ವರದಿಗಾರರು :
ಮುತ್ತುರಾಜ್ ||
ಸ್ಥಳ :
ಕೊರಟಗೆರೆ
ವರದಿ ದಿನಾಂಕ :
20-12-2025
ಕೊರಟಗೆರೆಯಲ್ಲಿ ತಿಹಾಸದಲ್ಲೇ ಇದೇ ಮೊದಲ ಬಾರಿಗೆ ಶ್ರೀನಿವಾಸ ಕಲ್ಯಾಣೋತ್ಸವ
ಕೊರಟಗೆರೆ ಪಟ್ಟಣದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಅದ್ದೂರಿ ಹಾಗೂ ವೈಭವೋಪೇತ ಶ್ರೀನಿವಾಸ ಕಲ್ಯಾಣೋತ್ಸವವನ್ನು ಹಮ್ಮಿಕೊಳ್ಳಲಾಗಿದ್ದು, ಇದರಿಂದ ಕೊರಟಗೆರೆ ಧಾರ್ಮಿಕ-ಸಾಂಸ್ಕೃತಿಕ ಚಟುವಟಿಕೆಗಳ ನೂತನ ಅಧ್ಯಾಯಕ್ಕೆ ಸಾಕ್ಷಿಯಾಗಲಿದೆ ಎಂದು ಕನ್ನಿಕಾ ವಿದ್ಯಾಪೀಠ ಶಾಲೆಯ ಅಧ್ಯಕ್ಷ ಎಂ.ಜಿ. ಸುಧೀರ್ ಹೇಳಿದರು.
ಪಟ್ಟಣದ ಕನ್ನಿಕಾ ಪರಮೇಶ್ವರಿ ದೇವಾಲಯದಲ್ಲಿ ಶುಕ್ರವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕನ್ನಿಕಾ ವಿದ್ಯಾಪೀಠ ಶಾಲೆಯ ಆಡಳಿತ ಮಂಡಳಿಯ ಸಹಯೋಗದೊಂದಿಗೆ ಹಾಗೂ ಬೆಂಗಳೂರು ಶ್ರೀವಾರಿ ಫೌಂಡೇಶನ್ನ ಆಶ್ರಯದಲ್ಲಿ, ಫೌಂಡೇಶನ್ ಅಧ್ಯಕ್ಷ ಎಸ್. ವೆಂಕಟೇಶಮೂರ್ತಿ ಅವರ ಸಾರಥ್ಯದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮವನ್ನು ಭಕ್ತಿಭಾವದಿಂದ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ತಿರುಪತಿಯಿಂದ ಆಗಮಿಸುವ ವಿಶೇಷ ಆಗಮಿಕ ವೃಂದದ ನೇತೃತ್ವದಲ್ಲಿ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಕಲ್ಯಾಣೋತ್ಸವವನ್ನು ವೈಭವದಿಂದ ನೆರವೇರಿಸಲಾಗುವುದು ಎಂದರು.
ಡಿ.25ರ ಗುರುವಾರ ಸಂಜೆ 4 ಗಂಟೆಗೆ ಪಟ್ಟಣದ ಎಂಜಿ ಪ್ಯಾಲೇಸ್ನಲ್ಲಿ ಕಲ್ಯಾಣೋತ್ಸವ ನಡೆಯಲಿದ್ದು, ಶ್ರೀ ವೆಂಕಟೇಶ್ವರ ದೇವರಿಗೆ ಶ್ರೀದೇವಿ ಮತ್ತು ಭೂದೇವಿ ಸಮೇತ ಮಂಗಳಕರವಾಗಿ ಕಲ್ಯಾಣೋತ್ಸವ ನೆರವೇರಿಸಲಾಗುತ್ತದೆ. ರಾತ್ರಿ 9 ಗಂಟೆಯವರೆಗೆ ತಿರುಪತಿಯ ವೈಕುಂಠದ ಮಾದರಿಯಲ್ಲಿ ವಿಶೇಷವಾಗಿ ಅಲಂಕೃತ ವೇದಿಕೆಯಲ್ಲಿ ಧಾರ್ಮಿಕ ವಿಧಿ-ವಿಧಾನಗಳು ನಡೆಯಲಿದ್ದು, ಭಕ್ತರಿಗೆ ಅಪೂರ್ವ ಆಧ್ಯಾತ್ಮಿಕ ಅನುಭವ ದೊರೆಯಲಿದೆ ಎಂದು ಮಾಹಿತಿ ನೀಡಿದರು.
ಶಾಲೆಯ ಉಪಾಧ್ಯಕ್ಷ ಕೆ.ಎಸ್. ಶ್ರೀನಿವಾಸ್, ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸುವ ಪ್ರತಿಯೊಬ್ಬ ಭಕ್ತರಿಗೂ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿದೆ. ವಿಶೇಷವಾಗಿ ಶ್ರೀ ವೆಂಕಟೇಶ ಕಲ್ಯಾಣೋತ್ಸವದ ಲಾಡು ಪ್ರಸಾದವನ್ನು ವಿತರಿಸಲಾಗುತ್ತದೆ. ಡಿ.25ರಂದು ಸಾರ್ವಜನಿಕ ರಜೆ ಇರುವುದರಿಂದ ಹಾಗೂ ಈ ತಿಂಗಳ ಕೊನೆಯಲ್ಲಿ ವೈಕುಂಠ ಏಕಾದಶಿ ಇರುವ ಹಿನ್ನೆಲೆ ಶ್ರೀನಿವಾಸ ಕಲ್ಯಾಣೋತ್ಸವವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮದ ವಿಶೇಷತೆಗಳ ಬಗ್ಗೆ ನಿರ್ದೇಶಕರಾದ ಎಂ.ಜಿ ಬದ್ರಿಪ್ರಸಾದ್ ಚಿನ್ನ ವೆಂಕಟ ಶೆಟ್ಟಿ, ಕೆ.ಆರ್. ನಂಜುಂಡ ಶೆಟ್ಟಿ, ಎಚ್.ಸಿ. ನಾಗೇಂದ್ರ ಬಾಬು ಹಾಗೂ ಕೆ.ಎಸ್. ಪ್ರಶಾಂತ್ ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಪಟ್ಟಣದ ಬಸ್ ನಿಲ್ದಾಣದಿಂದ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಭಕ್ತರ ಅನುಕೂಲಕ್ಕಾಗಿ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಆಯೋಜಕರು ತಿಳಿಸಿದರು.
