ,
ಗ್ರಹಣ-ಸಂಕ್ರಾಂತಿಯಿಂದ ವೆಗ್ಗಳ,
ಏಕಾದಶಿ-ವ್ಯತೀಪಾತದಿಂದ ವೆಗ್ಗಳ,
ಸೂಕ್ಷ್ಮಶಿವಪಥವನರಿದಂಗೆ
ಹೋಮ-ನೇಮ-ಜಪ-ತಪದಿಂದ ವೆಗ್ಗಳ,
ಕೂಡಲಸಂಗಮದೇವಾ ನಿಮ್ಮ ಮಾಣದೆ ನೆನೆವಂಗೆ.
610
ಅಶ್ವಮೇಧಯಾಗವಂತಿರಲಿ,
ಅಜಪೆ ಉಪದೇಶ ಸಮಾಧಿಯಂತಿರಲಿ, ಹೋ !
ಗಾಯತ್ರಿಯ ಜಪವಂತಿರಲಿ, ಹೋ !
ಜನಮೋಹನ ಮಂತ್ರವಂತಿರಲಿ, ಹೋ !
ಕೂಡಲಸಂಗನ ಶರಣರ ನುಡಿಗಡಣ
ಎಲ್ಲಕ್ಕಧಿಕ ನೋಡಾ.
611
ವೇದಶಾಸ್ತ್ರದವರ ಹಿರಿಯರೆನ್ನೆ,
ಮಾಯಾಭ್ರಾಂತಿ ಕವಿದ ಗೀತಜ್ಞರ ಹಿರಿಯರೆನ್ನೆ,
ಇವರು ಹಿರಿಯರುಗಳೇ
ಯಾಗನಟ್ಟುವಿಗಪಾಣರು, ಇವರಿಂದಧಿಕವ ಸಾಧಿಸುವರೇನು [ಕಿ]ರಿಯರೆ
ಇಂತು ವಿದ್ಯೆ ಗುಣ ಜ್ಞಾನ ಧರ್ಮ ಆಚಾರ ಶೀಲಂಗಳ,
ನಮ್ಮ ಕೂಡಲಸಂಗನ ಶರಣರು ಸಾಧಿಸಿದ ಸಾಧನೆಯನೆ
ಸಾಧಿಸುವುದು.
612
ಹಾರುವರೆಲ್ಲರೂ ನೆರೆದು ಶೂದ್ರನ ಹಾರುವನ ಮಾಡುವಲ್ಲಿ
ನಂದಿಮುಖವಿಲ್ಲದೆ ಮತ್ತೇನನೂ ಮಾಡಲಾಗದು.
ವಿಭೂತಿ[ಯಿ]ಲ್ಲದೆ ಮತ್ತೇನನೂ ಮಾಡಲಾಗದು.
`ಭರ್ಗೋ ದೇವಃ ಎಂಬ ಮಂತ್ರ[ವಿ]ಲ್ಲದೆ ಮತ್ತೇನನೂ ಮಾಡಲಾಗದು.
ನಿಮ್ಮಿಂದ ಕುಲಜರಾಗಿ ಮತ್ತೆ ಅನ್ಯದೈವಕ್ಕೆರಗುವ
ಜಗದನ್ಯಾಯಿಗಳನೇನೆಂಬೆ, ಕೂಡಲಸಂಗಮದೇವಾ !
613
ದೇವನೊಬ್ಬ, ನಾಮ ಹಲವು,
ಪರಮ ಪತಿವ್ರತೆಗೆ ಗಂಡನೊಬ್ಬ.
ಮತ್ತೊಂದಕ್ಕೆರಗಿದಡೆ ಕಿವಿ-ಮೂಗ ಕೊಯ್ವನು.
ಹಲವು ದೈವದ ಎಂಜಲ ತಿಂಬವರನೇನೆಂಬೆ,
ಕೂಡಲಸಂಗಮದೇವಾ !
614
ಕರ್ತಾರನ ಪೂಜಿಸಿ ಕುಚಿತ ದೈವಕ್ಕೆರಗುವವ
ಕತ್ತೆ ಕುದುರೆಗೆ ಹುಟ್ಟಿದ ವೇಸರನಂತೆ.
ಭಕ್ತರೆಂತೆಂಬೆ, ಭೃತ್ಯರೆಂತೆಂಬೆ, ಶರಣರೆಂತೆಂಬೆನವರ
ಎರಡುಳ್ಳ ಪ್ರಪಂಚಗಳ ಮೆಚ್ಚ
ಕೂಡಲಸಂಗಮದೇವ.
615
ಕಂಡಕಂಡವರೆಲ್ಲ ಗಂಡನೆಂದೆಂಬ
ದುಂಡೆಯನವಳ ಸಜ್ಜ[ನ] ಎಂದೆನ್ನಬಹುದೆ
ಲಿಂಗಪ್ರಸಾದವನುಂಡು ಅನ್ಯದೈವಂಗಳ ಕೊಂಡಾಡುವವರ
ನಮ್ಮ ಕೂಡಲಸಂಗಮದೇವನು
ಆ ಭಂಡರಿಗೆ ಮಾಡಿದ ಹುಳುಗೊಂಡವ !
616
ನಂಬಿದ ಹೆಂಡತಿಗೆ ಗಂಡನೊಬ್ಬನೆ ಕಾಣಿರೋ,
ನಂಬಬಲ್ಲ ಭಕ್ತಂಗೆ ದೇವನೊಬ್ಬನೆ ಕಾಣಿರೋ.
ಬೇಡ ಬೇಡ, ಅನ್ಯ ದೈವದ ಸಂಗ ಹೊಲ್ಲ !
ಬೇಡ ಬೇಡ, ಪರದೈವದ ಸಂಗ ಹೊಲ್ಲ !
ಬೇಡ ಬೇಡ, ಅನ್ಯ ದೈವವೆಂಬುದು ಹಾದರ ಕಾಣಿರೋ,
ಕೂಡಲಸಂಗಮದೇವ ಕಂಡಡೆ ಮೂಗ ಕೊಯ್ವ ಕಾಣಿರೊ.
617
ಊಡುವ ಉಡಿಸುವ ಗಂಡನಿದ್ದಂತೆ
ಜೋಡೆ, ಮಿಂಡಂಗೆ ಕಣ್ಣ ಚೆಲ್ಲುವಳ
ಕೇಡಿಂಗೆ ಬೆರಗಾದೆ ನಾನು.
ಕೂಡಲಸಂಗಮದೇವನು
ಸಿಂಗಾರದ ಮೂಗ ಬಣ್ಣಿಸಿ, ಹಲುದೋರೆ ಕೊಯ್ವ.
618
ಅಷ್ಟಮಿ ನವಮಿ ಎಂಬ ಕಲ್ಪಿತವೇಕೋ ಶರಣಂಗೆ
ತಪ್ಪಿತ್ತು ಗಣಪದವಿ, ಲಿಂಗಕ್ಕೆ ದೂರ.
ಒಬ್ಬರಿಗಾಳಾಗಿ, ಒಬ್ಬರನೋಲೈಸುವ
ನಿರ್ಬುದ್ಧಿಮನುಜರನೇನೆಂಬೆ,
ಕೂಡಲಸಂಗಮದೇವಾ !
619
ಎಲವೋ, ಎಲವೋ ಪಾಪಕರ್ಮವ ಮಾಡಿದವನೇ,
ಎಲವೋ ಎಲವೋ ಬ್ರಹ್ಮೇತಿಯ ಮಾಡಿದವನೇ,
ಒಮ್ಮೆ ಶರಣೆನ್ನೆಲವೋ.
ಒಮ್ಮೆ ಶರಣೆಂದಡೆ ಪಾಪಕರ್ಮ ಓಡುವವು.
ಸರ್ವಪ್ರಾಯಶ್ಚಿತ್ತಕ್ಕೆ ಹೊನ್ನ ಪರ್ವತಂಗಳೈದವು.
ಒಬ್ಬಗೆ ಶರಣೆನ್ನು, ನಮ್ಮ ಕೂಡಲಸಂಗಮದೇವಂಗೆ.
620
ಹಲವು ಕೊಂಬಿಂಗೆ ಹಾಯಲುಬೇಡ,
ಬರುಕಾಯಕ್ಕೆ ನೀಡಲುಬೇಡ,
ಲೋಗರಿಗೆ ಕೊಟ್ಟು ಭ್ರಮಿತನಾಗಿರಬೇಡ.
ಆಚಾರವೆಂಬುದು ಹಾವಸೆಗಲ್ಲು,
ಭಾವತಪ್ಪಿದ ಬಳಿಕ ಏಗೈದಡಾಗದು.
ಅಂಜದಿರು, ಅಳುಕದಿರು, ಪರದೈವಕ್ಕೆರಗದಿರು,
ಕೂಡಲಸಂಗಯ್ಯನ ಕೈಯಲು ಈಸುವುದೆನ್ನ ಭಾರ.
621
ದ್ವಿಜರಿಗೆ ಕೊಟ್ಟು ಹಲಬರು ಕೆಟ್ಟರು,
ಉದ್ಧರಿಸುವನೊಬ್ಬ, ಶಿವಶರಣ ಸಾಲದೆ
ನಾರಾಯಣ ವೃದ್ಧಬ್ರಾಹ್ಮಣನಾಗಿ ಬಂದು ಬಲಿಯ ಭೂಮಿಯ ಬೇಡಿದ,
ಕೊಟ್ಟ ಬಲಿ ಬಂಧನಕ್ಕೆ ಸಿಕ್ಕಿದ.
ಈಶ ಭಕ್ತನಾಗಿ ಬಂದು ದಾಸನ ವಸ್ತ್ರವ ಬೇಡಿದ,
ಕೊಟ್ಟ ದಾಸ ತವನಿಧಿಯ ಪಡೆದ.
ಕಪಟದಿಂದ ನಾರಾಯಣ ಹಾರುವನಾಗಿ ಬಂದು ಕರ್ಣನ ಕವಚವ ಬೇಡಿದ,
ಕೊಟ್ಟ ಕರ್ಣ ಕಳದಲ್ಲಿ ಮಡಿದ.
ಕಾಮಾರಿ ಜಂಗಮವಾಗಿ ಬಂದು ಸಿರಿಯಾಳನ ಮಗನ ಬೇಡಿದ,
ಕೊಟ್ಟ ಸಿರಿಯಾಳಸೆಟ್ಟಿ ಕಂಚಿಯಪುರ ಕೈಲಾಸಕ್ಕೊಯ್ದ.
ನಾರಾಯಣ ಹಾರುವನಾಗಿ ಬಂದು ನಾಗಾರ್ಜುನನ ಶಿರವ ಬೇಡಿದ,
ಕೊಟ್ಟ ನಾಗಾರ್ಜುನನ ಶಿರಹೋಯಿತ್ತು.
ಶಿವನು ಜಂಗಮವಾಗಿ ಬಂದು ಸಿಂಧುಬಲ್ಲಾಳ ವಧುವ ಬೇಡಿದ,
ಕೊಟ್ಟ ಸಿಂಧುಬಲ್ಲಾಳ ಸ್ವಯಲಿಂಗವಾದ.
ಇದು ಕಾರಣ ಇಲ್ಲಿಯೂ ಲೇಸು, ಅಲ್ಲಿಯೂ ಲೇಸು;
ಕೊಡಿರೇ, ನಮ್ಮ ಕೂಡಲಸಂಗನ ಶರಣರಿಗೆ.
622
ಎಚ್ಚು ಬಾಲಿಯ ಕೊಂದ, ಕಟ್ಟಿದನು ಶರಧಿಯನು,
ಹತ್ತು ತಲೆಯ ರಾವಳನ ಒಂದೆ ಅಂಬಿನಲ್ಲಿ ಮಡಿಹಿದ,
ಛಲದಿ ಲಂಕಾದ್ವೀಪವ ನೆಲವಣ್ಣ ಮಾಡಿದ,
ಕಲಿ ವಿಭೀಷಣಂಗೆ ಪಟ್ಟವ ಕಟ್ಟಿದ ರಾಮನ ತೋರಾ.
ಮಾಯದ ಸಂಸಾರವ ನಚ್ಚಿ, ಕೆಟ್ಟು
ಬರುದೊರೆವೊಗಬೇಡ.
ಕರ್ತು ಕೂಡಲಸಂಗಂಗೆ ಶರಣೆನ್ನಿರಯ್ಯಾ.
623
ವಿಪ್ರರ ಕರೆದು `ನೃಪರುಗಳು ಇಪ್ಪರೆ
ತಮ್ಮ ಶಿಶುವಿನೊಡನೆ'ಂದು ಬೆಸಗೊಂಡಡೆ,
`ಇಪ್ಪರು, ಇಪ್ಪರು, ತಾವು ಬಿತ್ತಿದ ಫಲಂಗಳ ತಾವು ಉಣ್ಣದವರುಂಟೆ
ಎಂದು ಕಣ್ಣ ಕಾಣದೆ ಹೇಳಿದರು, ಅಣ್ಣಗಳು, ಕರ್ಮದ ಬಟ್ಟೆಯನು.
ಅಂತೆಂದ ಮಾತ ಶಿಶು ಕೇಳಿ,
ಕೆಟ್ಟೋಡಿ ಬಂದು, ಲಿಂಗದ ಹೊಟ್ಟೆಯ ಹೊಗಲು,
ಅಟ್ಟಿಬಂದು ಖಂಡೆಯವ ಕಳೆದುಕೊಂಡು ಮಂಡೆಯನೊಡೆಯಲು,
ಮಂಡೆ ಒಡೆದು ಭೂಮಂಡಲವರಿಯೆ ನಾಲ್ಕು ಪುರವಾಗಲು,
ಘಟಸರ್ಪನ ತುಡುಕಿ ನಾಗನಾಥನಾಗಿ,
ಇಪ್ಪತ್ತೇಳು ಬಸದಿಯನೊಡೆಯನೆ
ಆಗಳಂತೆ ಎನ್ನ ಮಾಡಿದ ಕರ್ಮ ನಿಮ್ಮ ಕೈಯಲು ಕೆಡಿಸುವರು.
