ವರದಿಗಾರರು :
ಸಿಂಚನ ||
ಸ್ಥಳ :
ಬೆಂಗಳೂರು
ವರದಿ ದಿನಾಂಕ :
01-11-2025
ಔರಾದ್ ತಾಲ್ಲೂಕಿನಲ್ಲಿ ತೋಳದ ದಾಳಿ: ನಾಲ್ವರು ಗಾಯ – ಇಬ್ಬರ ಸ್ಥಿತಿ ಗಂಭೀರ
ಬೀದರ್: ಜಿಲ್ಲೆಯ ಔರಾದ್ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ತೋಳದ ದಾಳಿ ಭೀತಿಯನ್ನು ಉಂಟುಮಾಡಿದೆ. ಒಂದೇ ದಿನ ನಾಲ್ವರು ಗ್ರಾಮಸ್ಥರ ಮೇಲೆ ತೋಳ ದಾಳಿ ನಡೆಸಿದ್ದು, ಇವರ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.
ಹೋಲದಲ್ಲಿ ಕೆಲಸ ಮಾಡುತ್ತಿದ್ದ ಆಲೂರ್ (ಬಿ) ಗ್ರಾಮದ ರುಕ್ಮಿಣಬಾಯಿ ಮೇತ್ರೆ ಹಾಗೂ ಜೋಜನಾ ಗ್ರಾಮದ ಲಾಲಮ್ಮ ಕಾಂಬ್ಳೆ ಅವರ ಮೇಲೆ ತೋಳ ಹಿಂಬದಿಯಿಂದ ದಾಳಿ ನಡೆಸಿ ತಲೆ, ಕಿವಿ, ಬೆನ್ನು ಹಾಗೂ ಸೋಂಟ ಭಾಗಕ್ಕೆ ಗಾಯಗೊಳಿಸಿದೆ.
ಜೀರ್ಗಾ (ಬಿ) ಗ್ರಾಮದ ಮಂಗಲಾ ಸ್ವಾಮಿ ಅವರು ಹೋಲದಿಂದ ಮನೆಗೆ ವಾಪಸ್ಸಾಗುತ್ತಿದ್ದ ವೇಳೆ ತೋಳದ ದಾಳಿಗೆ ಒಳಗಾದರು. ಅವರ ಕೂಗನ್ನು ಕೇಳಿ ಪತಿ ಶರಣಯ್ಯ ಸ್ವಾಮಿ ಓಡಿ ಬಂದು ತೋಳವನ್ನು ಓಡಿಸಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಇದೇ ವೇಳೆ ಅದೇ ಗ್ರಾಮದ 15 ವರ್ಷದ ಬಾಲಕನ ಮೇಲೂ ತೋಳ ದಾಳಿ ನಡೆಸಿ ಗಾಯಗೊಳಿಸಿದ್ದು, ನಾಲ್ವರು ಗಾಯಾಳುಗಳನ್ನು ಬೀದರ್ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗಿದೆ. ಆಲೂರ್ (ಬಿ) ಗ್ರಾಮದ ರುಕ್ಮಿಣಬಾಯಿ ಮೇತ್ರೆ ಪ್ರಾಥಮಿಕ ಚಿಕಿತ್ಸೆ ಪಡೆದ ಬಳಿಕ ಮನೆಗೆ ಮರಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
ತೋಳ ಹುಚ್ಚಾಗಿರಬಹುದೆಂಬ ಶಂಕೆ ವ್ಯಕ್ತವಾಗಿದ್ದು, ಗ್ರಾಮಸ್ಥರಿಗೆ ಎಚ್ಚರಿಕೆ ವಹಿಸಲು ಅರಣ್ಯ ಇಲಾಖೆ ಮನವಿ ಮಾಡಿದೆ. “ಜನರು ಒಬ್ಬರೇ ತೆರಳದೆ ಗುಂಪಾಗಿ ಓಡಾಡಬೇಕು. ತೋಳವನ್ನು ಸೆರೆಹಿಡಿಯಲು ವಿಶೇಷ ತಂಡವನ್ನು ಕರೆದೊಯ್ಯಲಾಗಿದ್ದು, ರಾತ್ರಿ ವೇಳೆಯಲ್ಲಿ ಸಿಬ್ಬಂದಿಗಳು ಗಸ್ತು ತಿರುಗಲಿದ್ದಾರೆ,” ಎಂದು ಔರಾದ್ ವಲಯ ಅರಣ್ಯ ಅಧಿಕಾರಿ ಎಂ.ಡಿ. ಮುದಾಸ್ಸಿರ್ ಅಹಮ್ಮದ್ ತಿಳಿಸಿದ್ದಾರೆ.
ನಮ್ಮ ವಿವನ್ಯೂಸ್ ಕನ್ನಡ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 7892441717 ಸಂಖ್ಯೆಯನ್ನು ಸೇರಿಸಿ.