ಮುನ್ನೊಬ್ಬ ಕೆಡಿಸಿಹನೆಂದು ಬಂದು ತುತ್ತನಿಟ್ಟು
ಮರಳಿ ಕೈಯಿಡ ಹೋದಡೆ ತುತ್ತು ಹುಳುಗುಪ್ಪೆಯಾಗದೆ
ಶಿವಧರ್ಮವ ಕೆಡಿಸಿದವನು ಅಧರ್ಮಕ್ಕಿಳಿವನು.
ಕೂಡಲಸಂಗಮದೇವ ಸಾಕ್ಷಿಯಾಗಿ
ಮಕರಭೋಜನವಾಗನೆ ವಿನಾಶಕ್ತಿರಾಯನು.
624
ಅರಸು ವಿಚಾರ, ಸಿರಿಯು, ಶೃಂಗಾರ, ಸ್ಥಿರವಲ್ಲ ಮಾನವಾ.
ಕೆಟ್ಟಿತ್ತು ಕಲ್ಯಾಣ, ಹಾಳಾಯಿತ್ತು ನೋಡಾ.
ಒಬ್ಬ ಜಂಗಮದ ಅಭಿಮಾನದಿಂದ
ಚಾಳುಕ್ಯರಾಯನ ಆಳಿಕೆ ತೆಗೆಯಿತ್ತು,
ಸಂದಿತ್ತು, ಕೂಡಲಸಂಗಮದೇವಾ ನಿಮ್ಮ ಕವಳಿಗೆಗೆ.
625
ಬೇವಿನ ಬೀಜವ ಬಿತ್ತಿ, ಬೆಲ್ಲದ ಕಟ್ಟಿಯ ಕಟ್ಟಿ,
ಆಕಳ ಹಾಲನೆರೆದು, ಜೇನುತುಪ್ಪವ ಹೊಯ್ದಡೆ,
ಸಿಹಿಯಾಗಬಲ್ಲುದೆ, ಕಹಿಯಹುದಲ್ಲದೆ
ಶಿವಭಕ್ತರಲ್ಲದವರ ಕೂಡೆ ನುಡಿಯಲಾಗದು,
ಕೂಡಲಸಂಗಮದೇವಾ.
626
ಕರ್ತನನರಿಯದವನು ವಿಪ್ರನಾದಡೇನು ! ಚತುರ್ವೇದಿಯಾದಡೇನು
ಭುಕ್ತಿಕಾರಣ ಲೋಕದ ಇಚ್ಛೆಗೆ ನುಡಿದು ನಡೆವರಯ್ಯಾ !
ಭವಿಮಾಡಿದ ಪಾಕವ ತಂದು,
ಲಿಂಗಕ್ಕರ್ಪಿಸುವ ಕಷ್ಟರ ಕಂಡು ನಾಚಿತ್ತೆನ್ನ ಮನವು,
ಕೂಡಲಸಂಗನ ಶರಣರ ಒಕ್ಕುದ ಕೊಂಡು
ಅನ್ಯವನಾಚರಿಸಿದಡೆ ತಪ್ಪದು
ಸೂಕರ ಶುಚಿರ್ಭೂತತೆಯ ಪ್ರಾಣಿಯಂತೆ.
627
ಉಂಬಲ್ಲಿ [ಊ]ಡುವಲ್ಲಿ ಕ್ರೀಯಳಿಯಿತ್ತೆಂಬರು,
ಕೊಂಬಲ್ಲಿ ಕೊಡುವಲ್ಲಿ ಕುಲವನರಸುವರು,
ಎಂತಯ್ಯಾ ಅವರ ಭಕ್ತರೆಂತೆಂಬೆ
ಎಂತಯ್ಯಾ ಅವರ ಯುಕ್ತರೆಂತೆಂಬೆ
ಕೂಡಲಸಂಗಮದೇವಾ ಕೇಳಯ್ಯಾ,
ಹೊಲತಿ ಶುದ್ಧ ನೀರ ಮಿಂದಂತಾಯಿತ್ತಯ್ಯಾ.
628
ಭಕ್ತರನಲ್ಲದೆ ಒಲ್ಲೆವೆಂದೆಂಬಿರಿ,
ಭಕ್ತರಿಗಲ್ಲದೆ ಕೈಯಾನೆವೆಂಬಿರಿ,
ಇದೇನ ಮಾಡುವಿರಿ ಇದೆಲ್ಲಿಗೊಯ್ಯುವಿರಿ
ಪಾವನವಾದುದನು ಲಿಂಗಕ್ಕೆ ಮಾಡುವುದೆ ಆಚಾರ.
ವಿಷಯಕ್ಕೆ ಇಕ್ಕಿ, ಅಸುಗತಿಗಿಳಿಯದಿರಿ
ಕೂಡಲಸಂಗನಶರಣರ ಒಡೆವೆಯ.
629
ಮಾರಿ ಮಸಣಿಯೆಂಬವು ಬೇರಿಲ್ಲ ಕಾಣಿರೋ.
ಮಾರಿಯೆಂಬುದೇನು
ಕಂಗಳು ತಪ್ಪಿ ನೋಡಿದಡೆ ಮಾರಿ,
ನಾಲಗೆ ತಪ್ಪಿ ನುಡಿದಡೆ ಮಾರಿ,
ನಮ್ಮ ಕೂಡಲಸಂಗಮದೇವರ ನೆನಹ ಮರೆದಡೆ ಮಾರಿ.
630
ಆಯುಧವಿಕ್ಕಿದವಂಗೆ ವೀರದ ಮಾತೇಕೆ
ಲಿಂಗವು ಅಂತರಿಸಿದವಂಗೆ ಒಳುನುಡಿ ಏಕೆ
ಐದೆ ಅಣಚಿಯಿಲ್ಲದವಳಿಗೆ ¸õ್ಞಭಾಗ್ಯದ ಹೂವಿನ ಬೊಟ್ಟೇಕೆ
ಸತ್ಯವಿಲ್ಲದವಂಗೆ ನಿತ್ಯನೇಮವೇಕೆ
ಕರ್ತಾರ, ನಿಮ್ಮ ಒಲವಿಲ್ಲದವಂಗೆ ಶಂಭುವಿನ ಬಂಧುಗಳೇಕೆ
ಕೂಡಲಸಂಗಮದೇವಯ್ಯಾ,
ನೀವಿಲ್ಲದವಂಗೆ ಶಿವಾಚಾರದ ಮಾತೇಕೆ.
631
ಇರುಳೆಂದೇನೋ ಕುರುಡಂಗೆ, ಹಗಲೆಂದೇನೋ ಕುರುಡಂಗೆ !
ತಾಳವಬಾರಿಸಿದಡೇನೋ,ಪಂಚಮಹಾಶಬುದವ
ಬಾರಿಸಿದಡೇನೋ ಕಿವುಡಂಗೆ ! ಕೂಡಲಸಂಗಮದೇವಯ್ಯನ
ಪಥವಿನ್ನಾವುದೆಂದರಿಯದವಂಗೆ !
632
ಸಿಂಗದ ನಡು ಮುರಿಯಲಾ ಸಿಂಗವೇನು ಬಾತೆ
ಸುಂಡಿಲು ಮುರಿಯಲು ಗಜವೇನು ಬಾತೆ
ಸಂಗ್ರಾಮದಲ್ಲಿ ವೀರನುಳಿಯಲದೇನು ಬಾತೆ
ಶೃಂಗಾರದ ಮೂಗು ಹೋದಡೆ ಶೃಂಗಾರವೇನು ಬಾತೆ
ನಿಜ ತುಂಬಿದ ಭಕ್ತಿ ತುಳುಕಾಡದವರ ಸಂಗವೇನು ಬಾತೆ
ಕೂಡಲಸಂಗಮದೇವಾ.
633
ಮುನ್ನಿನ ಆದ್ಯರ ಪಥಂಗಳು ಇನ್ನಾರಿಗೂ ಅಳವಡವು ನೋಡಾ.
ಬಲ್ಲೆನಾಗಿ ಒಲ್ಲೆನು ಅವರ, ಸಲ್ಲರು ಶಿವಪಥಕ್ಕೆ.
ಒಳ್ಳಿಹ ಮೈಲಾರನ ಸಿಂಗಾರದಂತೆ,
ವೇಶಿಯ ಬಾಯ ಎಂಜಲನುಂಬ ದಾಸಿಯ ಸಂಸಾರದಂತೆ,
ಕೂಡಲಸಂಗನ ಶರಣರನರಿಯದೆ ಉಳಿದ ಭಂಗಿತರ.
634
ಗೀಜಗನ ಗೂಡು, ಕೋಡಗದಣಲ ಸಂಚ,
ಬಾದುಮನ ಮದುವೆ, ಬಾವಲ ಬಿದ್ದಿನಂತೆ ಜೂಜುಗಾರನ ಮಾತು.
ಬೀದಿಯ ಗುಂಡನ ಸೊಬಗು
ಓಡಿನೊಳಗಗೆಯ ಹೊಯ್ದಂತೆ ಕಾಣಿರೋ.
ಶಿವನಾದಿ ಅಂತುವನರಿಯದವನ ಭಕ್ತಿ
ಸುಖಶೋಧನೆಗೆ ಮದ್ದ ಕೊಂಡಂತೆ, ಕೂಡಲಸಂಗಮದೇವಾ.
635
ತೊತ್ತಿನ ಕೊರಳಲ್ಲಿ ಹೊಂಬಿತ್ತಾಳೆಯ ಸಿಂಗಾರವ ಮಾಡಿದಂತೆ
ಕುಚಿತರ ಸಂಗ, ಸುಸಂಗಿಗೆ ಸಂಗಡವಿಲ್ಲ !
ಗುರುಗುಂಜಿ ಮಾಣಿಕಕ್ಕೆ ಸರಿಯಪ್ಪುದೆ,
ಕೂಡಲಸಂಗಮದೇವಾ.
636
ಕೆಂಚ ಕರಿಕನ ನೆನೆದಡೆ ಕರಿಕನಾಗಬಲ್ಲನೆ
ಕರಿಕ ಕೆಂಚನ ನೆನೆದಡೆ ಕೆಂಚನಾಗಬಲ್ಲನೆ
ದರಿದ್ರನು ಸಿರಿವಂತನ ನೆನೆದಡೆ ಸಿರಿವಂತನಾಗಬಲ್ಲನೆ
ಸಿರಿವಂತ ದರಿದ್ರನ ನೆನೆದಡೆ ದರಿದ್ರನಾಗಬಲ್ಲನೆ !
ಮುನ್ನಿನ ಪುರಾತರ ನೆನೆದು ಧನ್ಯನಾದೆಹೆನೆಂಬ
ಮಾತಿನ ರಂಜಕರನೇನೆಂಬೆ ಕೂಡಲಸಂಗಮದೇವಾ.
637
ಆನೆಯನೇರಿಕೊಂಡು ಹೋದಿರೇ ನೀವು,
ಕುದುರೆಯನೇರಿಕೊಂಡು ಹೋದಿರೇ ನೀವು,
ಕುಂಕುಮ ಕಸ್ತೂರಿಯ ಹೂಸಿಕೊಂಡು ಹೋದಿರೇ ಅಣ್ಣಾ !
ಸತ್ಯದ ನಿಲವನರಿಯದೆ ಹೋದಿರಲ್ಲಾ,
ಸದ್ಗುಣವೆಂಬ ಫಲವ ಬಿತ್ತದೆ ಬೆಳೆಯದೆ ಹೋದಿರಲ್ಲಾ !
ಅಹಂಕಾರವೆಂಬ ಸದಮದಗಜವೇರಿ
ವಿಧಿಗೆ ಗುರಿಯಾಗಿ ನೀವು ಹೋದಿರಲ್ಲಾ !
ನಮ್ಮ ಕೂಡಲಸಂಗಮದೇವನರಿಯದೆ
ನರಕಕ್ಕೆ ಭಾಜನವಾದಿರಲ್ಲಾ !
638
ಇಂದ್ರಿಯ ನಿಗ್ರಹವ ಮಾಡಿದಡೆ ಹೊಂದುವವು ದೋಷಂಗಳು,
ಮುಂದೆ ಬಂದು ಕಾಡುವವು ಪಂಚೇಂದ್ರಿಯಂಗಳು.
ಸತಿಪತಿರತಿಸುಖವ ಬಿಟ್ಟರೆ ಸಿರಿಯಾಳ ಚಂಗಳೆಯವರು
ಸತಿಪತಿರತಿಸುಖಭೋಗೋಪಭೋಗವ, ವಿಳಾಸವ
ಬಿಟ್ಟನೆ ಸಿಂಧುಬಲ್ಲಾಳನು
ನಿಮ್ಮ ಮುಟ್ಟಿ ಪರಧನ-ಪರಸತಿಯರಿಗೆಳಸಿದಡೆ
ನಿಮ್ಮಾಚಾರಕ್ಕೆ ದೂರ, ಕೂಡಲಸಂಗಮದೇವಾ.
639
ಲಿಂಗ ಜಂಗಮ ಒಂದೆ ಎಂದು ನಂಬಿದ ಬಳಿಕ
ಅವರಂಗನೆಯರು ಲಿಂಗದ ರಾಣಿವಾಸ.
ಅಲ್ಲಿಯೂ ಮೇಳ, ಇಲ್ಲಿಯೂ ಮೇಳ,
ಚೌಡೇಶ್ವರಿಯಲ್ಲಿಯೂ ಮೇಳವೇ
ಮೊಲೆಯುಂಬ ಭಾವ ತಪ್ಪಿ ಅಪ್ಪಿದವರ
ತಲೆಯ ಕೊಂಬ ಕೂಡಲಸಂಗಮದೇವ.
640
ಒಡೆಯರು ತಮ್ಮ ಮನೆಗೆ ಒಡಗೊಂಡು ಹೋದಡೆ,
ತುಡುಗುಣಿತನದಲ್ಲಿ ಪರವಧುವ ನೋಡುವ ಸರಸ ಬೇಡ.
ಕಾಣಿರಣ್ಣಾ ! ಒಡೆಯನರಸಿಯ ಸರಸಬೇಡ.
ಕೂಳ ಸೊಕ್ಕು ತಲೆಗೇರಿ ರಾಣಿವಾಸದೊಡನೆ ಸರಸ ಬೇಡ.
ಕೂಡಲಸಂಗಮದೇವ ಕರ ಸಿತಗನಯ್ಯಾ.
641
ನೋಡಲಾಗದು ನುಡಿಸಲಾಗದು ಪರಸ್ತ್ರೀಯ, ಬೇಡ ಕಾಣಿರೋ.
ತಗರ ಬೆನ್ನಲಿ ಹರಿವ ಸೊಣಗನಂತೆ, ಬೇಡ ಕಾಣಿರೋ.
ಒಂದಾಸೆಗೆ ಸಾಸಿರ ವರುಷ ನರಕದಲದ್ದುವ
ಕೂಡಲಸಂಗಮದೇವ.
642
ತೊರೆಯ ಮೀವ ಅಣ್ಣಗಳಿರಾ, ತೊರೆಯ ಮೀವ ಸ್ವಾಮಿಗಳಿರಾ
ತೊರೆಯಿಂ ಭೋ, ತೊರೆಯಿಂ ಭೋ
ಪರನಾರಿಯರ ಸಂಗವ ತೊರೆಯಿಂ ಭೋ !
ಪರಧನದಾಮಿಷವ ತೊರೆಯಿಂ ಭೋ !
ಇವ ತೊರೆಯದೆ ಹೋಗಿ ತೊರೆಯ ಮಿಂದಡೆ
ಬರುದೊರೆ ಹೋಹುದು, ಕೂಡಲಸಂಗಮದೇವಾ.
643
ಸತ್ಯ ಶೌಚ ನಿತ್ಯನೇಮವ ತಪ್ಪದೆ ಮಾಡಬಲ್ಲಡೆ ಅದು ಲೇಸು.
ಮತ್ಸ್ಯ ಕೂರ್ಮ ಮಂಡೂಕ ಜಲದೊಳಗಿರ್ದಲ್ಲಿ ಫಲವೇನು
ಚಿತ್ತಮಂತರ್ಗತಂ ದೃಷ್ಟ್ವಾ ತೀರ್ಥಸ್ನಾನಾನ್ನ ಶುಧ್ಯತಿ
ಶತಕುಂಭಜಲೇ ಶೌಚಂ ಸುರಾಭಾಂಡಮಿವಾ[s] ಶುಚಿಃ
ಆಗಡವ ಮಾಡಿ ಮಾಗುಡವ ಮಿಂದಡೆ,
ತಾ [ಕೂ]ಡಬಲ್ಲನೆ ಕೂಡಲಸಂಗಮದೇವ.
644
ಕುಳ್ಳಿರ್ದು ಲಿಂಗವ ಪೂಜಿಸಿ ಅಲ್ಲದಾಟವನಾಡುವರಯ್ಯಾ;
ಬೆಳ್ಳೆ ಎತ್ತಿನ ಮರೆಯಲಿರ್ದು ಹುಲ್ಲೆಗಂಬ ತೊಡುವಂತೆ
ಕಳ್ಳ ಹಾದರಿಗರ ಕೈಯಲು ಪೂಜೆಯ ಕೊಳ್ಳ
ನಮ್ಮ ಕೂಡಲಸಂಗಮದೇವ.
645
ನುಡಿಯಲ್ಲಿ ಎಚ್ಚತ್ತು ನಡೆಯಲ್ಲಿ ತಪ್ಪಿದಡೆ
ಹಿಡಿದಿರ್ದ ಲಿಂಗವು ಘಟಸರ್ಪನಯ್ಯಾ.
ನುಡಿಯಲೂ ಬಾರದು, ನಡೆಯಲೂ ಬಾರದು,
ಲಿಂಗದೇವನೆ ದಿಬ್ಯವೊ ಅಯ್ಯಾ.
ಬಡವನ ಕೋಪವು ಅವುಡಿಗೆ ಮೃತ್ಯುವಾದಂತೆ
ಕಡೆಗೆ ದಾಂಟದು ಕಾಣಾ, ಕೂಡಲಸಂಗಮದೇವಾ.
646
ತನು ಶುಚಿಯಿಲ್ಲದವನ ದೇಹಾರವೇಕೆ
ದೇವರು ಕೊಡನೆಂಬ ಭ್ರಾಂತದೇಕೆ
ಮನಕ್ಕೆ ಮನವೆ ಸಾಕ್ಷಿ, ಸಾಲದೆ ಲಿಂಗ ತಂದೆ
ಹೇಂಗೆ ಮನ ಹಾಂಗೆ ಘನ ತಪ್ಪದು,
ಕೂಡಲಸಂಗಮದೇವಾ.
647
ಶರಣ, ನಿಚ್ಚನಿಚ್ಚ ಪೂಜಿಸುವಂಗೆ ಇದಕ್ಕಿದೆ ದೃಷ್ಟದೀವಿಗೆ-
ಪಾದೋದಕ; ಕೋಶಪಾನವಲ್ಲದೆ ಏನೂ ಇಲ್ಲವಯ್ಯಾ.
ಮಜ್ಜನಕ್ಕೆರೆವುದು ಲಿಂಗ; ಕರಸ್ಥಲದಿಬ್ಯ.
ಗುರುವಚನ; ಭಾಷಾಪತ್ರ ಶಿವಕರದಲ್ಲಿ.
ಸತ್ಯದಿಂದ ನಡೆವಂಗೆ ನಿತ್ಯನೇಮವಾಗಿ ಸಲಿಸುವನಲ್ಲದೆ
ಹುಸಿವಂಗೆ ಮಡಿಲ ಕಿಚ್ಚಾಗಿ ಸುಡುವ.
ಲಿಂಗವ ಪೂಜಿಸಿ ಮರಳಿ ಅನ್ಯಾಯಕ್ಕೆರಗಿದಡೆ
ಕೂಡಲಸಂಗಮದೇವನವರ ಹಲ್ಲ ಕಳೆವ.
648
ಪಾಪಿಗೆ ಕೋಪಿಗೆ ಭಕ್ತಿಯಾಗೆಂದಡಪ್ಪುದೆ
ನಾರಿವಾಣವಕ್ಕುದೆ ನಾಯಿಗೆ
ಕೂಡಲಸಂಗಮದೇವಾ,
ನಿಮ್ಮ ನಂಬಿಯೂ ನಂಬದ ಡಂಭಕರಿಗೆ.
649
ಕೋಪಿ ಮಜ್ಜನಕ್ಕೆರೆದಡೆ ರಕ್ತದ ಧಾರೆ,
ಪಾಪಿ ಹೂವನೇರಿಸಿದಡೆ ಮಸೆದಡ್ಡಾಯುಧದ ಗಾಯ.
ಕೂಪವರನಾರನೂ ಕಾಣೆನು ಮಾದಾರ ಚೆನ್ನಯ್ಯನಲ್ಲದೆ,
ಕೂಪವರನಾರನೂ ಕಾಣೆನು ಡೋಹರ ಕಕ್ಕಯ್ಯನಲ್ಲದೆ,
ವ್ಯಾಪ್ತಿಯುಳ್ಳವ ನಮ್ಮ ಮಡಿವಾಳ ಮಾಚಯ್ಯ.
ನಿನ್ನಪತ್ತಿಗರಿವರಯ್ಯಾ, ಕೂಡಲಸಂಗಯ್ಯಾ.
650
ಸದಾಚಾರ ಸದ್ಭಕ್ತಿಯಿಲ್ಲದವರನೊಲ್ಲನಯ್ಯಾ,
ಅವರಾರಾಧನೆ ದಂಡ.
ನಿಚ್ಚ ನಿಚ್ಚ ಪ್ರಾಯಶ್ಚಿತ್ತರನು ಒಲ್ಲ
ಕೂಡಲಸಂಗಮದೇವ, ಭೂಮಿಭಾರಕರ.
651
ನೂರನೋದಿ ನೂರ ಕೇಳಿ ಏನು
ಆಸೆ ಬಿಡದು, ರೋಷ ಪರಿಯದು.
ಮಜ್ಜನಕ್ಕೆರೆದು ಫಲವೇನು
ಮಾತಿನಂತೆ ಮನವಿಲ್ಲದ ಜಾತಿ [ಡಂ]ಬರ ನೋಡಿ
ನಗುವ ನಮ್ಮ ಕೂಡಲಸಂಗಮದೇವ.
652
ತಂದೆ ಮಕ್ಕಳಿಗೆ ಬುದ್ಧಿಯ ಹೇಳುವಲ್ಲಿ
ತಪ್ಪಿಂಗೆ ಮುನಿವನಲ್ಲದೆ ಪ್ರಾಣಕ್ಕೆ ಮುನಿಯ.
ಲಿಂಗವಂತನು ಲಿಂಗವಂತರಿಗೆ ಬುದ್ಧಿಯ ಹೇಳುವಲ್ಲಿ
ಅವಗುಣಕ್ಕೆ ಮುನಿವನಲ್ಲದೆ ಲಾಂಛನಕ್ಕೆ ಮುನಿಯ.
ಲಿಂಗಭಕ್ತನು ಲಿಂಗಪಥವ ಹೇಳಿದಡೆ
ಮಚ್ಚರಿಸುವರ ಮೆಚ್ಚ ಕೂಡಲಸಂಗಮದೇವ.
653
ಕೇಳಿರೆ ಕೇಳಿರೆ ಹಿರಿಯರು, ಗುರುವಿನ ಉಪದೇಶವನು;
ಒಂದು ಗೀಜಗನ ಉಪದೇಶದಿಂದ
ಪೌಲಸ್ತ್ಯನಂದು ಹಡೆಯನೆ ದಶಮುಖನ
ಶಿರವ ಹರಿದಿಕ್ಕೆ ಪರಮನಿದ್ದೆಡೆಯು ಕಾಣದೇನಿಳೆಯಲ್ಲಿ
ಕರುಳ ತಂತಿಯ ಉಪದೇಶದಿಂದ
ಅಸುರನಂದು ಹಡೆಯನೆ ಸುರಪದವ
ತರುಣಿ ಹರಿಣಿಯ ಹಿತೋಪದೇಶದಿಂದ ಗತಿಮುಕ್ತಿಯ ಪಡೆದು
ಬಟ್ಟೆಯ ಹತ್ತನೆ ವಿನಾಶಕ್ತಿರಾಯನು
ರಂಭೆಯ ಉಪದೇಶದಿಂದ
ಶಂಭುವಿನೋಲಗದಲ್ಲಿ ಕುಳ್ಳಿರನೆ ಶ್ವೇತನು
ನಮ್ಮ ಕೂಡಲಸಂಗನ ಶರಣರ ಉಪದೇಶವ ಕೇಳಿದವರಿಗೆ
ದುರಿತ ಪಾಪಂಗಳು ಬಿಟ್ಟುಹೋಗಿ,
ಮನ ನಿರುತರಾಗಿಪ್ಪರಾ ಲಿಂಗದಲ್ಲಿ.
654
ಗುರು ಉಪದೇಶ ಮಂತ್ರವೈದ್ಯ, ಜಂಗಮ ಉಪದೇಶ ಶಸ್ತ್ರವೈದ್ಯ ನೋಡಾ,
ಭವರೋಗವ ಕಳೆವ ಪರಿಯ ನೋಡಾ.
ಕೂಡಲಸಂಗನ ಶರಣರ ಅನುಭಾವ
ಮಡಿವಾಳನ ಕಾಯಕದಂತೆ.
654
ಶಿವಚಿಂತೆ ಶಿವಜ್ಞಾನ ಭ್ರಮೆ ತಿಳಿದವಂಗಲ್ಲದೆ
ಆಚಾರ ಶಿವಚಾರ ತಮತಮಗೆ ಸೂರೆಯೆ
ಕೂಡಲಸಂಗಮದೇವನ ಪೂಜಿಸಿದವಂಗಲ್ಲದೆ.
656
ಶ್ವಪಚನಾದಡೇನು ಲಿಂಗಭಕ್ತನೇ ಕುಲಜನು.
ನಂಬಿ ನಂಬದಿದ್ದಡೆ ಸಂದೇಹಿ, ನೋಡಾ.
ಕಟಿದಡೇನು, ಮುಟಿದಡೇನು, ಹೂಸಿದಡೇನು ಮನಮುಟ್ಟದನ್ನಕ್ಕ
ಭಾವಶುದ್ಧವಿಲ್ಲದವಂಗೆ ಭಕ್ತಿ ನೆಲೆಗೊಳ್ಳದು,
ಕೂಡಲಸಂಗಮದೇವ ಒಲಿದಂಗಲ್ಲದೆ.
657
ಅವರ ನಡೆಯೊಂದು ನುಡಿಯೊಂದಾದಡೆ
ಶಿವಾಚಾರಕ್ಕವರು ಸಲ್ಲರಯ್ಯಾ !
ಬಲ್ಲನು, ಸಾತ್ವಿಕರಲ್ಲದವರನೊಲ್ಲನು.
ಶಿವಾಚಾರವ ಬಲ್ಲನು, ಅಲ್ಲಿ ನಿಲ್ಲನು.
ಪ್ರಪಂಚಿಯ ಮನವನೊಲ್ಲನು ಕೂಡಲಸಂಗಮದೇವನು.
658
ನಿಧಾನವನರಸಿಹೆನೆಂದು ಹೋದಡೆ, ವಿಘ್ನಬಪ್ಪುದು ಮಾಬುದೆ
ಸದಾಶಿವನೆಂದಡೆ, ಬೆದರಟ್ಟಿ ಸುಡುವುದು ಮಾಬುದೆ
ಹದುಳಿಗನಾಗಿ ಉಳಿದಡೆ ಪದವನೀವ ಕಾಣಾ
ಕೂಡಲಸಂಗಮದೇವ.
659
ಅಡಿಗಡಿಗೆ ದೇವರಾಣೆ, ಅಡಿಗಡಿಗೆ ಭಕ್ತರಾಣೆ,
ಅಡಿಗಡಿಗೆ ಗುರುವಿನಾಣೆ ಎಂಬ ವಚನವೆ ಹೊಲ್ಲ !
ಮುಂದೆ ಪಥಕ್ಕೆ ಸಲ್ಲರು.
ಆದಿಯಿಂದ ಬಂದ ವಚನವೆಂದು ಶರಣರ ಕೂಡೆ ಸರಸವಾಡಿದಡೆ,
ನಗುತಲಿರಿದುಕೊಂಡಡೆ ಅಲಗು ನೆಡದಿಹುದೆ
ಕೂಡಲಸಂಗಮದೇವಾ.
660
ಅರಗಿನ ಪುತ್ಥಳಿಯನುರಿಯ ನಾಲಗೆ ಹೊಯಿದು
ಮಾತಾಡುವ ಸರಸ ಬೇಡ !
ಬೆಣ್ಣೆಯ ಬೆನಕಂಗೆ ಕೆಂಡದುಂಡಲಿಗೆಯ ಮಾಡಿ
ಚಲ್ಲವಾಡಿದಡೆ ಹಲ್ಲು ಹೋಹುದು !
ಕೂಡಲಸಂಗನ ಶರಣರೊಡನೆ ಸರಸವಾಡಿದಡೆ
ಅದು ವಿರಸ ಕಾಣಿರಯ್ಯಾ.
661
ಹಾವಿನ ಹೆಡೆಗಳ ಕೊಂಡು ಕೆನ್ನೆಯ ತುರಿಸುವಂತೆ,
ಉರಿಯ ಕೊಳ್ಳಿಯ ಕೊಂಡು ಮಂಡೆಯ ಸಿಕ್ಕ ಬಿಡಿಸುವಂತೆ,
ಹುಲಿಯ ಮೀಸೆಯ ಹಿಡಿದುಕೊಂಡು ಒಲಿದುಯ್ಯಲನಾಡುವಂತೆ,
ಕೂಡಲಸಂಗನ ಶರಣರೊಡನೆ ಮರೆದು ಸರಸವಾಡಿದಡೆ
ಸುಣ್ಣಕಲ್ಲ ಮಡಿಲಲ್ಲಿ ಕಟ್ಟಿಕೊಂಡು ಮಡುವ ಬಿದ್ದಂತೆ.
662
ಉರಿವ ಕೊಳ್ಳಿಯ ಮಂಡೆಯಲಿಕ್ಕಿದಡುರಿವುದು ಮಾಬುದೆ
ಕಲ್ಲು ಗುಗ್ಗರಿಯ ಮೆಲಿದಡೆ ಹಲ್ಲು ಹೋಹುದು ಮಾಬುದೆ
ಶರಣರೊಡನೆ ಸರಸವಾಡಿದಡೆ ನರಕ ತಪ್ಪದು ಕಾಣಾ
ಕೂಡಲಸಂಗಮದೇವಾ.
663
ಕೋಣನ ಹೇರಿಂಗೆ ಕುನ್ನಿ ಬಸುಕುತ್ತಬಡುವಂತೆ
ತಾವೂ ನಂಬರು, ನಂಬುವರನೂ ನಂಬಲೀಯರು,
ತಾವೂ ಮಾಡರು, ಮಾಡುವರನೂ ಮಾಡಲೀಯರು.
ಮಾಡುವ ಭಕ್ತರ ಕಂಡು ಸೈರಿಸಲಾರದವರ,
ಕೂಗಿಡೆ ಕೂಗಿಡೆ, ನರಕದಲ್ಲಿಕ್ಕುವ ಕೂಡಲಸಂಗಮದೇವ.
664
ಚೇಳಿಂಗೆ ಬಸುರಾಯಿತ್ತೆ ಕಡೆ ! ಬಾಳೆಗೆ ಫಲವಾಯಿತ್ತೆ ಕಡೆ !
ರಣರಂಗದಲ್ಲಿ ಕಾದುವ ಓಲೆಕಾರಂಗೆ ಓಸರಿಸಿತ್ತೆ ಕಡೆ !
ಮಾಡುವ ಭಕ್ತಂಗೆ ಮನಹೀನವಾದಡೆ ಅದೇ ಕಡೆ
ಕೂಡಲಸಂಗಮದೇವಾ.
665
ಹುಲಿಯ ಹಾಲು ಹುಲಿಗಲ್ಲದೆ ಹೊಲದ ಹುಲ್ಲೆಗುಣಬಾರದು,
ಕಲಿಯ ಕಾಲ ತೊಡರು ಛಲದಾಳಿಗಲ್ಲದೆ ಇಕ್ಕಬಾರದು.
ಅಳಿಮನದಾಸೆಯವರ ಮೂಗ ಹಲುದೋರೆ ಕೊಯ್ವ
ಕೂಡಲಸಂಗಮದೇವ.
666
  667
ಅಲಗಲಗು ಮೋಹಿಸಿದಲ್ಲದೆ ಕಲಿತನವ ಕಾಣಬಾರದು.
ನುಡಿದ ನುಡಿ ಜಾರಿದಡೆ ಮನಕ್ಕೆ ಮನ ನಾಚಬೇಕು,
ಶಬ್ದಲೊಟ್ಟೆಯತನದಲ್ಲಿ ಎಂತಪ್ಪುದಯ್ಯಾ ಭಕ್ತಿ,
ಪಾಪಿಯ ಕೂಸನೆತ್ತಿದಂತೆ.
ಕೂಡಲಸಂಗಮದೇವರ ಭಕ್ತಿ
ಅಳಿಮನದವರಿಗೆ ಅಳವಡದಯ್ಯಾ.
668
ಹರಬೀಜವಾದಡೆ ಹಂದೆ ತಾನಪ್ಪನೆ
ಒರೆಗಟ್ಟಿ ಇರಿಯದವರ ಲೋಕ ಮೆಚ್ಚುವುದೆ
ಉಟ್ಟ ಚಲ್ಲಣ ಕೈಯ ಪಟ್ಟೆಯವಿಡಿದು,
ಗರುಡಿಯ ಕಟ್ಟಿ ಶ್ರವವ ಮಾಡುವಂತೆ
ತನ್ನ ತಪ್ಪಿಸಿಕೊಂಡಡೆ ಶಿವ ಮೆಚ್ಚುವನೆ
ಅರಿಯದವರಿಗೆ ಒಳ್ಳೆ ಹೆಡೆಯನೆತ್ತಿಯಾಡುವಂತೆ
ಬೊಳ್ಳೆಗನ ಭಕ್ತಿ ಕೂಡಲಸಂಗಮದೇವಾ.
669
ಮೊನೆ ತಪ್ಪಿದ ಬಳಿಕ ಅಲಗೇನ ಮಾಡುವುದು
ವಿಷ ತಪ್ಪಿದ ಬಳಿಕ ಹಾವೇನ ಮಾಡುವುದು
ಭಾಷೆ ತಪ್ಪಿದ ಬಳಿಕ ದೇವಾ, ಬಲ್ಲಿದ ಭಕ್ತನೇನ ಮಾಡುವನಯ್ಯಾ
ಭಾಷೆ ತಪ್ಪಿದ ಬಳಿಕ ಪ್ರಾಣದಾಸೆಯನು ಹಾರಿದಡೆ
ಮೀಸಲನು ಸೊಣಗ ಮುಟ್ಟಿದಂತೆ
ಕೂಡಲಸಂಗಮದೇವಾ.
670
ಶರಣ ಸಂಬಂಧವನರಿದ ಬಳಿಕ
ಮರಳಿ ಭವಿಯ ಬೆರಸಲಾಗದು.
ಬ್ರಹ್ಮೇತಿ ಭ್ರೂಣಹತ್ಯ ವೈತರಣಿ ದುರ್ಗತಿ
ಪಂಚಮಹಾಪಾತಕದಿಂದದ್ಥಿಕ ನೋಡಾ.
ಅಳುಪಿ ಭವಿಯೊಡನುಂಡಡೆ ಭಕ್ತನಲ್ಲ
ಕೂಡಲಸಂಗಮದೇವಾ.
671
ವೀರವ್ರತಿ ಭಕ್ತನೆಂದು ಹೊಗಳಿಕೊಂಬಿರಿ ಕೇಳಿರಯ್ಯಾ;
ವೀರನಾದಡೆ ವೈರಿಗಳು ಮೆಚ್ಚಬೇಕು,
ವ್ರತಿಯಾದಡೆ ಅಂಗನೆಯರು ಮೆಚ್ಚಬೇಕು,
ಭಕ್ತನಾದಡೆ ಜಂಗಮವೆ ಮೆಚ್ಚಬೇಕು.
ಈ ನುಡಿಯೊಳಗೆ ತನ್ನ ಬಗೆಯಿರೆ
ಬೇಡಿದ ಪದವಿಯನೀವ ಕೂಡಲಸಂಗಮದೇವ.
672
ಕಲಿತನ ತನಗುಳ್ಳಡೆ ಸೂಜಿ ಬಾಳು ಮೊದಲಾಗಿ ಕಾದಲೆಬೇಕು.
ಶರಣಪಥ ತನಗುಳ್ಳಡೆ ಶಿವಭಕ್ತರ ಮನೆಯಲ್ಲಿ ಶಿವರಸವ
ಪಂಚಾಮೃತವ ಮಾಡಿಕೊಳ್ಳಬೇಕು.
ಭ್ರಾಂತುವಿಡಿದು ಲಿಂಗಕ್ಕೋಗರವನರಸುವ
ಪಾತಕರ ಮೆಚ್ಚ ಕೂಡಲಸಂಗಮದೇವ.
673
ಕಟ್ಟಿ ಬಿಡುವನೆ ಶರಣನು ಬಿಟ್ಟು ಹಿಡಿವನೆ ಶರಣನು
ನಡೆದು ತಪ್ಪುವನೆ ಶರಣನು ನುಡಿದು ಹುಸಿವನೆ ಶರಣರನು
ಸಜ್ಜನಿಕೆ ತಪ್ಪಿದಡೆ, ಕೂಡಲಸಂಗಯ್ಯ ಮೂಗ ಹಲುದೋರೆ
ಕೊಯ್ವ.
674
ಹುಟ್ಟುವಲ್ಲಿ ಭವಿ, ಮರಳಿ ಭಕ್ತನ ಮಾ[ಡೆ] , ಪೂರ್ವಾಶ್ರಯವ ಕಳೆದು,
ಹೊಂದುವಲ್ಲಿ ಭವಿಯಾಗಿ ಹೋಹರ ಮುಟ್ಟಲಾಗದು.
ಅವನ ಮುಟ್ಟಿದವ ಮುನ್ನವೆ ವ್ರತಗೇಡಿ.
ಅವನ ಶ್ರಾದ್ಧಕಾಲವೆ ಶ್ವಾನಮಾಂಸ,
ಕ್ರಿಯಾಕಾಲವೆ ಕ್ರಿಮಿಗಳು, ತದ್ದಿನವೆ ಮದ್ಯಮಾಂಸ.
ಇದು ಕಾರಣ, ಕೂಡಲಸಂಗಮದೇವಾ,
ಅವನ ಮನೆಯ ವಿಚಾರಿಸದೆ ಹೊಕ್ಕವಂಗೆ ನಾಯಕನರಕ.
675
ಒಡನೆ ಹುಟ್ಟಿದುದಲ್ಲ, ಒಡನೆ ಬೆಳೆದುದಲ್ಲ,
ಎಡೆಯಲಾದ ಒಂದು ಉಡುಗೆಯನುಟ್ಟು
ಸಡಿಲಿದಡೆ ಲಜ್ಜೆ ನಾಚಿಕೆಯಾಯಿತ್ತೆಂಬ ನುಡಿ
ದಿಟವಾಯಿತ್ತು ಲೌಕಿಕದಲ್ಲಿ.
ಹಡೆದ ಗುರುಕರುಣವ, ಒಡನೆ ಹುಟ್ಟಿದ ನೇಮವನು ಬಿಡದಿರೆಲವೊ.
ಬಿಟ್ಟಡೆ ಕಷ್ಟ, ಕೂಡಲಸಂಗಮದೇವನಡಸಿ
ಕೆಡಹುವ ನಾಯಕನರಕದಲ್ಲಿ.
676
ಛಲಬೇಕು ಶರಣಂಗೆ ಪರಧನವನೊಲ್ಲೆನೆಂಬ,
ಛಲಬೇಕು ಶರಣಂಗೆ ಪರಸತಿಯನೊಲ್ಲೆನೆಂಬ,
ಛಲಬೇಕು ಶರಣಂಗೆ ಪರದೈವವನೊಲ್ಲೆನೆಂಬ,
ಛಲಬೇಕು ಶರಣಂಗೆ ಲಿಂಗಜಂಗಮವನೊಂದೆಂಬ,
ಛಲಬೇಕು ಶರಣಂಗೆ ಪ್ರಸಾದ ದಿಟವೆಂಬ,
ಛಲವಿಲ್ಲದವರ ಮೆಚ್ಚ ಕೂಡಲಸಂಗಮದೇವ.
677
ಜಂಬೂದ್ವೀಪ ನವಖಂಡ ಪೃಥ್ವಿಯೊಳಗೆ
ಕೇಳಿರಯ್ಯಾ ಎರಡಾಳಿನ ಭಾಷೆಯ
ಕೊಲುವೆನೆಂಬ ಭಾಷೆ ದೇವನದು, ಗೆಲುವೆನೆಂಬ ಭಾಷೆ ಭಕ್ತನದು.
ಸತ್ಯವೆಂಬ ಕೂರಲಗನೆ ಕಳೆದುಕೊಂಡು
ಸದ್ಭಕ್ತರು ಗೆದ್ದರು ಕಾಣಾ, ಕೂಡಲಸಂಗಮದೇವಾ.
678
ಮುನ್ನಿನ ಕಲಿ ವೀರಧೀರರು ಕಾದಿದ ರಣಗಳನು
ಪರಿಪರಿಯಲಿ ಬಣ್ಣಿಸಿ ಹೇಳಲುಬಹುದಲ್ಲದೆ
ಆ ದಳವಿದಿರಾದಲ್ಲಿ ಬಿರಿದ ಪಚಾರಿಸಿ, ಕಾದಿ ತೋರಲುಬಾರದು.
ಮುನ್ನಿನ ಪುರುಷಬ್ರತಿಯರು ಒಲಿಸಿದ ಆಯತವ
ಪರಿಪರಿಯಲು ಬಣ್ಣಿಸಲು ಬಹುದಲ್ಲದೆ
ಪುರುಷನಿರ್ವಾಣಕ್ಕುರಿವಗ್ನಿಯ
ಬಂದು ಹೊಕ್ಕು ತೋರಲುಬಾರದು.
ಮುನ್ನಿನ ಪುರಾತನರೆಲ್ಲರು ತನುಮನಧನವನ್ನಿತ್ತು
ಮಾಡಿ, ನೀಡಿ ಲಿಂಗವ ಕೂಡಿದ ಪರಿಗಳನು
ಅನುಭವದಲರ್ಥೈಸಿ ಹೇಳಬಹುದಲ್ಲದೆ
ಮಾಡಿ, ನೀಡಿ ತೋರಲುಬಾರದು.
ಇಂತೀ ಅರೆಬಿರಿದಿನ ಬಂಟರು, ಪುರುಷಬ್ರತಿಯರು, ಪುರಾತನರು
ಬರಿಯ ಮಾತನಾಡಿ ಹೊರಗೆ ಮೆರೆವರಲ್ಲಾ !
ಪರೀಕ್ಷೆಯುಂಟಾಗಿಯಿದ್ದಡೆ ಒಳಗಣವರ ಹೆಸರ ಹಿಡಿದು
ಪರಿಪರಿಯಲು ಹೊಗಳುವರು.
ಶರೀರಮರ್ಥಪ್ರಾಣ ಗುರುಲಿಂಗಜಂಗಮಕ್ಕೆ ಪರೀಕ್ಷೆಯುಂಟಾಗಿಯೆ
`ಆತ ಮಹೇಶ್ವರ ಪುರಾತವಳಿ'ಯೆಂಬ
ಪರಮಬಂಧುಗಳಾತನ ನೆನೆನೆನೆದು ಬದುಕುವರು.
ಇಂತೀ ಅನುಭಾವದಲೋದಿ, ಅಕ್ಷರಾಭ್ಯಾಸವ ಸಾಧಿಸಿ
ತರ್ಕಿಸಿ ನಿಂದಿಸಲಾಗದು,
ಕೂಡಲಸಂಗನ ಶರಣರಿಗಲ್ಲದನುಭಾವವಿಲ್ಲ.
679
ಕಬ್ಬಿನ ಹಣಿದವನಾಡುವರಲ್ಲದೆ, ಕಾಯದ ಹಣಿದವನಾಡುವರೆ
ಮೇಲೊಡ್ಡವಾಯಿತ್ತೆಂದು ಕೂಡಲಸಂಗಮದೇವಾ,
ನೀನಿಕ್ಕಿದ ಜೂಜಿಂಗೆ ಹೊಯಿದು ಗೆದ್ದ ಸಿರಿಯಾಳ.
680
ಅರ್ಥ ಪ್ರಾಣ ಅಭಿಮಾನವ ಕೊಟ್ಟೆನೆಂಬರಲ್ಲದೆ
ಕೊಟ್ಟ ಭಕ್ತರನಾರನೂ ಕಂಡುದಿಲ್ಲ;
ದಾಸ ತನ್ನ ವಸ್ತ್ರವ ಕೊಟ್ಟನಲ್ಲದೆ ತನ್ನ ಕೊಟ್ಟುದಿಲ್ಲ,
ಸಿರಿಯಾಳ ತನ್ನ ಮಗನ ಕೊಟ್ಟನಲ್ಲದೆ ತನ್ನ ಕೊಟ್ಟುದಿಲ್ಲ,
ಬಲ್ಲಾಳ ತನ್ನ ವಧುವ ಕೊಟ್ಟನಲ್ಲದೆ ತನ್ನ ಕೊಟ್ಟುದಿಲ್ಲ.
ಇವೆಲ್ಲ ಹೊರಗಣ ಮಾತು,
ಕೂಡಲಸಂಗಮದೇವರಲ್ಲಿ ತನ್ನ ಕೊಟ್ಟ ಸಿಂಧುಮರಾಳ.
681
  682
ಭಕ್ತರೇ ಸಮರ್ಥರು, ಅಸಮರ್ಥರೆಂದನಲುಂಟೆ
ಚೆನ್ನನೆತ್ತ, ಚೋಳನೆತ್ತ !
ಚೆನ್ನನೊಡನುಂಡ ಶಿವ ಆಹಾ ! ಅಯ್ಯಾ !
ಚೆನ್ನ, ಚೋಳನ ಮನೆಯ ಕಂಪಣಿಗನಯ್ಯಾ !
ಕೂಡಲಸಂಗಮದೇವ ಭಕ್ತಿಲಂಪಟನಯ್ಯಾ !
683
ನಿಸ್ಸೀಮ ಗುಗ್ಗುಳವನಿಕ್ಕಿದವನೊಬ್ಬ ಶರಣ,
ಉಘೇ ಚಾಂಗು ಭಲಾ ಎಂಬ ಹೊಗೆ ಗಗನವ ತೀವೆ.
ಓಹಿಲನ ಮೆರೆದ ಸೌರಾಷ್ಟ್ರಮಂಡಲದಲ್ಲಿ,
ಕೂಡಲಸಂಗಮದೇವ ಭಕ್ತಿವತ್ಸಲನಾಗಿ.
684
ಲಿಂಗವಶದಿಂದ ಬಂದ ನಡೆಗಳು, ಲಿಂಗವಶದಿಂದ ಬಂದ ನುಡಿಗಳು,
ಲಿಂಗವಂತರು ತಾವು ಅಂಜಲದೇಕೆ
ಲಿಂಗವಿರಿಸಿದಂತಿಪ್ಪುದಲ್ಲದೆ,
ಕೂಡಲಸಂಗಮದೇವ ಭಕ್ತರಭಿಮಾನ ತನ್ನದೆಂಬನಾಗಿ.
685
ಶಿವಭಕ್ತನಾಗಿ ತನ್ನ ಹಿಡಿದೆಹೆನೆಂದು ಹೋದಡೆ;
ನುಗ್ಗು ಮಾಡುವ, ನುಸಿಯ ಮಾಡುವ,
ಮಣ್ಣ ಮಾಡುವ, ಮಸಿಯ ಮಾಡುವ.
ಕೂಡಲಸಂಗಮದೇವರ ನೆರೆ ನಂಬಿದನಾದಡೆ;
ಕಡೆಗೆ ತನ್ನಂತೆ ಮಾಡುವ.
686
ಅರೆವನಯ್ಯಾ ಸಣ್ಣವಹನ್ನಕ್ಕ,
ಒರೆವನಯ್ಯಾ ಬಣ್ಣಗಾಬನಕ್ಕ.
ಅರೆದಡೆ ಸಣ್ಣವಾಗಿ, ಒರೆದಡೆ ಬಣ್ಣವಾದಡೆ
ಕೂಡಲಸಂಗಮದೇವನೊಲಿದು ಸಲಹುವನು.
687
ಅಂಜಿದಡೆ ಮಾಣದು, ಅಳುಕಿದಡೆ ಮಾಣದು,
ವಜ್ರಪಂಜರದೊಳಗಿದ್ದಡೆ ಮಾಣದು, ತಪ್ಪದುವೋ ಲಲಾಟಲಿಖಿತ.
ಕಕ್ಕುಲತೆಗೆ ಬಂದಡೆ ಆಗದು ನೋಡಾ.
ಧೃತಿಗೆಟ್ಟು, ಮನ ಧಾತುಗೆಟ್ಟಡೆ ಅಪ್ಪುದು ತಪ್ಪದು,
ಕೂಡಲಸಂಗಮದೇವಾ.
688
ಹುಟ್ಟಿದ ಬಳಿಕ ಕೊಟ್ಟ ಭೋಗಂಗಳ ತಪ್ಪಿಸಿಹೆನೆಂದಡೆ
ತಪ್ಪದು ನೋಡಯ್ಯಾ.
ಎನಗಿನ್ನೆಂತೊ, ಎನಗಿನ್ನೆಂತೊ, ಎನಗಿನ್ನೆಂತೆಂದೆನಬೇಡಯ್ನಾ.
`ನಾ[s]ಭುಕ್ತಂ ಕ್ಷೀಯತೇ ಕರ್ಮ' ಎಂಬ ಶ್ರುತಿ ತಪ್ಪದು,
ಕೂಡಲಸಂಗಮದೇವಾ.
689
ಆಯುಷ್ಯ ತೀರಿದಲ್ಲದೆ ಮರಣವಿಲ್ಲ,
ಭಾಷೆ ತಪ್ಪಿದಲ್ಲದೆ ದಾರಿದ್ರ್ಯವಿಲ್ಲ.
ಅಂಜಲದೇಕೋ ಲೋಕ ವಿಗರ್ಭಣೆಗೆ
ಅಂಜಲದೇಕೋ, ಕೂಡಲಸಂಗಮದೇವಾ ನಿಮ್ಮಾಳಾಗಿ.
690
ಮನಕ್ಕೆ ಮನ ಒಂದಾಗಿ, ಧನಕ್ಕೆ ಧನ ಒಂದಾಗಿ
ನಚ್ಚಿದ ಮಚ್ಚು ಅಚ್ಚೊತ್ತಿದಂತಿರಬೇಕು.
ಪ್ರಾಣಕ್ಕೆ ಪ್ರಾಣ ಒಂದಾಗಿ, ಶುಭಸೂಚನೆ ಒಂದಾಗಿರದ
ನಚ್ಚು ಮಚ್ಚು ಪಾರವೈದುವುದೆ
ಶಿರ ಹರಿದಡೇನು, ಕರುಳು ಕುಪ್ಪಳಿಸಿದಡೇನು
ಇಂತಪ್ಪ ಸಮಸ್ತವಸ್ತುವೆಲ್ಲವೂ ಹೋದಡೇನು
ಚಿತ್ತ ಮನ ಬುದ್ಧಿ ಒಂದಾದ ಮಚ್ಚು, ಬಿಚ್ಚಿ ಬೇರಾಗದಿದ್ದಡೆ
ಮೆಚ್ಚುವ ನಮ್ಮ ಕೂಡಲಸಂಗಮದೇವ.
691
ಎನಿಸೆನಿಸೆಂದಡೆ ನಾ ಧೃತಿಗೆಡೆನಯ್ಯಾ.
ಎಲುದೋರಿದಡೆ, ನರ ಹರಿದಡೆ, ಕರುಳು ಕುಪ್ಪಳಿಸಿದಡೆ
ನಾ ಧೃತಿಗೆಡೆನಯ್ಯಾ.
ಶಿರಹರಿದು ಅಟ್ಟೆ ನೆಲಕ್ಕೆ ಬಿದ್ದಡೆ
ನಾಲಗೆ ಕೂಡಲಸಂಗಾ ಶರಣೆನುತ್ತಿದ್ದಿತ್ತಯ್ಯಾ.
692
ಒಣಗಿಸಿ ಎನ್ನ ಘಣಘಣಲನೆ ಮಾಡಿದಡೆಯೂ,
ಹರಣವುಳ್ಳನ್ನಕ್ಕ ನಿಮ್ಮ ಚರಣದ ನೆನೆವುದ ಮಾಣೆ, ಮಾಣೆ.
ಶರಣೆಂಬುದ ಮಾಣೆ, ಮಾಣೆ.
ಕೂಡಲಸಂಗಮದೇವಯ್ಯಾ, ಎನ್ನ ಹೆಣನ ಮೇಲೆ
ಕಂಚಿಟ್ಟುಂಡಡೆಯೂ ಮಾಣೆ, ಮಾಣೆ.
693
ಜಾಗ್ರಸ್ವಪ್ನಸುಷುಪ್ತಿಯಲ್ಲಿ ಮತ್ತೊಂದ ನೆನೆದಡೆ ತಲೆದಂಡ, ತಲೆದಂಡ !
ಹುಸಿಯಾದಡೆ, ದೇವಾ ತಲೆದಂಡ, ತಲೆದಂಡ !
ಕೂಡಲಸಂಗಮದೇವಾ,
ನೀವಲ್ಲದೆ ಅನ್ಯವ ನೆನೆದಡೆ ತಲೆದಂಡ, ತಲೆದಂಡ !
694
  695
ಕಾಯದ ಕಳವಳಕ್ಕಂಜಿ, `ಕಾಯಯ್ಯಾ' ಎನ್ನೆನು,
ಜೀವನೋಪಾಯಕ್ಕೆ `ಈಯಯ್ಯಾ' ಎನ್ನೆನು.
`ಯದ್ ಭಾವಂ ತದ್ ಭವತಿ' ಉರಿ ಬರಲಿ, ಸಿರಿ ಬರಲಿ
ಬೇಕು ಬೇಡೆನ್ನೆನಯ್ಯಾ.
ಆ ನಿಮ್ಮ ಹಾರೆನು, ಮಾನವರ ಬೇಡೆನು.
ಆಣೆ ನಿಮ್ಮಾಣೆ, ಕೂಡಲಸಂಗಮದೇವಾ.
696
ನಾಳೆ ಬಪ್ಪುದು ನಮಗಿಂದೆ ಬರಲಿ,
ಇಂದು ಬಪ್ಪುದು ನಮಗೀಗಲೆ ಬರಲಿ,
ಇದಕಾರಂಜುವರು, ಇದಕಾರಳುಕುವರು
`ಜಾತಸ್ಯ ಮರಣಂ ಧ್ರುವಂ' ಎಂದುದಾಗಿ
ನಮ್ಮ ಕೂಡಲಸಂಗಮದೇವರು ಬರೆದ ಬರೆಹವ ತಪ್ಪಿಸುವಡೆ
ಹರಿಬ್ರಹ್ಮಾದಿಗಳಿಗಳವಲ್ಲ.
697
ಕಳಹೋದಡೆ ಕನ್ನದುಳಿಯ ಹಿಡಿವೆ,
ಬಂದಿವಿಡಿದಡೆ ನಿಮ್ಮಿಂದ ಮುಂದೆ ನಡೆವೆನು.
ಮನಭೀತಿ ಮನಶಂಕೆಗೊಂಡೆನಾದಡೆ
ನಿಮ್ಮಾಣೆ, ನಿಮ್ಮ ಪುರಾತನರಾಣೆ.
ಆಳ್ದರ ನಡೆ ಸದಾಚಾರವೆನ್ನದಿರ್ದಡೆ,
ಕಟ್ಟಾಳು ಶಿಷ್ಟತನಕ್ಕೆ ಹೋಹ ಕಷ್ಟವ ನೋಡಾ,
ಕೂಡಲಸಂಗಮದೇವಾ.
698
ಜೋಳವಾಳಿಯಾನಲ್ಲ, ವೇಳೆವಾಳಿಯವ ನಾನಯ್ಯಾ.
ಹಾಳುಗೆಟ್ಟೋಡುವ ಆಳು ನಾನಲ್ಲವಯ್ಯಾ.
ಕೇಳು, ಕೂಡಲಸಂಗಮದೇವಾ,
ಮರಣವೆ ಮಹಾನವಮಿ.
699
ಕರ್ಮವೆಂಬ ಅಂಕದೊಡನೆ ತೊಡರಿದೆ.
ಬಿನ್ನಪ ಅವಧಾರು ! ನಿಮ್ಮಾಳಿನ ಭಾಷೆಯ;
ಕಡೆಗಳಕ್ಕೆ ನೂಂಕುವೆ, ಕೆಡಹುವೆನಂಕವ.
ಕರೆದಡೋ ಎನಿಸದಡೆ ನಿಮ್ಮಾಳಲ್ಲ.
ಶಿವಶರಣೆಂಬ ದಂಡೆಯ ಹೂಡಿ
ಗಣಮೇಳಾಪವೆಂಬ ಅಲಗಿನಿಂದಿರಿವೆ, ಕೂಡಲಸಂಗಮದೇವಾ.
700
ಕಟ್ಟಿದೆನೊರೆಯ, ಬಿಟ್ಟೆ ಜನ್ನಿಗೆಯರ,
ಮುಟ್ಟಿ ಬಂದಿರಿದಡೆ ಓಸರಿಸುವನಲ್ಲ.
ಓಡದಿರು ಓಡದಿರು,
ನಿಮ್ಮ ಶರಣರ ಮನೆಯ ಬಿರಿದಿನ ಅಂಕಕಾರ.
ಓಡದಿರು, ಓಡದಿರು, ಎಲೆ ಎಲೆ ದೇವಾ,
ಎಲೆ ಎಲೆ ಸ್ವಾಮಿ, ಎಲೆ ಎಲೆ ಹಂದೆ
ಕೂಡಲಸಂಗಮದೇವಾ.
701
ಗರುಡಿಯ ಕಟ್ಟಿ ಅರುವತ್ತುನಾಲ್ಕು ಕೋಲ ಅಭ್ಯಾಸವ ಮಾಡಿದೆನಯ್ಯಾ.
ಇರಿವ ಘಾಯ, ಕಂಡೆಯ ಭೇದವಿನ್ನೂ ತಿಳಿಯದು.
ಪ್ರತಿಗರುಡಿಕಾರ ಬಿರಿದ ಪಾಡಿಂಗೊದನಗೆಫ
ವೀರಪ[ಟ್ಟವ] ಕಟ್ಟಿ, ತಿಗುರನೇರಿಸಿಕೊಂಡು,
ಗುರು ಕಳನನೇರಿ, ಕಠಾರಿಯ ಕೊಂಡಲ್ಲಿ
`ಹೋಯಿತ್ತು ಗಳೆ' ಎಂದಡೆ
ಎನ್ನ ನಿನ್ನಲ್ಲಿ ನೋಡು, ಕೂಡಲಸಂಗಮದೇವಾ.
702
ಶರಣರೊಡನೆ ಶ್ರವವ ಮಾಡಿ, ಮಾರುಗೋಲ ಬಿಡುವೆನಯ್ಯಾ.
ತಾಗಲಿ, ತಪ್ಪಲಿ ಗೆಲವೆನ್ನದೆಂಬೆನಯ್ಯಾ.
ಕಳನಿಂದ ಕಡೆಗಳಕ್ಕೆ ಓಡುವೆ,
ಕೂಡಲಸಂಗಯ್ಯಾ.
703
ಎಲೆ ಗಂಡುಗೂಸೆ ನೀ ಕೇಳಾ, ನಿನಗೊಬ್ಬಗೆಂದುಟ್ಟೆ ಗಂಡುಡಿಗೆಯನು.
ಮತ್ತೊಮ್ಮೆ ಆನು ಗಂಡಪ್ಪೆನಯ್ಯಾ,
ಮತ್ತೊಮ್ಮೆ ನಾನು ಹೆಣ್ಣಪ್ಪೆನಯ್ಯಾ.
ಕೂಡಲಸಂಗಮದೇವಾ,
ನಿಮ್ಮಡಿಗೆ ವೀರನಪ್ಪೆ, ನಿಮ್ಮ ಶರಣರಿಗೆ ವಧುವಪ್ಪೆ.
704
ಕಟ್ಟುವೆನುಪ್ಪರಗುಡಿಯ ಜಗವರಿಯೆ:
ಮಾಡುವೆನೆನ್ನ ಕಾಯ ಕೆಡೆವನ್ನಕ್ಕ,
ಬೇಡುವುದೆನ್ನ ತನುಮನಧನವ.
ಬೇಡಲಾರದ ಹಂದೇ, ನೀ ಕೇಳಾ,
ಈ ಬಿರಿದು ಸಂದಿತ್ತು, ಕೂಡಲಸಂಗಮದೇವಾ.
705
ಹುಟ್ಟುತ್ತ ದ್ರವ್ಯವನರಿಯದವಂಗೆ ಐಶ್ವರ್ಯವಂತ ಮಗನಾದಡೆ
ಲಕ್ಷಸಂಖ್ಯೆಯ ಹಿರಣ್ಯವ ತಂದು ಸಂತೋಷಪಡಿಸುವಂತೆ,
ಕಾಳೆಗಮುಖವಾವುದೆಂದರಿಯದ ಹಂದೆ ನೃಪಂಗೆ
ಒಬ್ಬ ಕ್ಷತ್ರಿಯನಹ ಕುಮಾರ ಹುಟ್ಟಿ, ಕಿಗ್ಗಡಲ ರಕ್ತದ ಹೊನಲಲ್ಲಿ
ಕಡಿದು ಮುಳುಗಾಡುವ ಕೊಳುಗುಳವ ಕಂಡು ಪರಿಣಾಮಿಸುವಂತೆ
ಆನು ಪರಿಣಾಮಿಸುವೆನಯ್ಯಾ, ಕೂಡಲಸಂಗಮದೇವಾ
ನೀವು ಬಂದೆನ್ನ ಬೇಡಿದಡೆ.
706
ಅರ್ಥವನರ್ಥವ ಮಾಡಿ ಕೋಳಾಹಳಂಗೆಯ್ಯುತ್ತಿರಲಿ,
ಹುಟ್ಟಿದ ಮಕ್ಕಳ ನವಖಂಡವ ಮಾಡಿ ಕಡಿವುತ್ತಿರಲಿ,
ಮುಟ್ಟುವ ಸ್ತ್ರೀಯ ಕಣ್ಣಮುಂದೆ
ಅಭಿಮಾನಂಗೊಂಡು ನೆರೆವುತ್ತಿರಲಿ,
ಇಂತೀ ತ್ರಿವಿಧವೂ ಹೊರಗಣವು.
ಇನ್ನೆನ್ನಂಗದ ಮೇಲೆ ಬರಲಿ, ಹಿಡಿಖಂಡವ ಕೊಯ್ಯಲಿ,
ಇಕ್ಕುವ ಶೂಲ ಪ್ರಾಪ್ತಿಸಲಿ,
ಹಾಕೊಂದೆಸೆ ಹನ್ನೊಂದೆಸೆಯಾಗಿ ಮಾಡುತ್ತಿರಲಿ.
ಮತ್ತೆಯೂ ಲಿಂಗಾರಾಧನೆಯ ಮಾಡುವೆ,
ಜಂಗಮಾರಾಧನೆಯ ಮಾಡುವೆ, ಪ್ರಸಾದಕ್ಕೆ ತಪ್ಪೆ.
ಇಂತಪ್ಪ ಭಾಷೆ ಕಿಂಚಿತ್ತು ಹುಸಿಯಾದಡೆ
ನೀನಂದೆ ಮೂಗ ಕೊಯಿ, ಕೂಡಲಸಂಗಮದೇವಾ.
707
ತನುವ ಬೇಡಿದಡೀವೆ, ಮನವ ಬೇಡಿದಡೀವೆ, ಧನವ ಬೇಡಿದಡೀವೆ,
ಬೇಡು, ಬೇಡೆಲೆ ಹಂದೆ.
ಕಣ್ಣ ಬೇಡಿದಡೀವೆ, ತಲೆಯ ಬೇಡಿದಡೀವೆ,
ಕೂಡಲಸಂಗಮದೇವಾ, ನಿಮಗಿತ್ತು ಶುದ್ಧನಾಗಿಪ್ಪೆ,
ನಿಮ್ಮ ಪುರಾತರ ಮನೆಯಲ್ಲಿ.
708
ನಾನು ಆರಂಭವ ಮಾಡುವೆನಯ್ಯಾ, ಗುರುಪೂಜೆಗೆಂದು,
ನಾನು ಬೆವಹಾರವ ಮಾಡುವೆನಯ್ಯಾ, ಲಿಂಗಾರ್ಚನೆಗೆಂದು,
ನಾನು ಪರಸೇವೆಯ ಮಾಡುವೆನಯ್ಯಾ, ಜಂಗಮದಾಸೋಹಕ್ಕೆಂದು.
ನಾನಾವಾವ ಕರ್ಮಂಗಳ ಮಾಡಿದಡೆಯು
ಆ ಕರ್ಮಫಲಭೋಗವ ನೀ ಕೊಡುವೆ ಎಂಬುದ ನಾನು ಬಲ್ಲೆನು.
ನೀ ಕೊಟ್ಟ ದ್ರವ್ಯವ ನಿಮಗಲ್ಲದೆ ಮತ್ತೊಂದಕ್ಕೆ ಮಾಡೆನು,
ನಿಮ್ಮ ಸೊಮ್ಮಿಂಗೆ ಸಲಿಸುವೆನು.
ನಿಮ್ಮಾಣೆ ಕೂಡಲಸಂಗಮದೇವಾ.
709
ಹೊತ್ತಾರೆ ಎದ್ದು ಕಣ್ಣ ಹೊಸೆಯುತ್ತ,
ಎನ್ನ ಒಡಲಿಂಗೆ, ಎನ್ನ ಒಡವೆಗೆಂದು ಎನ್ನ ಮಡದಿ-ಮಕ್ಕಳಿಗೆಂದು,
ಕುದಿದೆನಾದಡೆ ಎನ್ನ ಮನಕ್ಕೆ ಮನವೆ ಸಾಕ್ಷಿ.
ಆಸನೇ ಶಯನೇ ಯಾನೇ ಸಂಪರ್ಕೇ ಸಹಭೋಜನೇ
ಸಂಚರಂತಿ ಮಹಾಘೋರೇ ನರಕೇ ಕಾಲಮಕ್ಷಯಂ
ಎಂಬ ಶ್ರುತಿಯ ಬಸವಣ್ಣನೋದುವನು,
ಭವಿ ಬಿಜ್ಜಳನ ಗದ್ದುಗೆಯ ಕೆಳಗೆ ಕುಳ್ಳಿರ್ದು
ಓಲೈಸಿಹನೆಂದು ನುಡಿವರಯ್ಯಾ ಪ್ರಮಥರು.
ಕೊಡುವೆನೆ ಉತ್ತರವನವರಿಗೆ ಕೊಡಲಮ್ಮೆ.
ಹೊಲೆಹೊಲೆಯರ ಮನೆಯ ಹೊಕ್ಕಾದಡೆಯೂ
ಸಲೆ ಕೈಕೂಲಿಯ ಮಾಡಿಯಾದಡೆಯೂ,
ನಿಮ್ಮ ನಿಲವಿಂಗೆ ಕುದಿವೆನಲ್ಲದೆ, ಎನ್ನ ಒಡಲವಸರಕ್ಕೆ ಕುದಿದೆನಾದಡೆ
ತಲೆದಂಡ ಕೂಡಲಸಂಗಮದೇವಾ !
710
ದೇವ, ದೇವಾ ಬಿನ್ನಹ ಅವಧಾರು;
ವಿಪ್ರ ಮೊದಲು, ಅಂತ್ಯಜ ಕಡೆಯಾಗಿ
ಶಿವಭಕ್ತರಾದವರನೆಲ್ಲನೊಂದೆ ಎಂಬೆ.
ಹಾರುವ ಮೊದಲು, ಶ್ವಪಚ ಕಡೆಯಾಗಿ
ಭವಿಯಾದವರನೆಲ್ಲರನೊಂಬೆ ಎಂಬೆ.
ಹೀಂಗೆಂದು ನಂಬೂದೆನ್ನ ಮನ.
ಈ ನುಡಿದ ನುಡಿಯೊಳಗೆ ಎಳ್ಳ ಮೊನೆಯಷ್ಟು ಸಂದೇಹವುಳ್ಳಡೆ
ಹಲುದೋರೆ ಮೂಗ ಕೊಯಿ, ಕೂಡಲಸಂಗಮದೇವಾ.
711
ಒಲ್ಲೆನಯ್ಯಾ, ಒಲ್ಲೆನಯ್ಯಾ, ನಿಮ್ಮವರಲ್ಲದವರ,
ಒಲ್ಲೆನಯ್ಯಾ, ಒಲ್ಲೆನಯ್ಯಾ, ಜಗವೆಲ್ಲರಿಯಲು,
ಒಲ್ಲೆನಯ್ಯಾ, ಒಲ್ಲೆನಯ್ಯಾ, ನೀ ಮುನಿದಡೆ ಮುನಿ.
ಕೂಡಲಸಂಗಮದೇವಾ, ನಿಮ್ಮಾಣೆ, ನಿಮ್ಮ ಪ್ರಮಥರಾಣೆ.
712
ಆದಿಯಲಾಗಲಿ, ವೇದದಲಾಗಲಿ, ಶಾಸ್ತ್ರದಲಾಗಲಿ, ಸಮಯದಲಾಗಲಿ.
ಎನ್ನವರೆನ್ನೆನು, ಎನ್ನವರೆನ್ನೆನು.
ಎನ್ನವರೆಂದಡೆ ಸಂಗಾ ನಿಮ್ಮಲ್ಲಿಗೆ ದೂರ.
ಎನ್ನವರೆಂದಡೆ ಜನ್ನಕ್ಕೆ ನಡೆವರೆ
ಎನ್ನವರಲ್ಲ, ಕೂಡಲಸಂಗಾ ನಿಮ್ಮಾಣೆ.
713
ಅಣ್ಣ, ತಮ್ಮ, ಹೆತ್ತಯ್ಯ ಗೋತ್ರವಾದಡೇನು
ಲಿಂಗಸಾಹಿತ್ಯರಲ್ಲದವರ ಎನ್ನವರೆನ್ನೆನಯ್ಯಾ.
ನಂಟುಭಕ್ತಿ ನಾಯಕನರಕ,
ಕೂಡಲಸಂಗಮದೇವಾ.
714
ಒಡೆಯರಿಲ್ಲದ ಮನೆಯ ತುಡುಗುಣಿ ನಾಯಿ ಹುಗುವಂತೆ,
ನೀನಿಲ್ಲದವರ ಮನೆಯ ಹೊಗೆನು, ಸಂಗಯ್ಯಾ,
ಶ್ವಪಚೋಪಿಗಳಾಗಲಿ, ಕೂಡಲಸಂಗಯ್ಯಾ
ನೀನಿದ್ದವನೆ ಕುಲಜನು.
715
ಹೊನ್ನು ಹೆಣ್ಣು ಮಣ್ಣೆಂಬ ಕರ್ಮದ ಬಲೆಯಲ್ಲಿ ಸಿಲುಕಿ,
ವೃಥಾಯ ಬರುದೊರೆ ಹೋಹ ಕೆಡುಕ ಹಾರುವ ನಾನಲ್ಲ.
ಹಾರುವೆನಯ್ಯಾ ಭಕ್ತರ ಬರವ ಗುಡಿಗಟ್ಟಿ,
ಹಾರುವೆನಯ್ಯಾ ಶರಣರ ಬರವ ಗುಡಿಗಟ್ಟಿ,
ಕೂಡಲಸಂಗಮದೇವನು ವಿಪ್ರಕರ್ಮವ ಬಿಡಿಸಿ,
ಅಶುದ್ಧನ ಶುದ್ಧನ ಮಾಡಿದನಾಗಿ.
716
ವೇದಕ್ಕೆ ಒರೆಯ ಕಟ್ಟುವೆ, ಶಾಸ್ತ್ರಕ್ಕೆ ನಿಗಳವನಿಕ್ಕುವೆ,
ತರ್ಕದ ಬೆನ್ನ ಬಾರನೆತ್ತುವ, ಆಗಮದ ಮೂಗ ಕೊಯಿವೆ, ನೋಡಯ್ಯಾ.
ಮಹಾದಾನಿ ಕೂಡಲಸಂಗಮದೇವಾ,
ಮಾದಾರ ಚೆನ್ನಯ್ಯನ ಮನೆಯ ಮಗ ನಾನಯ್ಯಾ.
717
ಆವ ಕುಲವಾದಡೇನು ಶಿವಲಿಂಗವಿದ್ದವನೆ ಕುಲಜನು,
ಕುಲವನರಸುವರೆ ಶರಣರಲ್ಲಿ, ಜಾತಿಸಂಕರನಾದ ಬಳಿಕ
ಶಿವಧರ್ಮಕುಲೇಜಾತಃ ಪುನರ್ಜನ್ಮ ವಿವರ್ಜಿತಃ±
ಉಮಾ ಮಾತಾ ಪಿತಾ ರುದ್ರ ಐಶ್ವರಂ ಕುಲಮೇವ ಚ± ಎಂದುದಾಗಿ,
ಒಕ್ಕುದ ಕೊಂಬೆನವರಲ್ಲಿ, ಕೂಸ ಕೊಡುವೆ.
ಕೂಡಲಸಂಗಮದೇವಾ, ನಂಬುವೆ ನಿಮ್ಮ ಶರಣನು.
718
ಕಳ್ಳ, ಬಂದಿಕಾರ, ಹಾವಾಡಿಗ, ಹಾದರಿಗ,
ಬಂಟನೋಲೆಯಕಾರನೆಂದೆನಾದಡೆ,
ನೀ ಮುಂತಾಗಿ ಬಂದ ಭಕ್ತರ ನೀನೆಂದೆನ್ನದಿದ್ದಡೆ ಅದೇ ದ್ರೋಹ.
ನಡೆನುಡಿ ಹುಸಿಯುಂಟಾದಡೆ,
ಕೂಡಲಸಂಗನ ತೋರಿದ ಚೆನ್ನಬಸವಣ್ಣನಾಣೆ.
719
ಎಡದ ಕೈಯಲಿ ಕತ್ತಿ, ಬಲದ ಕೈಯಲಿ ಮಾಂಸ,
ಬಾಯಲಿ ಸುರೆಯ ಗಡಿಗೆ, ಕೊರಳಲಿ ದೇವರಿರಲು
ಅವರ ಲಿಂಗನೆಂಬೆ, ಸಂಗನೆಂಬೆ,
ಕೂಡಲಸಂಗಮದೇವಾ, ಅವರ ಮುಖಲಿಂಗಿಗಳೆಂಬೆನು.
720
ಗುಮ್ಮಡಿಯಂತಪ್ಪ ತಾಯಿ ನೋಡೆನಗೆ,
ಕಲಕೇತನಂತಪ್ಪ ತಂದೆ ನೋಡೆನಗೆ.
ಮೋಟನಂತಪ್ಪ ಗಂಡ ನೋಡೆನಗೆ,
ಮರಗಾಲಲಟ್ಟಟ್ಟಿ ಸದೆದ ನೋಡಯ್ಯಾ.
ಇಂದೆನ್ನ ಒಕ್ಕತನ ಹೋದಡೆ ಹೋಗಲಿ
ಮರಗಾಲ ಬಿಟ್ಟಡೆ, ಸಂಗಾ ನಿಮ್ಮಾಣೆ.
721
ತನುವ ಬಂದು ಅಲೆವರಯ್ಯಾ ಎನ್ನ,
ಮನವ ಬಂದು ನೋಡುವರಯ್ಯಾ ಎನ್ನ,
ಧನವ ಬಂದು ಸೂರೆಗೊಂಬರಯ್ಯಾ ಜಂಗಮವನವರತ.
ಕೂಡಲಸಂಗಮದೇವಾ,
ನಿಮ್ಮ ಬಯ್ಕೆಯ ಭಂಡಾರಕ್ಕೆ ನಾನು ಶುದ್ಧನಯ್ಯಾ.
722
ಒಡೆಯರೊಡವೆಯ ಕೊಂಡಡೆ ಕಳ್ಳಂಗಳಲಾಯಿತ್ತೆಂಬ
ಗಾದೆ ಎನಗಿಲ್ಲಯ್ಯಾ.
ಇಂದೆನ್ನ ವಧುವ, ನಾಳೆನ್ನ ಧನವ,
ನಾಡಿದ್ದೆನ್ನ ತನುವ ಬೇಡರೇಕಯ್ಯಾ
ಕೂಡಲಸಂಗಮದೇವಾ, ಆನು ಮಾಡಿದುದಲ್ಲದೆ
ಬಯಸಿದ ಬಯಕೆ ಸಲುವುದೆ ಅಯ್ಯಾ.
723
ಕಲಿ ಕರುಳ ತಕ್ಕೈಸಿ ಹರಿಯಬಲ್ಲನಲ್ಲದೆ
ಸಾಯ ಕಾದಿಸುವಡೆ, ಎಡೆಗೋಲನಿಕ್ಕುವಡೆ, ದಾತಾರನಾಧೀನವಲ್ಲ[ವೆ!].
ಕೂಡಲಸಂಗಮದೇವಾ ನೀ ಮಾಡಿದಂತಹುದಯ್ಯಾ,
ತನುಮನಧನದಲ್ಲಿ ವಂಚನೆಯ
ಆನು ಬಯಸಿದಡೆಂತಹುದಯ್ಯಾ.
724
ಬಾಲಾಭ್ಯಾಸವ ಮಾಡಹೋದಡೆ ಎನ್ನ ಸುರಗಿ ಎನ್ನ ನಟ್ಟಿತು,
ಎಂತಯ್ಯಾ ಕಲಿಯೊಡನೆ ಶ್ರವವ ಮಾಡುವೆನು
ರಾಯ ರಾಜಗುರು ಜಗದ ಬಿನ್ನಾಣಿಯ ತೊಡಕ ಬಿಡಿಸಬಾರದು.
ಸರಸದ ಮೇಲೆ ಹಿಡಿಯ ಹೋದಡೆ
ಚದುರಂಗದ ಮೇಲೆ ಮಸಿಯ ತೋರಿದ ಕೂಡಲಸಂಗಮದೇವ.
725
ಸಮಚಿತ್ತವೆಂಬ ನೇಮದ ಹಲಗೆಯ ಹಿಡಿದು,
ಶಿವಚಿತ್ತವೆಂಬ ಕೂರಲಗ ಕೊಂಡು,
ಶರಣಾರ್ಥಿಯೆಂಬ ಶ್ರವಗಲಿತಡೆ,
ಆಳುತನಕ್ಕೆ ದೆಸೆಯಪ್ಪೆ ನೋಡಾ.
ಮಾರಂಕ ಜಂಗಮ ಮನೆಗೆ ಬಂದಲ್ಲಿ ಇದಿರೆತ್ತಿ ನಡೆವುದು,
ಕೂಡಲಸಂಗಮದೇವನನೊಲಿಸುವಡಿದು ಚಿಹ್ನ !
726
ಅಟ್ಟಟ್ಟಿಕೆಯ ಮಾತನಾಡಲದೇಕೋ
ಮುಟ್ಟಿ ಬಂದುದಕ್ಕಂಜಲದೇಕೋ
ಕಾದಿದಲ್ಲದೆ ಮಾಣೆನು, ಓಡಿದಡೆ ಭಂಗ ಹಿಂಗದಾಗಿ,
ಕೂಡಲಸಂಗಮದೇವಾ, ಎನ್ನ ಭಂಗ ನಿಮ್ಮದಾಗಿ.
727
ಲಿಂಗಕ್ಕಲ್ಲದೆ ಮಾಡೆನೀ ಮನವನು,
ಜಂಗಮಕ್ಕಲ್ಲದೆ ಮಾಡೆನೀ ಧನವನು,
ಪ್ರಸಾದಕ್ಕಲ್ಲದೆ ಮಾಡೆನೀ ತನುವನು,
ಲಿಂಗಜಂಗಮಪ್ರಸಾದಕ್ಕಲ್ಲದೆ ಬಾಯ್ದೆರೆಯೆನೆಂಬುದೆನ್ನ ಭಾಷೆ.
ಅನರ್ಪಿತವಾದಡೆ ತಪ್ಪೆನ್ನದು,
ಮೂಗ ಕೊಯಿ, ಕೂಡಲಸಂಗಮದೇವಾ.
728
ಅಂಕ ಕಂಡಾ, ಕೋಲಾಸೆ ಮತ್ತೇಕಯ್ಯಾ
ಲೆಂಕ ಕಂಡಾ, ಪ್ರಾಣದಾಸೆ ಮತ್ತೇಕಯ್ಯಾ
ಭಕ್ತ ಕಂಡಾ, ತನುಮನಧನದಾಸೆ ಮತ್ತೇಕಯ್ಯಾ
ನಿಮ್ಮ ಅಂಕೆಗೆ ಝಂಕೆಗೆ ಶಂಕಿತನಾದಡೆ
ಎನ್ನ ಲೆಂಕತನಕ್ಕೆ ಹಾನಿ ಕೂಡಲಸಂಗಮದೇವಾ.
729
ನೀವಿರಿಸಿದ ಮನದಲ್ಲಿ ನಾನಂಜೆನಯ್ಯಾ,
ಮನವು ಮಹಾಘನಕ್ಕೆ ಶರಣುಗತಿವೊಕ್ಕುದಾಗಿ.
ನೀವಿರಿಸಿದ ಧನದಲ್ಲಿ ನಾನಂಜೆನಯ್ಯಾ,
ಧನವು ಸತಿಸುತಮಾತಾಪಿತರಿಗೆ ಸವೆಯದಾಗಿ.
ನೀವಿರಿಸಿದ ತನುವಿನಲ್ಲಿ ನಾನಂಜೆನಯ್ಯಾ,
ತನುವು ಸರ್ವಾರ್ಪಿತದಲ್ಲಿ ನಿಯತಪ್ರಸಾದಭೋಗಿಯಾಗಿ.
ಇದು ಕಾರಣ, ವೀರಧೀರಸಮಗ್ರನಾಗಿ
ನಿಮಗಾನಂಜೆ, ಕೂಡಲಸಂಗಮದೇವಾ.
730
ಹಲ್ಲು ಹತ್ತಿ ನಾಲಗೆ ಹೊರಳದಿದ್ದಲ್ಲಿ
ಮನವೆರಡಾದಡೆ ಆಣೆ, ನಿಮ್ಮಾಣೆ.
ಮಾಡುವ ನೇಮಕ್ಕೆ ಛಲವಿಲ್ಲದಿದ್ದಡೆ ಆಣೆ, ನಿಮ್ಮಾಣೆ.
ಕೂಡಲಸಂಗಮದೇವ ಎನ್ನ ಮನವ ನೋಡಲೆಂದಟ್ಟಿದಡೆ
ಪ್ರಸಾದವಲ್ಲದೆ ಕೊಂಡೆನಾದಡೆ ಆಣೆ, ನಿಮ್ಮಾಣೆ !
731
ಹೊಕ್ಕಲ್ಲಿ ಹೊಕ್ಕು ನಿಮ್ಮೊಕ್ಕುದನುಂಬವನ ಕುಲವೇನೋ !
ದೇವಾ ನೀನೊಲಿದವನ, ಸ್ವಾಮೀ ನೀ ಹಿಡಿದವನ ಕುಲವೇನೋ !
ಕುಲಕ್ಕೆ ತಿಲಕ ನಮ್ಮ ಮಾದಾರ ಚೆನ್ನಯ್ಯ,
ನಿಮ್ಮಿಂದಧಿಕ ಕೂಡಲಸಂಗಮದೇವಾ.
732
ಹುಟ್ಟಿದ ಮಕ್ಕಳೆಲ್ಲ ಅರ್ಥ ಪ್ರಾಣ ಅಭಿಮಾನಕ್ಕೆ
ಒಡೆಯರಾದ ಪರಿಯ ನೋಡಾ.
ಅಟ್ಟ ಅಡಿಗೆಯ ವಿಷವನು ನಿಮಗೆ ಕೊಟ್ಟಲ್ಲದೆ ಉಣ್ಣೆನೆಂಬ ಭಾಷೆ !
ಕೂಡಲಸಂಗಮದೇವಯ್ಯಾ, ನಿಮಗೆಂದಟ್ಟಡಿಗೆಯ
ನೀಡ ಕಲಿಸಿದಾತ ಕೆಂಭಾವಿಯ ಭೋಗಯ್ಯ.
733
ಅಂಗದ ಮೇಲಣ ಲಿಂಗ ಹಿಂಗಿ ಬಂದ ಸುಖವನಾರಿಗರ್ಪಿಸುವೆ
ಹಿಂಗಲಾಗದು, ಭಕ್ತಿಪಥಕ್ಕೆ ಸಲ್ಲದಾಗಿ,
ಹಿಂಗಲಾಗದು, ಶರಣಪಥಕ್ಕೆ ಸಲ್ಲದಾಗಿ,
ಕೂಡಲಸಂಗಮದೇವರ ಹಿಂಗಿ ನುಂಗಿದುಗುಳು ಕಿಲ್ಬಿಷ.
734
ಬತ್ತೀಸಾಯುಧದಲಿ ಅಭ್ಯಾಸವ ಮಾಡಿದಡೇನು
ಹಗೆಯ ಕೊಲುವಡೆ, ಒಂದಲಗು ಸಾಲದೆ
ಲಿಂಗವ ಗೆಲುವಡೆ, `ಶರಣಸತಿ ಲಿಂಗವತಿಯೆಂಬಲಗು ಸಾಲದೆ
ಎನಗೆ ನಿನಗೆ ಜಂಗಮಪ್ರಸಾದವೆಂಬ ಅಲಗು ಸಾಲದೆ
ಕೂಡಲಸಂಗಮದೇವಾ.
735
ಕೊಲ್ಲೆನಯ್ಯಾ ಪ್ರಾಣಿಗಳ, ಮೆಲ್ಲೆನಯ್ಯಾ ಬಾಯಿಚ್ಛೆಗೆ,
ಒಲ್ಲೆನಯ್ಯಾ ಪರಸತಿಯರ ಸಂಗವ,
ಬಲ್ಲೆನಯ್ಯಾ ಮುಂದೆ ತೊಡಕುಂಟೆಂಬುದ.
ಬಳ್ಳದ ಬಾಯಂತೆ ಒಂದೆ ಮನ ಮಾಡಿ
ನಿಲ್ಲೆಂದು ನಿಲಿಸಯ್ಯಾ, ಕೂಡಲಸಂಗಮದೇವಾ.
736
ಆನೆ ಅಂಕುಶಕ್ಕೆ ಅಂಜುವುದೆ ಅಯ್ಯಾ
ಮಾಣದೆ ಸಿಂಹದ ನಖವೆಂದು ಅಂಜುವುದಲ್ಲದೆ.
ಆನೀ ಬಿಜ್ಜಳಂಗಜುವೆನೆ ಅಯ್ಯಾ
ಕೂಡಲಸಂಗಮದೇವಾ,
ನೀನು ಸರ್ವಜೀವದಯಾಪಾರಿಯಾದ ಕಾರಣ
ನಿನಗಂಜುವೆನಲ್ಲದೆ.
737
ಬಂದೆಹೆನೆಂದು ಬಾರದೆ ಇದ್ದಡೆ, ಬಟ್ಟೆಗಳ ನೋಡುತ್ತಿದ್ದೇನಯ್ಯಾ.
ಇನ್ನಾರನಟ್ಟುವೆ, ಇನ್ನಾರನಟ್ಟುವೆ, ಇನ್ನಾರ ಪಾದವ ಹಿಡಿವೆನಯ್ಯಾ
ಕೂಡಲಸಂಗನ ಶರಣರು ಬಾರದಿದ್ದಡೆ
ಅಟ್ಟುವೆನೆನ್ನ ಪ್ರಾಣವನು.
738
ಅರಸರು ಮಂಚಕ್ಕೆ ಬರಿಸಿ, ಎನ್ನ ಬೆರಸಿದ ಬಳಿಕ
ಆನು ಅಂಜುವಳೇ ಆನು ಸಿರಿಯಕ್ಕನೇ.
ಪರುಷ ಮುಟ್ಟಿದ ಬಳಿಕ ಲೋಹವೇ
ಕೂಡಲಸಂಗಮದೇವ, ಎನ್ನನೊಲ್ಲದಡಾನು ಬದುಕುವೆನೆ.
739
ಎಲ್ಲಿ ಹೊಕ್ಕಲ್ಲಿ ನಿನ್ನ ವಿಕಾರವ ಬಿಡೆ, ಮಾಣೆ, ಗರುವತನವೆ
ದಾಸನ ವಸ್ತ್ರವ ಸೀಳುವುದೊಂದು ಗರುವತನವೆ
ಸಿರಿಯಾಳನ ಮಗನ ಬೇಡುವುದೊಂದು ಗರುವತನವೆ
ಬಲ್ಲಾಳನ ವಧುವ ಬೇಡುವುದೊಂದು ಗರುವತನವೆ
ಕೋಡಗವ ಹುಲ್ಲಲಿ ಮುಸುಕಿದಂತೆ
ಕೂಡಲಸಂಗಮದೇವಾ, ನಿನ್ನ ಪರಿ.
740
ಸಿರಿಯಾಳನ ಮಗನ ಬಾಣಸವ ಮಾಡಿಸಿ ಉಣಲೊಲ್ಲದೆ, ಕಾಡಿದೆ.
ಚೋಳನ ಮನೆಯಲು ಉಣಲೊಲ್ಲದೆ, ಚೆನ್ನನ ಮನೆಯಲುಂಡೆ.
ಒಬ್ಬರಿಗೊಂದು ಪರಿಯ ಮಾಡಿದೆ, ಕೂಡಲಸಂಗಮದೇವಾ.
741
ಒಬ್ಬನ ಮನೆಯಲುಂಡು ಹೊತ್ತುಗಳೆದೆ,
ಒಬ್ಬನ ಮನೆಯಲುಡಲೊಂದ ಗಳಿಸಿದೆ,
ಗರ್ವ ಬೇಡ ಬೇಡ ನಿನಗೆ.
ಚೆನ್ನಯ್ಯನ ಮನೆಯಲಂಬಲಿಯನುಂಡು ಬದುಕಿದೆ.
ಗರ್ವ ಬೇಡ ಬೇಡ.
ಕೂಡಲಸಂಗಯ್ಯಾ, ಸಿರಿಯಾಳನಿಂದ ಮಾನಿಸಲೋಕಗಂಡೆ.
742
ಹರಿಯಜ ಮುನಿಗಳೆಲ್ಲರು, ನಿಚ್ಚ ನಿಮ್ಮ ಬಾಗಿಲ ಕಾಯ್ದಿಹರು,
ಏನು ಕಾರಣ ನೀವು ಬಾಣನ ಬಾಗಿಲ ಕಾಯ್ದಿರಿ
ಡಿಂಗರಿಗನ ಮನೆಗೆ ಅಂಗಜಾಹವಕ್ಕೆ ಹೋಗಿ ಇದ್ದವರೊಳರೆ
ಕೂಡಲಸಂಗಮದೇವಾ.
743
ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ,
ಪಾತಾಳದಿಂದವೆ ಅತ್ತತ್ತ ನಿಮ್ಮ ಶ್ರೀಚರಣ,
ಬ್ರಹ್ಮಾಂಡದಿಂದವೆ ಅತ್ತತ್ತ ನಿಮ್ಮ ಶ್ರೀಮಕುಟ,
ಅಗಮ್ಯ ಅಗೋಚರ ಅಪ್ರತಿಮ ಲಿಂಗವೆ, ಕೂಡಲಸಂಗಮದೇವಯ್ಯಾ,
ಎನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯಾ.
744
ಗೋತ್ರನಾಮವ ಬೆಸಗೊಂಡಡೆ
ಮಾತು ನೂಕದೆ ಸುಮ್ಮನಿದ್ದಿರಿದೇನಯ್ಯಾ
ತಲೆಯ ಕುತ್ತಿ ನೆಲನ ಬರೆವುತ್ತಿದ್ದಿರಿದೇನಯ್ಯಾ
ಗೋತ್ರನಾಮ, ಮಾದಾರ ಚೆನ್ನಯ್ಯ, ಡೋಹರ
ಕಕ್ಕಯ್ಯನೆಂಬುದೇನು,ಕೂಡಲಸಂಗಯ್ಯಾ.
745
ನಿಷೆ*ಯಿಂದ ಲಿಂಗವ ಪೂಜಿಸಿ
ಮತ್ತೊಂದು ಪಥವನರಿಯದ ಶರಣರು
ಸರ್ಪನ ಹೆಡೆಯ ಮಾಣಿಕದಂತೆ ಇಪ್ಪರು, ಭೂಷಣರಾಗಿ !
ದರ್ಪಣದೊಳಗಣ ಪ್ರತಿಬಿಂಬದಂತೆ ಹಿಂಗದಿಪ್ಪರು
ಕೂಡಲಸಂಗಮದೇವಾ, ನಿಮ್ಮ ಶರಣರು.
746
ಶಿವಲೋಕಕ್ಕೆ ಸರಿ ಬೇರೆ ಲೋಕವಿಲ್ಲ,
ಶಿವಮಂತ್ರಕ್ಕೆ ಸರಿ ಬೇರೆ ಮಂತ್ರವಿಲ್ಲ.
ಜಗಕ್ಕೆ ಇಕ್ಕಿದೆ ಮುಂಡಿಗೆಯನೆತ್ತಿಕೊಳ್ಳಿ;
ಕೂಡಲಸಂಗಯ್ಯನೊಬ್ಬನೆ ದೈವವೆಂದು.
747
  748
  749
ವೇದ ನಡನಡುಗಿತ್ತು, ಶಾಸ್ತ್ರವಗಲಿ ಕೆಲಕ್ಕೆ ಸಾರಿದ್ದಿತಯ್ಯಾ !
ತರ್ಕ ತರ್ಕಿಸಲರಿಯದೆ ಮೂಗುವಟ್ಟಿದ್ದಿತಯ್ಯಾ !
ಆಗಮ ಹೆರತೊಲಗಿ ಅಗಲಿದ್ದಿತಯ್ಯಾ !
ನಮ್ಮ ಕೂಡಲಸಂಗಯ್ಯನು
ಮಾದಾರ ಚೆನ್ನಯ್ಯನ ಮನೆಯಲುಂಡ ಕಾರಣ.
750
ಚಿಕ್ಕ ಒಂದು ಹೊತ್ತಗೆ, ಬೆನಕನ ಕರಡಗೆಯಯ್ಯಾ,
ನೀ ಡುಂಡುಟಿ ಗೊರವನಯ್ಯಾ,
ಪುಣ್ಯವೇನಾದಡಾಗಲಿ ಡಕ್ಕೆಯ ಮೇಲೆ ಅಕ್ಕಿಯ ತಳೆದೆನು.
ನಮ್ಮ ಕೂಡಲಸಂಗಮದೇವನಲ್ಲದೆ
ಅನ್ಯದೈವ ಉಂಟೆನ್ನದಿರು ಕಂಡಾ !
751